ಒತ್ತಿಹೇರುವುದಲ್ಲ, ಹೊತ್ತು ಮಾರುವುದಲ್ಲ, ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ ಎಂದು ಬಣ್ಣಿಸುತ್ತಾ ಕೃಷ್ಣನಾಮವೆಂಬ ಕಲ್ಲುಸಕ್ಕರೆ ಕೊಳ್ಳಿರೋ ಎಂದು ಹಾಡಿದರು ಪುರಂದರದಾಸರು. ತಮ್ಮ ರಸ್ತೆಬದಿಯ ಶ್ರೋತೃಗಳನ್ನು ಆಕರ್ಷಿಸಲು ಬೇರೊಂದು ಸಾಮಗ್ರಿ ಬೇಕೆನಿಸಿದಾಗ ಅದೇ ಕೃಷ್ಣನಾಮವನ್ನು ಮುತ್ತೆಂದು ಕರೆದು ಅದರ ಗುಣಗಳನ್ನು ಬಣ್ಣಿಸಿದರು. ಮುತ್ತಾಗಲೀ, ಕಲ್ಲುಸಕ್ಕರೆಯಾಗಲೀ ಅದು ಸೂಚಿಸುವ ಪರಮಾತ್ಮನೂ ಅದರಲ್ಲಿರುವ ಪರಮಾತ್ಮನೂ ಅವನೇ ಅಲ್ಲವೇ? ಇಂದು ಅವನು ಮುತ್ತೇ ಆಗಿರಲಿ ! ಗೀತೆ, ‘ಮುತ್ತು ಕೊಳ್ಳಿರೋ ಜನರು ಮುತ್ತು ಕೊಳ್ಳಿರೋ’.
ಕಲ್ಲುಸಕ್ಕರೆಯೋ, ಪಾಯಸವೋ, ಮುತ್ತೋ, ರತ್ನವೋ, ದಾಸರು ಸಾಮಾನ್ಯರಿಗೆ ತಿಳಿದಿರುವ ವಸ್ತುಗಳನ್ನು ಬಣ್ಣಿಸುವ ಮೂಲಕ ಅಸಾಮಾನ್ಯವಾದ ಒಂದು ವಸ್ತುವಿನೆಡೆಗೆ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಮುತ್ತುಕೊಳ್ಳಿರೋ ಗೀತೆಯ ಪಲ್ಲವಿಯಲ್ಲಿ ಸಚ್ಚಿದಾನಂದ ಸ್ವರೂಪವಾದ, ಎಂದರೆ ಸತ್ಯವಾದ, ಜ್ನಾನ - ಆನಂದ ಸ್ವರೂಪವಾದ ಭಗವಂತನನ್ನು, ಶ್ರೇಷ್ಠವಾದ ಮುತ್ತಿಗೆ ಹೋಲಿಸಿ, ಅದನ್ನು ಪಡೆದುಕೊಳ್ಳಿ ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಮುಷ್ಟಿಯಲ್ಲಿ ಹಿಡಿಯಹೋದರೆ ಜಾರಿ ಚಲ್ಲಾಪಿಲ್ಲಿಯಾಗುವ ಮುತ್ತುಗಳನ್ನು ಪೋಣಿಸಿ ನಮ್ಮ ಹಿಡಿತಕ್ಕೆ ತರಬೇಕಾದರೆ ಒಂದು ದಾರದ ಅವಶ್ಯಕತೆ ಇದೆ ಅಲ್ಲವೇ? ಹಾಗೆಯೇ ನಮ್ಮ ಹಿಡಿತಕ್ಕೆ ಬಾರದ ಭಗವಂತನನ್ನು ಕೊಂಚಮಟ್ಟಿಗಾದರೂ ಹಿಡಿಯುವ ಪ್ರಯತ್ನಮಾಡಬೇಕಾದರೆ ನಮಗೆ ಜ್ಞಾನವೆಂಬ ದಾರದ ಅವಶ್ಯಕತೆಯಿದೆ. ಅದರಿಂದಲೇ ಆ ಭಗವಂತನೆಂಬ ಮುತ್ತನ್ನು ‘ಜ್ಞಾನವೆಂಬ ದಾರದಲ್ಲಿ ಪೋಣಿಸಿರುವ ದಿವ್ಯ ಮುತ್ತು’ ಎಂದರು ದಾಸರು. ಸರಿ. ಆದರೆ ಅದನ್ನು ಕೊಳ್ಳುವವರಿಗೆ ಮತ್ತೊಂದು ಅರ್ಹತೆ ಬೇಕು. ಅದನ್ನು ಮುಂದಿನ ಸಾಲಿನಲ್ಲಿ ‘ದೀನರಾದ ಭಕ್ತಜನರು ಜ್ಞಾನದಿಂದ ಕೊಂಬುದಿದನು’ ಎಂದು ಸೂಚಿಸಿದ್ದಾರೆ ದಾಸರು. ಪರಮಾತ್ಮನನ್ನು ತಿಳಿದುಕೊಳ್ಳಲು ಬೇಕಾದ ಮುಖ್ಯ ಅರ್ಹತೆ ದೀನತೆ. ಸಂಪೂರ್ಣ ಶರಣಾಗತಿ. ಗರ್ವಿಗಳಕೈಗೆ ಅವನು ಸಿಕ್ಕುವುದಿಲ್ಲವಂತೆ. ಒಬ್ಬನ ಗರ್ವ ಎಷ್ಟು ಹೆಚ್ಚೋ ಅಷ್ಟು ಅವನಿಂದ ದೂರ ಭಗವಂತ.
ಮತ್ತೆ ಮುಂದಿನ ಚರಣದಲ್ಲಿ ದಾಸರೆನ್ನುತ್ತಾರೆ, ‘ಭ್ರಷ್ಟಜನಕೆ ಕಾಣಿಸದಂತ ಕೃಷ್ಣನೆಂಬೋ ಅಣಿಮುತ್ತು’. ಕಂಸ ಚಾಣೂರರ ಎದುರಿಗೇ ಇದ್ದ ಕೃಷ್ಣ. ಅವರು ಕಂಡದ್ದು ತಮ್ಮ ಎದುರಾಳಿಯಾದ ಸೋದರಳಿಯನನ್ನು ಮಾತ್ರ. ಅಕ್ರೂರ, ವಿದುರ, ಸುಧಾಮ ಮೊದಲಾದ ಸಜ್ಜನರು ಕಂಡರು ಶ್ರೀ ಕೃಷ್ಣನೆಂಬ ಮಾನವರೂಪದಲ್ಲಿದ್ದ ಪರಮಾತ್ಮನನ್ನು.
ಕೊನೆಯ ಚರಣದಲ್ಲಿ ದಾಸರೆನ್ನುತ್ತಾರೆ ‘ಹಿಡಿಯಲಿಕ್ಕೆ ನಿಲುಕದದು, ಕಡೆಕಾಣದೆಂದು ಬೆಲೆಯು’. ಹಿಡಿಯಹೋದರೆ ಕೈಗೆ ಸಿಗದೆ ಹಾವಿನಂತೆ ನುಣುಚಿಕೊಂಡು ಹೋಗುವ ವಸ್ತು ಪರಮಾತ್ಮ. ಅದಕ್ಕೆಂದೇ ಅವನ ಸಾವಿರ ನಾಮಗಳಲ್ಲಿ ‘ವ್ಯಾಲ’ ಎನ್ನುವುದು ಒಂದು ನಾಮ. ವ್ಯಾಲ ಎಂದರೆ ಸರ್ಪ. ಮತ್ತೆ ಕೊನೆಯಲ್ಲಿ ಹೇಳಿದರು ‘ಕಡೆಕಾಣದೆಂದು ಬೆಲೆಯು’. ಅವನಿಗೆ ಒಂದು ಬೆಲೆ ಕಟ್ಟುವುದು ಉಂಟೇ ? ‘ಅಮೇಯ’ ಎನ್ನುವುದು ಅವನ ಮತ್ತೊಂದು ನಾಮ. ಅಮೇಯ ಎಂದರೆ ಎಣಿಕೆಗೆ ಸಿಗದವನು ಎಂದು.
ಆದರೆ ಹೀಗೆ ನುಣುಚಿಕೊಂಡು ಓಡುವ, ಬೆಲೆಕಟ್ಟಲಾಗದ ‘ಪೊಡವಿಗೊಡೆಯನೆಂಬ ದಿವ್ಯ ಮುತ್ತು’ ಭಕ್ತಿಯಿಂದ ಕೈನೀಡಿದರೆ ತಾನೆ ಬಂದು ಕೈಗೆ ಬೀಳುತ್ತದಂತೆ. ಹಾಗಾಗಿ, ಕೈನೀಡಿ ನೋಡಿ, ಸಿಕ್ಕರೆ ಹಿಡಿದು ಕೊಳ್ಳಿರಪ್ಪಾ ಎಂದು ಸಾರುತ್ತಾ ಮುಂದೆ ನಡೆದರು ಪುರಂದರ ದಾಸರು ಎನ್ನುವಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ.


