Saturday, July 18, 2026

ಏನುಮಾಡಿದರೇನು ಹಿಂದಿನ ಕರ್ಮಫಲ

ಶ್ರವಣ, ಕೀರ್ತನ, ಸ್ಮರಣ ಮೊದಲಾಗಿ ಪ್ರಾರಂಭವಾಗುವ  ನವವಿಧ

ಭಕ್ತಿಯಲ್ಲಿ ಕೊನೆಯ ಮೆಟ್ಟಲು ಆತ್ಮ ನಿವೇದನ. ತನ್ನನ್ನು ತಾನು

ಪರಮಾತ್ಮನಿಗೆ ಸಮರ್ಪಿಸುವುದು.  ಅದಕ್ಕೆ ಮುಂಚಿನ ಮೆಟ್ಟಲು 

‘ಸಖ್ಯ’. ಭಗವಂತನನ್ನು ಸಖನಾಗಿ ಕಾಣುವುದು. ಇದು ಅರ್ಜುನ -

ಶ್ರೀಕೃಷ್ಣರ ಸಂಬಂಧದಂತೆ. ಈ ಸ್ಥಿತಿಯಲ್ಲಿ ಭಗವಂತನ ಬಗ್ಗೆ

ತಿಳುವಳಿಕೆಯುಂಟು, ಗೌರವ, ಭಕ್ತಿಯುಂಟು ಆದರೆ ಅದರೊಂದಿಗೆ,

ಗೆಳೆಯನಂತೆ ಸಲಿಗೆಯೂ ಉಂಟು. ಇಂದು ನಾವು ಪ್ರಸ್ತುತಪಡಿಸುತ್ತಿರುವ

ಕೃತಿಯಲ್ಲಿ ಭಗವಂತನೊಡನೆ ಸಖ್ಯನಂತೆ ಸಂಭಾಷಣೆ ನಡೆಸಿದ್ದಾರೆ

ಶ್ರೀ ಪುರಂದರ ದಾಸರು.


‘ಏನುಮಾಡಿದರೇನು ಹಿಂದಿನ ಕರ್ಮಫಲ, ತಾನು ಮಾಡಿದ ಕರ್ಮ

ತನಗಲ್ಲದೆ’ ಎಂದು ದಾಸರು ಕೀರ್ತನೆಯನ್ನು ಪ್ರಾರಂಭಿಸಿದ್ದಾರೆ. 

ನೀವು ಯಾವ ಯಾವ ಪ್ರಾರ್ಥನೆ, ಪೂಜೆ, ವ್ರತ, ಜಪ, ತಪಗಳನ್ನೆಲ್ಲಾ

ಮಾಡಿ ಪುಣ್ಯ ಸಂಪಾದನೆ ಮಾಡಿಕೊಂಡರೂ ಹಿಂದಿನ

ಕರ್ಮಫಲವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕರ್ಮವನ್ನು

ನೀವು ಅನುಭವಿಸಿಯೇ ಸಿದ್ಧ ಎಂದು ನಮಗೆ ಅರ್ಥಮಾಡಿಸುವ

ಪ್ರಯತ್ನದಲ್ಲಿ ದಾಸರು ಕರ್ಮಫಲ ಸಂಚಯನೆಯೇ  ಇಲ್ಲದ

ಪರಮಾತ್ಮನನ್ನೂ ಎಳೆದು ತಂದಿದ್ದಾರೆ. ಒಬ್ಬ ಸ್ನೇಹಿತನೊಡನೆ

ಲಘುಹಾಸ್ಯದಿಂದ ಮಾತನಾಡುವ ರೀತಿಯಲ್ಲಿ ನಿನ್ನ ಅವತಾರಗಳೆಲ್ಲಾ

ನಿನ್ನ ಕರ್ಮಫಲವಯ್ಯಾ ಎಂದು ಭಗವಂತನಿಗೆ ಹೇಳುತ್ತಿದ್ದಾರೆ. 


ಮೊದಲ ಚರಣದ ಒಂದೊಂದು ಸಾಲಿನಲ್ಲಿ ಮತ್ಸ್ಯ , ಕೂರ್ಮ,

ವರಾಹ, ನರಸಿಂಹ ರೂಪಗಳನ್ನು ಸ್ಮರಿಸಿರುವ ದಾಸರು  ಸಾಮಾನ್ಯವಾಗಿ

ಚಾಲ್ತಿಯಲ್ಲಿರುವ ನರಸಿಂಹನ ಕೋರೆಹಲ್ಲಿನ ಉಗ್ರರೂಪದವನ್ನು 

‘ಪರರಿಗೆ ಬಾಯ್ದೆರೆದು  ಪಲ್ಕಿರಿದರಿಲ್ಲ’ ಎಂದು ಬಣ್ಣಿಸಿ ಇತರರಿಗೆ

ಹಲ್ಲು ಕಾಣಿಸುವಂತೆ  ಬಾಯಿಬಿಟ್ಟು ಹಲ್ಲುಕಿರಿದರೂ ಕರ್ಮ

ಕಳೆಯಲಿಲ್ಲ ಎಂದು ಹಾಸ್ಯಮಾಡಿದ್ದಾರೆ. 


ಮುಂದಿನ ಚರಣ ವಾಮನ, ಪರಶುರಾಮ, ರಾಮ, ಕೃಷ್ಣಾವತಾರಗಳನ್ನು

ಸೂಚಿಸುತ್ತದೆ. ದೇಹವನ್ನು ಹ್ರಸ್ವಮಾಡಿ ಎಂದರೆ ದೇಹವನ್ನು ಕುಗ್ಗಿಸಿ

ಎಂದು. ಇದು ವಾಮನಾವತಾರದ ಯಾಚಕ ರೂಪದ ವರ್ಣನೆ. ಮುಂದೆ

ಪರಶುರಾಮನನ್ನು ದಾಸರು ಕುಲಗೇಡಿ ಎಂದಿದ್ದಾರೆ. ಇಂಥ ರಚನೆ

ಅಥವಾ ವರ್ಣನೆಗೆ ನಿಂದನಾ ಸ್ತುತಿ ಎಂದು ಹೆಸರು. ಇದು

ಭಗವಂತನ ಅವತಾರಗಳ ಭಕ್ತಿಪೂರ್ವಕ ಸ್ಮರಣೆ.  ಆದರೆ ಅವನನ್ನು 

ನಿಂದಿಸುವಂಥ ಸಂಬೋಧನೆ. ಪರಶುರಾಮ ಬ್ರಾಹ್ಮಣನಾಗಿ ಜನಿಸಿ,

ತನ್ನ ವರ್ಣಕ್ಕೆ ವಿರುದ್ಧವಾಗಿ ಕ್ಷತ್ರಿಯರೊಡನೆ ಯುದ್ಧದಲ್ಲಿ ತೊಡಗಿದನಲ್ಲ, 

ಅದರಿಂದ ಅವನನ್ನು  ‘ಕುಲಗೇಡಿ’ ಎಂದರು ದಾಸರು. ಇದ್ದದ್ದನ್ನು

ಇದ್ದಂತೆ ನೇರವಾಗಿ ಹೇಳಿಬಿಡುವ ದಾಸರಿಗೆ ಯಾರ ಮುಲಾಜೂ ಇಲ್ಲ. 


ಕೊನೆಯ ಚರಣದಲ್ಲಿರುವ ‘ಧೀರತನವನು ಬಿಟ್ಟು ದಿಗಂಬರನಾದರೂ ಇಲ್ಲ’

ಎಂಬ ಸಾಲು ಬುದ್ಧಾವತಾರಕ್ಕೆ ಸಂಭಂದ ಪಟ್ಟದ್ದು.  ಬುದ್ಧಾವತಾರ,

ಕೊಂಚ ವಿವಾದಾತ್ಮಕವಾದದ್ದು. ಅದು ವಿಷ್ಣುವಿನ ಅವತಾರವೇ

ಅಲ್ಲವೆಂದು ವಾದಿಸುವ  ಕೆಲವರು  ಅವತಾರಗಳ ಪಟ್ಟಿಯಿಂದ

ಬುದ್ಧಾವತಾರವನ್ನು ಕೈಬಿಟ್ಟಿರುವುದೂ ಉಂಟು. ಆದರೆ ಶ್ರೀ

ವಾದಿರಾಜಸ್ವಾಮಿಗಳು ತಮ್ಮ ದಶಾವತಾರ ಸ್ತುತಿಯಲ್ಲಿ ಬುದ್ಧನನ್ನು

ಸೇರಿಸಿಯೇ ಸ್ತುತಿಸಿರುವುದರಿಂದ ಅದರ ಬಗ್ಗೆ ವಿವಾದಕ್ಕೆ ಎಡೆಯೇ 

ಇಲ್ಲ. ವಿವಾದಕ್ಕೆ ಎಡೆಯಿಲ್ಲವಾದರೂ, ವಿವರಣೆಗೆ ಎಡೆಯುಂಟು,

ಆದರೆ ಇಲ್ಲಿ ಅದು ಪ್ರಸ್ತುತವಲ್ಲವಾದ್ದರಿಂದ ಅದನ್ನು  ಮುಂದೆಲ್ಲಾದರೂ

ಅವಕಾಶಬಂದಾಗ ನೋಡೋಣ. 


ಯಾರುಬಲ್ಲರಯ್ಯಾ ವಿಧಿಯಾಟವನ್ನು ?  ಎನ್ನುತ್ತಾ  ‘ನಿನ್ನನ್ನೂ 

ಆ ವಿಧಿ ಸುಮ್ಮನೆ ಬಿಡಲಿಲ್ಲವಲ್ಲಾ’ ಎಂದು ವಿಧಿನಿಯಾಮಕನಾದ

ಪುರಂದರ ವಿಠಲನಿಗೇ ಹಾಸ್ಯಪೂರ್ವಕವಾದ ಪ್ರಶ್ನೆಹಾಕಿ, 

ಧಾರುಣಿಯಲ್ಲಿ ಅಪ್ರತಿಮನೆಂದು ಅವನನ್ನು ಸ್ತುತಿಸುತ್ತಾ ತಮ್ಮ

ರಚನೆಯನ್ನು ದಾಸರು ಕೊನೆಗಾಣಿಸಿದರೆಂದು ತಿಳಿಸಿ  ನನ್ನ

ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 

Saturday, July 11, 2026

ಕರ್ಮ ಬಂಧನ ಛೇದನ

 ನಮ್ಮ ದಾಸಸಾಹಿತ್ಯ ಸಿರಿ ಮಾಲಿಕೆಯ ಹತ್ತೊಂಭತ್ತನಯ  ಗೀತೆ, ಭಗವಂತನ ಉಪಾಸನೆಯನ್ನು ಅತ್ಯಂತ ಸುಲಭವಾಗಿಸುವ ಶ್ರೀ ಪುರಂದರದಾಸರ ರಚನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ‘ಭಕ್ತಿಯಿಂದ ನೀನೇನು ಕೊಟ್ಟರೂ ಸ್ವೀಕರಿಸಿ ಸಂತೃಪ್ತನಾಗುತ್ತೇನೆ’. ಇಲ್ಲಿ ದಾಸರು  ಹೇಳುತ್ತಾರೆ ‘ಭಕ್ತಿಯಿಂದ ಅವನನ್ನು ನೆನೆದರೆ ಸಾಕು ಅವನು ಸಂತೃಪ್ತನಾಗುತ್ತಾನೆ’.


ಕರ್ಮ ಬಂಧನ ಛೇದನ ರಘು 

ರಾಮನ ನಾಮ ನೀ ನೆನೆ ಮನವೇ 


ಮಂತ್ರವನರಿಯೆನು ತಂತ್ರವನರಿಯೆ ಜಗ 

ದಂತ್ರವನರಿಯೆನೆಂದೆನಬೇಡ 

ತಂತ್ರ ಸ್ವತಂತ್ರನ ಪರಮ ಪವಿತ್ರನ 

ಅಂತರಂಗದಿ ನೀ ನೆನೆಮನವೇ 


ಕಲಿಯುಗದೊಳು ಹರಿನಾಮವ ನೆನೆದರೆ 

ಕುಲಕೋಟಿಗಳು ಉದ್ಧರಿಸುವುವು 

ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ 

ಜಲಜನಾಭನ ನೀ ನೆನೆ ಮನವೇ 


ವದನದಿ ನಾರಾಯಣನೆಂಬ ನಾಮವು 

ಮುದದಿಂದಲಿ ನೆನೆ  ಬಿಡಬೇಡ 

ಪದುಮನಾಭ ಶ್ರೀ ಪುರಂದರ ವಿಠಲನ 

ಸದಾಕಾಲದಿ ನೀ ನೆನೆ ಮನವೇ


‘ಕರ್ಮ ಬಂಧನ ಛೇದನ’ ಎಂದು ತಮ್ಮ ರಚನೆಯನ್ನು ದಾಸರು ಪ್ರಾರಂಭಿಸಿದ್ದಾರೆ. ಈ ಕರ್ಮಬಂಧನವನ್ನು  ಛೇದ ಮಾಡುವುದು  ಭಗವಂತನ ಗುರುತರವಾದ ಕಾರ್ಯಗಳಲ್ಲಿ ಒಂದು. ಒಂದು ಜೀವ ಏನೆಲ್ಲಾ ಪುಣ್ಯಕಾರ್ಯಗಳನ್ನು ಮಾಡಿ, ಉತ್ತಮ ಜನ್ಮಗಳನ್ನು ಪಡೆದು, ಮುಕ್ತಿಯೋಗ್ಯವಾಗಿ ಮೋಕ್ಷದ  ಹೊಸ್ತಿಲಲ್ಲಿ ಬಂದು ನಿಂತರೂ ಅದಕ್ಕೆ ಮೋಕ್ಷ ಖಚಿತವಲ್ಲ. ನಮ್ಮ ತತ್ವದ ಪ್ರಕಾರ  ಮುಕ್ತಿಯೋಗ್ಯವಾದ ಕಾರ್ಯ ಮಾಡಿದೆನೆಂದು ಹಕ್ಕಿನಿಂದ ಮೋಕ್ಷವನ್ನು ಪಡೆಯಲಾಗದು. ಅದು ಭಗವಂತನ ವಿವೇಚನೆಗೆ ಬಿಟ್ಟದ್ದು, ಅವನ ಕೃಪೆ. ಅವನಿಗೆ ಒಪ್ಪಿಗೆಯಾದರೆ ಅವನು ಕರ್ಮಾ ಬಂಧನವನ್ನು ಛೇದಿಸಿ ಮೋಕ್ಷ  ಪ್ರಧಾನಮಾಡುತ್ತಾನೆ. ಆದ್ದರಿಂದಲೇ ದಾಸರು ಇಲ್ಲಿ ರಾಮನನ್ನು  ‘ಕರ್ಮ ಬಂಧನ ಛೇದನ’ ಎಂದರು. 

ಮುಂದಿನ ಚರಣಗಳೆಲ್ಲಾ ಬಹಳವೇ ಸರಳ. ಮೊದಲ ಚರಣದಲ್ಲಿ ಬರುವ ‘ಜಗದಂತ್ರ’ ಎಂದರೆ ಜಗತ್ತಿನ ಅಂತರಂಗ.  ಮುಂದೆ ಬರುವ ‘ತಂತ್ರ ಸ್ವತಂತ್ರ’ ಎಂದರೆ ಭಗವಂತ ಯಾವುದೇ ತಂತ್ರ ಅಥವಾ ಯುಕ್ತಿಗೆ ಬಲಿಯಾಗುವವನಲ್ಲ ಎಂದು. ಅವನು ಸಿಕ್ಕಬೇಕಾದರೆ ಅದು ಅಂತರಂಗದ ಆರಾಧನೆಯಿಂದ ಮಾತ್ರ.  ಎನ್ನುತ್ತಾರೆ ದಾಸರು. 


ಕಲಿಯುಗ, ಭಗವದಾರಾಧನೆಯನ್ನು ಅತ್ಯಂತ ಸುಲಭವಾಗಿಸಿದೆ. ಹಿಂದಿನ ಯುಗಗಳಲ್ಲಿ ಪರಮಾತ್ಮನನ್ನು ಒಲಿಸಿಕೊಳ್ಳಲು ತಪಸ್ಸು, ಯಜ್ಞ, ಯಾಗಗಳ ಮೂಲಕ ಅವನನ್ನು ಆರಾಧಿಸಬೇಕಿತ್ತು.  ಆದರೆ ನಿಷ್ಠೆ, ನಂಬಿಕೆಗಳು ಇಳಿಮುಖವಾಗಿರುವ ಕಲಿಯುಗದಲ್ಲಿ ಅವನು ಅದು ಯಾವುದನ್ನೂ ಆಶಿಸುವುದಿಲ್ಲ. ಈಗ ಅವನು ‘ಸುಲಲಿತ ಭಕ್ತಿಗೆ ಸುಲಭ’. ಅವನ ನಾಮಸ್ಮರಣೆಯಷ್ಟೇ ಸಾಕು. 


ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಎಂದರಲ್ಲವೇ ದಾಸರು. ಅದನ್ನೇ ಈಗ ಅವರು ಮತ್ತೆ ಹೇಳುತ್ತಿರುವುದು. ‘ವದನದಿ ನಾರಾಯಣನೆಂಬ ನಾಮವಿರಲಿ, ಪದುಮನಾಭನ ನೆನಪು ಸದಾ ಇರಲಿ’ ಅಷ್ಟುಸಾಕು  ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ ಎಂದು ತಿಳಿಸಿ ಇಂದಿನ ಕೊಡುಗೆಯನ್ನು ಕೃಷ್ಣಾರ್ಪಣಗೊಳಿಸುತ್ತೇನೆ. 


Saturday, July 4, 2026

ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ

 ತಾವು ಸಂಪೂರ್ಣವಾಗಿ ನಂಬಿರುವ, ನಿರಂತರವಾಗಿ ಆರಾಧಿಸುವ,  ಪರಮಾತ್ಮ ಎಂಬ ಪರವಸ್ತುವಿನ ಬಗ್ಗೆ ಸತತ ಚಿಂತನೆ ಮತ್ತು ಅದನ್ನು ಮತ್ತಷ್ಟು ಅರಿತುಕೊಳ್ಳುವ ಪ್ರಯತ್ನ,  - ಇದು - ನಾವು ಜ್ಞಾನಿಗಳೆಂದು ಕರೆಯುವ ಎಲ್ಲರ ಅನೂಚಾನವಾದ ಕಾರ್ಯ.  ಆ ಪರವಸ್ತುವಿನ ಬಗ್ಗೆ ಹೆಚ್ಚು ಚಿಂತಿಸಿದಷ್ಟೂ ಅದು ಮತ್ತಷ್ಟು ಚಿಂತನೆಗೆ ಎಡೆಮಾಡುತ್ತದೆ. ಕೊನೆಯಾಗದ ಚಿಂತನೆ. ಪ್ರಶ್ನೆಗಳ ಸರಪಳಿ. ಅಂಥ ಸಂಧರ್ಭಗಳಲ್ಲಿ ಮನಸ್ಸಿನಲ್ಲಿ ಮೂಡುವುದು  ‘ನಾ ನಿನ್ನ ಅರಿಯಲಾರೆ ಸ್ವಾಮಿ’ ಎಂಬ ಶರಣಾಗತಿಯ ಭಾವ. ಆ ಭಾವನೆಯನ್ನು ಬಿಂಬಿಸುವ ಕನಕದಾಸರ ಕೃತಿಯೊಂದನ್ನು ಇಂದು ಪ್ರಸ್ತುತ ಪಡಿಸುತ್ತಿದ್ದೇವೆ. ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’. 

ತತ್ವಶಾಸ್ತ್ರದಲ್ಲಿ ಮಾಯೆ ಎಂಬ ಪದಕ್ಕೆ  ಜಗತ್ತು, ಪ್ರಕೃತಿ, ಸಂಸಾರ, ಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿ, ಅಜ್ಞಾನ ಮುಂತಾದ  ಅನೇಕ ಅರ್ಥಗಳಿವೆ. ಮಾಯೆ ಈ ಜಗತ್ತಿನ ಸೃಷ್ಟಿಗೆ ಪರಮಾತ್ಮ ಉಪಯೋಗಿಸಿರುವ ಮೂಲ ವಸ್ತು.  ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ತಾನು ಅಣುವಾಗಿ ಜಗತ್ತಿನ ಕಣಕಣದಲ್ಲಿ ತೂರಿರುವವನೂ ಹೌದು, ಬೃಹತ್ತಾಗಿ ಇಡೀ ಜಗತ್ತನ್ನು ಆವರಿಸಿರುವವನೂ ಹೌದು. ಹಾಗಾಗಿ ಕನಕದಾಸರ ಗೀತೆಯ ಪಲ್ಲವಿ ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’ ಎನ್ನುವುದು ಒಂದು ಪ್ರಶ್ನೆಯಂತೆ ಕಂಡರೂ ಅದು ಪ್ರಶ್ನೆಯಲ್ಲ, ಅದೊಂದು ಹೇಳಿಕೆ. ನಂತರದ ಸಾಲುಗಳು  ಕೂಡ ಹಾಗೆಯೇ. ಪರಮಾತ್ಮ ದೇಹವನ್ನು ಒಳಗಿನಿಂದ ಧರಿಸಿ, ಹೊರಗಿನಿಂದ ಆವರಿಸಿದ್ದಾನೆ. ಆದ್ದರಿಂದಲೇ ದಾಸರು ಮುಂದೆ  ‘ನೀ ದೇಹದೊಳಗೋ ನಿನ್ನೊಳು ದೇಹವೋ’ ಎಂದಿದ್ದಾರೆ. 


ಇದೇ ಭಾವನೆಯನ್ನು ಮುಂದುವರಿಸುತ್ತ ಮುಂದಿನ ಚರಣಗಳಲ್ಲಿ, ನಾವು ನೋಡಿ, ಕೇಳಿ, ಅನುಭವಿಸಿರುವ ರೂಪಕಗಳ  ಮೂಲಕ ದಾಸರು ನಮಗೆ ತಮ್ಮ ಚಿಂತನೆಯನ್ನು ವಿಶದಪಡಿಸುತ್ತಾರೆ.  ‘ಬಯಲು ಆಲಯದೊಳಗೋ ಆಲಯವು ಬಯಲೊಳಗೋ’ ಸಾಲನ್ನು ನೋಡಿ. ಬಯಲು ಎನ್ನುವ ಶಬ್ದಕ್ಕೆ, ಭೂಮಿ ಮತ್ತು ಆಕಾಶ ಎಂಬ ಎರಡೂ ಅರ್ಥವಿದೆ. ಆಲಯ ಬಯಲೊಳಗೆ ಎಂದರೆ ಮನಸ್ಸಿನಲ್ಲಿ ಒಂದು  ಸ್ಪಷ್ಟ ಚಿತ್ರ ತಕ್ಷಣ ಮೂಡುತ್ತದೆ. ಬಯಲು ಆಲಯದೊಳಗೆ ಎಂದರೆ ?  ಈಗ ಬಯಲು ಎಂದರೆ ಆಕಾಶ ಅಥವಾ ಇಂಗ್ಲಿಷ್ ನಲ್ಲಿ ನಾವು ಕರೆಯುವ ಸ್ಪೇಸ್ ಎಂದು ಚಿಂತಿಸೋಣ. ಆ ಬಯಲು ಅಥವಾ ಸ್ಪೇಸ್  ಎನ್ನುವುದು ಆಲಯವನ್ನು ಆವರಿಸಿಕೊಂಡಿದೆ. ಅಷ್ಟೇ ಅಲ್ಲ,  ಆಲಯದ ಒಳಗೆ ನಾವು ಖಾಲಿಜಾಗವೆಂದು ಕರೆಯುತ್ತೇವಲ್ಲ ಅಲ್ಲಿಯೂ ತುಂಬಿಕೊಂಡಿದೆ ಅಲ್ಲವೇ ? ಆದ್ದರಿಂದ ಬಯಲು ಆಲಯದೊಳಗೂ ಹೌದು, ಆಲಯ ಬಯಲೊಳಗೂ ಹೌದು.  ಈ ಒಳಗೆ, ಹೊರಗೆ, ಆಲಯ, ಬಯಲು ಎಲ್ಲವೂ ಅವನ್ನು ಕಾಣುವ ಕಣ್ಣು ಎಂಬ ಇಂದ್ರಿಯ ಇದ್ದು ಆ ಇಂದ್ರಿಯಕ್ಕೆ ಅನುಭವಿಸುವ ಶಕ್ತಿ ಇದ್ದರೆ ತಾನೇ ? ಆದ್ದರಿಂದ ನಂತರದಲ್ಲಿ  ದಾಸರು  ‘ಬಯಲು ಆಲಯವೆರಡು ನಯನದೊಳಗೋ’ ? ಎಂದರು. ಮುಂದೆ  ಮತ್ತಷ್ಟು ಗೊಂದಲ. ‘ನಯನ ಬುದ್ಧಿಯೊಳಗೋ, ಬುದ್ಧಿ ನಯನದೊಳಗೋ?’  ಬುದ್ಧಿ ನೋಡೆಂದುದನ್ನು ಕಣ್ಣು ನೋಡಿತೋ ?  ಅಥವಾ ನಾವು ನೋಡುವ ರೀತಿಯಿಂದ, ನೋಡಿದ ವಸ್ತುವಿನಿಂದ, ಬುದ್ಧಿ ಪ್ರಚೋದಿತವಾಯಿತೋ ?  ಏನೇ ಇರಲಿ, ಒಟ್ಟಿನಲ್ಲಿ  ಬಯಲು, ಆಲಯ ಎರಡರಲ್ಲೂ ಇರುವವ ನೀನು,  ಕಣ್ಣು ಎಂಬ ಇಂದ್ರಿಯ ಕೊಟ್ಟವನು ನೀನು, ಆ ಇಂದ್ರಿಯಕ್ಕೆ ಏನನ್ನಾದರೂ ಕಂಡು ಅನುಭವಿಸುವ ಶಕ್ತಿ ಕೊಟ್ಟವ ನೀನು, ಆ ಅನುಭವವನ್ನು ಆಸ್ವಾದಿಸುವ ಬುದ್ಧಿ ಕೊಟ್ಟವ ನೀನು. ಸ್ವಾಮೀ, ಎಲ್ಲವೂ ನಿನ್ನೊಳಗೆ ಎಂದು  ‘ನಯನ ಬುದ್ಧಿಗಳೆರಡೂ ನಿನ್ನೊಳಗೋ’  ಎಂದುಬಿಟ್ಟರು ಕನಕದಾಸರು. 


ಹೀಗೆಯೇ ಉಳಿದ ಚರಣಗಳ ವಿವರಣೆ ಸಹ. ಸವಿ ಸಕ್ಕರೆಯೊಳಗೋ ಸಕ್ಕರೆ ಸವಿಯೊಳಗೋ? ಎರಡೂ ನಾಲಗೆಯೊಳಗೋ ? ಕುಸುಮ ಗಂಧದೊಳಗೋ, ಗಂಧ ಕುಸುಮದೊಳಗೋ ಎರಡೂ ನಮಗಿರುವ ಘ್ರಾಣದ ಅಂದರೆ ವಾಸನೆಯನ್ನು ಅನುಭವಿಸುವ ಶಕ್ತಿಯೊಳಗೋ? ಇತ್ಯಾದಿ ಇತ್ಯಾದಿ ತಮ್ಮ ಚಿಂತನೆಯನ್ನು ಪ್ರಶ್ನೆಯ ರೂಪದಲ್ಲಿ ಪದ್ಯವಾಗಿ  ರಚಿಸಿ ಕೇಳಿದವರನ್ನು ಸಹ  ಚಿಂತನೆಗೆ ಹಚ್ಚಿದರು. ಸವಿ ಸಕ್ಕರೆಯೊಳಗೆ ಸರಿ. ಆದರೆ ಸಕ್ಕರೆ ಸವಿಯೊಳಗೆ ಎಂದರೆ ? ನಾವು ಏನೆಲ್ಲವನ್ನು ಸವಿ ಎಂದು ಸೂಚಿಸುತ್ತೇವೋ ಅದರಲ್ಲಿ ಸಕ್ಕರೆಯೂ ಒಂದಲ್ಲವೇ ? ಹಾಗಾಗಿ ಸಕ್ಕರೆ ಸವಿಯೊಳಗೂ ಹೌದು. ಮತ್ತೆ, ಸವಿ, ಸಕ್ಕರೆ ಎರಡೂ ನಾಲಗೆಯೊಳಗೆ. ಹೀಗೆಯೇ ಮೊದಲ ಚರಣದ ಭಾವನೆಯನ್ನೇ ಬಿಂಬಿಸುವ ಮುಂದಿನಸಾಲುಗಳನ್ನು ತಮ್ಮ ಚಿಂತನೆಗೆ ಬಿಟ್ಟು ನಾನು ಮುಂದೆ ಸಾಗುತ್ತೇನೆ. 


‘ವಿಜಾನತಾ ಅವಿಜ್ಞಾತಂ ಅವಿಜ್ಞಾತಾ  ವಿಜಾನತಾಂ’ ಎನ್ನುವುದು ಸಂಸ್ಕೃತದ ಒಂದು ಉಕ್ತಿ.  ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ ತಿಳಿದಿದ್ದೇನೆ ಎನ್ನುವವನಿಗೆ ಏನೂ ತಿಳಿದಿಲ್ಲ, ತಾನು ತಿಳಿದಿಲ್ಲ ಎನ್ನುವವನು ತಿಳಿದಿದ್ದಾನೆ - ಎಂದು ಇದರ ಅರ್ಥ. ಇದನ್ನು ನಮಗೆ ವಿವರಿಸುವಂತೆ,  ಕೊನೆಯಲ್ಲಿ  ನಮ್ರವಾಗಿ ‘ಅಸಮಭವ ಕಾಗಿನೆಲೆಯಾದಿ  ಕೇಶವರಾಯ,  ಉಸುರಲೆನ್ನಳವಲ್ಲ ನಿನ್ನೊಳಗೋ ’ -  ಎಂದರೆ - ‘ನಿನಗೆ ಸಮವೆಂಬುದು  ಮತ್ತೊಂದಿಲ್ಲದ  ಕಾಗಿನೆಲೆಯ ಕೇಶವರಾಯನೇ, ನಿನ್ನನ್ನು ವಿವರಿಸುವುದು ಅಥವಾ ತಿಳಿಸಿಕೊಡುವುದು - ಎನ್ನಳವಲ್ಲ - ಎಂದರೆ  ನನ್ನ ಕೈಗೆಟಕುವ  ಕಾರ್ಯವಲ್ಲ ಸ್ವಾಮೀ ನಿನ್ನನ್ನು ತಿಳಿಸಿಕೊಡುವ ಸಾಮರ್ಥ್ಯವಿರುವವನು ನೀನೊಬ್ಬನೇ ’. ಎನ್ನುತ್ತಾ  ತಮ್ಮ ರಚನೆಯನ್ನು ಕೊನೆಯಾಗಿಸಿದರು ಕನಕದಾಸರು. ಜ್ಞಾನಿಗಳು ಅವರು. ತಮಗೆ ತಿಳಿದಿಲ್ಲವೆಂದು ಹೇಳಿ ಎಲ್ಲ ಅವನಿಗೆ ಬಿಟ್ಟು ಸುಮ್ಮನಾದರು. ಅಜ್ಞಾನಿ  ನಾನು ಅವರ ಪ್ರಶ್ನೆಗಳಿಗೆ  ವಿವರಣೆಕೊಡಲು ಪ್ರಯತ್ನಪಡುತ್ತಿದ್ದೇನೆ. ವಿಪರ್ಯಾಸವಲ್ಲವೇ ? ಇಷ್ಟುಸಾಕೆಂದು ಹೇಳುತ್ತಾ ನನ್ನ ದಡ್ಡತನವನ್ನು ಕೃಷ್ಣಾರ್ಪಣ ಎನ್ನುತ್ತೇನೆ.


Friday, June 26, 2026

ಎರಡು ಒಂದಾಗದು ರಂಗ

 ಶ್ರೀ ಪುರಂದರದಾಸರ ಆಧ್ಯಾತ್ಮಿಕ ಚಿಂತನೆಯ ಮೇಲೆ ಅವರ  ಗುರುಗಳಾದ ವ್ಯಾಸತೀರ್ಥರ ಪ್ರಭಾವವನ್ನು, ಅಂದರೆ ಮಧ್ವ ಸಂಪ್ರದಾಯದ ಪ್ರಭಾವವನ್ನು, ಎತ್ತಿತೋರಿಸುವಂಥ ಗೀತೆಯೊಂದನ್ನು ಇಂದು ಪ್ರಚುರಪಡಿಸುತ್ತಿದ್ದೇವೆ. ಗೂಢಾರ್ಥದ ಕೃತಿಯಾದರೂ ಕೆಲವೇ ಸಾಲುಗಳಲ್ಲಿ ಆತ್ಮ, ಪರಮಾತ್ಮ, ಜನ್ಮ, ಪುನರ್ಜನ್ಮ, ಸಂಸಾರ, ಮುಕ್ತಿಗಳ ಬಗ್ಗೆ ಚೊಕ್ಕವಾಗಿ ತಿಳಿಸಿಕೊಡುವ ಸಾಹಿತ್ಯ. 


‘ಎರಡು ಒಂದಾಗದು ರಂಗ, ಎರಡೂ ಒಂದಾಗದು ಎಂದೆಂದಿಗೂ’. ಏನು ಇವೆರಡು ? ಒಂದಾಗದಿರುವುದು? ಎಂದೆಂದಿಗೂ ಎಂಬ ಒತ್ತು ಏಕೆ ?  ಒಂದಾಗದಿರುವ ಎರಡು ಯಾವುವೆಂದರೆ ಜೀವಾತ್ಮ ಮತ್ತು ಪರಮಾತ್ಮ.  ಜೀವಾತ್ಮವು ತನ್ನ ಮಾಯೆಯ ಆವರಣವನ್ನು  ಕಳಚಿಕೊಂಡು ಮುಕ್ತಿಪಡೆದಮೇಲೆ ಪರಮಾತ್ಮದೊಂದಿಗೆ ಒಂದಾಗುತ್ತದೆ  ಎನ್ನುವುದು ಅದ್ವೈತ ತತ್ವ.  ಆದರೆ, ಜೀವಾತ್ಮ ಎನ್ನುವುದು ಎಂದಿಗೂ, ಯಾವ ಪರಿಸ್ಥಿತಿಯಲ್ಲೂ  ಪರಮಾತ್ಮನೊಡನೆ ಒಂದಾಗದು  ಎನ್ನುವುದು ದ್ವೈತ ಅಥವಾ ಮಧ್ವ ಸಿದ್ಧಾಂತದ ಪ್ರತಿಪಾದನೆ. ಅದರಿಂದಲೇ ಇಲ್ಲಿ ‘ಒಂದಾಗದು ಎಂದೆಂದಿಗೂ’ ಎಂಬ ಪದಪ್ರಯೋಗ. ಸಾಮಾನ್ಯವಾಗಿ ದಾಸರು ಇಂಥ ತತ್ವಗಳ ಸಂಧಿಗ್ದದಲ್ಲಿ ಸಿಕ್ಕಿಕೊಳ್ಳುವರಲ್ಲ. ಅವರದು ಭಕ್ತಿಪಂಥ. ವೇದ, ಶಾಸ್ತ್ರ, ತತ್ವಗಳ ಗೊಂದಲ ಅವರಿಗೆ ಬೇಡ. ಆದರೆ ಅವರ ಕೆಲವು ಕೃತಿಗಳಲ್ಲಿ ತತ್ವಪ್ರತಿಪಾದನೆ ಕಾಣಬರುತ್ತದೆ. ಇದು ಅವುಗಳಲ್ಲಿ ಒಂದು. 


ಮುಂದಿನ ಚರಣದ ಮೊದಲ ಸಾಲು ‘ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೇ ಗೂಡಿನಲ್ಲಿ ಇರುತಿಹವು’.  ಈ ಜಗತ್ತು ಅಥವಾ ಸಂಸಾರವನ್ನು ದಾಸರು ‘ವೃಕ್ಷ’ ಎಂದು  ಕರೆದರು. ಈ ಜಗತ್ತೆಂಬ ವೃಕ್ಷದಲ್ಲಿ ಒಂದು ಗೂಡು, ಅದು, ನಮ್ಮ ಶರೀರವೆಂಬ ಗೂಡು. ಒಂದೇ ಗೂಡಿನಲ್ಲಿರುವ, ಎಂದರೆ, ಆ ಶರೀರದಲ್ಲಿರುವ ಎರಡು ಪಕ್ಷಿಗಳು, ಜೀವಾತ್ಮ ಮತ್ತು  ಪರಮಾತ್ಮ.  ಶ್ರೀ  ಕೃಷ್ಣಪರಮಾತ್ಮ ಸಹ ಜಗತ್ತನ್ನು ‘ವೃಕ್ಷ’ ಎಂದಿದ್ದಾನೆ. ಭಗವದ್ಗೀತೆಯ ಹದಿನೈದನೇ ಅಧ್ಯಾಯದ ಮೊದಲ ಶ್ಲೋಕ,  ‘ಊರ್ಧ್ವಮೂಲಮಧಃಶಾಖಮಶ್ವತ್ಥಮ್ ಪ್ರಾಹುರವ್ಯಯಮ್/ ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್’ ಎನ್ನುತ್ತದೆ. ಇಲ್ಲಿ ಈ ಜಗತ್ತು ಅಥವಾ ಸಂಸಾರವನ್ನು ಕೃಷ್ಣ ಅಶ್ವತ್ಥ ವೃಕ್ಷಕ್ಕೆ ಹೋಲಿಸಿದ್ದಾನೆ. ವೃಕ್ಷ  ಹೌದು, ಆದರೆ ಅದು ತಲೆಕೆಳಗಾಗಿರುವ ವೃಕ್ಷ. ಅದರ  ಬೇರು ಮೇಲೆ  - ಬೀಳಲು, ಎಲೆ, ರೆಂಬೆ, ಕೊಂಬೆಗಳು ಕೆಳಗೆ. ಇದು ಕೊಂಚ ನೆನಪಿನಲ್ಲಿರಲಿ.   ಗೀತೆಯ ಮುಂದಿನ ಸಾಲು ‘ಒಂದು ಪಕ್ಷಿ ಫಲಂಗಳನುಂಬುದು ಒಂದು ಫಲಂಗಳನುಣ್ಣದು ರಂಗ’ ಎನ್ನುತ್ತದೆ. ಶರೀರವೆಂಬ ಗೂಡಿನಲ್ಲಿರುವ ಜೀವಾತ್ಮವೆನ್ನುವ ಪಕ್ಷಿ ಕರ್ಮಮಾಡಿ ತನ್ನ  ಕರ್ಮಗಳ ಫಲವನ್ನು ತಾನು ಉಣ್ಣುವುದು. ಅದೇ ಗೂಡಿನಲ್ಲಿರುವ ಪರಮಾತ್ಮನೆನ್ನುವ ಪಕ್ಷಿಗೆ ಕರ್ಮಉಂಟು, ಫಲದ ಜಂಜಾಟವಿಲ್ಲ. ಆದ್ದರಿಂದ ಒಂದು ಫಲಂಗಳನುಣ್ಣದು


ಅಲ್ಲಿಂದ  ಮುಂದೆ,  ‘ಹಲವು ಕೊಂಬೆಗಳಿಗೆ ಒಂದು ಹಾರಿತು / ಒಂದು ಹಲವು ಕೊಂಬೆಗಳಿಗೆ  ಹಾರಲರಿಯದು’. ತಲೆಕೆಳಗಾದ ಸಂಸಾರ ವೃಕ್ಷವೆಂದೆವಲ್ಲಾ ಅದರ ಬೀಳಲು, ರೆಂಬೆ, ಕೊಂಬೆಗಳೇ ನಮ್ಮ ಸಂಸಾರ ಬಂಧನಗಳು. ಜನ್ಮ, ಪುನರ್ಜನ್ಮಗಳು. ಜೀವಾತ್ಮ ಹಲವು ಕೊಂಬೆಗಳಿಗೆ  ಅಂದರೆ ಒಂದು ಜನ್ಮದಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇರುತ್ತಾನೆ.  ಪರಮಾತ್ಮನಿಗೆ ಹೀಗೆ ಹಾರಾಡುವ  ಕಾಟವಿಲ್ಲ. ಅದು ಹಾರುವ ಅವಶ್ಯಕತೆಯಿಲ್ಲದ್ದು. ಅದರಿಂದಲೇ  ಅದು ಹಾರಲರಿಯದು.  ಮುಂದೆ ದಾಸರೆನ್ನುತ್ತಾರೆ ‘ಹಲವನೆಲ್ಲವನು ಒಂದು ಬಲ್ಲುದು / ಒಂದು ಹಲವನೆಲ್ಲವ ಅರಿಯದು ರಂಗ’. ಪರಮಾತ್ಮ ಜ್ಞಾನ ಸ್ವರೂಪ. ಅವನು ಎಲ್ಲವನ್ನೂ ಬಲ್ಲವನು. ಜೀವಾತ್ಮನೆಂಬ ಪಕ್ಷಿಗೆ ಅಲ್ಪಜ್ಞಾನ ಅಥವಾ ಜ್ಞಾನವಿಲ್ಲ. 


ಮುಂದಿನ ಚರಣ ‘ನೂರೆಂಟು ಕೊಂಬೆಗಳಿಗೆ ಹಾರಿತು / ಅದು ಹಾರಿ ಹಾರಿ ಮೇಲಕ್ಕೇರಿ ಮೀರಿತು.’  ಒಂದುವೇಳೆ ಆ ಜೀವಾತ್ಮನೆಂಬ ಪಕ್ಷಿ ತನ್ನ ಸಾಧನಾ ಶರೀರವನ್ನು ಸದುಪಯೋಗಪಡಿಸಿಕೊಂಡು ಸತ್ಕರ್ಮಗಳಲ್ಲಿ, ಸಾಧನೆಯಲ್ಲಿ ತೊಡಗಿದ್ದರೆ,  ಅದು ಕೆಳಗಿನ ಕೊಂಬೆಗಳಿಂದ ಪ್ರಾರಂಭಿಸಿ ಹಾರುತ್ತಾ ಹಾರುತ್ತಾ ಮೇಲಿನ ಕೊಂಬೆಗಳನ್ನು ಅಂದರೆ ಉತ್ತಮ ಜನ್ಮಗಳನ್ನು ಪಡೆಯುತ್ತಾ ಸಾಗುತ್ತದೆ. ಹಾಗೆಯೇ ಹಾರಿ ಹಾರಿ ಕೊಂಬೆಗಳನ್ನು ಮೀರಿ, ಅಂದರೆ ಜನ್ಮ ಪುನರ್ಜನ್ಮಗಳನ್ನು ನಿವಾರಿಸಿಕೊಂಡು, ಮೇಲಿರುವ ಬೇರನ್ನು ಅಂದರೆ ಜಗತ್ತಿಗೆ ಆಧಾರವೆನಿಸಿದ ಪರಮಾತ್ಮನನ್ನು  ತಲುಪುತ್ತದೆ. 


ಈ  ರೀತಿಯಲ್ಲಿ  ಜೀವಾತ್ಮನೆಂಬ ಪಕ್ಷಿ, ಕೊಂಬೆಗಳನ್ನೆಲ್ಲ ಮೀರಿ, ಮೇಲಕ್ಕೆ ಹಾರಿ ‘ನಿಮ್ಮನ್ನು ಸೇರಿ ಸುಖಿಯಾಗಿ  ನಿಂತಿತು ರಂಗ’ ಎನ್ನುತ್ತಾರೆ ದಾಸರು. ಹಾರಾಟವನ್ನು ಮೀರಿ ಬೇರನ್ನು ಸೇರಿ  ಬಿಡುಗಡೆ ಪಡೆಯಿತಲ್ಲಾ ಪಕ್ಷಿ, ಅದನ್ನೇ ಮುಕ್ತಿ ಅಥವಾ ಮೋಕ್ಷ ಎನ್ನುವುದು. ಅಲ್ಲಿಂದ ಮುಂದಕ್ಕೆ ಹಾರಾಟವೂ ಇಲ್ಲ, ಓಡಾಟವೂ  ಇಲ್ಲ. ಆದ್ದರಿಂದಲೇ ದಾಸರು  ‘ನಿಮ್ಮನ್ನು ಸೇರಿ ಸುಖಿಯಾಗಿ ನಿಂತಿತು ರಂಗ ಎಂದು ತಮ್ಮ ಗೀತೆಯನ್ನು ಮುಗಿಸಿದರು  ಎನ್ನುವುದನ್ನು  ತಿಳಿಸಿ ಇಂದಿನ ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 


Saturday, June 20, 2026

ಏನು ಸುಖವೊ ರಂಗ

 ಆಚಾರ್ಯ ಮಧ್ವರು ಸಂಸ್ಕೃತದಲ್ಲಿ ರಚಿಸಿದ  ‘ದ್ವಾದಶ ಸ್ತೋತ್ರಗಳು’ ಎನ್ನುವ ಹನ್ನೆರಡು ಸ್ತೋತ್ರಗಳು ಹರಿದಾಸ ಸಾಹಿತ್ಯ ಸೃಷ್ಟಿಗೆ ನಾಂದಿಹಾಡಿದವು ಎನ್ನುವುದು ಒಂದು ಅಭಿಪ್ರಾಯ. ಅನೇಕ ತಲೆಮಾರುಗಳ ನಂತರ ಅದೇ ಪೀಳಿಗೆಯಲ್ಲಿ  ಪೀಠಾಧಿಪತಿಗಳಾದ ಶ್ರೀ ವ್ಯಾಸತೀರ್ಥರು ಆ ಚಟುವಟಿಕೆಯನ್ನು ಮುಂದುವರೆಸಿ, ಕನ್ನಡದಲ್ಲಿ ಅನೇಕ ಗೀತೆಗಳನ್ನು ರಚಿಸಿ, ಹರಿದಾಸ ಸಾಹಿತ್ಯಕ್ಕೆ ಬುನಾದಿ ಹಾಕಿದರು. ಹರಿದಾಸ ಶ್ರೇಷ್ಠರಾದ  ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರಿಗೆ ಗುರುಗಳೂ ಆಗಿದ್ದ ಶ್ರೀ ವ್ಯಾಸತೀರ್ಥರ  ಒಂದು ಲಯಬದ್ಧವಾದ  ಸುಂದರ ರಚನೆಯನ್ನು ಇಂದು ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ‘ಏನು ಸುಖವೊ ರಂಗ ಎಂಥ ಸುಖವೊ’

ಈಗ ನೀವು ಕೇಳಿದ ‘ಏನು ಸುಖವೊ ರಂಗ’ ಗೀತೆಯ ರಾಗ ಭೀಮ್ ಪಲಾಸ್, ಆದಿತಾಳ.     ‘ನಿನ್ನ ಧ್ಯಾನವಮಾಳ್ಪ ಸಜ್ಜನರ ಸಂಗ ಏನುಸುಖವೋ ರಂಗ’ ಎನ್ನುತ್ತದೆ  ಗೀತೆಯ ಪಲ್ಲವಿ.  ಹರಿಸೇವೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎಂದು ಎರಡುವಿಧ. ಏಕಾಂತ ಆರಾಧನೆ ಎನ್ನುವುದು ವ್ಯಷ್ಟಿಸೇವೆ. ಇತರರ ಜತೆಗೂಡಿ ಮಾಡುವ ಸೇವೆ ಸಮಷ್ಟಿಸೇವೆ. ತಾನು ಇತರರನ್ನು ಉತ್ತೇಜಿಸಿ, ಮತ್ತು ಇತರರಿಂದ ತಾನು ಉತ್ತೇಜನಗೊಂಡು ಹರಿಸೇವೆಯಲ್ಲಿ ತೊಡಗುವುದು - ಉತ್ತಮ ದರ್ಜೆಯ ಸೇವೆ ಎನ್ನುವುದು ಒಂದು ಭಾವನೆ. ಆ ಭಾವನೆಗೆ ಒತ್ತುಕೊಡುವ  ಗೀತೆ ಇದು. 


ಕೇಳಿದ ಗೀತೆ,  ಶೃತಿ ಮತ್ತು ಲಯಬದ್ಧ ವಾಗಿದ್ದರೆ ಕಿವಿಗೆ ಇಂಪಾಗಿದ್ದು ಮನಸ್ಸಿನ ಮೇಲೆ ಅದರ  ಪರಿಣಾಮ ಇಮ್ಮಡಿಯಾಗುತ್ತದೆ. ಅದರಿಂದಲೇ  ತಾಳ ತಂಬೂರಿಗಳು ಹರಿದಾಸರ ಚಿಹ್ನೆಗಳಾದವು. ‘ತಂಬೂರಿ ಮೀಟಿ ಹಾಡುತ್ತಾ ಭಕ್ತಿಪರವಶರಾಗಿ ಕಣ್ಣಿನಿಂದ ಆನಂದಬಾಷ್ಪ ಸುರಿಸುತ್ತಾ ಕುಣಿದಾಡುವರ ಸಂಗ’ ಅದೆಂಥ ಸುಖ ಎಂದು ಉದ್ಗರಿಸುತ್ತದೆ ಮೊದಲ ಚರಣ. ಅಂಬಕ ದ್ವಯ ಎಂದರೆ ಎರಡು ಕಣ್ಣುಗಳು.  


ಹರಿದಾಸರ ಕೀರ್ತನೆಗಳು ಎಲ್ಲರ ನಾಲಗೆಯಿಂದಲೂ ಹೊರಹೊಮ್ಮಬೇಕು, ಭಕ್ತಿ ಭಾವನೆ ಹರಡಿ ಹೃದ್ಗತವಾಗಬೇಕು. ಆದ್ದರಿಂದಲೇ ಯಾರು ಏನೆಂದುಕೊಂಡಾರು ಎಂಬ ಚಿಂತೆ ಬಿಟ್ಟು, ಅರ್ಥಾತ್, ಲಜ್ಜೆ ಬಿಟ್ಟು, ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಬೀದಿ ಬೀದಿಯಲ್ಲಿ ಹಾಡುತ್ತಾ, ಕುಣಿಯುತ್ತಾ  ನಡೆದರು. ಅವರನ್ನು ಕಂಡು ‘ಗೆಜ್ಜೆ ಕಾಲಿಗೆ ಕಟ್ಟಿ ಲಜ್ಜೆ ಬಿಟ್ಟು ಹರಿನಾಮ ಭಜನೆ ಮಾಡುತ ಅಘವರ್ಜಿತ ರಾಗಿಹರ ಸಂಗ ಏನುಸುಖವೋ’ ಎಂದರು ವ್ಯಾಸತೀರ್ಥರು. ಅಘ ಎಂದರೆ ಪಾಪ. ‘ಅಘ ವರ್ಜಿತ’ ರೆಂದರೆ ತಮ್ಮ ಪಾಪಗಳನ್ನು ನಾಮ ಸಂಕೀರ್ತನೆಯ ಮೂಲಕ ದೂರಗೊಳಿಸಿದವರು.  


ನಂತರದ ಚರಣದಲ್ಲಿನ  ‘ತುಚ್ಛವಿಷಯವ ತೊರೆದು ನಿಶ್ಚಲ ಭಕುತಿಯಿಂದ’ - ಅಚ್ಯುತ ಅನಂತನ ಪಾದವ ಮೆಚ್ಚಿಸುವುದು - ಇದು  ಹರಿಭಕ್ತರೆಲ್ಲರ ಅಪೇಕ್ಷೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಸುಲಭಸಾಧ್ಯವಲ್ಲವೆಂಬುದು ಪ್ರಯತ್ನಿಸಿದವರೆಲ್ಲರೂ ತಿಳಿದಿರುವ ಸಂಗತಿ. ಹಾಗೆ ನಿಶ್ಚಲ ಭಕುತಿಯನ್ನು ಅನುಷ್ಠಾನಕ್ಕೆ ತಂದವರ ಸಂಗ ಸಿಕ್ಕಿದರೆ ? ಏನು ಸುಖವೋ ರಂಗ ಅಲ್ಲವೇ ! 

ಪೀಠಾಧಿಪತಿಗಳೆಂದರೆ ಒಂದು ಧರ್ಮದ ಅನುಯಾಯಿಗಳ ಶ್ರೇಣಿಬದ್ಧವಾದ ವ್ಯವಸ್ಥೆಯಲ್ಲಿ ಅತ್ಯುನ್ನತ  ಸ್ಥಾನ ಹೊಂದಿರುವವರು. ಅಂಥ ವ್ಯಕ್ತಿಯೊಬ್ಬರು ತಮಗಿಂತ ಕೆಳಗಿನ ಸ್ಥರದಲ್ಲಿರುವ ‘ಹರಿದಾಸರ ಸಂಗಕ್ಕೆ ಹಾತೊರೆಯುವೆ’ ಎಂದು ಸಾರುವ ಇಂಥ ಗೀತೆಯನ್ನು ರಚಿಸಿದ್ದಾರೆಂದರೆ ವ್ಯಾಸತೀರ್ಥರ ವಿಶಾಲ ಹೃದಯ ಮತ್ತು ಅವರಿಗೆ ದಾಸಪಂಥದಮೇಲಿರುವ ಅಭಿಮಾನ  ಎಷ್ಟೆಂದು ತಿಳಿದುಬರುತ್ತದೆ. 


ಜೀವನದಲ್ಲಿ ಶಿಷ್ಟರಾಗಿದ್ದುಕೊಂಡು, ಹರಿ ಸಂಕೀರ್ತನೆಯಮೂಲಕ  ಶ್ರೀ ಕೃಷ್ಣನಿಗೆ ಪ್ರಿಯರಾಗಿರುವವರ ಸಂಗವನ್ನಾಶಿಸುವ ವ್ಯಾಸರಾಯರ ಈ  ಗೀತೆಯ ಭಾವ ಎಲ್ಲರ ಮನದೊಳಗೆ ಹೊಗಲಿ, ನಾಲಗೆಗಳಲ್ಲಿ ಹರಿನಾಮ ಹರಿದಾಡುತ್ತಾ, ಆ ಮೂಲಕ  ಶ್ರೀ ಕೃಷ್ಣನಿಗೆ ಇಷ್ಟರಾಗುವ ಭಾಗ್ಯ ಎಲ್ಲರಿಗೂ ಲಭ್ಯವಾಗಲೆಂದು ಹಾರೈಸುತ್ತಾ, ಕೃಷ್ಣಾರ್ಪಣ ಎನ್ನುತ್ತೇನೆ. 


Saturday, June 13, 2026

ಮುತ್ತು ಕೊಳ್ಳಿರೋ

 ಒತ್ತಿಹೇರುವುದಲ್ಲ, ಹೊತ್ತು ಮಾರುವುದಲ್ಲ, ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ  ಎಂದು ಬಣ್ಣಿಸುತ್ತಾ ಕೃಷ್ಣನಾಮವೆಂಬ ಕಲ್ಲುಸಕ್ಕರೆ ಕೊಳ್ಳಿರೋ ಎಂದು ಹಾಡಿದರು ಪುರಂದರದಾಸರು.  ತಮ್ಮ ರಸ್ತೆಬದಿಯ ಶ್ರೋತೃಗಳನ್ನು ಆಕರ್ಷಿಸಲು ಬೇರೊಂದು ಸಾಮಗ್ರಿ ಬೇಕೆನಿಸಿದಾಗ ಅದೇ ಕೃಷ್ಣನಾಮವನ್ನು ಮುತ್ತೆಂದು ಕರೆದು ಅದರ ಗುಣಗಳನ್ನು ಬಣ್ಣಿಸಿದರು. ಮುತ್ತಾಗಲೀ, ಕಲ್ಲುಸಕ್ಕರೆಯಾಗಲೀ ಅದು ಸೂಚಿಸುವ ಪರಮಾತ್ಮನೂ ಅದರಲ್ಲಿರುವ ಪರಮಾತ್ಮನೂ ಅವನೇ ಅಲ್ಲವೇ?  ಇಂದು  ಅವನು ಮುತ್ತೇ ಆಗಿರಲಿ !  ಗೀತೆ, ‘ಮುತ್ತು ಕೊಳ್ಳಿರೋ  ಜನರು ಮುತ್ತು ಕೊಳ್ಳಿರೋ’.     

ಕಲ್ಲುಸಕ್ಕರೆಯೋ, ಪಾಯಸವೋ,  ಮುತ್ತೋ, ರತ್ನವೋ, ದಾಸರು ಸಾಮಾನ್ಯರಿಗೆ ತಿಳಿದಿರುವ  ವಸ್ತುಗಳನ್ನು ಬಣ್ಣಿಸುವ  ಮೂಲಕ ಅಸಾಮಾನ್ಯವಾದ ಒಂದು ವಸ್ತುವಿನೆಡೆಗೆ ಅವರನ್ನು ಸೆಳೆಯುವ  ಪ್ರಯತ್ನ ಮಾಡುತ್ತಾರೆ. ಮುತ್ತುಕೊಳ್ಳಿರೋ ಗೀತೆಯ ಪಲ್ಲವಿಯಲ್ಲಿ  ಸಚ್ಚಿದಾನಂದ ಸ್ವರೂಪವಾದ, ಎಂದರೆ ಸತ್ಯವಾದ, ಜ್ನಾನ - ಆನಂದ  ಸ್ವರೂಪವಾದ  ಭಗವಂತನನ್ನು, ಶ್ರೇಷ್ಠವಾದ ಮುತ್ತಿಗೆ ಹೋಲಿಸಿ, ಅದನ್ನು ಪಡೆದುಕೊಳ್ಳಿ ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 


ಮುಷ್ಟಿಯಲ್ಲಿ ಹಿಡಿಯಹೋದರೆ ಜಾರಿ ಚಲ್ಲಾಪಿಲ್ಲಿಯಾಗುವ ಮುತ್ತುಗಳನ್ನು ಪೋಣಿಸಿ ನಮ್ಮ ಹಿಡಿತಕ್ಕೆ  ತರಬೇಕಾದರೆ  ಒಂದು ದಾರದ ಅವಶ್ಯಕತೆ  ಇದೆ ಅಲ್ಲವೇ?  ಹಾಗೆಯೇ ನಮ್ಮ ಹಿಡಿತಕ್ಕೆ ಬಾರದ  ಭಗವಂತನನ್ನು ಕೊಂಚಮಟ್ಟಿಗಾದರೂ ಹಿಡಿಯುವ  ಪ್ರಯತ್ನಮಾಡಬೇಕಾದರೆ ನಮಗೆ ಜ್ಞಾನವೆಂಬ ದಾರದ ಅವಶ್ಯಕತೆಯಿದೆ. ಅದರಿಂದಲೇ ಆ ಭಗವಂತನೆಂಬ ಮುತ್ತನ್ನು ‘ಜ್ಞಾನವೆಂಬ ದಾರದಲ್ಲಿ ಪೋಣಿಸಿರುವ ದಿವ್ಯ ಮುತ್ತು’ ಎಂದರು ದಾಸರು. ಸರಿ. ಆದರೆ ಅದನ್ನು ಕೊಳ್ಳುವವರಿಗೆ ಮತ್ತೊಂದು ಅರ್ಹತೆ ಬೇಕು. ಅದನ್ನು ಮುಂದಿನ ಸಾಲಿನಲ್ಲಿ  ‘ದೀನರಾದ ಭಕ್ತಜನರು ಜ್ಞಾನದಿಂದ ಕೊಂಬುದಿದನು’ ಎಂದು ಸೂಚಿಸಿದ್ದಾರೆ ದಾಸರು. ಪರಮಾತ್ಮನನ್ನು ತಿಳಿದುಕೊಳ್ಳಲು ಬೇಕಾದ ಮುಖ್ಯ ಅರ್ಹತೆ ದೀನತೆ. ಸಂಪೂರ್ಣ ಶರಣಾಗತಿ.  ಗರ್ವಿಗಳಕೈಗೆ ಅವನು ಸಿಕ್ಕುವುದಿಲ್ಲವಂತೆ. ಒಬ್ಬನ ಗರ್ವ ಎಷ್ಟು ಹೆಚ್ಚೋ ಅಷ್ಟು ಅವನಿಂದ ದೂರ ಭಗವಂತ. 


ಮತ್ತೆ ಮುಂದಿನ ಚರಣದಲ್ಲಿ ದಾಸರೆನ್ನುತ್ತಾರೆ, ‘ಭ್ರಷ್ಟಜನಕೆ ಕಾಣಿಸದಂತ ಕೃಷ್ಣನೆಂಬೋ ಅಣಿಮುತ್ತು’. ಕಂಸ ಚಾಣೂರರ  ಎದುರಿಗೇ ಇದ್ದ ಕೃಷ್ಣ. ಅವರು ಕಂಡದ್ದು ತಮ್ಮ ಎದುರಾಳಿಯಾದ ಸೋದರಳಿಯನನ್ನು ಮಾತ್ರ. ಅಕ್ರೂರ, ವಿದುರ, ಸುಧಾಮ ಮೊದಲಾದ ಸಜ್ಜನರು ಕಂಡರು ಶ್ರೀ ಕೃಷ್ಣನೆಂಬ ಮಾನವರೂಪದಲ್ಲಿದ್ದ ಪರಮಾತ್ಮನನ್ನು. 


ಕೊನೆಯ ಚರಣದಲ್ಲಿ ದಾಸರೆನ್ನುತ್ತಾರೆ ‘ಹಿಡಿಯಲಿಕ್ಕೆ ನಿಲುಕದದು, ಕಡೆಕಾಣದೆಂದು ಬೆಲೆಯು’. ಹಿಡಿಯಹೋದರೆ ಕೈಗೆ ಸಿಗದೆ ಹಾವಿನಂತೆ ನುಣುಚಿಕೊಂಡು ಹೋಗುವ ವಸ್ತು ಪರಮಾತ್ಮ. ಅದಕ್ಕೆಂದೇ ಅವನ ಸಾವಿರ ನಾಮಗಳಲ್ಲಿ  ‘ವ್ಯಾಲ’ ಎನ್ನುವುದು ಒಂದು ನಾಮ.  ವ್ಯಾಲ ಎಂದರೆ ಸರ್ಪ.  ಮತ್ತೆ ಕೊನೆಯಲ್ಲಿ ಹೇಳಿದರು  ‘ಕಡೆಕಾಣದೆಂದು ಬೆಲೆಯು’. ಅವನಿಗೆ ಒಂದು ಬೆಲೆ ಕಟ್ಟುವುದು ಉಂಟೇ ? ‘ಅಮೇಯ’ ಎನ್ನುವುದು ಅವನ ಮತ್ತೊಂದು ನಾಮ. ಅಮೇಯ ಎಂದರೆ ಎಣಿಕೆಗೆ ಸಿಗದವನು ಎಂದು. 


ಆದರೆ ಹೀಗೆ ನುಣುಚಿಕೊಂಡು ಓಡುವ, ಬೆಲೆಕಟ್ಟಲಾಗದ ‘ಪೊಡವಿಗೊಡೆಯನೆಂಬ ದಿವ್ಯ ಮುತ್ತು’ ಭಕ್ತಿಯಿಂದ ಕೈನೀಡಿದರೆ ತಾನೆ ಬಂದು ಕೈಗೆ ಬೀಳುತ್ತದಂತೆ.  ಹಾಗಾಗಿ, ಕೈನೀಡಿ ನೋಡಿ, ಸಿಕ್ಕರೆ ಹಿಡಿದು ಕೊಳ್ಳಿರಪ್ಪಾ  ಎಂದು ಸಾರುತ್ತಾ ಮುಂದೆ ನಡೆದರು ಪುರಂದರ ದಾಸರು ಎನ್ನುವಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ. 


Sunday, June 7, 2026

ಅನುಭವದಡುಗೆಯ ಮಾಡಿ

 ಅನುಭವದಡುಗೆಯ ಮಾಡಿ, ಅದ 

ಕ್ಕನುಭವಿಗಳು ಬಂದು ನೀವೆಲ್ಲ  ಕೂಡಿ 


ತನುವೆಂಬ ಭಾಂಡವ ತೊಳೆದು, ಕೆಟ್ಟ 

ಮನದ ಚಂಚಲವೆಂಬ ಮುಸುರೆಯ ಕಳೆದು 

ಘನವಾಗಿ ಮನೆಯನ್ನು ಬಳಿದು, ಅಲ್ಲಿ 

ಮಿನುಗುವ ತ್ರಿಗುಣದ ಒಲೆಗುಂಡನೆಡೆದು 


ವಿರಕ್ತಿಎಂಬುವ ಮಡಿಯುಟ್ಟು, ಪೂರ್ಣ 

ಹರಿಭಕ್ತಿ ಎಂಬ ನೀರನ್ನೆಸರಿಟ್ಟು 

ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ 

ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು 


ಶರಣೆಂಬೋ ಸಾಮಗ್ರಿ ಹೂಡಿ, ಮೋಕ್ಷ 

ಪರಿಕರವಾದಂಥ ಪಾಕವ ಮಾಡಿ 

ಗುರು ಶರಣರು ಸವಿದಾಡಿ ನಮ್ಮ ಪುರಂ 

ದರ ವಿಠಲನ ಬಿಡದೆ ಕೊಂಡಾಡಿ


ನಮ್ಮ ದಾಸ ಸಾಹಿತ್ಯಸಿರಿ ಸಂಚಿಕೆಗಳೊಂದರಲ್ಲಿ ಕೆಲವು ಸಮಯದ  ಹಿಂದೆ ನಾವು ಪುರಂದರ ದಾಸರ ‘ಉದರವೈರಾಗ್ಯವಿದು’ ಗೀತೆಯನ್ನು ನೋಡಿದೆವು. ಭಕ್ತಿವಿಹೀನವಾದ ಡಂಭಾಚಾರದ ಆಚರಣೆಯನ್ನು  ಅಲ್ಲಿ ಎತ್ತಿ ತೋರಿಸಿದ ದಾಸರು ತಮ್ಮ ಮತ್ತೊಂದು ಗೀತೆಯಲ್ಲಿ ನಿಜವಾದ ಆರಾಧನೆ ಎಂತಿರಬೇಕು ಎನ್ನುವುದನ್ನು ತಿಳಿಸಿದ್ದಾರೆ.

   

‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂಬ ಒಂದೇ ಸಾಲಿನಲ್ಲಿ ಪರಮಾತ್ಮನೆಂಬ ವಸ್ತುವಿನ ಅಸ್ತಿತ್ವದ ಪರಿಯನ್ನು ವಿವರಿಸಿದ್ದಾರೆ  ನಿಜಗುಣ ಶಿವಯೋಗಿಗಳು. ಯಾರ ಮನದಲ್ಲಿ ಪರಮಾತ್ಮನೆಂದರೆ ಯಾವರೀತಿಯ ಭಕ್ತಿ, ಭಾವನೆ, ಕಲ್ಪನೆಗಳು ಇರುತ್ತವೆಯೋ ಅದೇರೀತಿಯಲ್ಲಿ ಪರಮಾತ್ಮ ಅವರಿಗೆ ಕಾಣಿಸಿಕೊಳ್ಳುತ್ತಾನಂತೆ. ಹಾಗೆ ತಮ್ಮ ಕಲ್ಪನೆಗೆ ತಕ್ಕಂತೆ ಕಂಡ ಭಗವಂತನನ್ನು ನಂಬಿದವರು ತಮ ತಮಗೆ ಉಚಿತವೆನಿಸಿದ ರೀತಿಯಲ್ಲಿ ಆರಾಧಿಸಿದರು. ಆದರೆ ಪೂಜೆಯೋ, ವ್ರತವೋ, ಯಜ್ಞವೋ, ಯಾಗವೋ  ಏನೇಮಾಡಿದರೂ ಕೊನೆಗೆ ತಮ್ಮ ತಮ್ಮ ಅಂತರಂಗದ ಆರಾಧನೆಯಿಂದ ಮಾತ್ರ, ಅಂದರೆ, ಸ್ವಚಿಂತನೆ ಮತ್ತು ಸ್ವಾನುಭವದಿಂದ ಮಾತ್ರವೇ ಭಗವಂತನ ಸಾಕ್ಷಾತ್ಕಾರ ಸಾಧ್ಯವೆಂದು ಜ್ಞಾನಿಗಳು ಹೇಳಿರುತ್ತಾರೆ.  ಆ ಭಾವನೆಯನ್ನು ಶ್ರೀ ಪುರಂದರ ದಾಸರು ತಮ್ಮ ‘ಅನುಭವದಡುಗೆಯ ಮಾಡಿ’ ಗೀತೆಯಲ್ಲಿ ಸುಂದರವಾಗಿ ಮೂಡಿಸಿದ್ದಾರೆ. ಇಲ್ಲಿ ಅಡುಗೆ ಎಂದರೆ ಪರಮಾತ್ಮನ ಆರಾಧನೆ. ಆ ಪರಮಾತ್ಮ ಎಂಬ ವಸ್ತುವಿನಬಗ್ಗೆ  ನಿಮಗಿರುವ  ಅನುಭವವೇ ಆರಾಧನೆಯಾಗಲಿ ಎಂಬುದು ಒಂದು ಅರ್ಥವಾದರೆ, ಮಾಡಿದ ಅಡುಗೆ ಎಂದರೆ - ಪರಮಾತ್ಮನ ಪೂಜೆ ಎನ್ನುವುದು ಬರಿಯ   ಅಲಂಕಾರ, ಮಂಗಳಾರತಿ, ನೈವೇದ್ಯಗಳಾಗಿ ಉಳಿಯದೆ ಅದರ ಹಿಂದಿನ ತತ್ವ ನಿಮ್ಮ ಅನುಭವಕ್ಕೆ ಬರಲಿ ಎಂಬುದು ಮತ್ತೊಂದು ಅರ್ಥ. 


ತನುವೆಂಬ ಭಾಂಡವ ತೊಳೆದು, ಮನದ ಚಂಚಲವೆಂಬ ಮುಸುರೆಯ ಕಳೆದು ಎಂಬ ಸಾಲುಗಳು ಅಂತರಂಗ ಬಹಿರಂಗ ಶುದ್ಧಿಯಾಗಿ, ಮನಸ್ಸು ಸ್ಥಿರವಾಗಲಿ ಎನ್ನುವುದನ್ನು  ಸೂಚಿಸುತ್ತವೆ.  ತ್ರಿಗುಣದ  ಒಲೆಗುಂಡನೆಡೆದು ಎನ್ನುವ ಸಾಲು  ನಿಮ್ಮಲ್ಲಿರುವ ಗುಣಗಳು ಭಕ್ತಿಗೆ ಆಧಾರವಾಗಲಿ ಎನ್ನುತ್ತದೆ. ‘ವಿರಕ್ತಿಯೆಂಬ  ಮಡಿಯುಟ್ಟು’ ಎಂದರೆ  ವೈರಾಗ್ಯದ ಆವರಣ ನಮ್ಮನ್ನು ಸುತ್ತುವರೆದು, ‘ಹರಿಭಕ್ತಿ ಎಂಬನೀರನ್ನೆಸರಿಟ್ಟು’ ಎಂದರೆ ಭಕ್ತಿಯೇ ಪೂಜೆಯ ಪ್ರಮುಖ ಸಾಧನವಾಗಿ, ಜ್ಞಾನ ಪ್ರಜ್ವಲಿಸಿ, ಅಜ್ಞಾನ ಸುಟ್ಟು ಬೂದಿಯಾಗಿ, ಆತ್ಮ ಸಮರ್ಪಣೆ ಎಂಬ ಪರಿಪಕ್ವವಾದ ನೈವೇದ್ಯ ಸಿದ್ಧವಾಗಲಿ ಎಂಬುದು ಗೀತೆಯ ಒಟ್ಟು ಭಾವ. 


ಎರಡನೇ ಚರಣದಲ್ಲಿರುವ ಮಾಯಾಮರೆವೆಂದರೆ ಅಜ್ಞಾನ. ‘ಅವನಾಡಿಸಿದಂತೆ ನಾನಾಡುವವನು’ ಎಂಬ ತಿಳುವಳಿಕೆ ಇಲ್ಲದಿರುವುದು. ಮತ್ತು ಕೊನೆಯಲ್ಲಿ ಮೋಕ್ಷ ಪರಿಕರವಾದ ಪಾಕ ಎಂದರೆ ಜೀವನನ್ನು ಮೋಕ್ಷದ ದಾರಿಯಲ್ಲಿ ಕರೆದೊಯ್ಯುವಂಥ ಪಾಕ ಅಂದರೆ ಭಗವತ್ ಸಾಕ್ಷಾತ್ಕಾರ. ಅದಕ್ಕಾಗಿ  ಹಾತೊರೆಯುವ ಸಜ್ಜನರ ಸಂಗದಲ್ಲಿ ನಿಮ್ಮ ಅಡುಗೆಯನ್ನು ಸವಿಯುವುದಾಗಲಿ ಎಂದು ದಾಸರು ಬೋಧಿಸಿದ್ದಾರೆ ಎಂದು  ತಿಳಿಸುತ್ತಾ ಇಂದಿನ ಚಿಂತನೆ  ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ.