Saturday, June 20, 2026

ಏನು ಸುಖವೊ ರಂಗ

 ಆಚಾರ್ಯ ಮಧ್ವರು ಸಂಸ್ಕೃತದಲ್ಲಿ ರಚಿಸಿದ  ‘ದ್ವಾದಶ ಸ್ತೋತ್ರಗಳು’ ಎನ್ನುವ ಹನ್ನೆರಡು ಸ್ತೋತ್ರಗಳು ಹರಿದಾಸ ಸಾಹಿತ್ಯ ಸೃಷ್ಟಿಗೆ ನಾಂದಿಹಾಡಿದವು ಎನ್ನುವುದು ಒಂದು ಅಭಿಪ್ರಾಯ. ಅನೇಕ ತಲೆಮಾರುಗಳ ನಂತರ ಅದೇ ಪೀಳಿಗೆಯಲ್ಲಿ  ಪೀಠಾಧಿಪತಿಗಳಾದ ಶ್ರೀ ವ್ಯಾಸತೀರ್ಥರು ಆ ಚಟುವಟಿಕೆಯನ್ನು ಮುಂದುವರೆಸಿ, ಕನ್ನಡದಲ್ಲಿ ಅನೇಕ ಗೀತೆಗಳನ್ನು ರಚಿಸಿ, ಹರಿದಾಸ ಸಾಹಿತ್ಯಕ್ಕೆ ಬುನಾದಿ ಹಾಕಿದರು. ಹರಿದಾಸ ಶ್ರೇಷ್ಠರಾದ  ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರಿಗೆ ಗುರುಗಳೂ ಆಗಿದ್ದ ಶ್ರೀ ವ್ಯಾಸತೀರ್ಥರ  ಒಂದು ಲಯಬದ್ಧವಾದ  ಸುಂದರ ರಚನೆಯನ್ನು ಇಂದು ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ‘ಏನು ಸುಖವೊ ರಂಗ ಎಂಥ ಸುಖವೊ’

ಈಗ ನೀವು ಕೇಳಿದ ‘ಏನು ಸುಖವೊ ರಂಗ’ ಗೀತೆಯ ರಾಗ ಭೀಮ್ ಪಲಾಸ್, ಆದಿತಾಳ.     ‘ನಿನ್ನ ಧ್ಯಾನವಮಾಳ್ಪ ಸಜ್ಜನರ ಸಂಗ ಏನುಸುಖವೋ ರಂಗ’ ಎನ್ನುತ್ತದೆ  ಗೀತೆಯ ಪಲ್ಲವಿ.  ಹರಿಸೇವೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎಂದು ಎರಡುವಿಧ. ಏಕಾಂತ ಆರಾಧನೆ ಎನ್ನುವುದು ವ್ಯಷ್ಟಿಸೇವೆ. ಇತರರ ಜತೆಗೂಡಿ ಮಾಡುವ ಸೇವೆ ಸಮಷ್ಟಿಸೇವೆ. ತಾನು ಇತರರನ್ನು ಉತ್ತೇಜಿಸಿ, ಮತ್ತು ಇತರರಿಂದ ತಾನು ಉತ್ತೇಜನಗೊಂಡು ಹರಿಸೇವೆಯಲ್ಲಿ ತೊಡಗುವುದು - ಉತ್ತಮ ದರ್ಜೆಯ ಸೇವೆ ಎನ್ನುವುದು ಒಂದು ಭಾವನೆ. ಆ ಭಾವನೆಗೆ ಒತ್ತುಕೊಡುವ  ಗೀತೆ ಇದು. 


ಕೇಳಿದ ಗೀತೆ,  ಶೃತಿ ಮತ್ತು ಲಯಬದ್ಧ ವಾಗಿದ್ದರೆ ಕಿವಿಗೆ ಇಂಪಾಗಿದ್ದು ಮನಸ್ಸಿನ ಮೇಲೆ ಅದರ  ಪರಿಣಾಮ ಇಮ್ಮಡಿಯಾಗುತ್ತದೆ. ಅದರಿಂದಲೇ  ತಾಳ ತಂಬೂರಿಗಳು ಹರಿದಾಸರ ಚಿಹ್ನೆಗಳಾದವು. ‘ತಂಬೂರಿ ಮೀಟಿ ಹಾಡುತ್ತಾ ಭಕ್ತಿಪರವಶರಾಗಿ ಕಣ್ಣಿನಿಂದ ಆನಂದಬಾಷ್ಪ ಸುರಿಸುತ್ತಾ ಕುಣಿದಾಡುವರ ಸಂಗ’ ಅದೆಂಥ ಸುಖ ಎಂದು ಉದ್ಗರಿಸುತ್ತದೆ ಮೊದಲ ಚರಣ. ಅಂಬಕ ದ್ವಯ ಎಂದರೆ ಎರಡು ಕಣ್ಣುಗಳು.  


ಹರಿದಾಸರ ಕೀರ್ತನೆಗಳು ಎಲ್ಲರ ನಾಲಗೆಯಿಂದಲೂ ಹೊರಹೊಮ್ಮಬೇಕು, ಭಕ್ತಿ ಭಾವನೆ ಹರಡಿ ಹೃದ್ಗತವಾಗಬೇಕು. ಆದ್ದರಿಂದಲೇ ಯಾರು ಏನೆಂದುಕೊಂಡಾರು ಎಂಬ ಚಿಂತೆ ಬಿಟ್ಟು, ಅರ್ಥಾತ್, ಲಜ್ಜೆ ಬಿಟ್ಟು, ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಬೀದಿ ಬೀದಿಯಲ್ಲಿ ಹಾಡುತ್ತಾ, ಕುಣಿಯುತ್ತಾ  ನಡೆದರು. ಅವರನ್ನು ಕಂಡು ‘ಗೆಜ್ಜೆ ಕಾಲಿಗೆ ಕಟ್ಟಿ ಲಜ್ಜೆ ಬಿಟ್ಟು ಹರಿನಾಮ ಭಜನೆ ಮಾಡುತ ಅಘವರ್ಜಿತ ರಾಗಿಹರ ಸಂಗ ಏನುಸುಖವೋ’ ಎಂದರು ವ್ಯಾಸತೀರ್ಥರು. ಅಘ ಎಂದರೆ ಪಾಪ. ‘ಅಘ ವರ್ಜಿತ’ ರೆಂದರೆ ತಮ್ಮ ಪಾಪಗಳನ್ನು ನಾಮ ಸಂಕೀರ್ತನೆಯ ಮೂಲಕ ದೂರಗೊಳಿಸಿದವರು.  


ನಂತರದ ಚರಣದಲ್ಲಿನ  ‘ತುಚ್ಛವಿಷಯವ ತೊರೆದು ನಿಶ್ಚಲ ಭಕುತಿಯಿಂದ’ - ಅಚ್ಯುತ ಅನಂತನ ಪಾದವ ಮೆಚ್ಚಿಸುವುದು - ಇದು  ಹರಿಭಕ್ತರೆಲ್ಲರ ಅಪೇಕ್ಷೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಸುಲಭಸಾಧ್ಯವಲ್ಲವೆಂಬುದು ಪ್ರಯತ್ನಿಸಿದವರೆಲ್ಲರೂ ತಿಳಿದಿರುವ ಸಂಗತಿ. ಹಾಗೆ ನಿಶ್ಚಲ ಭಕುತಿಯನ್ನು ಅನುಷ್ಠಾನಕ್ಕೆ ತಂದವರ ಸಂಗ ಸಿಕ್ಕಿದರೆ ? ಏನು ಸುಖವೋ ರಂಗ ಅಲ್ಲವೇ ! 

ಪೀಠಾಧಿಪತಿಗಳೆಂದರೆ ಒಂದು ಧರ್ಮದ ಅನುಯಾಯಿಗಳ ಶ್ರೇಣಿಬದ್ಧವಾದ ವ್ಯವಸ್ಥೆಯಲ್ಲಿ ಅತ್ಯುನ್ನತ  ಸ್ಥಾನ ಹೊಂದಿರುವವರು. ಅಂಥ ವ್ಯಕ್ತಿಯೊಬ್ಬರು ತಮಗಿಂತ ಕೆಳಗಿನ ಸ್ಥರದಲ್ಲಿರುವ ‘ಹರಿದಾಸರ ಸಂಗಕ್ಕೆ ಹಾತೊರೆಯುವೆ’ ಎಂದು ಸಾರುವ ಇಂಥ ಗೀತೆಯನ್ನು ರಚಿಸಿದ್ದಾರೆಂದರೆ ವ್ಯಾಸತೀರ್ಥರ ವಿಶಾಲ ಹೃದಯ ಮತ್ತು ಅವರಿಗೆ ದಾಸಪಂಥದಮೇಲಿರುವ ಅಭಿಮಾನ  ಎಷ್ಟೆಂದು ತಿಳಿದುಬರುತ್ತದೆ. 


ಜೀವನದಲ್ಲಿ ಶಿಷ್ಟರಾಗಿದ್ದುಕೊಂಡು, ಹರಿ ಸಂಕೀರ್ತನೆಯಮೂಲಕ  ಶ್ರೀ ಕೃಷ್ಣನಿಗೆ ಪ್ರಿಯರಾಗಿರುವವರ ಸಂಗವನ್ನಾಶಿಸುವ ವ್ಯಾಸರಾಯರ ಈ  ಗೀತೆಯ ಭಾವ ಎಲ್ಲರ ಮನದೊಳಗೆ ಹೊಗಲಿ, ನಾಲಗೆಗಳಲ್ಲಿ ಹರಿನಾಮ ಹರಿದಾಡುತ್ತಾ, ಆ ಮೂಲಕ  ಶ್ರೀ ಕೃಷ್ಣನಿಗೆ ಇಷ್ಟರಾಗುವ ಭಾಗ್ಯ ಎಲ್ಲರಿಗೂ ಲಭ್ಯವಾಗಲೆಂದು ಹಾರೈಸುತ್ತಾ, ಕೃಷ್ಣಾರ್ಪಣ ಎನ್ನುತ್ತೇನೆ. 


Saturday, June 13, 2026

ಮುತ್ತು ಕೊಳ್ಳಿರೋ

 ಒತ್ತಿಹೇರುವುದಲ್ಲ, ಹೊತ್ತು ಮಾರುವುದಲ್ಲ, ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ  ಎಂದು ಬಣ್ಣಿಸುತ್ತಾ ಕೃಷ್ಣನಾಮವೆಂಬ ಕಲ್ಲುಸಕ್ಕರೆ ಕೊಳ್ಳಿರೋ ಎಂದು ಹಾಡಿದರು ಪುರಂದರದಾಸರು.  ತಮ್ಮ ರಸ್ತೆಬದಿಯ ಶ್ರೋತೃಗಳನ್ನು ಆಕರ್ಷಿಸಲು ಬೇರೊಂದು ಸಾಮಗ್ರಿ ಬೇಕೆನಿಸಿದಾಗ ಅದೇ ಕೃಷ್ಣನಾಮವನ್ನು ಮುತ್ತೆಂದು ಕರೆದು ಅದರ ಗುಣಗಳನ್ನು ಬಣ್ಣಿಸಿದರು. ಮುತ್ತಾಗಲೀ, ಕಲ್ಲುಸಕ್ಕರೆಯಾಗಲೀ ಅದು ಸೂಚಿಸುವ ಪರಮಾತ್ಮನೂ ಅದರಲ್ಲಿರುವ ಪರಮಾತ್ಮನೂ ಅವನೇ ಅಲ್ಲವೇ?  ಇಂದು  ಅವನು ಮುತ್ತೇ ಆಗಿರಲಿ !  ಗೀತೆ, ‘ಮುತ್ತು ಕೊಳ್ಳಿರೋ  ಜನರು ಮುತ್ತು ಕೊಳ್ಳಿರೋ’.     

ಕಲ್ಲುಸಕ್ಕರೆಯೋ, ಪಾಯಸವೋ,  ಮುತ್ತೋ, ರತ್ನವೋ, ದಾಸರು ಸಾಮಾನ್ಯರಿಗೆ ತಿಳಿದಿರುವ  ವಸ್ತುಗಳನ್ನು ಬಣ್ಣಿಸುವ  ಮೂಲಕ ಅಸಾಮಾನ್ಯವಾದ ಒಂದು ವಸ್ತುವಿನೆಡೆಗೆ ಅವರನ್ನು ಸೆಳೆಯುವ  ಪ್ರಯತ್ನ ಮಾಡುತ್ತಾರೆ. ಮುತ್ತುಕೊಳ್ಳಿರೋ ಗೀತೆಯ ಪಲ್ಲವಿಯಲ್ಲಿ  ಸಚ್ಚಿದಾನಂದ ಸ್ವರೂಪವಾದ, ಎಂದರೆ ಸತ್ಯವಾದ, ಜ್ನಾನ - ಆನಂದ  ಸ್ವರೂಪವಾದ  ಭಗವಂತನನ್ನು, ಶ್ರೇಷ್ಠವಾದ ಮುತ್ತಿಗೆ ಹೋಲಿಸಿ, ಅದನ್ನು ಪಡೆದುಕೊಳ್ಳಿ ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 


ಮುಷ್ಟಿಯಲ್ಲಿ ಹಿಡಿಯಹೋದರೆ ಜಾರಿ ಚಲ್ಲಾಪಿಲ್ಲಿಯಾಗುವ ಮುತ್ತುಗಳನ್ನು ಪೋಣಿಸಿ ನಮ್ಮ ಹಿಡಿತಕ್ಕೆ  ತರಬೇಕಾದರೆ  ಒಂದು ದಾರದ ಅವಶ್ಯಕತೆ  ಇದೆ ಅಲ್ಲವೇ?  ಹಾಗೆಯೇ ನಮ್ಮ ಹಿಡಿತಕ್ಕೆ ಬಾರದ  ಭಗವಂತನನ್ನು ಕೊಂಚಮಟ್ಟಿಗಾದರೂ ಹಿಡಿಯುವ  ಪ್ರಯತ್ನಮಾಡಬೇಕಾದರೆ ನಮಗೆ ಜ್ಞಾನವೆಂಬ ದಾರದ ಅವಶ್ಯಕತೆಯಿದೆ. ಅದರಿಂದಲೇ ಆ ಭಗವಂತನೆಂಬ ಮುತ್ತನ್ನು ‘ಜ್ಞಾನವೆಂಬ ದಾರದಲ್ಲಿ ಪೋಣಿಸಿರುವ ದಿವ್ಯ ಮುತ್ತು’ ಎಂದರು ದಾಸರು. ಸರಿ. ಆದರೆ ಅದನ್ನು ಕೊಳ್ಳುವವರಿಗೆ ಮತ್ತೊಂದು ಅರ್ಹತೆ ಬೇಕು. ಅದನ್ನು ಮುಂದಿನ ಸಾಲಿನಲ್ಲಿ  ‘ದೀನರಾದ ಭಕ್ತಜನರು ಜ್ಞಾನದಿಂದ ಕೊಂಬುದಿದನು’ ಎಂದು ಸೂಚಿಸಿದ್ದಾರೆ ದಾಸರು. ಪರಮಾತ್ಮನನ್ನು ತಿಳಿದುಕೊಳ್ಳಲು ಬೇಕಾದ ಮುಖ್ಯ ಅರ್ಹತೆ ದೀನತೆ. ಸಂಪೂರ್ಣ ಶರಣಾಗತಿ.  ಗರ್ವಿಗಳಕೈಗೆ ಅವನು ಸಿಕ್ಕುವುದಿಲ್ಲವಂತೆ. ಒಬ್ಬನ ಗರ್ವ ಎಷ್ಟು ಹೆಚ್ಚೋ ಅಷ್ಟು ಅವನಿಂದ ದೂರ ಭಗವಂತ. 


ಮತ್ತೆ ಮುಂದಿನ ಚರಣದಲ್ಲಿ ದಾಸರೆನ್ನುತ್ತಾರೆ, ‘ಭ್ರಷ್ಟಜನಕೆ ಕಾಣಿಸದಂತ ಕೃಷ್ಣನೆಂಬೋ ಅಣಿಮುತ್ತು’. ಕಂಸ ಚಾಣೂರರ  ಎದುರಿಗೇ ಇದ್ದ ಕೃಷ್ಣ. ಅವರು ಕಂಡದ್ದು ತಮ್ಮ ಎದುರಾಳಿಯಾದ ಸೋದರಳಿಯನನ್ನು ಮಾತ್ರ. ಅಕ್ರೂರ, ವಿದುರ, ಸುಧಾಮ ಮೊದಲಾದ ಸಜ್ಜನರು ಕಂಡರು ಶ್ರೀ ಕೃಷ್ಣನೆಂಬ ಮಾನವರೂಪದಲ್ಲಿದ್ದ ಪರಮಾತ್ಮನನ್ನು. 


ಕೊನೆಯ ಚರಣದಲ್ಲಿ ದಾಸರೆನ್ನುತ್ತಾರೆ ‘ಹಿಡಿಯಲಿಕ್ಕೆ ನಿಲುಕದದು, ಕಡೆಕಾಣದೆಂದು ಬೆಲೆಯು’. ಹಿಡಿಯಹೋದರೆ ಕೈಗೆ ಸಿಗದೆ ಹಾವಿನಂತೆ ನುಣುಚಿಕೊಂಡು ಹೋಗುವ ವಸ್ತು ಪರಮಾತ್ಮ. ಅದಕ್ಕೆಂದೇ ಅವನ ಸಾವಿರ ನಾಮಗಳಲ್ಲಿ  ‘ವ್ಯಾಲ’ ಎನ್ನುವುದು ಒಂದು ನಾಮ.  ವ್ಯಾಲ ಎಂದರೆ ಸರ್ಪ.  ಮತ್ತೆ ಕೊನೆಯಲ್ಲಿ ಹೇಳಿದರು  ‘ಕಡೆಕಾಣದೆಂದು ಬೆಲೆಯು’. ಅವನಿಗೆ ಒಂದು ಬೆಲೆ ಕಟ್ಟುವುದು ಉಂಟೇ ? ‘ಅಮೇಯ’ ಎನ್ನುವುದು ಅವನ ಮತ್ತೊಂದು ನಾಮ. ಅಮೇಯ ಎಂದರೆ ಎಣಿಕೆಗೆ ಸಿಗದವನು ಎಂದು. 


ಆದರೆ ಹೀಗೆ ನುಣುಚಿಕೊಂಡು ಓಡುವ, ಬೆಲೆಕಟ್ಟಲಾಗದ ‘ಪೊಡವಿಗೊಡೆಯನೆಂಬ ದಿವ್ಯ ಮುತ್ತು’ ಭಕ್ತಿಯಿಂದ ಕೈನೀಡಿದರೆ ತಾನೆ ಬಂದು ಕೈಗೆ ಬೀಳುತ್ತದಂತೆ.  ಹಾಗಾಗಿ, ಕೈನೀಡಿ ನೋಡಿ, ಸಿಕ್ಕರೆ ಹಿಡಿದು ಕೊಳ್ಳಿರಪ್ಪಾ  ಎಂದು ಸಾರುತ್ತಾ ಮುಂದೆ ನಡೆದರು ಪುರಂದರ ದಾಸರು ಎನ್ನುವಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ. 


Sunday, June 7, 2026

ಅನುಭವದಡುಗೆಯ ಮಾಡಿ

 ಅನುಭವದಡುಗೆಯ ಮಾಡಿ, ಅದ 

ಕ್ಕನುಭವಿಗಳು ಬಂದು ನೀವೆಲ್ಲ  ಕೂಡಿ 


ತನುವೆಂಬ ಭಾಂಡವ ತೊಳೆದು, ಕೆಟ್ಟ 

ಮನದ ಚಂಚಲವೆಂಬ ಮುಸುರೆಯ ಕಳೆದು 

ಘನವಾಗಿ ಮನೆಯನ್ನು ಬಳಿದು, ಅಲ್ಲಿ 

ಮಿನುಗುವ ತ್ರಿಗುಣದ ಒಲೆಗುಂಡನೆಡೆದು 


ವಿರಕ್ತಿಎಂಬುವ ಮಡಿಯುಟ್ಟು, ಪೂರ್ಣ 

ಹರಿಭಕ್ತಿ ಎಂಬ ನೀರನ್ನೆಸರಿಟ್ಟು 

ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ 

ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು 


ಶರಣೆಂಬೋ ಸಾಮಗ್ರಿ ಹೂಡಿ, ಮೋಕ್ಷ 

ಪರಿಕರವಾದಂಥ ಪಾಕವ ಮಾಡಿ 

ಗುರು ಶರಣರು ಸವಿದಾಡಿ ನಮ್ಮ ಪುರಂ 

ದರ ವಿಠಲನ ಬಿಡದೆ ಕೊಂಡಾಡಿ


ನಮ್ಮ ದಾಸ ಸಾಹಿತ್ಯಸಿರಿ ಸಂಚಿಕೆಗಳೊಂದರಲ್ಲಿ ಕೆಲವು ಸಮಯದ  ಹಿಂದೆ ನಾವು ಪುರಂದರ ದಾಸರ ‘ಉದರವೈರಾಗ್ಯವಿದು’ ಗೀತೆಯನ್ನು ನೋಡಿದೆವು. ಭಕ್ತಿವಿಹೀನವಾದ ಡಂಭಾಚಾರದ ಆಚರಣೆಯನ್ನು  ಅಲ್ಲಿ ಎತ್ತಿ ತೋರಿಸಿದ ದಾಸರು ತಮ್ಮ ಮತ್ತೊಂದು ಗೀತೆಯಲ್ಲಿ ನಿಜವಾದ ಆರಾಧನೆ ಎಂತಿರಬೇಕು ಎನ್ನುವುದನ್ನು ತಿಳಿಸಿದ್ದಾರೆ.

   

‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂಬ ಒಂದೇ ಸಾಲಿನಲ್ಲಿ ಪರಮಾತ್ಮನೆಂಬ ವಸ್ತುವಿನ ಅಸ್ತಿತ್ವದ ಪರಿಯನ್ನು ವಿವರಿಸಿದ್ದಾರೆ  ನಿಜಗುಣ ಶಿವಯೋಗಿಗಳು. ಯಾರ ಮನದಲ್ಲಿ ಪರಮಾತ್ಮನೆಂದರೆ ಯಾವರೀತಿಯ ಭಕ್ತಿ, ಭಾವನೆ, ಕಲ್ಪನೆಗಳು ಇರುತ್ತವೆಯೋ ಅದೇರೀತಿಯಲ್ಲಿ ಪರಮಾತ್ಮ ಅವರಿಗೆ ಕಾಣಿಸಿಕೊಳ್ಳುತ್ತಾನಂತೆ. ಹಾಗೆ ತಮ್ಮ ಕಲ್ಪನೆಗೆ ತಕ್ಕಂತೆ ಕಂಡ ಭಗವಂತನನ್ನು ನಂಬಿದವರು ತಮ ತಮಗೆ ಉಚಿತವೆನಿಸಿದ ರೀತಿಯಲ್ಲಿ ಆರಾಧಿಸಿದರು. ಆದರೆ ಪೂಜೆಯೋ, ವ್ರತವೋ, ಯಜ್ಞವೋ, ಯಾಗವೋ  ಏನೇಮಾಡಿದರೂ ಕೊನೆಗೆ ತಮ್ಮ ತಮ್ಮ ಅಂತರಂಗದ ಆರಾಧನೆಯಿಂದ ಮಾತ್ರ, ಅಂದರೆ, ಸ್ವಚಿಂತನೆ ಮತ್ತು ಸ್ವಾನುಭವದಿಂದ ಮಾತ್ರವೇ ಭಗವಂತನ ಸಾಕ್ಷಾತ್ಕಾರ ಸಾಧ್ಯವೆಂದು ಜ್ಞಾನಿಗಳು ಹೇಳಿರುತ್ತಾರೆ.  ಆ ಭಾವನೆಯನ್ನು ಶ್ರೀ ಪುರಂದರ ದಾಸರು ತಮ್ಮ ‘ಅನುಭವದಡುಗೆಯ ಮಾಡಿ’ ಗೀತೆಯಲ್ಲಿ ಸುಂದರವಾಗಿ ಮೂಡಿಸಿದ್ದಾರೆ. ಇಲ್ಲಿ ಅಡುಗೆ ಎಂದರೆ ಪರಮಾತ್ಮನ ಆರಾಧನೆ. ಆ ಪರಮಾತ್ಮ ಎಂಬ ವಸ್ತುವಿನಬಗ್ಗೆ  ನಿಮಗಿರುವ  ಅನುಭವವೇ ಆರಾಧನೆಯಾಗಲಿ ಎಂಬುದು ಒಂದು ಅರ್ಥವಾದರೆ, ಮಾಡಿದ ಅಡುಗೆ ಎಂದರೆ - ಪರಮಾತ್ಮನ ಪೂಜೆ ಎನ್ನುವುದು ಬರಿಯ   ಅಲಂಕಾರ, ಮಂಗಳಾರತಿ, ನೈವೇದ್ಯಗಳಾಗಿ ಉಳಿಯದೆ ಅದರ ಹಿಂದಿನ ತತ್ವ ನಿಮ್ಮ ಅನುಭವಕ್ಕೆ ಬರಲಿ ಎಂಬುದು ಮತ್ತೊಂದು ಅರ್ಥ. 


ತನುವೆಂಬ ಭಾಂಡವ ತೊಳೆದು, ಮನದ ಚಂಚಲವೆಂಬ ಮುಸುರೆಯ ಕಳೆದು ಎಂಬ ಸಾಲುಗಳು ಅಂತರಂಗ ಬಹಿರಂಗ ಶುದ್ಧಿಯಾಗಿ, ಮನಸ್ಸು ಸ್ಥಿರವಾಗಲಿ ಎನ್ನುವುದನ್ನು  ಸೂಚಿಸುತ್ತವೆ.  ತ್ರಿಗುಣದ  ಒಲೆಗುಂಡನೆಡೆದು ಎನ್ನುವ ಸಾಲು  ನಿಮ್ಮಲ್ಲಿರುವ ಗುಣಗಳು ಭಕ್ತಿಗೆ ಆಧಾರವಾಗಲಿ ಎನ್ನುತ್ತದೆ. ‘ವಿರಕ್ತಿಯೆಂಬ  ಮಡಿಯುಟ್ಟು’ ಎಂದರೆ  ವೈರಾಗ್ಯದ ಆವರಣ ನಮ್ಮನ್ನು ಸುತ್ತುವರೆದು, ‘ಹರಿಭಕ್ತಿ ಎಂಬನೀರನ್ನೆಸರಿಟ್ಟು’ ಎಂದರೆ ಭಕ್ತಿಯೇ ಪೂಜೆಯ ಪ್ರಮುಖ ಸಾಧನವಾಗಿ, ಜ್ಞಾನ ಪ್ರಜ್ವಲಿಸಿ, ಅಜ್ಞಾನ ಸುಟ್ಟು ಬೂದಿಯಾಗಿ, ಆತ್ಮ ಸಮರ್ಪಣೆ ಎಂಬ ಪರಿಪಕ್ವವಾದ ನೈವೇದ್ಯ ಸಿದ್ಧವಾಗಲಿ ಎಂಬುದು ಗೀತೆಯ ಒಟ್ಟು ಭಾವ. 


ಎರಡನೇ ಚರಣದಲ್ಲಿರುವ ಮಾಯಾಮರೆವೆಂದರೆ ಅಜ್ಞಾನ. ‘ಅವನಾಡಿಸಿದಂತೆ ನಾನಾಡುವವನು’ ಎಂಬ ತಿಳುವಳಿಕೆ ಇಲ್ಲದಿರುವುದು. ಮತ್ತು ಕೊನೆಯಲ್ಲಿ ಮೋಕ್ಷ ಪರಿಕರವಾದ ಪಾಕ ಎಂದರೆ ಜೀವನನ್ನು ಮೋಕ್ಷದ ದಾರಿಯಲ್ಲಿ ಕರೆದೊಯ್ಯುವಂಥ ಪಾಕ ಅಂದರೆ ಭಗವತ್ ಸಾಕ್ಷಾತ್ಕಾರ. ಅದಕ್ಕಾಗಿ  ಹಾತೊರೆಯುವ ಸಜ್ಜನರ ಸಂಗದಲ್ಲಿ ನಿಮ್ಮ ಅಡುಗೆಯನ್ನು ಸವಿಯುವುದಾಗಲಿ ಎಂದು ದಾಸರು ಬೋಧಿಸಿದ್ದಾರೆ ಎಂದು  ತಿಳಿಸುತ್ತಾ ಇಂದಿನ ಚಿಂತನೆ  ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ. 







Saturday, May 30, 2026

My hearing aid

 



ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ, ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ. 


The lines above are from a Vachana (spiritual prose/poetry) of Sri BasavaNa, which mean ‘Make me lame so that I don't wander away (from you), make me blind so that I don't see anything (other than you), Make me deaf so that I don't hear anything (other than your praise) - which he wrote nearly nine hundred years ago. I have no idea if god acceded to his request and made him blind or deaf. But he made me deaf even though I did  not request any such favour ! And he made a clumsy job of it. Instead of making  me totally deaf, he only made me deaf in one ear and kept the other ear partly open. 


Because of his half hearted attempt, I was hearing some things and not hearing some. And it was not my choice. He decided what I heard and what I missed, but I got the blame for what I missed.  My wife complained that I heard everything except what she spoke. I wanted to say that it was the best part of being partly deaf but better sense prevailed and I kept my mouth shut. 


It was in this situation that my cousin made an appearance. These days no one visits others casually. This fellow happened to be near my house on some errand and he decided to see me. We were talking. My wife said something. He heard it and I did not. My wife made a big fuss which was good because my cousin took leave almost immediately. But before leaving he took out his hearing aid which was his latest acquisition, exhibited it proudly,  spoke highly of its virtues and left after suggesting that I get one too. 


So, that is how I ended up sitting in front of an audiologist like a sheep, my eyes closed, a headphone on my head, nodding whenever he tapped the table with his pen. He made a chart and handed it over with an estimate for the hearing aid. It was three times my monthly pension.  I wasn’t  prepared to spend so much for the inconvenience of wearing a hearing aid. I sat over it for more than six months. But ultimately I had to succumb because my wife was determined to make me hear her words again, expenses be damned. 


So now, I am the proud owner of a hearing equipment an inch long with a slender wire dangling from one end. It looked  like it was going to disintegrate if I sneezed and I mentioned that. But the audiologist said it comes with a two year warranty and taped my mouth. Now, I have to balance the body behind my ear and push the wire inside my ear. I have managed to do that and am waiting to see if my wife’s words register in my brain. 


But I am in a difficult situation. You see, I have paid an astronomical sum for the hearing aid and I want it to work. At the same time I feel I was better off being part deaf and would have liked to remain so, following BasavaNNa. Another trouble is, now that I have the aid in my ear,  my wife thinks that her words are  appearing crystal clear in my brain.  If I don't get what she said, it is not because of anything being wrong with my hearing aid but  because I have no intention to listen to her. It is  a lose, lose situation !




ಸುಳ್ಳು ನಮ್ಮಲ್ಲಿಲ್ಲವಯ್ಯಾ

 

ಸುಳ್ಳು ನಮ್ಮಲ್ಲಿಲ್ಲವಯ್ಯಾ , ಸುಳ್ಳೇ ನಮ್ಮನಿ ದೇವರು 

ಇಲಿಯು ಒಲೆಯ ಹಚ್ಚೋದ ಕಂಡೆ , ಬೆಕ್ಕು ಭಕ್ಕರಿ ಮಾಡೋದ ಕಂಡೆ 

ಮೆಕ್ಕೆಕಾಯಿ ಕಂಡೆನಪ್ಪಾ ತೆಕ್ಕೆ ಗಡತರ 

ಕಪ್ಪೆ ಪಾತರ ಕುಣಿಯೋದ ಕಂಡೆ, ಏಡಿ ಮದ್ದಳೆ ಬಾರ್ಸೊದ ಕಂಡೆ 


ಮೆಣಸಿನಕಾಯಿ ಕಂಡೆನಪ್ಪಾ ಒನಕೆ ಗಡತರ 


ಅರಿಶಿಣವನು ಬಿತ್ತುದ ಕಂಡೆ, ಗಸಗಸೆಯನು ಎಣಿಸೋದ ಕಂಡೆ 


ಪುರಂದವಿಠಲನ ಪಾದವ ಕಂಡೆ, ಪರ್ವತ ಗಡತರ 


ಪ್ರತಿದಿನವೂ ಹರಿನಾಮ ಸಂಕೀರ್ತನೆ ಮಾಡುತ್ತಾ  ಶ್ರೀ ಹರಿಯ ಹಿರಿಮೆಯನ್ನು  ಬಣ್ಣಿಸುತ್ತಾ, ನೀತಿ ಪಾಠ ಹೇಳುತ್ತಾ ಊರು ಸುತ್ತುತ್ತಿದ್ದ ಪುರಂದರದಾಸರಿಗೆ, ಜನರ ಗಮನವನ್ನು ತಮ್ಮ ಕಡೆ ಸೆಳೆದಿಡುವ ಸಲುವಾಗಿ ಹೊಸ ಹೊಸ ರೀತಿಯ ಉಪಾಯಗಳನ್ನು ಹೊಂಚುವ ಅಗತ್ಯವಿತ್ತು. ತಮ್ಮ ಗೀತೆಗಳ ಧಾಟಿ, ಪದಗಳ ಬಳಕೆಗಳಲ್ಲಿ ಬದಲಾವಣೆ ಗಳನ್ನು ಮಾಡುತ್ತಾ ಅವರು ಕೇಳುವವರ ಗಮನವನ್ನು ಆಕರ್ಷಿಸಿದರು. ಆ ನಿಟ್ಟಿನಲ್ಲಿ, ಮೊದಲನೋಟಕ್ಕೆ ಅಸಂಭದ್ದವೆನಿಸಿದರೂ, ಒಳಗಿನ ಅರ್ಥಕಂಡಾಗ ‘ಹೌದಲ್ಲವೇ’ ಎನಿಸುವಂಥ ರಚನೆಗಳ ಬಳಕೆ ಅವರ ಒಂದು ಪ್ರಯತ್ನ.


ಗೀತೆಯ  ಪಲ್ಲವಿ ನೋಡಿ. “ಸುಳ್ಳು ನಮ್ಮಲಿಲ್ಲವಯ್ಯಾ ಸುಳ್ಳೆನಮ್ಮನಿದೇವರು”. ನಾವು ಸುಳ್ಳರಲ್ಲ, ಸುಳ್ಳನ್ನು ದೇವರೆಂದು ಪೂಜಿಸುವವರು. ಇದು ಮೇಲ್ನೋಟದ ಅರ್ಥ. ಇಂಥ ಪದಜೋಡಣೆಯೇ ದಾಸರ ತಂತ್ರ. ಜನರು ತಮ್ಮ ಮುಂದಿನ ಮಾತಿಗೆ ಆಸಕ್ತಿಯಿಂದ ಕಿವಿಗೊಡುವಂತೆ ಮಾಡುವ ಯತ್ನ.  ‘ಸುಳ್ಳು ನಮ್ಮಲಿಲ್ಲವಯ್ಯಾ’ ಎಂಬ ವಾಕ್ಯಕ್ಕೆ  ‘ಜಗತ್ ಸತ್ಯ’  ಅಥವಾ ‘ಪರಮಾತ್ಮನ ಸೃಷ್ಟಿ ಸುಳ್ಳಲ್ಲ’ ಎಂಬ ಮಧ್ವಮತಪರವಾದ ಅರ್ಥವನ್ನು ತಿಳಿದವರು ಕೊಟ್ಟಿದ್ದಾರೆ. ಮುಂದೆ ‘ಸುಳ್ಳೇ ನಮ್ಮನಿ ದೇವರು’.  ಇದರ ಅರ್ಥ, ಹೇಳುವ ರೀತಿಯನ್ನು ಅನುಸರಿಸುತ್ತದೆ.  ಪರಮಾತ್ಮನ ಇರುವಿಕೆಯ ಅರಿವು ನಮಗೆ ಆಗುವ ವರೆಗೂ ನಮ್ಮ ಪಾಲಿಗೆ ಅವನಿಲ್ಲ.  ಸುಳ್ಳೆ. ನಮ್ಮನಿ ದೇವರು.  ಆದರೆ ಜ್ಞಾನಪ್ರಾಪ್ತಿಯಾಗಿ ಅವನ ಇರುವಿನ ಅರಿವು ನಮಗಾದರೆ ಅವನು ಸದಾ ನಮ್ಮೊಡನೆಯೇ ಇರುವವ.  ಸುಳ್ಳೇ ? ನಮ್ಮನಿ ದೇವರು? ಎಲ್ಲಾದರೂ ಉಂಟೇ ಎನ್ನುವ ಧಾಟಿ.  ಆದ್ದರಿಂದ ಅವನು ಇರುವುದೂ ಹೌದು, ಇಲ್ಲವೂ ಹೌದು.  ಸತ್ ಎನ್ನುವುದು ಅವನ ನಾಮ, ಅಸತ್ ಎನ್ನುವುದೂ ಅವನ ನಾಮವೇ.


ಮೊದಲ ಚರಣ ‘ಇಲಿಯು ಒಲೆಯ ಹಚ್ಚೊೋದ  ಕಂಡೆ ಎಂದು ಪ್ರಾರಂಭವಾಗುತ್ತದೆ . ಮನಸ್ಸು ಅಥವಾ ವಿಷಯಾಸಕ್ತಿಯನ್ನು ಇಲ್ಲಿ ಇಲಿ ಎಂದರು. ಆ ವಿಷಯಾಸಕ್ತಿ ಎಂಬ ಇಲಿ ನಮ್ಮ ಜ್ಞಾನೇಂದ್ರಿಯಗಳು ಎಂಬ ಒಲೆಗೆ ಬೆಂಕಿಯಿಟ್ಟಿತು ಅಂದರೆ ಆ ಇಂದ್ರಿಯಗಳು ವಿಷಯಗಳ ಕಡೆಗೆ ಸೆಳೆಯಲ್ಪಟ್ಟವು.  ಮುಂದೆ ‘ಬೆಕ್ಕು ಭಕ್ಕರಿ ಮಾಡೋದ’  ಕಂಡೆ. ಎಂದರೆ ‘ಬುದ್ಧಿ’ಯೆಂಬ ಬೆಕ್ಕು ವಿಷಯಗಳಿಂದ ಆದ ಪ್ರಚೋದನೆಗೆ ಅನುಗುಣವಾಗಿ ಕರ್ಮೇಂದ್ರಿಯಗಳನ್ನು ಪ್ರೇರೇಪಿಸಿ ಕಾರ್ಯನಿರತಗೊಳಿಸಿತು. ಅದನ್ನು, ‘ಭಕ್ಕರಿ ಮಾಡೋದು’ ಎಂದರು.  


ಹಾಗೆಯೇ, ಮುಂದಿನ ಚರಣ ‘ಕಪ್ಪೆ ಪಾತರ ಕುಣಿಯೋದ ಕಂಡೆ’  ಎನ್ನುತ್ತದೆ. ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಕುಪ್ಪಳಿಸುತ್ತಾ ಇರುವ  ಮನವನ್ನು ಕಪ್ಪೆ ಎಂದರು. ಮನಸ್ಸು ಒಂದು ವಿಷಯದಿಂದ ಮತ್ತೊಂದಕ್ಕೆ ಕುಪ್ಪಳಿಸುತ್ತಾ ನೃತ್ಯ ಮಾಡಿತು. ಮುಂದೆ, ‘ಏಡಿ ಮದ್ದಳೆ ಬಾರ್ಸೊದ ಕಂಡೆ’. ಏಡಿಗೆ ಎಂಟುಕಾಲು, ಮತ್ತೆ ಕಾಲಿನಂತೆಯೇ ಕಾಣುವ ಎರಡು ಕೊಂಡಿಗಳು. ಹತ್ತು ಅಂಗಗಳು. ಆದ್ದರಿಂದ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳನ್ನು ಒಟ್ಟು ಸೇರಿಸಿ ಹತ್ತು ಅಂಗಗಳ ಗುಂಪನ್ನು  ಏಡಿ ಎಂದರು. ಈ ಇಂದ್ರಿಯಗಳ ಗುಂಪೆಂಬ ಏಡಿ  ‘ಮದ್ದಲೆ ಬಾರಿಸಿತು’ ಎಂದರೆ  ಕಪ್ಪೆಯ ಅಥವಾ ಮನಸ್ಸಿನ  ಕುಣಿತಕ್ಕೆ ಪ್ರತಿಕ್ರಿಯಿಸಿತು.  


ಹೀಗೆ ವಿಷಯಾಸಕ್ತಿಯನ್ನು ಅನುಸರಿಸುತ್ತಾ  ಮನಸ್ಸಿನ ಎಗರಾಟ, ಅಂಗಗಳ ಕುಣಿದಾಟದಿಂದ ಬಂದ ಕೆಟ್ಟ ಫಲ ಒನಕೆ ಗಾತ್ರದ ಮೆಣಸಿನಕಾಯಿ ಮತ್ತು ತೆಕ್ಕೆ ಗಾತ್ರದ ಮೆಕ್ಕೆ ಕಾಯಿ. ಒಂದು ಖಾರ, ಒಂದು ಕಹಿ.  ವಿಷಯಾಸಕ್ತಿಯನ್ನೇ ಅನುಸರಿಸಿ ಅದಕ್ಕನುಗುಣವಾಗಿ ನಡೆದರೆ, ಸಿಕ್ಕುವುದು ಇಂಥದೇ ಫಲವೆಂಬುದು ಒಟ್ಟು ಎರಡು ಚರಣಗಳ ಭಾವ. ಇದನ್ನು ದಾಸರು ಇನ್ನೂ ಕೆಲವು ರಚನೆಗಳಲ್ಲಿಯೂ ಹೇಳಿದ್ದಾರೆ. 


ಕೊನೆಯ ಚರಣ ‘ಅರಿಶಿನ ಬಿತ್ತೋದು ಕಂಡೆ, ಗಸಗಸೆ ಎಣಿಸೋದ ಕಂಡೆ’. ಅರಿ ಎಂದರೆ ಶತ್ರುಗಳು. ಶಿನ ಎಂದರೆ ಹೊಂದಾಣಿಕೆ. ಅರಿಶಿನ ಬಿತ್ತೋದು ಎಂದರೆ ಮೇಲೆ  ಸೂಚಿಸಿರುವ ಕಾಮ ಕ್ರೋಧ ಮೋಹ ಮುಂತಾದ ಶತೃಗಳೊಡನೆಯೇ ಸಂಭಂದ ಬೆಳಸಿ  ಬಾಳುವುದು. ಹೀಗೆ ಬಾಳುತ್ತಿದ್ದಾಗ ನಮಗೆ ತಿಳಿಯದಂತೆ ಯಾರೋ ಒಬ್ಬ  ‘ಗಸಗಸೆ ಎಣಿಸುತ್ತಿದ್ದ’. ನಮ್ಮ ಜೀವನಕಾಲದ ಸಣ್ಣಸಣ್ಣ ತುಣುಕುಗಳನ್ನು, ಕ್ಷಣಕ್ಷಣಗಳನ್ನು, ಸಣ್ಣ ಸಣ್ಣ ಗಸಗಸೆಕಾಳಿಗೆ ಹೋಲಿಸಿದರು. ಎಣಿಸುತ್ತಿದ್ದದ್ದು ಯಾರು  ?  ನಾವು ಮಾಡುವುದನ್ನೆಲ್ಲಾ ನೋಡುತ್ತಿದ್ದ ಕಾಲರಾಯ, ನಮ್ಮನ್ನು ಎಳೆದೊಯ್ಯುವ ಕಾಲಕ್ಕಾಗಿ ಕಾದು ಅವ ಕ್ಷಣ ಕ್ಷಣ ಎಣಿಸುತ್ತಿದ್ದ.  ಅದರ ಅರಿವಾದಾಗ ಕೊನೆಗಾಲ ಬಂತೆಂದು ಬೆದರಿದ  ಜೀವ ಪರಮಾತ್ಮನ ಪಾದದೆಡೆಗೆ ತಿರುಗಿತು. ಆಗ ಕಂಡದ್ದು - ‘ಪುರಂದರ ವಿಠಲನ ಪಾದವ ಕಂಡೆ, ಪರ್ವತ ಗಡತರ !’      ಇದಕ್ಕೆ,  ಒನಕೆಗಾತ್ರ, ತೆಕ್ಕೆ ಗಾತ್ರದ ಫಲಗಳೆಲ್ಲವನ್ನೂ ಮೀರಿ ಮೇಲಕ್ಕೊಯ್ಯುವ ಪರ್ವತ ಗಾತ್ರದ ಪಾದಗಳು ಎಂಬುದು ಒಂದು ಅರ್ಥವಾದರೆ,  ನಮ್ಮ ಕೈಗೆ ಎಟುಕದ ಪರ್ವತಗಾತ್ರದ ಪಾದಗಳು ಎಂದು ಮತ್ತೊಂದು ಅರ್ಥ.  ಆದ್ದರಿಂದ, ಮನಸ್ಸು, ಇಂದ್ರಿಯಗಳನ್ನು ಬೇಕುಬೇಕಾದಂತೆ ಕುಣಿದಾಡಲು ಬಿಡದೆ, ನಮ್ಮ ಹಿಡಿತದಲ್ಲಿರಿಸಿಕೊಂಡಿದ್ದು, ಜೀವಿತದ ಕೊನೆಯಕ್ಷಣ ಬರುವ ಮೊದಲೇ  ಪುರಂದರವಿಠಲನ ಪಾದವೆಂಬ ಪರ್ವತವನ್ನು ಏರುವ ಪ್ರಯತ್ನವಾಗಲಿ ಎಂಬ ಬುದ್ಧಿವಾದದೊಂದಿಗೆ ದಾಸರು  ಗೀತೆಯನ್ನು ಕೊನೆಯಾಗಿಸಿದರೆಂದು  ತಿಳಿಸಿ, ಕೃಷ್ಣಾರ್ಪಣ ಎನ್ನುತ್ತೇನೆ. 


Friday, May 22, 2026

‘ಡೊಂಕುಬಾಲದ ನಾಯಕರೇ’

 ದಿನದಲ್ಲಿ ಹೆಚ್ಚುಕಾಲ ಭಗವಂತನ ಹಿರಿಮೆಯನ್ನು ಸಾರುತ್ತಾ ಬೀದಿ

ಬೀದಿಗಳಲ್ಲಿ ನಡೆದಾಡುತ್ತಿದ್ದ ದಾಸರು ಪ್ರತಿದಿನ ನೂರಾರು ಬೀದಿ

ನಾಯಿಗಳನ್ನು ಕಾಣುತ್ತಿದ್ದಿರಬಹುದು. ಆ ನಾಯಿಗಳನ್ನು ಕಂಡಾಗ

ಅವರ ಮನದಲ್ಲಿ ಮೂಡಿದ ವಿಚಾರಗಳನ್ನು ಅವರು ತಮ್ಮ ರಚನೆಗಳಿಗೆ

ಬಳಸಿಕೊಂಡರು. ಈ ಹಿಂದೆ ನಾವು ‘ಕುರುಡುನಾಯಿ ತಾ ಸಂತೆಗೆ

ಬಂತಂತೆ’ ಗೀತೆಯನ್ನು ಕೇಳಿದೆವು. ಇಂದು ಕೇಳೋಣ ನಾಯಿಯನ್ನು

ವಸ್ತುವಾಗಿರಿಸಿಕೊಂಡ, ಆದರೆ ಶ್ವಾನ ಸ್ವಭಾವದ ಮಾನವರನ್ನುದ್ದೇಶಿಸಿದ

ಮತ್ತೊಂದು ರಚನೆ ‘ಡೊಂಕು ಬಾಲದ ನಾಯಕರೇ ನೀವೇನೂಟವ

ಮಾಡಿದಿರಿ ?’  ಮಿಶ್ರಕಾಪಿ ರಾಗ, ಆದಿ ತಾಳ. ಗೀತೆಯ ಸಾಹಿತ್ಯ

ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಲಭ್ಯವಿದೆ. ಈ ವಿವರಣೆಯನ್ನು ಬರೆದಿರಿಸಿರುವ

ನನ್ನ ಬ್ಲಾಗ್ ನ ವಿಳಾಸ ಸಹ ಅಲ್ಲಿಯೇ ಲಭ್ಯವಿದೆ.



‘ಡೊಂಕುಬಾಲದ ನಾಯಕರೇ’ ಎಂದು ನಾಯಿಗಳ

ಹೆಸರುಹೇಳಿ ಡೊಂಕುಸ್ವಭಾವದ ನಮ್ಮನ್ನು ಉದ್ದೇಶಿಸಿದರು

ಪುರಂದರ ದಾಸರು. ಮನುಷ್ಯ ಸ್ವಭಾವ ಸಹಜವಾಗಿಯೇ 

ಡೊಂಕು ಅಥವಾ ಸೊಟ್ಟ. ಹಾಗೆಂದು ಅದು ಸದಾ

ಡೊಂಕೇ ಅಲ್ಲ. ಒಮ್ಮೊಮ್ಮೆ ಮಾನವ ಬಹಳ ಪ್ರಯಾಸಪಟ್ಟು

ಸೊಟ್ಟಗಿರುವ ಸ್ವಭಾವವನ್ನು  ಕಟ್ಟಿ ನೆಟ್ಟಗಾಗಿಸುವ ಪ್ರಯತ್ನ

ಮಾಡುತ್ತಾನೆ. ಆದರೆ ‘ನಾಯಿಯ ಬಾಲಕ್ಕೆ ದೆಬ್ಬೆ ಕಟ್ಟಿದಂತೆ’

ಎಂಬ ಗಾದೆಯಂತೆ ಕಟ್ಟು ಬಿಚ್ಚಿದಾಕ್ಷಣ ಮತ್ತೆ ಸ್ವಭಾವ ಡೊಂಕಾಗಿಬಿಡುತ್ತದೆ. ಆದ್ದರಿಂದಲೇ ದಾಸರು ನಮ್ಮನ್ನು

ಡೊಂಕುಬಾಲದ ನಾಯಕರೇ ಎಂದು ಕರೆದರು.

‘ನೀವೇನೂಟವ ಮಾಡಿದಿರಿ?’ ಎಂದು ಕೇಳಿದರು.

‘ನೀವೇನೂಟವ ಮಾಡಿದಿರಿ’ ಎಂದು ಅವರು ಕೇಳಿದ್ದು

ಅನ್ನವೋ, ಹುಳಿಯೋ ರೊಟ್ಟಿಯೋ ಪಲ್ಯವೋ ಏನು

ತಿಂದಿರಿ ಎಂದಲ್ಲ. ಅವರು ಕೇಳಿದ ಊಟ, ನಮ್ಮ ಕರ್ಮಗಳ 

ಫಲ. ನಿಮ್ಮ ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿದ

ಕರ್ಮಗಳ ಫಲವನ್ನು ಈ ಜನ್ಮದಲ್ಲಿ  ಉಣ್ಣುವುದು ಉಂಟಲ್ಲ,

‘ಅದೇನನ್ನು ಉಣ್ಣುತ್ತಿದ್ದೀರಿ’ ಎಂದು ಕೇಳಿದರು.  


ಮುಂದಿನ ಚರಣಗಳಲ್ಲಿ ಬರುವ ಕಣಕ ಕುಟ್ಟುವುದು ಮತ್ತು ಹುಗ್ಗಿ ಬೇಯಿಸುವುದು ನಮ್ಮ ಕರ್ಮಗಳ ಫಲವನ್ನು ನಾವು ಅನುಭವಿಸುವುದಕ್ಕೆ ದಾಸರು ಕೊಟ್ಟಂಥ ರೂಪಕಗಳು. ಬೆಂದದ್ದು, ಬಡಿತ ತಿಂದದ್ದು ಎಲ್ಲವೂ ನಮಗೆ ದಕ್ಕಿದಫಲ. ವಿಧಿ ಕೊಟ್ಟಂಥ ಪೆಟ್ಟುಗಳು. ನಾವು ಈ ಹಿಂದೆ ‘ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ’ ಪದದ ಕೊನೆಯಲ್ಲಿ ‘ಟೊಣಪೆಗಳು’ ಎಂದವಲ್ಲಾ ಅದು. ನಮ್ಮ ಕರ್ಮದ ಫಲವಾಗಿ ಬಿದ್ದ ಪೆಟ್ಟುಗಳನ್ನು ‘ಮಾಡಿದ್ದುಣ್ಣೋ ಮಹರಾಯ’ ಎಂದು ಸುಮ್ಮನೆ ಸಹಿಸಿಕೊಳ್ಳದೆ ಅದರ ಬಗ್ಗೆ ರಾಗ ತೆಗೆಯುತ್ತೇವಲ್ಲಾ, ಅದನ್ನು ತಿಳಿಸುವುದಕ್ಕಾಗಿ ಒನಕೆಲಿ ಬಡಿದರೆ  ‘ಕುಯ್ ಕುಯ್ ರಾಗವ ಮಾಡಿದಿರಿ’ ಎಂದು ಮೂದಲಿಸಿದರು ದಾಸರು.  


ಕೊನೆಯ ಚರಣದಲ್ಲಿ ಬರುವ ‘ಹಿರೇಬೀದಿಯಲಿ ಓಡುವಿರಿ - ಕರೇಬೂದಿಯಲಿ ಹೊರಳುವಿರಿ’ ಎಂಬ ಸಾಲು ಬಹಳ ಅರ್ಥಪೂರ್ಣವಾದದ್ದು. ಹಿರೇಬೀದಿ ಎನ್ನುವುದು ರಾಜಬೀದಿ, ಹೈವೇ ಎನ್ನುತ್ತೇವಲ್ಲಾ ಅದು. ಪರಮಾತ್ಮನ ಕಡೆಗೆ ಸಾಗುವ, ‘ಸತ್ ಚಿಂತನೆ’ ಮತ್ತು ‘ಸತ್ ಸ್ವಭಾವ’ ಎಂಬ ಸತ್ವಗುಣ ಪರಿಪೂರ್ಣವಾದ ರಾಜಬೀದಿ. ಯಾವುದೋ ಪೂರ್ವಜನ್ಮ ಸುಕೃತದಿಂದಲೋ ಸಜ್ಜನರ ಸಂಪರ್ಕದಿಂದಲೋ, ಸ್ವಭಾವ ಬದಲಾವಣೆಯಾಗಿ ಕೊಂಚಕಾಲ ಆ ದಾರಿಯಲ್ಲಿ ಸಾಗಿದೆವು. ಆದರೆ ಸ್ವಲ್ಪಸಮಯದಲ್ಲೇ ಮತ್ತೆ ಹಿಂತಿರುಗಿ ‘ಕರೇ ಬೂದಿಯಲಿ ಹೊರಳಿದೆವು’ . ಕರಿಯಬಣ್ಣ ತಮಸ್ಸಿನ ಪ್ರತೀಕ. ‘ಕರೇಬೂದಿಯಲಿ ಹೊರಳುವಿರಿ’ ಎಂದರೆ ಮತ್ತೆ ಸ್ವಭಾವ ತಮಸ್ಸಿಗೆ ತಿರುಗಿ ಅದರಲ್ಲೇ ಉಳಿಯಿತು ಎಂದು. ಮನುಷ್ಯ ಜನ್ಮದ ಚಂಚಲತೆಯನ್ನು ತೋರುವ ಸಾಲು ಇದು. ಜೀವನದಲ್ಲಿ ಕೊಂಚ ಸಮಯ ಸತ್ ಸ್ವಭಾವ ಕಂಡಿತು ಆದರೆ ಕೊಂಚಕಾಲದಲ್ಲೇ ಮತ್ತೆ ಸ್ವಭಾವ ತಮಸ್ಸಿಗೆ ತಿರುಗಿತು. ಇದು ನಮ್ಮ ಪರಿಸ್ಥಿತಿ. ಎಷ್ಟಾದರೂ ಡೊಂಕು ಬಾಲ ಅಲ್ಲವೇ ? 


ಅದಕ್ಕೆ ಪರಿಹಾರವೇನೆಂದರೆ ಮನಸ್ಸನ್ನು ಪುರಂದರ ವಿಠಲನಲ್ಲಿ ನೆಲೆಯಾಗಿಸುವುದು. ಅದು ಸುಲಭಸಾಧ್ಯವಲ್ಲ. ಹಾಗಾಗಿ ಮನಸ್ಸು ಪುರಂದರವಿಠಲನಲ್ಲಿ ನೆಲೆಯಾಗುವವರೆಗೂ ಹಿರೇಬೀದಿ, ಕರಿಬೂದಿಯೇ ನಿಮ್ಮಗತಿ ಎನ್ನುವುದನ್ನು ಕೊನೆಯ ಚರಣದಲ್ಲಿ ‘ಪುರಂದರ ವಿಟ್ಟಲ ರಾಯನ ಈ ಪರಿ ಮರೆತು ಸದಾ ನೀವು ಚಲಿಸುವಿರಿ’ ಎಂದು ಹಾಡುತ್ತಾ ದಾಸರು ಮುಂದಿನ ಬೀದಿ ಹಿಡಿದು ನಡೆದರೆಂದು ಎಂದುತಿಳಿಸಿ ಇಂದಿನ ನನ್ನ ಮಾತು ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ.


ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ             

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ                 

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ                 

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚರಿಸುವಿರಿ        


Saturday, May 16, 2026

Mnava Shidhisabeku Nichcha

 ಪ್ರತಿರಾತ್ರಿ ನಿದ್ರೆಗೆ ಶರಣಾಗುವ ಮೊದಲು ಪರಮಾತ್ಮನ

ಧ್ಯಾನಮಾಡಿ, ಆದಿನದಲ್ಲಿ ನಾವು ಮಾಡಿದ ಕರ್ಮಗಳನ್ನೆಲ್ಲಾ

ಅವನಿಗೆ ಅರ್ಪಿಸಬೇಕೆನ್ನುತ್ತಾರೆ ಜ್ಞಾನಿಗಳು. ಹಾಗೆ ಅರ್ಪಿಸುವ

ಮೊದಲು ಆ ಕರ್ಮಗಳಲ್ಲಿ ಪುಣ್ಯಕಾರ್ಯಗಳೆಷ್ಟು  ಮತ್ತು

ಪಾಪಕರ್ಮಗಳೆಷ್ಟೆಂದು  ಕೊಂಚಲೆಕ್ಕಾಚಾರ ಮಾಡಿ ಎನ್ನುತ್ತಾರೆ 

ಶ್ರೀ ಪುರಂದರ ದಾಸರು. ಇಂದಿನ ನಮ್ಮ ದಾಸ ಸಾಹಿತ್ಯ ಸಿರಿಯ

ಕೊಡುಗೆ ಶ್ರೀ ಪುರಂದರ ದಾಸರ ರಚನೆ ‘ಮನವ ಶೋಧಿಸಬೇಕು

ನಿಚ್ಚ’. ನಿಚ್ಚ ಎನ್ನುವುದು ನಿತ್ಯ ಎನ್ನುವುದರ ಅಪಭ್ರಂಶ. ಕನ್ನಡ

ವ್ಯಾಕರಣದಲ್ಲಿ ತತ್ಸಮ - ತದ್ಭವ ಎಂಬ ಪದಗಳನ್ನು ಕೇಳಿದ್ದೀರಲ್ಲವೇ?

ನಿತ್ಯ ಎನ್ನುವುದು ತತ್ಸಮ, ನಿಚ್ಚ ತದ್ಭವ.  ಕೇಳಿ ಪುರಂದರ

ದಾಸರ ರಚನೆ  ‘ಮನವ ಶೋಧಿಸಬೇಕು ನಿಚ್ಚ’.  ರಾಗ ಶಿವರಂಜನಿ, 

ಮಿಶ್ರಚಾಪು ತಾಳ. ಗೀತೆಯ ಸಾಹಿತ್ಯ ಮತ್ತು ನನ್ನ ವಿವರಣೆಯ

ವಿಳಾಸ ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಲಭ್ಯವಿದೆ. 



ಮನವ ಶೋಧಿಸಬೇಕು ನಿಚ್ಚ, ಅನುದಿನವು ಮಾಡಿದ ಪಾಪ

ಪುಣ್ಯದ ವೆಚ್ಚ - ಎಷ್ಟು ಸರಳವಾದ, ಸುಂದರವಾದ,

ಅರ್ಥಪೂರ್ಣವಾದ ಸಲಹೆಯಲ್ಲವೇ ? ಗೀತೆಯ ಪಲ್ಲವಿ ಮತ್ತು

ಮೊದಲ ಚರಣ ಬಹಳ ಸರಳವಾಗಿ ಸದಾಚಾರವನ್ನು

ತಿಳಿಸಿಕೊಡುತ್ತದೆ ಜತೆಗೆ ಧರ್ಮಪರಿಪಾಲಕರಾಗಿ,

ಪರಬೊಮ್ಮನನ್ನು ಭಜಿಸುವರಾಗಿಬದುಕಿ ಎಂದಷ್ಟೇ ಹೇಳುತ್ತದೆ.

ಎರಡನೆಯ ಚರಣದ ಬಗ್ಗೆ ಕೊಂಚ ವಿವರಣೆಯ ಅಗತ್ಯವಿದೆ. 


ತನುವ ದಂಡಿಸಿ, ಮನವ ಖಂಡಿಸಿ, ಪರಮಾತ್ಮನನ್ನು ಕಾಣೋ,

ನಿನ್ನೊಳಗೆ ನೀ ಜಾಣೋ, ಮುಕ್ತಿ ಒಂದೇ ಗೇಣೋ ಎನ್ನುವ

ಎರಡನೆಯ ಚರಣದ ಸಾಲುಗಳು ಅಷ್ಟಾಂಗ ಯೋಗದ ಮೆಟ್ಟಲುಗಳು.

ಅಷ್ಟಾಂಗ ಯೋಗ ಎಂಬುದು ಯೋಗಾಭ್ಯಾಸದ  ಒಂದು ಪ್ರಕಾರ.

ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,

ಧಾರಣ, ಧ್ಯಾನ, ಸಮಾಧಿ ಇವು ಆ ಯೋಗ ಪ್ರಕಾರದ ಅಂದರೆ

ಅಷ್ಟಾಂಗ ಯೋಗದ ಎಂಟು ಅಂಗಗಳು ಅಥವಾ ಎಂಟು

ಮೆಟ್ಟಲುಗಳು. 


ಮೊದಲನೆಯ ಎರಡು, ಯಮ - ನಿಯಮ, ಜೀವನ ಶೈಲಿಗೆ

ಸಂಭಂದಿಸಿದವು. ಯಮ ಎಂದರೆ ನೀತಿಯುಕ್ತವಾದ ಮತ್ತು

ನಿಯಮ ಎನ್ನುವುದು ಶಿಸ್ತುಬದ್ಧವಾದ ಜೀವನ. ಜೀವನದಲ್ಲಿ ನೀತಿ,

ಶಿಸ್ತುಗಳಿಲ್ಲದೆ ಅದೆಷ್ಟು ಮೈಬಗ್ಗಿಸಿ, ಶ್ವಾಸ ಬಿಗಿಹಿಡಿದರೂ

ಉಪಯೋಗವಿಲ್ಲವೆಂದು ಅರ್ಥ. ಮತ್ತೆ ಮೂರು ನಾಲ್ಕನೆಯ 

ಆಸನ - ಪ್ರಾಣಾಯಾಮ, ಮೇಲೆಹೇಳಿದ ದೇಹದಂಡನೆ

ಹಾಗೂ  ಶ್ವಾಸ ನಿಯಂತ್ರಣಕ್ಕೆ ಸಂಭಂದಪಟ್ಟವು. ಐದು ಆರನೆಯ

ಪ್ರತ್ಯಾಹಾರ - ಧಾರಣ,  ಮನಸ್ಸಿನ ನಿಯಂತ್ರಣಕ್ಕೆ ಸಂಭಂದಿಸಿದವು

ಮತ್ತು ಏಳು ಎಂಟನೆಯ ಧ್ಯಾನ - ಸಮಾಧಿ  ಆತ್ಮ, ಪರಮಾತ್ಮನ

ಸಂಭಂದಕ್ಕೆ ಸೇರಿದವು. 


ಆಸನ ಪ್ರಾಣಾಯಾಮಗಳಿಂದ ‘ತನುವ ದಂಡಿಸಿ’, ಪ್ರತ್ಯಾಹಾರ

ಧಾರಣಗಳ ಮೂಲಕ ಮನಸ್ಸನ್ನು ನಿಯಂತ್ರಿಸಿ, ಧ್ಯಾನ ಸಮಾಧಿಗಳ

ಪಾಲನೆಯಿಂದ - ‘ನಿನ್ನೊಳಗೆ ನೀ ಜಾಣೋ’ ಅಂದರೆ ನಿನ್ನ

ಅಂತರಂಗದೊಳಗೆ ನೀ ಹುಡುಕಾಡಿ, ‘ಪರಮಾತ್ಮನನ್ನು ಕಾಣೋ’

ಎಂದರೆ ನಿನ್ನೊಳಗೇ ಇರುವ ಪರಮಾತ್ಮನನ್ನು ನೀ ಸಾಕ್ಷಾತ್ಕರಿಸಿಕೊಂಡರೆ,

ಅಲ್ಲಿಂದ ಮುಕ್ತಿ ಒಂದೇ ಗೇಣೋ ಅಂದರೆ ಮುಕ್ತಿಗೆ ಒಂದೇ ಹೆಜ್ಜೆ

ಎನ್ನುತ್ತಾರೆ ಪುರಂದರ ದಾಸರು.  ಮುಕ್ತಿ ಪಡೆಯುವ ದಾರಿಯಲ್ಲಿ

ಕೊನೆಯ ಹೆಜ್ಜೆ ‘ಬಿಂಬರೂಪಿಯಾದ’ ಅಂದರೆ ನಮ್ಮೊಳಗೇ ಇರುವ 

ಪರಮಾತ್ಮನ ಸಾಕ್ಷಾತ್ಕಾರ ಎನ್ನುತ್ತದೆ ಆಧ್ಯಾತ್ಮ ಶಾಸ್ತ್ರ, ಅದನ್ನು ಇಲ್ಲಿ ಸೂಚಿಸುತ್ತಿದ್ದಾರೆ ದಾಸರು. 


ನಮ್ಮಲ್ಲಿ ಸುಲಭ ಎನ್ನುವುದಕ್ಕೆ ಒಂದೇ ಗೇಣು ಎಂಬ ಶಬ್ದದ

ಉಪಯೋಗ ಸಾಮಾನ್ಯ. ಅದಲ್ಲದೆ ಇಲ್ಲಿ ಗೇಣು ಎಂಬ ಶಬ್ದಕ್ಕೆ

ಮತ್ತೊಂದು ಅರ್ಥವಿದೆ. ಹೊಕ್ಕಳಿನ ಹಿಂಭಾಗದಲ್ಲಿ ಬೆನ್ನೆಲುಬಿನ

ಕೆಳಗಿರುವ  ಮಣಿಪುರ ಚಕ್ರ ಎಂಬುದು ಮನದ ನಿಯಂತ್ರಣ

ಸ್ಥಾನ ಎನ್ನುತ್ತಾರೆ. ನಮ್ಮ ಹೃದಯದ ಕೆಳಭಾಗದ ತುದಿಯಲ್ಲಿ

ಬಿಂಬರೂಪಿ ಪರಮಾತ್ಮನ ಸ್ಥಾನ. ಹೀಗೆ ಮನದ ನಿಯಂತ್ರಣ

ಸ್ಥಾನಕ್ಕೂ, ನಾರಾಯಣನ ಸ್ಥಾನಕ್ಕೂ ಇರುವ ಅಂತರ ಸಾಧಾರಣ

ಒಂದು ಗೇಣು. ಹಾಗಾಗಿ ಮನವ ಖಂಡಿಸಿ, ನಿನ್ನೊಳಗೆ ನೀ

ಜಾಲಾಡಿದರೆ, ಒಂದು ಗೇಣಿನ ದೂರದಲ್ಲೇ ಪರಮಾತ್ಮನ ಇರುವು ಕಾಣುತ್ತದೆನ್ನುತ್ತಾರೆ ದಾಸರು. 


ಇಷ್ಟುಹೇಳಿ ಕೊನೆಯ ಚರಣದಲ್ಲಿ ಆತನ ಭಕುತರಿಗೆ ಕೇಡಿಲ್ಲ

ಎಂದರು ಮತ್ತೆ ಅವ ಪಾತಕ ಸಂಗ ಮಾಡುವನಲ್ಲ ಎಂದರು.

ಅದರ ಅರ್ಥ ಅವನು ಪಾತಕರ ಸಂಗ ಮಾಡುವವನಲ್ಲ ಆದರೆ

ಪಾತಕರಿಗೆ ಬೇಕಿದ್ದರೆ ಅವನಲ್ಲಿಗೆ ಬರಬಹುದು ಎಂದಲ್ಲ. ಅದರ

ಅರ್ಥ ಪಾತಕರಿಗೆ ಅವನ ಬಳಿ ಸ್ಥಾನವಿಲ್ಲ ಎಂದು.  

ಇದಾದನಂತರ ಪುರಂದರವಿಠಲನೇ ಗತಿ ನಮಗೆಲ್ಲ ಎಂದು

ಮತ್ತೊಮ್ಮೆ ಒತ್ತಿ ತಿಳಿಸಿ ಗೀತೆಯನ್ನು ದಾಸರು ಕೊನೆಗಾಣಿಸಿದ್ದಾರೆ

ಎನ್ನುತ್ತಾ ನನ್ನ ಈ ವಿವರಣೆ ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ.