ಹರಿನಾಮ ಜಿಹ್ವೆಯೊಳಿರಬೇಕು ನರನಾದಮೇಲೆ
ಭೂತದಯಾಪರನಾಗಿರಬೇಕು
ಪಾತಕವೆಲ್ಲವ ಕಳೆಯಲಿಬೇಕು
ಮಾತು ಮಾತಿಗೆ ಹರಿ ಎನಬೇಕು -ನರನಾದಮೇಲೆ
ಶಾಂತಿ ಶಮ ದಮ ಹಿಡಿಯಲಿ ಬೇಕು
ಧ್ವಾಂತಿ ಅವಗುಣವ ಕಳೆಯಲಿ ಬೇಕು
ಸಂತತ ಸನ್ಮಾರ್ಗದಲ್ಲಿರಬೇಕು -ನರನಾದಮೇಲೆ
ಕಾಮಕ್ರೋಧವ ಸಾರಿಡಬೇಕು
ಮನಕೆ ಅಹಂಕಾರವ ನೀಗಲಿ ಬೇಕು
ಸೌಮ್ಯರ ಸಂಗಡದೊಳು ಇರಬೇಕು-ನರನಾದಮೇಲೆ
ವೇದಶಾಸ್ತ್ರವನು ಓದಲಿ ಬೇಕು
ಭೋದ ತತ್ವವನು ತಿಳಿಯಲಿಬೇಕು
ಮಾಧವನ ಸ್ಮರಣೆ ಮಾಡಲಿ ಬೇಕು -ನರನಾದಮೇಲೆ
ತಂದೆ ಕೃಷ್ಣನ ದಯೆಪಡೆಯಬೇಕು
ಬಂದದ್ದುಂಡು ಸುಖಪಡಬೇಕು
ಚಂದಾಗಿ ಜಗದೊಳಗಿರಬೇಕು-ನರನಾದಮೇಲೆ
ಹರಿನಾಮ ಜಿಹ್ವೆಯೊಳಿರಬೇಕು ನರನಾದ ಮೇಲೆ. ಒಮ್ಮೆ ‘ನರ’ ಎಂದೆನಿಸಿಕೊಳ್ಳುವ ಮೊದಲು ಅದೆಷ್ಟು ಜನ್ಮಗಳನ್ನು ಯಾವಯಾವ ಕ್ರಿಮಿ, ಕೀಟ, ಪ್ರಾಣಿಯಾಗಿ ಕಳೆಯಬೇಕಾಯಿತೋ ಗೊತ್ತಿಲ್ಲ. ಆ ಎಲ್ಲ ಜನ್ಮಗಳಲ್ಲೂ ದೇಹವೆಂಬುದು ಇತ್ತು. ಆ ದೇಹಗಳಲ್ಲಿ ನೋಡುವ, ಕೇಳುವ, ಉಣ್ಣುವ, ಮುಂತಾದ ಏನೇನೋ ವ್ಯವಸ್ಥೆಗಳಿದ್ದರೂ ಗೋವಿಂದ, ನಾರಾಯಣ, ಶ್ರೀಹರಿ ಎಂದು ಹೇಳುವ ವ್ಯವಸ್ಥೆ ಇರಲಿಲ್ಲ. ಅದು ಬಂದದ್ದು ನರಜನ್ಮದಲ್ಲಿ ಮಾತ್ರ. ಅದರಿಂದಲೇ ವ್ಯಾಸತೀರ್ಥರೆಂದರು ಅವಕಾಶಸಿಕ್ಕಾಗ ಹರಿನಾಮ ನಾಲಿಗೆಯಲ್ಲಿರಲಿ. ಈ ಜನ್ಮ ಕಳೆದರೆ ಮತ್ತೆ ಏನು ಜನ್ಮವೋ ಯಾರಿಗೆ ಗೊತ್ತು !
ಮತ್ತೊಂದು ವಿಷಯವೆಂದರೆ ನಾಲಿಗೆಗೆ ಬಂದದ್ದು, ನಂತರ ಸ್ಮರಣೆಯಲ್ಲಿ ಉಳಿದೀತು ಎನ್ನುವುದು. ಬಾಲ್ಯದಲ್ಲಿ ನಮಗೆ ಶಾಲೆಯಲ್ಲಿ ಮಗ್ಗಿ ಹೇಳಿಸುತ್ತಿದ್ದರು. ಪ್ರತಿನಿತ್ಯ ಅದನ್ನೇ ಹೇಳುತ್ತಾ ಹೇಳುತ್ತಾ ಬೇಡವೆಂದರೂ ಅದು ಸ್ಮರಣೆಯಲ್ಲಿ ಉಳಿಯುತ್ತಿತ್ತು. ನವ ವಿಧ ಭಕ್ತಿಯಲ್ಲಿ ಎರಡನೇ ಮಜಲು ಕೀರ್ತನೆ, ಮೂರನೆಯದು ಸ್ಮರಣೆ. ನಾಲಿಗೆಯಿಂದ ಮಿದುಳಿಗೆ ಬಂದದ್ದು ಅಲ್ಲಿಂದ ಮುಂದೆ ಹೃದಯವನ್ನು ತಲುಪಬಹುದೇನೋ. ಆದ್ದರಿಂದ ಮೊದಲಾಗಿ ಹರಿನಾಮ ಜಿಹ್ವೆಯಲ್ಲಿರಲಿ.
ಅದು ಸರಿ. ಆದರೆ ಹರಿನಾಮ ನಿರಂತರವಾಗಿ ನಾಲಿಗೆಯಲ್ಲಿರಬೇಕಾದರೆ ಉಳಿದ ನಡವಳಿಕೆಗಳೆಲ್ಲಾ ಅದಕ್ಕೆ ಅನುಗುಣವಾಗಿ ಇರಬೇಕಲ್ಲವೇ ? ಅದರಿಂದಲೇ ಉಳಿದ ಚಟುವಟಿಕೆಗಳು ಹೇಗಿರಬೇಕೆಂಬುದನ್ನೂ ಮುಂದಿನ ಚರಣಗಳಲ್ಲಿ ವಿಶದ ಪಡಿಸಿದರು ವ್ಯಾಸರಾಜರು. ಪಾತಕವ ಕಳೆಯಬೇಕು, ಅಹಂಕಾರವ ನೀಗಬೇಕು, ಸನ್ಮಾರ್ಗದಲ್ಲಿರಬೇಕು, ಕೃಷ್ಣನ ದಯೆ ಪಡೆಯಬೇಕು, ಇತ್ಯಾದಿ, ಇತ್ಯಾದಿ. ಬಹಳ ಸರಳವಾದ ಸಾಲುಗಳು. ಕೆಲವೇ ಪದಗಳಿಗೆ ಕೊಂಚ ವಿವರಣೆ ಅಗತ್ಯವೆನಿಸುತ್ತದೆ.
ಭೂತ ದಯಾಪರನಾಗಿರಬೇಕು - ಇಲ್ಲಿ ಭೂತ ಎಂದರೆ ಸಕಲ ಜೀವಗಳು. ಅವೆಲ್ಲದರ ಮೇಲೂ ದಯೆಯಿರಲಿ. ಶಮ, ದಮ ಹಿಡಿಯಲಿಬೇಕು - ಶಮ ಎಂದರೆ ಮನೋ ನಿಗ್ರಹ, ದಮವೆಂದರೆ ಇಂದ್ರಿಯ ನಿಗ್ರಹ. ಮನುಷ್ಯನಿಗೆ ಎರಡೂ ಬೇಕು. ಧ್ವಾಂತಿ, ಅವಗುಣ ಕಳೆ ಯಲಿಬೇಕು - ಧ್ವಾಂತ ವೆಂದರೆ ಕತ್ತಲು, ಅಜ್ಞಾನ. ಅದನ್ನು ಕಳೆದುಕೊಳ್ಳಬೇಕು. ಕಾಮ ಕ್ರೋಧವ ಸಾರಿಡಬೇಕು - ಎಂದರೆ ದೂರವಿಡಬೇಕು. ಮತ್ತೆ, ಭೋದತತ್ವವ ತಿಳಿಯಲಿಬೇಕು - ಭೋದತತ್ವ ವೆಂದರೆ ಮಧ್ವ ತತ್ವ ಅಥವಾ ಸಿದ್ಧಾಂತ. ಭೋಧ ಎಂದರೆ ಸಂಶಯವಿಲ್ಲದ ಸಂಪೂರ್ಣ ಜ್ಞಾನ. ಅಂಥ ಜ್ಞಾನ ಹೊಂದಿದ್ದ ಆಚಾರ್ಯ ಮಧ್ವರಿಗೆ ಪೂರ್ಣಬೋಧರೆಂದು ಹೆಸರು. ಅವರ ತತ್ವಕ್ಕೆ ಬೋಧತತ್ವವೆಂದು ಹೆಸರು. ತಮ್ಮ ಗುರುಗಳ ತತ್ವಬೋಧನೆಯನ್ನು ಅರ್ಥ ಮಾಡಿಕೊಂಡು ಅನುಸರಿಸಿ ಎಂದರು ವ್ಯಾಸ ತೀರ್ಥರು.
ಗೀತೆಯ ಕೊನೆಯ ಚರಣದಲ್ಲಿರುವ ಎರಡು ಪದಗಳು ಬಹಳ ಮಹತ್ವಉಳ್ಳದ್ದು. ಅವು, ಬಂದದ್ದುಂಡು ಸುಖಪಡಬೇಕು - ನಮಗೆ ಅದುಬೇಕು, ಇದುಬೇಕು, ಎಲ್ಲವೂ ಬೇಕು. ಸರಿ. ಬೇಕೆನಿಸುವ ಎಲ್ಲಕ್ಕೂ ಪ್ರಯತ್ನಪಡಬೇಕು. ಹೌದು. ಆದರೆ ಬೇಕೆಂದದ್ದು ಸಿಕ್ಕದಿದ್ದರೆ ಸಿಕ್ಕಿದ್ದನ್ನು ಉಣ್ಣಬೇಕು. ಹೇಗೆ ? ಹಣೆಬರಹವನ್ನು ಬೈಯುತ್ತಾ, ಕೊಟ್ಟವನನ್ನು ಶಪಿಸುತ್ತಾ ಉಣವುದಲ್ಲ. ಪಾಲಿಗೆ ಬಂದದ್ದು ಪಂಚಾಮೃತ. ಹರಿಪ್ರಸಾದ ವೆಂದು ಸ್ವೀಕರಿಸಿ, ಸುಖಪಡಬೇಕು ಅಂದರೆ ತೃಪ್ತಿಯಿಂದ ಇರಬೇಕು. ಇದನ್ನೇ ಕೃಷ್ಣ ಗೀತೆಯಲ್ಲಿ ಹೇಳಿದ್ದು. ಸುಖೇ ದುಃಖೇ ಸಮೇ ಕೃತ್ವಾ, ಲಾಭಾ ಲಾಭೌ, ಜಯಾ ಜಯೌ ಎಂದ ಕೃಷ್ಣ. ಅವನಿಗೆ ಹೇಳಲು ಸುಲಭ. ಸುಖ ದುಃಖ ಲಾಭ ನಷ್ಟ ಏನೂ ತಗುಲದವನು ಅವನು. ಅನುಭವಿಸುವ ನಮಗೆ ಗೊತ್ತು ಆವನ ಬೋಧನೆಯನ್ನು ಅನುಷ್ಠಾನಕ್ಕೆ ತರುವ ತಾಪತ್ರಯ. ಅಲ್ಲವೇ ? ಇರಲಿಬಿಡಿ. ನಮ್ಮ ಒಳಿತಿಗೆಂದು ಆವನು ಹೇಳಿದ್ದು. ತಮ್ಮ ಅರಾಧ್ಯದೈವ ಹೇಳಿದ್ದನ್ನೇ ವ್ಯಾಸತೀರ್ಥರು ನಮಗೆ ಮತ್ತೆ ಹೇಳುತ್ತಿದ್ದಾರೆ. ತನ್ನ ಬೋಧನೆಯಂತೆ ನಡೆದುಕೊಳ್ಳಲು ಬೇಕಾದ ಮನಸ್ಥಿರತೆಯನ್ನೂ, ಮನಸ್ಥಿತಿಯನ್ನೂ ಕೃಷ್ಣ ಪರಮಾತ್ಮ ನಮಗೆ ದಯಪಾಲಿಸಲೆಂದು ಕೋರುತ್ತಾ ಇಂದಿನ ಮಾತು ಕೃಷ್ಣಾರ್ಪಣ ಎನ್ನುತ್ತೇನೆ.