ಬ್ರಹ್ಮಾನಂದದ ಸಭೆಯೊಳಗಲ್ಲಿ
ಸುಮ್ಮನೆ ಇರುತಿಹುದೇನಯ್ಯಾ
ಮೂಡದು ಉಣ್ಣದು ಕೂಡದು ಮಾಣದು
ಕಾಡದು ಬೇಡದು ಕಂಗೆಡದು
ನಾಡ ಮಾತುಗಳ ಬಲ್ಲುದು ಆಡದು
ರೂಢಿಯೊಳಿರುತಿಹದೇನಯ್ಯಾ
ಪೊಡವಿಗೆ ಅಧಿಕವೆಂಬುವರಿಗೆ ಬಲ್ಲುದು
ಕಡೆಮೊದಲಿಲ್ಲದ ಒಡಲಿಹುದು
ಬೆಡಗನ್ ಅರಿವೆನೆಂಬವರಿಗಗೋಚರ
ಪೊಡವಿಯ ಒಳಗಣ ಭಕ್ತರ ಬಲ್ಲುದು
ನಿಲ್ಲುದು ನಿಲುಕದು ಎಲ್ಲಿಗೆ ಪೋಗದು
ಬಲ್ಲೆನೆಂಬವರಿಗಅಳವಡದು
ಬಲ್ಲಿದ ನಮ್ಮ ಪುರಂದರವಿಠಲ
ಗಲ್ಲದೆ ತಿಳಿಯದು ಜಗದೊಳಗೆ
ನಮ್ಮ ಜೀವನ, ರೀತಿ ನೀತಿಗಳು, ಸಂಸಾರ ತಾಪತ್ರಯಗಳು ,ನಂಬಿಕೆಗಳು, ವ್ಯಾಪಾರ, ವ್ಯವಹಾರ ಎಲ್ಲವೂ ದಾಸರ ರಚನೆಗಳಿಗೆ ವಸ್ತುಗಳೇ. ಜನರ ಮನಸ್ಸಿಗೆ ತಗಲುವ ವಿಷಯಗಳ ಮೂಲಕ ತಲೆಗೆ ಸುಲಭವಾಗಿ ಎಟುಕದ ತತ್ವ ಗಳನ್ನು ಬೋಧಿಸುವುದು ದಾಸರ ತಂತ್ರ. ಅದೇಕೋ ದಾಸರ ಚಿತ್ತ ಒಮ್ಮೆ ಸಂಸಾರಿಗಳನ್ನು ದಾಟಿ ಮೋಕ್ಷಪಡೆದವರತ್ತ ತಿರುಗಿತು. ಭವಸಾಗರದಲ್ಲಿ ಮುಳುಗೇಳುತ್ತಿರುವವರಿಗೆ ಭಗವಂತ ಬೇಕು. ಆದರೆ ಬ್ರಹ್ಮಾನಂದ ಪಡೆದವರೊಡನೆ ಅವನ ವ್ಯವಹಾರ ಹೇಗೆ ? ಇದು ದಾಸರ ಚಿಂತನೆ. ಕೇಳಿ, ಗೀತೆ ‘ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ’
ನೀವು ಕೇಳಿದ ಗೀತೆಯ ರಾಗ ಕೇದಾರ, ಆದಿತಾಳ. ಬ್ರಹ್ಮಾನಂದ, ಸಾಕ್ಷಾತ್ಕಾರ, ಮುಕ್ತಿ, ಮೋಕ್ಷ ಮೊದಲಾದ ಶಬ್ದಗಳೆಲ್ಲ ಸೂಚಿಸುವುದು ಒಂದೆ ಸ್ಥಿತಿಯನ್ನು. ಬ್ರಹ್ಮಾನಂದದ ಸಭೆ ಎಂದರೆ ಮೋಕ್ಷಪಡೆದ ಜೀವರ ಸಭೆ. ನಾವು ನೀವು ಒಂದರ ಹಿಂದೆ ಒಂದು ಬರುತ್ತಿರುವ ನಮ್ಮ ಜನ್ಮಗಳಲ್ಲಿ, ಅಂದರೆ ಪುನರಪಿ ಜನನಂ ಪುನರಪಿ ಮರಣಂ - ಚಕ್ರದಲ್ಲಿ, ಪುರುಷಾರ್ಥಗಳಾದ ಧರ್ಮ ಅರ್ಥ ಕಾಮ ಮೋಕ್ಷಗಳನ್ನು ಗಳಿಸಲು ನಿರಂತರವಾಗಿ ಪರದಾಡುತ್ತಿರುವವರು. ನಮ್ಮ ಈ ಕೆಲಸಕ್ಕೆ ಅನುವುಮಾಡಿಕೊಡುವುದು ಪರಮಾತ್ಮನ ಕೆಲಸ. ಹಾಗಾಗಿ ನಾವು ಸುಮ್ಮನೆ ಇರುವಂತಿಲ್ಲ, ಜತೆಗೆ ಅವನೂ ಸುಮ್ಮನೆ ಇರುವಂತಿಲ್ಲ. ಆದರೆ ಮುಕ್ತಿ ಜೀವರು ಪುರುಷಾರ್ಥಗಳಲ್ಲಿ ಕೊನೆಯದಾದ ಮೋಕ್ಷವನ್ನೂ ಗಳಿಸಿ ಕುಳಿತಿರುವವರು. ಅವರಿಗೆ ಮತ್ತೇನೂ ಕೆಲಸವಿಲ್ಲ ಮತ್ತೆ ಜನ್ಮವೂ ಇಲ್ಲ. ಅಂಥವರೊಡನೆ ಇರುವಾಗ ಪರಮಾತ್ಮನಿಗೂ ಏನೂ ಕೆಲಸವಿಲ್ಲ. ಎಲ್ಲರಿಗೂ ವಿಶ್ರಾಂತಿ ! ಆದ್ದರಿಂದಲೇ ‘ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯಾ?’ ಎಂದು ಇಬ್ಬರನ್ನೂ ಉದ್ದೇಶಿಸಿ ಗೀತೆ ಪ್ರಾರಂಭಿಸಿದರು ಪುರಂದರ ದಾಸರು.
ಮುಂದಿನ ಚರಣ ಈ ಬ್ರಹ್ಮಾನಂದದ ಸಭೆಯಲ್ಲಿನ ಆಗು ಹೋಗುಗಳನ್ನು ಬಣ್ಣಿಸುತ್ತದೆ. ಮೂಡದು ಉಣ್ಣದು ಕೂಡದು ಮಾಣದು ಕಾಡದು ಬೇಡದು ಕಂಗೆಡದು
ನಾಡ ಮಾತುಗಳ ಬಲ್ಲುದು ಆಡದು ರೂಢಿಯೊಳಿರುತಿಹದೇನಯ್ಯಾ. ಈ ಸಾಲುಗಳು ಭಗವಂತನಿಗೂ ಅನ್ವಯಿಸುತ್ತವೆ, ಮುಕ್ತಿಪಡೆದವರಿಗೂ ಅನ್ವಯಿಸುತ್ತವೆ. ಇಬ್ಬರಿಗೂ ಏನೂ ಕೆಲಸವಿಲ್ಲ ಅಂದೆನಲ್ಲಾ ಅಷ್ಟೇ ಅಲ್ಲ ಊಟವೂ ಇಲ್ಲ. ‘ಉಣ್ಣದು’ ಎನ್ನುತ್ತಾರೆ ದಾಸರು. ತತೋ ವಿಶ್ವಙ ವ್ಯಕ್ರಾಮತ್ಸಾಶನಾನಶನೇ ಅಭಿ ಎನ್ನುತ್ತದೆ ಪುರುಷಸೂಕ್ತ. ವಿಶ್ವದ ಎಲ್ಲರಿಗೂ ಅವನು ಸ್ವಾಮೀ. ಆಶನ ಎಂದರೆ ಉಣ್ಣುವವರು, ಅನಾಶನ ಎಂದರೆ ಉಣ್ಣದಿರುವವರು, ಇಬ್ಬರಿಗೂ. ಉಣ್ಣುವವರು ನಾವು, ಉಣ್ಣದಿರುವವರು ಮೋಕ್ಷಜೀವಿಗಳು. ನಾವು ತಿನ್ನಬೇಕು. ಆದ್ದರಿಂದ ಭಗವಂತನಿಗೆ ನೈವೇದ್ಯಮಾಡಿ ತಿನ್ನುತ್ತೇವೆ. ಮೋಕ್ಷಪಡೆದವರು ತಾವು ತಿನ್ನುವುದಿಲ್ಲ, ಭಗವಂತನಿಗೂ ನೈವೇದ್ಯವಿಲ್ಲ. ಯಾರೋ ರಾಜಕಾರಣಿಗಳು ‘ನ ಖಾವುಂಗ ನ ಖಾನೆ ದುಂಗಾ’ ಎಂದರಲ್ಲವೇ ? ಹಾಗೆ. ಜತೆಗೆ ‘ನಾಡಮಾತುಗಳ ಬಲ್ಲುದು ಆಡದು’. ನಾಡಮಾತುಗಳೆಂದರೆ ವೃಥಾ ಕಾಲಹರಣಕ್ಕೋಸ್ಕರ ಹರಟೆ. ಎಲ್ಲ ಸಭೆಗಳಲ್ಲೂ ಅದು ಸಾಮಾನ್ಯ ಆದರೆ ಈ ಬ್ರಹ್ಮಾನಂದದ ಸಭೆಯಲ್ಲಿ ಅದೂ ಇಲ್ಲ. ಸದಾ ಭಗವಂತನ ಗುಣಗಾನವನ್ನು ಮಾಡುತ್ತಿರುವುದು ಮೋಕ್ಷಪಡೆದವರ ಕೆಲಸ, ಅದನ್ನು ಕೇಳುತ್ತಾ ತನ್ನ ಕಂಠದಿಂದ ಸದಾ ವೇದವಾಕ್ಯಗಳನ್ನು ಹೊರಹಾಕುತ್ತಿರುವುದು ಭಗವಂತನ ಕೆಲಸ. ಇಲ್ಲಿ ಬೇರೆ ಹರಟೆಗೆ ಅವಕಾಶವಿಲ್ಲ !
ಎರಡನೇ ಚರಣದಲ್ಲಿ ಬರುವ ‘ಪೊಡವಿಗೆ ಅಧಿಕವೆಂಬವರಿಗೆ ಬಲ್ಲುದು’ ಎಂದರೆ - ಆ ಪರವಸ್ತು ಈ ಭೂಮಿಯ ರೀತಿ ನೀತಿ ಕ್ರಮ ನಿಯಮಗಳನ್ನು ಮೀರಿದ್ದು - ಪೊಡವಿಗೆ ಅಧಿಕ - ಎಂದು ಅರಿತವರಿಗೆ ಅದು ತನ್ನನ್ನು ತಾನು ಕೊಂಚ ತಿಳಿಸಿಕೊಡುತ್ತದೆ. ಆದರೆ ಅದರ ಆಟ ತಿಳಿದಿದ್ದೇವೆ ಎನ್ನುವರಿಗೆ ಅದು ಎಂದೂ ಕಾಣಿಸಿಕೊಳ್ಳುವುದಲ್ಲ. ‘ಬೆಡಗನರಿವೆ ವೆಂಬವರಿ ಗಗೋಚರ’. ಮತ್ತೆ ಆ ಪರವಸ್ತು, ಪ್ರಳಯಕಾಲದಲ್ಲಿ ಇಡೀ ಜಗತ್ತನ್ನೇ ನುಂಗುವುದು. ಆದ್ದರಿಂದ ‘ಕೊನೆ ಮೊದಲಿಲ್ಲದ ಒಡಲಿಹುದು’ ಅಂದರೆ ಇತಿ ಮಿತಿಯಿಲ್ಲದ ಹೊಟ್ಟೆ ಯನ್ನು ಹೊಂದಿರುವುದು. ಕೊನೆಗೆ ‘ಪೊಡವಿಯೊಳಗಣ ಭಕ್ತರ ಬಲ್ಲುದು’. ಈ ಭೂಮಿಯಲ್ಲಿ ತನ್ನ ಭಕ್ತರನ್ನು ಗುರುತಿಸಿ ಅವರ ಸಾಧನೆಗೆ ಅನುವುಮಾಡಿಕೊಡುವುದು.
ಕೊನೆಯ ಚರಣ ‘ನಿಲ್ಲದು, ನಿಲುಕದು, ಎಲ್ಲಿಗು ಪೋಗದು, ಬಲ್ಲೆನೆಂಬವರಿಗಳವಡದು’. ಸರ್ವವ್ಯಾಪಿಯಾದ್ದರಿಂದ ಎಲ್ಲಿಗಾದರೂ ಹೋಗಬೇಕಾದ ಅವಶ್ಯಕತೆಯೇ ಅದಕ್ಕಿಲ್ಲ. ಅದು ಅಲುಗಾಡುವುದೇ ಇಲ್ಲವಾದ್ದರಿಂದ ಅದು ನಿಲ್ಲಬೇಕಾದ್ದೂ ಇಲ್ಲ! ಇದು ಪರಸ್ಪರ ವಿರುದ್ಧಾರ್ಥದ ಪದಗಳಿಂದ ಪರಮಾತ್ಮನನ್ನು ವರ್ಣಿಸುವ ಒಂದು ರೀತಿ. ಅಲ್ಲಿಂದ ಮುಂದೆ ‘ಬಲ್ಲೆನೆಂಬವರಿಗೆ ಅಳವಡದು’ ಅಂದರೆ, ಆ ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ ‘ಸ್ವಲ್ಪ ತಿಳಿಯಿತು ’ ಎಂದುಕೊಂಡವರ ಕೈಗೆ ಅದು ಎಟುಕದು. ಅದರ ಬಗ್ಗೆ ತಿಳಿದುಕೊಂಡಷ್ಟೂ ಮುಂದೆ ಕಾಣುವುದು ಮತ್ತಷ್ಟು ಪ್ರಶ್ನೆಗಳೇ ಹೊರತು, ಸ್ಪಷ್ಟ ಚಿತ್ರವಲ್ಲ. ಆದ್ದರಿಂದ ಬಲ್ಲೆನೆಂಬವರಿಗಳವಡದು. ಕೊನೆಗೆ ‘ ಬಲ್ಲಿದ ನಮ್ಮಯ ಪುರಂದರ ವಿಠಲ ಗಲ್ಲದೆ ತಿಳಿಯದು ಜಗದೊಳಗೆ’ ಎಂದು ತಮ್ಮ ರಚನೆಯನ್ನು ಮುಗಿಸುತ್ತಾರೆ ದಾಸರು. ಅಂದರೆ, ಈ ಜಗತ್ತಿನಲ್ಲಿ ಅದನ್ನು ಬಲ್ಲೆನೆಂಬುವರಿದ್ದರೆ ಅದು ಆ ಪುರಂದರ ವಿಠಲ ಮಾತ್ರ. ಸರ್ವ ಎನ್ನುವುದು ಭಗವಂತನ ಒಂದು ನಾಮ. ಸರ್ವಜ್ಞ, ಎಂದರೆ - ಸರ್ವವನ್ನು ತಿಳಿದವನು - ಇದೂ ಅವನ ನಾಮ. ಒಟ್ಟಿನಲ್ಲಿ ಅವನನ್ನು ಪೂರ್ಣ ತಿಳಿದವನು ಅವನೊಬ್ಬನೇ ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದರು ಎಂಬಲ್ಲಿಗೆ ಕೃಷ್ಣಾರ್ಪಣ.