ತುರುಕರು ಕರೆದರೆ ಉಣಬಹುದಣ್ಣ
ತುರುಕರು ಕರೆದರೆ ಉಣಬಹುದು
ಕರೆ ಕರೆ ಪಿರಿ ಪಿರಿ ಮಾಡದಿರಣ್ಣ
ತುರುಕರು ಕರೆದರೆ ಉಣಬಹುದು
ತುರುಕರುವಿಂದ ಮುಟ್ಟು ಮಡಿ ಬಿಟ್ಟುಹೋಹುದು
ತುರುಕರುವಿಂದ ಹೋಹುದು ಎಂಜಲವು
ತುರುಕರುವಿಂದ ಸ್ವರ್ಗ ಸ್ವಾಧನವಾಗೋದು
ತುರುಕರುವಿಂದ ನರಕ ದೂರಪ್ಪುದು
ತುರು ಕರು ಕಂಡರೆ ಸರಕ್ಕನೆ ಏಳಬೇಕು
ತುರು ಕರುವ ಪೂಜಿಸೆ ಹರಿಯೊಲಿವ
ತುರುಕರು ಕೂದಲ ತುರುಬಿಗೆ ಸುತ್ತಿದರೆ
ಗರತಿಯರೆಲ್ಲ ಮುತ್ತೈದೆಯರಣ್ಣ
ತುರುಕರುವಿನ ನೀರ ಎರಕೊಂಡ ನಮ್ಮದೇವ
ಉರವಕೊಂಡ ಸನಕಾದಿಗಳಿಗೆಲ್ಲ
ಬೆರಕೆಯಮಾಡಿದ ಹರಿದಾಸರಿಗೆಲ್ಲ
ಎರವಾಗಿದ ನಮ್ಮ ಪುರಂದರವಿಠಲ
‘ತುರುಕರುಗಳಿಲ್ಲದ ಊರು ನರಕಕ್ಕೆ ಸಮವಯ್ಯ ಸರ್ವಜ್ಞ’ ಎಂಬ ಒಂದು ಸಾಲನ್ನು ನನ್ನ ಬಾಲ್ಯದಲ್ಲಿ ನಾವು ಹೇಳುತ್ತಿದ್ದೆವು. ಅದನ್ನು ಸರ್ವಜ್ಞ ಹೇಳಿದನೋ ಬಿಟ್ಟನೋ ತಿಳಿಯದು. ನಾವಂತೂ ಹೇಳುತ್ತಿದೆವು. ತುರುಕರು ಎಂದರೆ ನಮ್ಮ ಆಡುಭಾಷೆಯಲ್ಲಿ ಮುಸಲ್ಮಾನರು ಎಂದು ಅರ್ಥ. ಆದರೆ ತುರುಕರು ಎಂದರೆ ದನ ಕರುಗಳು ಎಂದೂ ಅರ್ಥವಾಗುತ್ತದೆ. ಹೀಗೆ ಕೌತುಕವನ್ನುಂಟು ಮಾಡುವ ಪದಗಳನ್ನು ಉಪಯೋಗಿಸಿ, ಪ್ರತ್ಯೇಕವಾದ ಭಾವ ಒಂದನ್ನು ವಿವರಿಸುವಂಥ ಪುರಂದರ ದಾಸರ ಒಂದು ಚಮತ್ಕಾರಿಕ ರಚನೆಯನ್ನು ಇಂದು ಪ್ರಸ್ತುತಪಡಿಸುತ್ತಿದ್ದೇವೆ.
ಈ ಗೀತೆಯ ರಾಗ ಮಾಯಾಮಾಳವಗೌಳ, ಮಿಶ್ರಛಾಪು ತಾಳ. ಕೇರಿ ಕೇರಿ ತಿರುಗುತ್ತಾ, ಹರಿ ಸಂಕೀರ್ತನೆ ಮಾಡುತ್ತಾ, ಭಿಕ್ಷೆ ಸ್ವೀಕರಿಸುತ್ತಾ ಮುನ್ನಡೆಯುತ್ತಿದ್ದ ದಾಸರು ಯಾವಾಗಲಾದರೂ ಒಬ್ಬ ಮುಸಲ್ಮಾನರ ಮನೆಯಲ್ಲಿಯೂ ಭಿಕ್ಷೆ ಪಡೆದು ನಡೆದಿರಬಹುದು. ಅದನ್ನು ತಿಳಿದವರು ಯಾರೋ ಆ ಬಗ್ಗೆ ಏನಾದರೂ ಕೊಂಕು ನುಡಿದಿರಲೂಬಹುದು. ಅದಕ್ಕೆ ಉತ್ತರವಾಗಿ ಬಂದದ್ದು ದಾಸರ ಪದ ‘ತುರುಕರು ಕರೆದರೆ ಉಣಬಹುದಣ್ಣ’. ಎರಡನೇ ಸಾಲಿನಲ್ಲಿ ಬರುವ ‘ಕರೆ ಕರೆ ಪಿರಿ ಪಿರಿ ಮಾಡದಿರಣ್ಣ’ ಎಂಬ ಮಾತು ಈ ನನ್ನ ಊಹೆಗೆ ಒತ್ತು ನೀಡುತ್ತದೆ. ಈ ಪಲ್ಲವಿಯಲ್ಲಿ ತುರುಕರು ಎಂಬುದನ್ನು ದನಕರುಗಳೆಂದು ಭಾವಿಸಿದರೆ ಅದೂ ಅರ್ಥಪೂರ್ಣವೇ. ದನಕರುಗಳು ಹಾಲುಕರೆದರೆ ಆ ಹಾಲನ್ನು ಮಾರಿಕೊಂಡು ಹಾಲು ಕರೆದವರು ಉಣುವುದಲ್ಲವೇ!
ಮುಂದಿನ ಚರಣಗಳ ಸಾಲುಗಳಲ್ಲಿ ಸಹ ತುರುಕರು ಎಂದು ಹೆಸರಿಸಿ, ದನಕರುಗಳನ್ನು ಉದ್ದೇಶಿಸಿದ್ದಾಗಿದೆ. ಮನೆಯಲ್ಲಿ ಮುಟ್ಟು ಚಿಟ್ಟು, ಸೂತಕ ಇತ್ಯಾದಿ ಯಾವುದೇ ಮೈಲಿಗೆ ಕಳೆದನಂತರ, ಹಾಲು, ಮೊಸರು, ತುಪ್ಪ, ಗೋಮಯ, ಗಂಜಲಗಳನ್ನು ಸೇರಿಸಿ ಮಾಡಿದ ಪಂಚಗವ್ಯವನ್ನು ಸೇವಿಸುವುದರಿಂದ ಶುದ್ಧಿ ಯಾಗುವುದೆಂಬ ನಂಬಿಕೆ ಇದೆ. ಅದರಿಂದಾಗಿ ‘ತುರುಕರುವಿನಿಂದ ಮುಟ್ಟು, ಮಡಿ ಬಿಟ್ಟು ಹೋಹುದು’ ಎಂಬ ಸಾಲು. ‘ತುರುಕರುವಿನಿಂದ ಹೋಹುದು ಎಂಜಲವು’ ಎಂಬ ಸಾಲಿಗೆ ಪ್ರತಿನಿತ್ಯ ಊಟ ಆದನಂತರ, ಎಲೆ ಹಾಕಿದ್ದ ಸ್ಥಳವನ್ನು, ಗೋಮಯದಿಂದ ಸಾರಿಸಿ ಶುದ್ಧಿ ಮಾಡುತ್ತಿದ್ದ ಪದ್ಧತಿಯೇ ಮೂಲವಾಗಿದೆ. ಈ ಪದ್ಧತಿ ಇತ್ತು, ದಾಸರು ಪದ್ಯ ಬರೆದಾಗ, ಮನೆಯ ನೆಲ, ಸಗಣಿಸಾರಿಸಿದ ನೆಲವಾಗಿದ್ದಾಗ.
ಮತ್ತೆ ಸ್ವರ್ಗ ಸಾಧನವೂ ತುರುಕರುವಿನಂದಲೇ! ಸ್ವರ್ಗದ ಹಾದಿಯಲ್ಲಿ ಸಿಗುವ ವೈತರಣೀ ನದಿಯನ್ನು ದಾಟಲು ಹಸುವಿನ ಸಹಾಯ ಬೇಕಾಗುತ್ತದಂತೆ. ಹಸುವಿನ ಬಾಲ ಹಿಡಿದು ಅದರ ಬಲದಿಂದ ಮುಳುಗದೆಯೇ ನದಿಯನ್ನು ದಾಟಿ ಸ್ವರ್ಗ ಸೇರುವುದೆಂದು ನಮ್ಮ ಪುರಾಣಗಳು ತಿಳಿಸುತ್ತವೆ.
‘ತುರುಕರುವ ಕಂಡರೆ ಸರಕ್ಕನೆ ಏಳಬೇಕು’ - ಏಳದಿದ್ದರೆ ಅವು ನಿಮ್ಮನ್ನು ಕೊಂಬಿನಿಂದ ಹಾಯ್ದು ಹೋಗುತ್ತವಷ್ಟೆ. ‘ತುರುಕರುವ ಪೂಜಿಸೆ ಹರಿಯೊಲಿವ’ ಕೃಷ್ಣಾವತಾರದ ಹರಿಗೆ ಅತ್ಯಂತ ಪ್ರೀತಿಪಾತ್ರವಾದ ತುರುಕರುಗಳನ್ನು ಪೂಜಿಸಿದರೆ ಅವನು ಒಲಿಯುವುದೇನು ಆಶ್ಚರ್ಯ ? ಕೃಷ್ಣ ಕರುಗಳಿಗೆ ತೋರುತ್ತಿದ್ದ ಪ್ರೀತಿಯನ್ನು ವಿಜಯದಾಸರು ಬಲು ಸುಂದರವಾಗಿ ವರ್ಣಿಸಿದ್ದಾರೆ. “ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ಕರುಗಳನ್ನು ನಿಲಿಸಿ, ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುತಾ ತನ್ನ ಸೆರಗು ತೆಗೆದು ಕೃಷ್ಣ, ಕರುಗಳ ಬೆನ್ನೊರಿಸಿ, ತಿನ್ನು ತಿನ್ನು ಹುಲ್ಲು ಎನುತ ಘನ್ನ ಕರಗಳೊತ್ತುತ್ತ - ಅಜಗಳಂಥ ಕರುಗಳು ಗಜಗಳಂತೆ ಆದವು ! ಮೇಕೆಗಳಂತೆ ಇದ್ದ ಕರುಗಳು ಆನೆಗಳಂತೆ ಬೆಳೆದವಂತೆ ! ಅದಿರಲಿ, ನಾನು ಮತ್ತೆಲ್ಲಿಗೋ ಹೋದೆ.
‘ತುರುಕರು ಕೂದಲ ತುರುಬಿಗೆ ಸುತ್ತಿದರೆ, ಗರತಿಯರೆಲ್ಲಾ ಮುತ್ತೈದೆಯರಣ್ಣ’ ಹಸುವಿನಬಾಲದ ಕೂದಲನ್ನು ತುರುಬಿಗೆ ಸುತ್ತಿದರೆ ಮತ್ತೈದೆತನ ವರ್ಧಿಸುತ್ತದೆಂದು ಮತ್ತೊಂದು ನಂಬಿಕೆ. ಅದರಿಂದ ಬಂದದ್ದು ಈ ಮಾತು.
ಕೊನೆಯ ಚರಣದಲ್ಲಿರುವ ತುರುಕರುವಿನ ನೀರೆಂದರೆ, ಹಾಲು. ಅದನ್ನು ಎರಕೊಂಡವ ಉರವಕೊಂಡ. ಉರವ ಎಂದರೆ ಉರಗ ಶಬ್ದದ ಅಪಭ್ರಂಶ. ಕೊಂಡ ಎಂದರೆ ಬೆಟ್ಟ. ಉರಗದ ಬೆಟ್ಟವೆಂದರೆ ಶೇಷಾಚಲ ಅಥವಾ ತಿರುಪತಿ. ಹಾಗಾಗಿ ಉರವಕೊಂಡ ನೆನ್ನುವನು ತಿರುಪತಿಯ ಶ್ರೀನಿವಾಸ. ಅವನು ಹಾಲಿನ ಅಭಿಷೇಕ ಮಾಡಿಸಿಕೊಂಡ. ಅಭಿಷೇಕದ ತೀರ್ಥ ಸೇವಿಸಿದ ಸನಕಾದಿಗಳು - ‘ತುರುಕರುವಿನ ನೀರಿಗೆ’ ತಾವೂ ಬೆರಕೆಯಾದರು. ಕೊನೆಯ ಸಾಲು ‘ಹರಿದಾಸರಿಗೆಲ್ಲ ಎರವಾಗಿದ’ ಎನ್ನುವುದು. ಎರವಾದನು ಎನ್ನುವುದಕ್ಕೆ ಬೇಕಾದವನು ಎಂಬ ಅರ್ಥವಿದೆ. ಆದ್ದರಿಂದ ಉರವಕೊಂಡ ಹರಿದಾಸರಿಗೆ ಬೇಕಾದವನಾದ, ಪ್ರಿಯನಾದ ಎಂಬ ಅರ್ಥ ಬರುತ್ತದೆ. ಇದಿಷ್ಟು ಗೀತೆಯ ಪದದ, ಸಾಲುಗಳ ವಿವರಣೆಯಾಯಿತು.
ಆದರೆ ಗೀತೆಯ ಮೂಲಕ ದಾಸರು ಹೇಳಬೇಕೆಂದದ್ದು ಬಹುಶಃ ಇದು. ‘ವಿದ್ಯಾ ವಿನಯ ಸಂಪನ್ನೇ, ಬ್ರಾಹ್ಮಣೇ ಗವಿ ಹಸ್ತಿನಿ, ಶುನಿ ಚೈವ ಶ್ವಪಾಕೇಚ, ಪಂಡಿತಃ ಸಮದರ್ಶಿನಃ’ ಎಂಬುದು ಗೀತೆಯಲ್ಲಿ ಶ್ರೀ ಕೃಷ್ಣನ ಮಾತು. ಅದರ ಅರ್ಥ ಏನೆಂದರೆ ಉಚ್ಚ ನೀಚ ಎಂಬ ಬೇಧವಿಲ್ಲದೆ, ಶ್ಲೋಕದಲ್ಲಿ ಹೇಳಿರುವಂತೆ, ಉಚ್ಚ ಜೀವಿಗಳಾದ ವಿದ್ಯೆ ಮತ್ತು ವಿನಯವಂತ, ಬ್ರಹ್ಮಜ್ಞಾನಿ, ಆಕಳು, ಆನೆ, ಮುಂತಾದವುಗಳಲ್ಲಿ ಮತ್ತು ನೀಚ ಜೀವಿಗಳಾದ ನಾಯಿ, ಶ್ವಪಚ ಅಥವಾ ಚಂಡಾಲ ಇವುಗಳಲ್ಲಿಯೂ, ಒಂದೇ ರೀತಿಯ ಪರಮಾತ್ಮ ಸ್ವರೂಪವನ್ನು ಜ್ಞಾನಿಯಾದವನು ಕಾಣುತ್ತಾನೆ ಎನ್ನುವುದು. ಇಲ್ಲಿ ಕೊಂಚ ಎಚ್ಚರ ಬೇಕು. ಈ ವಾಕ್ಯದ ಅರ್ಥ ಅದರಲ್ಲಿ ಸೂಚಿಸಿರುವ ಜೀವರೆಲ್ಲಾ ಒಂದೇ ಎಂದಲ್ಲ, ಆ ಎಲ್ಲದರೊಳು ಇರುವ ಪರವಸ್ತು ಒಂದೇ ಎಂದು. ಹಾಗೆ ಜಾತಿಬೇಧವಿಲ್ಲದೆ, ವರ್ಣಬೇಧವಿಲ್ಲದೆ ಎಲ್ಲರಲ್ಲೂ, ಎಲ್ಲದರಲ್ಲೂ ಶ್ರೀ ಹರಿಯನ್ನು ಕಂಡ ಹರಿದಾಸರಿಗೆ ತುರುಕರೂ ಒಂದೇ, ತುರುಕರುಗಳೂ ಒಂದೇ ಆಗಿ ಅವರಿಂದ ನಮ್ಮ ಇಂದಿನ ಗೀತೆಯ ರಚನೆಯಾಯಿತೆಂದು ತಿಳಿಸುತ್ತಾ, ಇಂದಿನ ನಾಲ್ಕುಮಾತು ಕೃಷ್ಣಾರ್ಪಣಗೊಳಿಸುತ್ತೇನೆ.