Friday, August 14, 2026

ಬುತ್ತಿಯ ಕಟ್ಟೋ, ಮನುಜ

 ಬುತ್ತಿಯ ಕಟ್ಟೋ, ಮನುಜ ,

ಬುತ್ತಿಯ ಕಟ್ಟೋ

ಬುತ್ತಿಯನು ಕಟ್ಟಿದರೆ

ಎತ್ತಲಾದರುಣ್ಣಬಹುದು  


ಧರ್ಮವೆಂಬ ಮಡಿಕೆಯಲ್ಲಿ

ನಿರ್ಮಲಮನಗಂಗೆ ತುಂಬಿ

ಸುಮ್ಮಾನದುರಿಯ ಹಚ್ಚಿ

ಒಮ್ಮನಕ್ಕಿ ಅನ್ನ ಬಾಗಿ


ಅರಿವು ಎಂಬ ಅರಿವೆ ಹಾಸಿ

ಹರಿವಿಹಾರ ಮೊಸರ ತಳಿದು

ಪರಮವೈರಾಗ್ಯದಿಂದ

ಸಿರಿಹರಿಗೆ ಅರ್ಪಿತವೆಂದು ||


ಕರ್ತೃ ಪುರಂದರವಿಠಲನ

ತತ್ವವೆಂಬ ಬುತ್ತಿಯನ್ನು

ಹತ್ತಿರ ತಂದಿಟ್ಟುಕೊಂಡು

ನಿತ್ಯ ಉಂಡು ತೃಪ್ತಿಪಡಿರೋ ||





ಬುತ್ತಿ ಎಂದರೆ ಪ್ರಯಾಣಕಾಲದ ಉಪಯೋಗಕ್ಕಾಗಿ ಕಟ್ಟಿದ ಆಹಾರದ ಗಂಟು ಮತ್ತು ಬಹಳಕಾಲದ ಸಂಗ್ರಹ ಎಂಬ ಎರಡೂ ಅರ್ಥಗಳುಂಟು. ಇದರಲ್ಲೊಂದನ್ನು ಮತ್ತೊಂದಕ್ಕೆ ರೂಪಕವಾಗಿಸಿ ಆಕರ್ಷಕವಾದ ಒಂದು ತತ್ವಬೋಧಕ ರಚನೆಯಾಗಿಸಿದ್ದಾರೆ ಶ್ರೀ ಪುರಂದರದಾಸರು. ನಮ್ಮ ಇಂದಿನ ಕೊಡುಗೆ, ಬುತ್ತಿಯ ಕಟ್ಟೋ, ಮನುಜ , ಬುತ್ತಿಯ ಕಟ್ಟೋ. 


ಗೀತೆಯ ಪಲ್ಲವಿ ಹೇಳುತ್ತದೆ, ‘ಬುತ್ತಿಯ ಕಟ್ಟೋ ಮನುಜಾ, ಬುತ್ತಿಯನ್ನು ಕಟ್ಟಿದರೆ ಎತ್ತಲಾದಾರುಣ್ಣಬಹುದು’  - ಪ್ರಯಾಣಕಾಲದಲ್ಲಿ ಆಹಾರದ ಗಂಟೊಂದು ಜತೆಯಲ್ಲಿದ್ದರೆ ಎಲ್ಲಿ ಯಾವಾಗ ಹಸಿವಾದರೂ ಅಲ್ಲಿ ಅದು ಉಪಯೋಗಕ್ಕೆ ಬಂದೀತು. ಅತ್ತಿತ್ತ ಅಂಗಡಿ, ಹೋಟಲು ಹುಡುಕಬೇಕಿಲ್ಲ. ಹಾಗೆಯೇ ತಾವು  ಸೂಚಿಸುತ್ತಿರುವ ಬುತ್ತಿ ಕಟ್ಟಿಟ್ಟಿದ್ದರೆ  - ಒಂದು ಜನ್ಮದಲ್ಲಿನ  ಜನನ ಮರಣಗಳ ನಡುವಿನ ಪ್ರಯಾಣದಲ್ಲಿ  ಅಷ್ಟೇ ಅಲ್ಲದೆ, ನಾವೆಲ್ಲರೂ ನಿರಂತರವಾಗಿ ನಡೆಸುತ್ತಿರುವ ಜೀವಚಕ್ರದ ಅಸಂಖ್ಯಾತ  ಜನ್ಮಗಳ ಪ್ರಯಾಣದಲ್ಲಿ ಕೂಡ ಎಲ್ಲಿಯಾದರೂ ಉಪಯೋಗಕ್ಕೆ ಬಂದೇ ಬರುತ್ತದೆಂದು ತಿಳಿಸುತ್ತಿದ್ದಾರೆ ದಾಸರು. ಆ ಬುತ್ತಿ ಏನು, ಹೇಗೆ ಎಂಬುದನ್ನು ಮುಂದಿನ ಚರಣಗಳಲ್ಲಿ ವಿಶದಪಡಿಸುತ್ತಾರೆ. 


ಧರ್ಮವೆಂಬ ಮಡಿಕೆಯಲ್ಲಿ, ನಿರ್ಮಲಮನಗಂಗೆ ತುಂಬಿ, ಸುಮ್ಮಾನದುರಿಯ ಹಚ್ಚಿ, ಒಮ್ಮನಕ್ಕಿ ಅನ್ನ ಬಾಗಿ, ಅರಿವು ಎಂಬ ಅರಿವೆ ಹಾಸಿ, ಹರಿವಿಹಾರ ಮೊಸರ ತಳಿದು

ಪರಮವೈರಾಗ್ಯದಿಂದ, ಸಿರಿಹರಿಗೆ ಅರ್ಪಿತವೆಂದು - ಬುತ್ತಿಯಕಟ್ಟೋ ಮನುಜ.  ಮಡಿಕೆ ಎನ್ನುವುದು ಈ ದೇಹ, ದಾಸರು ಹೇಳಿದ್ದು ಧರ್ಮವೆಂಬ ಮಡಿಕೆ. ಅಂದರೆ ಧರ್ಮಕ್ಕೆ ಅನುಸಾರವಾಗಿ ನಡೆದುಕೊಳ್ಳುವ ದೇಹದಲ್ಲಿ, ನಿರ್ಮಲವಾದ, ಕಶ್ಮಲವಿಲ್ಲದ ಮನಸ್ಸು ಎಂಬ ಗಂಗೆ, ಅಂದರೆ ನೀರನ್ನು ತುಂಬಿ, ಸುಮ್ಮಾನದ ಉರಿಯ ಹಚ್ಚಿ, -  ಮಾನ ಎಂದರೆ ಅಹಂಕಾರ. ಆ  ಸುಮ್ಮಾನವೆಂಬ ಅಹಂಕಾರವನ್ನು ಉರುವಲಾಗಿ ಉರಿಸಿ ಭಸ್ಮಮಾಡಿ,  ಒಮ್ಮನವೆಂಬ ಅಕ್ಕಿ, ಎಂದರೆ ಸ್ಥಿರಗೊಂಡಿರುವ, ಅತ್ತಿತ್ತ ಅಲುಗದ,  ಒಂದೇ ಮನವೆಂಬ ಅಕ್ಕಿಯನ್ನು ಬೇಯಿಸಿ. ಆಯಿತೇ ? ಈಗ ಅಡಿಗೆ ಹೇಳಿಕೊಡುವ ವಿಡಿಯೋಗಳಲ್ಲಿ ಹೇಳುತ್ತಾರಲ್ಲಾ ಹಾಗೆ ಈ ಪಕ್ವವಾದ  ಮನವೆಂಬ ಅನ್ನವನ್ನು ಒಂದು ಪಕ್ಕಕ್ಕಿಡಿ. 


ಇದೀಗ ತಿಳಿಸಿದ, ಅನ್ನ ಬೇಯಿಸುವ ಸಮಯದಲ್ಲಿ ಗಳಿಸಿದ ಅರಿವು ಅಥವಾ ಜ್ಞಾನವೇನಿದೆ ಆ ಜ್ಞಾನವೆಂಬ  ಅರಿವೆಯನ್ನು ಹಾಸಿ,  ಪಕ್ಕಕ್ಕಿಟ್ಟಿದ್ದ ಪಕ್ವವಾದ  ಮನವೆಂಬ ಆನ್ನವನ್ನು ಈಗ  ‘ಹರಿವಿಹಾರ’ ಎಂದರೆ ಹರಿಚಿಂತನೆ ಎಂಬ ಮೊಸರಿನೊಡನೆ ಸೇರಿಸಿ ಕಲಸಿ ಕಟ್ಟಿ.  ಈಗ ಈ ಬುತ್ತಿಯನ್ನು ಇದು ಯಾವುದೂ  ನಾನು ಮಾಡಿದ್ದಲ್ಲ, ನನ್ನಿಂದ ಮಾಡಿಸಿದವ ನೀನು ಎಂಬ ವೈರಾಗ್ಯಭಾವದಿಂದ ಶ್ರೀ  ಹರಿಗೆ ಅರ್ಪಣೆ ಮಾಡಿ, ಆ ಹರಿತತ್ವ ವೆಂಬ ಪ್ರಸಾದದ ಬುತ್ತಿಯನ್ನು   ಹತ್ತಿರವಿಟ್ಟುಕೊಂಡು, ನಿತ್ಯ ಉಂಡು, ತೃಪ್ತಿಪಡೆಯಿರೋ ಎಂದರು ದಾಸರು. 


ಈ ಹರಿತತ್ವ ವೆಂಬ ಬುತ್ತಿ ಇದೆಯಲ್ಲಾ ಅದು , ಈ ಜನ್ಮಕ್ಕಷ್ಟೇ ಅಲ್ಲ, ಮುಂದೆಬರುವ ಜನ್ಮ ಜನ್ಮಗಳಲ್ಲೂ ಉಪಯೋಗವಾಗಬಹುದು.    ಗೀತೋಪದೇಶದ ಸಮಯದಲ್ಲಿ ಅರ್ಜುನನಿಗೆ ಒಂದು ಅನುಮಾನಬಂತು ಅವನು ಕೃಷ್ಣನನ್ನು ಕೇಳಿದ, ನಿನ್ನನ್ನು ತಿಳಿಯಲು ಪ್ರಯತ್ನಪಡುತ್ತಿರುವನೊಬ್ಬ ಯಾವುದೇ ಕಾರಣದಿಂದ ಅರ್ಧದಲ್ಲಿ ಅದನ್ನು ಕೈಬಿಟ್ಟರೆ ಅವನು ಅದುವರೆಗೆ  ಮಾಡಿದ್ದೆಲ್ಲಾ ವ್ಯರ್ಥವಲ್ಲವೇ ? ಅದಕ್ಕೆ ಕೃಷ್ಣನ ಉತ್ತರ ಆರನೇ ಅಧ್ಯಾಯದ ೪೦ ರಿಂದ ೪೫ ರ ವರೆಗಿನ ಶ್ಲೋಕಗಳು. ಅಂಥ ಯೋಗಿಗೆ, ಅವನು ಗಳಿಸಿದ ಜ್ಞಾನಕ್ಕೆ, ನಾಶವಿಲ್ಲ. ಒಂದು ಜನ್ಮದಲ್ಲಿ  ಜ್ಞಾನದ ಗಳಿಕೆ ಎಲ್ಲಿಗೆ ಕೊನೆಯಾಗಿತ್ತೋ ಅಲ್ಲಿಂದ ಮುಂದಕ್ಕೆ ಮುಂದಿನ ಜನ್ಮಗಳಲ್ಲಿ  ಜ್ಞಾನ ಸಂಪಾದನೆ ಪ್ರಾರಂಭ.  ಆದ್ದರಿದಲೇ ದಾಸರೆಂದರು ‘ಕರ್ತೃ ಪುರಂದರ ವಿಠಲನ ತತ್ವ’ ವೆಂಬ ಬುತ್ತಿಯ ಕಟ್ಟೋ ಮನುಜ, ಒಂದುವೇಳೆ ಯಾವುದೇ ಕಾರಣದಿಂದ ಸಧ್ಯದ ಜನ್ಮದಲ್ಲಿ ಅದರ ಉಪಯೋಗ ಆಗದಿದ್ದರೂ ಮುಂದೆ  ‘ಎತ್ತಲಾದರೂ ಉಣ್ಣಬಹುದು’. ಯಾವ ಜನ್ಮದಲ್ಲಾದರೂ ಉಪಯೋಗಕ್ಕೆ ಬಂದೀತು. 


ಪದಸಂಯೋಜನೆಯಲ್ಲಿ ಸರಳವಾದ, ಆದರೆ ಬಹಳ ಗಹನವಾದ ರಚನೆ.  ಒಮ್ಮೆಗೇ ಗ್ರಹಿಸಲು ಕೊಂಚ ಕಷ್ಟವಾಗಬಹುದು.  ಆದರೆ ದಾಸರ ಸಲಹೆಯಂತೆ ಈ ಬುತ್ತಿಯನ್ನು ಪಕ್ಕದಲ್ಲಿಟ್ಟುಕೊಂಡು ಆಗಾಗ ಮೆಲುಕುಹಾಕುತ್ತಿದ್ದರೆ ಸಾರ ಮನಸ್ಸಿಗೆ ತಟ್ಟುತ್ತದೆಂದು  ತಿಳಿಸುತ್ತಾ ಇಂದಿನ ಮಾತು ಕೃಷ್ಣಾರ್ಪಣ ಮಾಡುತ್ತೇನೆ.


Saturday, August 8, 2026

ಬೂಚಿ ಬಂದಿದೆ

 ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ

ಚಾಚಿ ಕುಡಿದು ಸುಮ್ಮ ನೆ ನೀ ಪಾಚಿಕೊಳ್ಳೊ ಕೃಷ್ಣ ಯ್ಯ  


ನಾಕುಮುಖದ ಬೂಚಿಯೊಂದು ಗೋಕುಲಕ್ಕೆ ಓಡಿ ಬಂದು

ತೋಕರನ್ನು ಎಳೆದುಕೊಂಡು  ಕಾಕು ಮಾಡಿ ಒಯ್ಯುವುದಕೆ 

ಮೂರು ಕಣ್ಣ  ಬೂಚಿಯೊಂದು ಊರು ಊರು ಸುತ್ತಿ ಬಂದು 

ದ್ವಾರದಲ್ಲಿ ನಿಂತಿದೆ ನೋಡೊ ಪೋರರನ್ನು  ಒಯ್ಯು ವುದಕೆ  


ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ 

ಬಂಗಾರದಂಥ ಮಕ್ಕಳನ್ನ ಕಂಗೆಡಿಸಿ ಒಯ್ಯುವುದಕೆ  

ಮರದ ಮೇಲೆ ಇರುವುದೊಂದು ಕರಿ ಕರಾಳ ಮುಖದ ಬೂಚಿ 

ತರಳರನ್ನು ಎಳೆದುಕೊೊಂಡು ಪುರಂದರ ವಿಠಲಗೊಪ್ಪಿಸಲಿಕೆ



ಸಕಲಲೋಕಗಳ  ಸ್ವಾಮಿಯ ಸಾವಿರನಾಮಗಳಲ್ಲಿ ಎರಡು,  ಭಯಕೃತ್ ಮತ್ತು ಭಯನಾಶನ. ಭಯವನ್ನುಂಟು ಮಾಡುವವನು, ಭಯವನ್ನು ನಾಶಮಾಡುವವನು ಎಂಬ ವಿರುದ್ಧಾರ್ಥದ ನಾಮಗಳು. ತನ್ನ ವೈರಿಗಳಲ್ಲಿ, ದುರುಳರಲ್ಲಿ ಭಯವನ್ನುಂಟುಮಾಡುವವನು ಹಾಗೂ ತನ್ನ ಭಕ್ತರು ಮತ್ತು ಸಜ್ಜನರ ಸಂಸಾರಭಯವನ್ನು ನಾಶಮಾಡುವವನು ಎಂದು ಈ ನಾಮಗಳ ಅರ್ಥ. ಆ ರೀತಿ ಭಯಹುಟ್ಟಿಸುವ, ಭಯನಿವಾರಕನಾದ ಭಗವಂತನನ್ನೇ, ‘ಬೂಚಿ’ ಬಂದು ನಿನ್ನನ್ನು ಕೊಂಡೊಯ್ಯುತ್ತದೆಂದು ಹೆದರಿಸಿ ಮಲಗಿಸಲು ಪ್ರಯತ್ನಪಡುತ್ತಾಳೆ ತಾಯಿ ಯೆಶೋದೆ.


ಶಿಶುಗೀತೆ ಅಥವಾ ಜೋಗುಳ ಎನ್ನಬಹುದಾದ   ಈ ‘ಬೂಚಿಬಂದಿದೆ’ ಗೀತೆ, ಸುಂದರವಾದ  ಕಲ್ಪನೆ ಮತ್ತು ತತ್ವಗಳನ್ನು ಒಳಗೊಂಡಿರುವ ಪದ. ಬೂಚಿ ಬಂದಿದೆ ರಂಗ, ಚಾಚಿ ಕುಡಿದು, ಪಾಚಿಕೊಳ್ಳೊ ಎನ್ನುತ್ತದೆ ಪಲ್ಲವಿ. ಬೂಚಿ, ಚಾಚಿ, ಪಾಚಿ ಎಲ್ಲವೂ ಬಾಲಭಾಷೆಯ ಪದಗಳು. ಬೂಚಿ ಎಂದರೆ  ಕಚ್ಚಿ, ಚುಚ್ಚಿ ತೊಂದರೆ ಮಾಡುವ ಒಂದು ಕೀಟ ಅಥವಾ ಸಣ್ಣ ಕಾಲ್ಪನಿಕ ಪ್ರಾಣಿ. ಚಾಚಿ ಎಂದರೆ ಮೊಲೆಹಾಲು, ಪಾಚಿ ಎನ್ನುವುದು ನಿದ್ದೆ. ರಗಳೆ ಮಾಡುತ್ತಿದ್ದ ಕೃಷ್ಣನನ್ನು ‘ಬೂಚಿಬಂದು ನಿನ್ನನ್ನು ಕೊಂಡೊಯ್ಯುತ್ತದೆ’ ಎಂದು ಹೆದರಿಸಿ ಹಾಲು ಕುಡಿಸಿ ಮಲಗಿಸುವ ಪ್ರಯತ್ನ ಮಾಡುತ್ತಿದ್ದಾಳೆ ತಾಯಿ. 


ಆದರೆ ಕೃಷ್ಣನನ್ನು ಹೊತ್ತೊಯ್ಯಲು ಬಂದಿರುವ ಬೂಚಿಗಳು ಯಾರು? ಮೊದಲ ಎರಡು ಚರಣಗಳಲ್ಲಿ, ‘ತೋಕರನ್ನು’ ಎಂದರೆ ಸಣ್ಣ ಮಾಕ್ಕಳನ್ನು ‘ಕಾಕುಮಾಡಿ’ ಎಂದರೆ ಮೋಸಮಾಡಿ   ಒಯ್ಯಲು ಗೋಕುಲಕ್ಕೆ ಬಂದಿರುವ ನಾಕುಮುಖದಬೂಚಿ, ಚತುರ್ಮುಖ ಬ್ರಹ್ಮ. ಮತ್ತು ಪೋರರನ್ನು ಒಯ್ಯಲೆಂದು ದ್ವಾರದಲ್ಲಿ ಬಂದು ನಿಂತಿರುವ ಮೂರುಕಣ್ಣಿನ ಬೂಚಿ, ಮುಕ್ಕಣ್ಣ ಶಿವ. 


ಮುಂದಿನ ಎರಡು ಚರಣಗಳಲ್ಲಿರುವ  ‘ಅಂಗವೆಲ್ಲ ಕಂಗಳುಳ್ಳ’ ಬೂಚಿ ದೇವೇಂದ್ರ. ಅಹಲ್ಯೆಯ ಶೀಲಾಪಹರಣ ಮಾಡಿದ ಇಂದ್ರನಿಗೆ ದೇಹದಲ್ಲಿ ಸಾವಿರ ಯೋನಿಗಳಾಗಲಿ ಎಂದು ಗೌತಮ ಮುನಿ ಶಾಪವಿತ್ತನಂತೆ.  ಇಂದ್ರ ಕ್ಷಮೆಯಾಚಿಸಿ, ಪಶ್ಚಾತ್ತಾಪ ಪಟ್ಟನಂತರ ಸಾವಿರ ಯೋನಿಗಳು ಸಾವಿರ ಕಣ್ಣುಗಳಾದವಂತೆ. ಅದ್ದರಿಂದ ಇಂದ್ರನನ್ನು  ‘ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ’ ಎಂದರು ದಾಸರು. ಇನ್ನು ಮರದ ಮೇಲೆ ಕುಳಿತಿರುವ ಕರಿ ಕರಾಳಮುಖದ ಬೂಚಿ ಹನುಮಂತನೆಂದು ಬೇರೆ ಹೇಳಬೇಕೇ ?  


ಈ ಪದದ ಹಿಂದಿರುವ ದಾಸರ ಕಲ್ಪನೆ  ಏನೆಂದರೆ, ತಮ್ಮ ಸ್ವಾಮಿ, ಶ್ರೀ ಹರಿ ನಾರಾಯಣ, ಕೃಷ್ಣನ ಅವತಾರತಳೆದು ಭೂಲೋಕಕ್ಕೆ ಹೋದನೆಂದು ಅವನ ಪರಿವಾರ ದೇವತೆಗಳಾದ ಬ್ರಹ್ಮ, ಶಿವ, ರುದ್ರ, ಇಂದ್ರರಿಗೆ ಬಹಳ ಕಳವಳವಾಯಿತಂತೆ. ಆದ್ದರಿಂದ ಅವರೆಲ್ಲಾ ಅವನನ್ನು ಮತ್ತೆ ಕರೆದೊಯ್ಯಲು ಗೋಕುಲಕ್ಕೆ ಬಂದರಂತೆ. ಅವರು ಬಂದದ್ದನ್ನು ಯೆಶೋದೆ ಕೃಷ್ಣನಿಗೆ ಜೋಗುಳದ ರೂಪದಲ್ಲಿ ತಿಳಿಸುತ್ತಿದ್ದಾಳೆ ! 


ಆದರೆ ಕೊನೆಯಲ್ಲಿ ಕಾಣುವ ಮರದ ಮೇಲಿನ  ‘ಕರಿ ಕರಾಳಮುಖದ ಬೂಚಿ’, ಬಂದದ್ದು ತರಳರನ್ನು ಎಳೆದುಕೊಂಡು ಹೋಗಿ ಪುರಂದರ ವಿಠಲನಿಗೆ ಒಪ್ಪಿಸಲಿಕ್ಕೆ. ನಮ್ಮ ತತ್ವದ ಪ್ರಕಾರ, ಯಾರಿಗೇ ಆಗಲಿ ನೇರವಾಗಿ ಪುರಂದರ ವಿಠಲನನ್ನು ಕಾಣುವ ಅವಕಾಶವಿಲ್ಲ. ಪ್ರಾಣದೇವರು ಅಥವಾ ಹನುಮಂತ ಅವರನ್ನು ತನ್ನ ಜತೆಯಲ್ಲಿ ಕರೆದೊಯ್ದರೆ ಮಾತ್ರ ಪರಮಾತ್ಮನ ಭೇಟಿ ಸಾಧ್ಯ!  ಗೀತೆಯ ಕೊನೆಯಲ್ಲಿ ಅದನ್ನು ಸೂಚ್ಯವಾಗಿ ಹೇಳಿ, ತರಳರೆಲ್ಲರು, ಅಂದರೆ ಮಕ್ಕಳೆಲ್ಲರೂ, ಮಕ್ಕಳು ಎನ್ನುವಾಗ ಇಲ್ಲಿ ಸಮಸ್ತ ಜೀವರು ಭಗವಂತನ ಮಕ್ಕಳೆಂಬ ಭಾವ.  ಆದ್ದರಿಂದ ಆ ತರಳರೆಲ್ಲರೂ ಅಂದರೆ ಸಮಸ್ತ ಜೀವರು  ಕರಾಳಮುಖದ ಬೂಚಿ ಮುಖ್ಯಪ್ರಾಣ ಬಂದು ತಮ್ಮನ್ನು ಭಗವಂತನ ಬಳಿಗೆ ಕರೆದೊಯ್ಯುವಂಥ ಯೋಗ್ಯಜೀವನ ನಡೆಸಬೇಕೆಂಬ ಬುದ್ಧಿಮಾತಿನೊಂದಿಗೆ ಪದ್ಯವನ್ನು ದಾಸರು ಕೊನೆಗಾಣಿಸಿದ್ದಾರೆಂದು ತಿಳಿಸುತ್ತಾ ಇಂದಿನ ನಾಲ್ಕು ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.

Friday, July 31, 2026

‘ನಿನ್ನ ಪೂಜೆಯೋ ರಾಮ ನಿನ್ನ ಪೂಜೆಯೋ’

 


ನಿನ್ನ ಪೂಜೆಯೋ ರಾಮ ನಿನ್ನ ಪೂಜೆಯೋ 

ನಿನ್ನ ಪೂಜೆ ಹೊರತಿಲ್ಲ ನನ್ನ ವ್ಯಾಪಾರವೆಲ್ಲ 


ಸ್ನಾನ ಸಂಧ್ಯಾವಂದನೆ ಹೋಮ ಮೌನ ಜಪ ಸದ್ಗ್ರಂಥ 

ವ್ಯಾಖ್ಯಾನ ಯಜ್ಞಸಾಧನ ಸಂಪಾದನ ಅಧ್ಯಯನ 

ನಾನಾ ರಸ ನೈವೇದ್ಯ ಭೋಜನ ತಾಂಬೂಲ ಚರ್ವಣ 

ಮಾನಿನಿ ಮೊದಲಾದ ಚಂದನ ಗಾನದ ಭೋಗಗಳೆಲ್ಲ 


ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಗಳಿಗೆ 

ಸರ್ವಚೇಷ್ಟಪ್ರದನಾದ ಪ್ರಾಣಗೆ ನಿರ್ವಾಹಕನಾಗಿ 

ಸರ್ವಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನು 

ಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ 


ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ 

ಉಂಗುಷ್ಠದಿ ಲೋಕಪಾವನೆ ಗಂಗಾದೇವಿಯು 

ಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣ 

ರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೋ


‘ಪ್ರಾತಃ ಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂತತಃ ಯತ್ಕರೋಮಿ ಜಗನ್ನಾಥ ತದಸ್ತು ತವ ಪೂಜನಂ ಎನ್ನುತ್ತದೆ ಸಂಸ್ಕೃತದ ಉಕ್ತಿಯೊಂದು.  ಬೆಳಗಿನಿಂದ ಸಂಜೆಯವರೆಗೆ ಮತ್ತೆ ಸಂಜೆಯಿಂದ ಬೆಳಗಿನವರೆಗೂ ಅದೇನೇನು ಕೆಲಸ ಕಾರ್ಯಗಳು ನನ್ನಿಂದ ನಡೆಯುತ್ತವೆಯೋ ಅದೆಲ್ಲವೂ, ನಿನ್ನ ಪೂಜೆಯಾಗಲಿ ಜಗನ್ನಾಥ ಎಂದು ಈ ಮಾತಿನ ಅರ್ಥ. ಈ ಭಾವನೆಯನ್ನು ಪಲ್ಲವಿಯಾಗಿಸಿ  ಒಂದು ಸುಂದರವಾದ  ಗೀತೆರಚಿಸಿದ್ದಾರೆ ಶ್ರೀ ಶ್ರೀಪಾದರಾಜರು.

‘ನಿನ್ನ ಪೂಜೆಯೋ ರಾಮ ನಿನ್ನ ಪೂಜೆಯೋ, ನಿನ್ನ ಪೂಜೆ ಹೊರತಿಲ್ಲ ನನ್ನ ವ್ಯಾಪಾರವೆಲ್ಲ’ - ನಿನ್ನ  ಪೂಜೆ ಬೇರೆಯಲ್ಲ, ನನ್ನ ಇತರ ವ್ಯಾಪಾರ ಬೇರೆಯಲ್ಲ, ಇದು ಗೀತೆಯ ಪಲ್ಲವಿ. ಇಲ್ಲಿ ವ್ಯಾಪಾರವೆಂದರೆ ಹಣ ಹೂಡಿ ಮಾಡುವ ಮಾರಾಟದ, ವ್ಯವಹಾರವಲ್ಲ, ನಾವು ದಿನದಲ್ಲಿ ಏನೇನು ಚಟುವಟಿಕೆಗಳನ್ನು ನಡೆಸುತ್ತೇವೋ ಅದೆಲ್ಲಕ್ಕೂ ವ್ಯಾಪಾರವೆಂದೇ ಹೆಸರು. ಆದ್ದರಿಂದ ಮೊದಲನೆಯ ಚರಣದಲ್ಲಿ ದಾಸರು ಪಟ್ಟಿ ಮಾಡಿರುವ ಸ್ನಾನ ಸಂಧ್ಯಾವಂದನೆಯಿಂದ ಮೊದಲಾಗಿ ಗಾನ, ಭೋಗಗಳೆಲ್ಲ, ಮತ್ತೆ ಅದಕ್ಕೆ ಹೊರತಾಗಿ ದಿನವಿಡೀ ನಾವು ಮತ್ತೇನೇನು ಕೆಲಸ ಕಾರ್ಯ ನಡೆಸುತ್ತೇವೆಯೋ ಅದೆಲ್ಲವನ್ನೂ, ಅವು   ಶ್ರೀರಾಮನ ಪೂಜೆ ಎಂಬ ಅನುಸಂಧಾನದಿಂದ ಮಾಡಬೇಕೆಂಬುದು  ಶ್ರೀಪಾದರಾಜರ ಇಂಗಿತ. 


ನಾವು ದೇವರ ಪೂಜೆಗೆ ಹೂವು ಹಣ್ಣು  ಕೊಂಡು ತರುವಾಗ ಮಾರಾಟಗಾರನಿಗೆ  ‘ದೇವರ ಪೂಜೆಗೆ ಬೇಕಪ್ಪಾ ಚನ್ನಾಗಿರೋದು ಕೊಡು’ ಎನ್ನುವುದುಂಟಲ್ಲವೇ ? ಪರಮಾತ್ಮನಿಗೆ  ಉತ್ಕೃಷ್ಟವಾದುದನ್ನೇ ಸಲ್ಲಿಸಬೇಕೆಂದು ನಮ್ಮ ಆಶಯ. ಹೌದೇ?  ಹಾಗಾದರೆ, ನಾವು ಮಾಡಿದ್ದೆಲ್ಲಾ ಭಗವಂತನಿಗೆ ಪೂಜೆ ಎಂದಾದರೆ ನಾವು ಮಾಡುವ ಕೆಲಸಗಳೆಲ್ಲವೂ ಉತ್ಕೃಷ್ಟವೇ ಆಗಬೇಕಾಯಿತಲ್ಲವೇ? ಅಯೋಗ್ಯವಾದ, ಕಳಪೆಯಾದ, ಕೆಲಸ ಮಾಡುವಂತಿಲ್ಲವಾಯಿತು. ಅಷ್ಟೇ ಅಲ್ಲದೆ ಇಲ್ಲಿ ಮತ್ತೊಂದು ಸಂಗತಿಯಿದೆ. ನಾವು ಆಡುವ ಮಾತು, ಮಾಡುವ ಕೆಲಸ, ವಿಚಾರಮಾಡುವ ರೀತಿ ಎಲ್ಲವನ್ನೂ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ವಿಂಗಡಿಸಲು ಸಾಧ್ಯ ಎನ್ನುತ್ತಾನೆ ಕೃಷ್ಣ ಗೀತೆಯಲ್ಲಿ. ನಾವು ಮಾಡುವುದೆಲ್ಲಾ ಪೂಜೆಯಾಗಬೇಕಾದರೆ, ನಮ್ಮ ಎಲ್ಲ ರೀತಿ, ನೀತಿ ನಡೆವಳಿಕೆ, ಕೆಲಸ ಕಾರ್ಯಗಳೂ ಸಾತ್ವಿಕವಾಗಬೇಕಾಯಿತಲ್ಲವೇ ? ಹಾಗಾಗಿ  ‘ಎಲ್ಲ ನಿನ್ನ ಪೂಜೆ’ ಎಂದು ನಡೆಸಿದ ವ್ಯಾಪಾರದಿಂದ ಆದ ಲಾಭ, ನಮ್ಮ ಜೀವನದಲ್ಲಿ ಸಾತ್ವಿಕತೆಯ ಅಂಶದ ಏರಿಕೆ !


ಮುಂದಿನ ಚರಣದಲ್ಲಿ ಶ್ರೀಪಾದರಾಜರು ಪರಮಾತ್ಮನ ಗುಣವರ್ಣನೆ ಮಾಡುತ್ತಾರೆ. ‘ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಗಳಿಗೆ, ಸರ್ವಚೇಷ್ಟಪ್ರದನಾದ ಪ್ರಾಣಗೆ ನಿರ್ವಾಹಕನಾಗಿ’ - ನಮ್ಮ ಪ್ರತಿಯೊಂದು ಅಂಗ, ಇಂದ್ರಿಯಗಳಿಗೂ ಒಬ್ಬ ಅಭಿಮಾನಿ ದೇವತೆ ಅಂದರೆ ‘ಇನ್ ಚಾರ್ಜ್ ದೇವತೆ’ ಇರುತ್ತಾನೆ ಅಥವಾ ಇರುತ್ತಾಳೆಂದು ನಮ್ಮ ನಂಬಿಕೆ. ಮಧ್ವ ಸಿದ್ಧಾಂತದ ಪ್ರಕಾರ ಈ ದೇವತೆಗಳಿಗೆ ತಮ್ಮ ತಮ್ಮ ಕಾರ್ಯಗಳನ್ನು ಮಾಡಲು ಪ್ರಚೋದನೆ ಮತ್ತು  ಅದಕ್ಕೆ ಬೇಕಾದ ಶಕ್ತಿ ನೀಡುವವನು ಅದೇ ದೇಹದಲ್ಲಿ ಅವರೆಲ್ಲರಿಗಿಂತ ಎತ್ತರದ ಸ್ಥಾನದಲ್ಲಿರುವ ಪ್ರಾಣ ದೇವರು. ಆ ಮುಖ್ಯಪ್ರಾಣನಿಗೆ ಚೇತನವಿತ್ತು, ಚಟುವಟಿಕೆಯಲ್ಲಿರಿಸಿ, ಅವನ ಮೂಲಕ, ಸಕಲ ದೇವತೆಗಳನ್ನು ಪ್ರೇರೇಪಿಸಿ, ತನ್ಮೂಲಕ  ಸರ್ವ ಜೀವರ ಎಲ್ಲ ಜ್ಞಾನಕಾರ್ಯಗಳನ್ನು ಮಾಡಿಸಿ, ಅವರಿಗೆ ಶುಭವನ್ನುಂಟುಮಾಡಿ ಆ ಶುಭವನ್ನು ಅನುಭವಿಸುವವನು  ಪರಮಾತ್ಮ ಶ್ರೀ ರಾಮನೆಂದು  ಹೇಳುತ್ತಿದ್ದಾರೆ ಶ್ರೀಪಾದರಾಜರು. ಸಕಲ ಕಾರ್ಯ ಮಾಡಿಸುವವನು ನೀನು, ಅನುಭವಿಸುವವನು ನೀನು, ನಾವು ನಿಮಿತ್ತಮಾತ್ರ ಎಂದು ಇದರ ಹಿಂದಿನ ಅರ್ಥ.  


ಕೊನೆಯ ಚರಣದಲ್ಲಿ  ಪರಮಾತ್ಮನ ಗುಣವರ್ಣನೆ ಮುಂದುವರೆಯುತ್ತದೆ. ‘ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ’. ಭಗವದ್ಗೀತೆಯ ವಿಶ್ವರೂಪ ದರ್ಶನದಲ್ಲಿ ಅರ್ಜುನ ಕಂಡಿದ್ದು ಅದು. ‘ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾನ್ ತಥಾ ಭೂತ ವಿಶೇಷ ಸಂಘಾನ್’ ಎಂದ ಅರ್ಜುನ. ಅಂದರೆ ಭಗವಂತ ನಿನ್ನಲ್ಲಿ ಸರ್ವದೇವತೆಗಳನ್ನು ಕಾಣುತ್ತಿದ್ದೇನೆ ಎಂದ.  ಮುಂದಿನ ಸಾಲು  ‘ಉಂಗುಷ್ಠದಿ ಲೋಕಪಾವನೆ ಗಂಗಾದೇವಿಯು’ - ಕಾಲಿನ ಹೆಬ್ಬೆರಳಿನಲ್ಲಿ ಗಂಗಾದೇವಿ. ಇದರ ಹಿಂದಿನ ಸಂಗತಿ ಹೀಗೆ.  ವಾಮಾನವತಾರದ ಸಮಯದಲ್ಲಿ ತ್ರಿವಿಕ್ರಮನಾಗಿ ಬೆಳೆದ ಶ್ರೀಹರಿ ಒಂದು ಪಾದದಿಂದ ಭೂಮಿಯನ್ನು ಅಳೆದು, ಅಂತರಿಕ್ಷವನ್ನು ಅಳೆಯಲೆಂದು  ಮತ್ತೊಂದು ಪಾದವನ್ನು ಮೇಲೆತ್ತಿದಾಗ ಅವನ ಹೆಬ್ಬೆರಳಿನ ಉಗುರು ಬ್ರಹ್ಮಾಂಡದ ಕವಚವನ್ನು ಬೇಧಿಸಿ ಆದ  ಬಿರುಕಿನ ಮೂಲಕ ಪರಮಾತ್ಮನ ಉಂಗುಷ್ಟದ ಮೇಲೆ ಹರಿದು ಗಂಗೆ ಬ್ರಹ್ಮಾಂಡದೊಳಕ್ಕೆ ಹರಿದುಬಂದಳಂತೆ. ಇದನ್ನು ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ‘ಶೃಂಗಾರ ಪಾದ ನಖ ತುಂಗಾಗ್ರ ಭಿನ್ನ ಕನಕಾಂಗಾಂಡ ಪಾತಿ ತಟಿನೀ, ತುಂಗಾತಿ ಮಂಗಲ ತರಂಗಾಭಿಭೂತ ಭಜಕಾಂಗಾಂಗ ವಾಮನನಮಃ’ ಎಂದು ಸುಂದರವಾಗಿ ವರ್ಣಿಸಿದ್ದಾರೆ.  ಹೀಗೆ ಅಂಗಾಂಗ ಗಳಲ್ಲಿ ಸುರರು, ಉಂಗುಷ್ಟದಲ್ಲಿ ಗಂಗೆಯನ್ನುಳ್ಳ  ‘ಮಂಗಳಾಂಗನೇ’ ನಮ್ಮ ವ್ಯಾಪಾರವೆಂಬ ನಿನ್ನ ಪೂಜೆಯಲ್ಲಿ ಕೊಂಚ ಹೆಚ್ಚುಕಡಿಮೆಯಾದರೆ ‘ಮನ್ನಿಸುವೆಯೋ’, ಕ್ಷಮೆ ಇರಲಯ್ಯಾ, ಎನ್ನುತ್ತಾ ಶ್ರೀಪಾದರಾಜರು ತಮ್ಮ ರಚನೆಯನ್ನು ಮುಗಿಸಿದ್ದಾರೆಂಬಲ್ಲಿಗೆ  ಕೃಷ್ಣಾರ್ಪಣ.


Saturday, July 25, 2026

ಬ್ರಹ್ಮಾನಂದದ ಸಭೆಯೊಳಗಲ್ಲಿ

 ಬ್ರಹ್ಮಾನಂದದ ಸಭೆಯೊಳಗಲ್ಲಿ  

ಸುಮ್ಮನೆ ಇರುತಿಹುದೇನಯ್ಯಾ  


ಮೂಡದು ಉಣ್ಣದು ಕೂಡದು ಮಾಣದು 

ಕಾಡದು ಬೇಡದು ಕಂಗೆಡದು 

ನಾಡ ಮಾತುಗಳ ಬಲ್ಲುದು ಆಡದು 

ರೂಢಿಯೊಳಿರುತಿಹದೇನಯ್ಯಾ 


ಪೊಡವಿಗೆ ಅಧಿಕವೆಂಬುವರಿಗೆ ಬಲ್ಲುದು 

ಕಡೆಮೊದಲಿಲ್ಲದ ಒಡಲಿಹುದು 

ಬೆಡಗನ್ ಅರಿವೆನೆಂಬವರಿಗಗೋಚರ  

ಪೊಡವಿಯ ಒಳಗಣ ಭಕ್ತರ ಬಲ್ಲುದು 


ನಿಲ್ಲುದು ನಿಲುಕದು ಎಲ್ಲಿಗೆ ಪೋಗದು 

ಬಲ್ಲೆನೆಂಬವರಿಗಅಳವಡದು 

ಬಲ್ಲಿದ ನಮ್ಮ ಪುರಂದರವಿಠಲ 

ಗಲ್ಲದೆ ತಿಳಿಯದು ಜಗದೊಳಗೆ 


ನಮ್ಮ ಜೀವನ, ರೀತಿ ನೀತಿಗಳು, ಸಂಸಾರ ತಾಪತ್ರಯಗಳು ,ನಂಬಿಕೆಗಳು, ವ್ಯಾಪಾರ, ವ್ಯವಹಾರ  ಎಲ್ಲವೂ ದಾಸರ ರಚನೆಗಳಿಗೆ ವಸ್ತುಗಳೇ. ಜನರ ಮನಸ್ಸಿಗೆ ತಗಲುವ ವಿಷಯಗಳ ಮೂಲಕ ತಲೆಗೆ ಸುಲಭವಾಗಿ ಎಟುಕದ ತತ್ವ ಗಳನ್ನು  ಬೋಧಿಸುವುದು ದಾಸರ ತಂತ್ರ. ಅದೇಕೋ ದಾಸರ ಚಿತ್ತ ಒಮ್ಮೆ ಸಂಸಾರಿಗಳನ್ನು ದಾಟಿ ಮೋಕ್ಷಪಡೆದವರತ್ತ ತಿರುಗಿತು. ಭವಸಾಗರದಲ್ಲಿ ಮುಳುಗೇಳುತ್ತಿರುವವರಿಗೆ ಭಗವಂತ ಬೇಕು. ಆದರೆ ಬ್ರಹ್ಮಾನಂದ ಪಡೆದವರೊಡನೆ ಅವನ ವ್ಯವಹಾರ ಹೇಗೆ ? ಇದು ದಾಸರ ಚಿಂತನೆ. ಕೇಳಿ, ಗೀತೆ ‘ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ’   


ನೀವು ಕೇಳಿದ ಗೀತೆಯ ರಾಗ ಕೇದಾರ, ಆದಿತಾಳ. ಬ್ರಹ್ಮಾನಂದ, ಸಾಕ್ಷಾತ್ಕಾರ, ಮುಕ್ತಿ, ಮೋಕ್ಷ ಮೊದಲಾದ ಶಬ್ದಗಳೆಲ್ಲ ಸೂಚಿಸುವುದು ಒಂದೆ ಸ್ಥಿತಿಯನ್ನು. ಬ್ರಹ್ಮಾನಂದದ ಸಭೆ ಎಂದರೆ ಮೋಕ್ಷಪಡೆದ ಜೀವರ ಸಭೆ. ನಾವು ನೀವು ಒಂದರ ಹಿಂದೆ ಒಂದು ಬರುತ್ತಿರುವ ನಮ್ಮ ಜನ್ಮಗಳಲ್ಲಿ, ಅಂದರೆ  ಪುನರಪಿ ಜನನಂ ಪುನರಪಿ ಮರಣಂ -  ಚಕ್ರದಲ್ಲಿ,  ಪುರುಷಾರ್ಥಗಳಾದ ಧರ್ಮ ಅರ್ಥ ಕಾಮ ಮೋಕ್ಷಗಳನ್ನು ಗಳಿಸಲು ನಿರಂತರವಾಗಿ  ಪರದಾಡುತ್ತಿರುವವರು. ನಮ್ಮ ಈ ಕೆಲಸಕ್ಕೆ  ಅನುವುಮಾಡಿಕೊಡುವುದು ಪರಮಾತ್ಮನ ಕೆಲಸ. ಹಾಗಾಗಿ ನಾವು ಸುಮ್ಮನೆ ಇರುವಂತಿಲ್ಲ, ಜತೆಗೆ ಅವನೂ ಸುಮ್ಮನೆ ಇರುವಂತಿಲ್ಲ. ಆದರೆ ಮುಕ್ತಿ ಜೀವರು ಪುರುಷಾರ್ಥಗಳಲ್ಲಿ ಕೊನೆಯದಾದ ಮೋಕ್ಷವನ್ನೂ ಗಳಿಸಿ ಕುಳಿತಿರುವವರು. ಅವರಿಗೆ ಮತ್ತೇನೂ ಕೆಲಸವಿಲ್ಲ ಮತ್ತೆ ಜನ್ಮವೂ ಇಲ್ಲ. ಅಂಥವರೊಡನೆ  ಇರುವಾಗ ಪರಮಾತ್ಮನಿಗೂ ಏನೂ ಕೆಲಸವಿಲ್ಲ. ಎಲ್ಲರಿಗೂ ವಿಶ್ರಾಂತಿ ! ಆದ್ದರಿಂದಲೇ ‘ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯಾ?’ ಎಂದು ಇಬ್ಬರನ್ನೂ ಉದ್ದೇಶಿಸಿ  ಗೀತೆ ಪ್ರಾರಂಭಿಸಿದರು ಪುರಂದರ ದಾಸರು. 


ಮುಂದಿನ ಚರಣ ಈ ಬ್ರಹ್ಮಾನಂದದ ಸಭೆಯಲ್ಲಿನ ಆಗು ಹೋಗುಗಳನ್ನು ಬಣ್ಣಿಸುತ್ತದೆ. ಮೂಡದು ಉಣ್ಣದು ಕೂಡದು ಮಾಣದು ಕಾಡದು ಬೇಡದು ಕಂಗೆಡದು 

ನಾಡ ಮಾತುಗಳ ಬಲ್ಲುದು ಆಡದು ರೂಢಿಯೊಳಿರುತಿಹದೇನಯ್ಯಾ. ಈ ಸಾಲುಗಳು  ಭಗವಂತನಿಗೂ ಅನ್ವಯಿಸುತ್ತವೆ, ಮುಕ್ತಿಪಡೆದವರಿಗೂ ಅನ್ವಯಿಸುತ್ತವೆ. ಇಬ್ಬರಿಗೂ ಏನೂ ಕೆಲಸವಿಲ್ಲ ಅಂದೆನಲ್ಲಾ  ಅಷ್ಟೇ ಅಲ್ಲ ಊಟವೂ ಇಲ್ಲ. ‘ಉಣ್ಣದು’ ಎನ್ನುತ್ತಾರೆ ದಾಸರು. ತತೋ ವಿಶ್ವಙ ವ್ಯಕ್ರಾಮತ್ಸಾಶನಾನಶನೇ ಅಭಿ ಎನ್ನುತ್ತದೆ ಪುರುಷಸೂಕ್ತ. ವಿಶ್ವದ ಎಲ್ಲರಿಗೂ ಅವನು ಸ್ವಾಮೀ. ಆಶನ ಎಂದರೆ ಉಣ್ಣುವವರು, ಅನಾಶನ ಎಂದರೆ  ಉಣ್ಣದಿರುವವರು, ಇಬ್ಬರಿಗೂ. ಉಣ್ಣುವವರು ನಾವು, ಉಣ್ಣದಿರುವವರು ಮೋಕ್ಷಜೀವಿಗಳು. ನಾವು ತಿನ್ನಬೇಕು. ಆದ್ದರಿಂದ ಭಗವಂತನಿಗೆ  ನೈವೇದ್ಯಮಾಡಿ ತಿನ್ನುತ್ತೇವೆ. ಮೋಕ್ಷಪಡೆದವರು ತಾವು ತಿನ್ನುವುದಿಲ್ಲ, ಭಗವಂತನಿಗೂ ನೈವೇದ್ಯವಿಲ್ಲ. ಯಾರೋ ರಾಜಕಾರಣಿಗಳು ‘ನ ಖಾವುಂಗ ನ ಖಾನೆ ದುಂಗಾ’ ಎಂದರಲ್ಲವೇ ? ಹಾಗೆ.  ಜತೆಗೆ ‘ನಾಡಮಾತುಗಳ ಬಲ್ಲುದು ಆಡದು’. ನಾಡಮಾತುಗಳೆಂದರೆ ವೃಥಾ ಕಾಲಹರಣಕ್ಕೋಸ್ಕರ ಹರಟೆ. ಎಲ್ಲ ಸಭೆಗಳಲ್ಲೂ ಅದು ಸಾಮಾನ್ಯ ಆದರೆ ಈ ಬ್ರಹ್ಮಾನಂದದ ಸಭೆಯಲ್ಲಿ ಅದೂ ಇಲ್ಲ. ಸದಾ ಭಗವಂತನ  ಗುಣಗಾನವನ್ನು ಮಾಡುತ್ತಿರುವುದು ಮೋಕ್ಷಪಡೆದವರ ಕೆಲಸ, ಅದನ್ನು ಕೇಳುತ್ತಾ ತನ್ನ ಕಂಠದಿಂದ ಸದಾ ವೇದವಾಕ್ಯಗಳನ್ನು  ಹೊರಹಾಕುತ್ತಿರುವುದು ಭಗವಂತನ ಕೆಲಸ. ಇಲ್ಲಿ ಬೇರೆ  ಹರಟೆಗೆ ಅವಕಾಶವಿಲ್ಲ  ! 


ಎರಡನೇ ಚರಣದಲ್ಲಿ ಬರುವ ‘ಪೊಡವಿಗೆ ಅಧಿಕವೆಂಬವರಿಗೆ ಬಲ್ಲುದು’ ಎಂದರೆ -  ಆ ಪರವಸ್ತು ಈ ಭೂಮಿಯ ರೀತಿ ನೀತಿ ಕ್ರಮ ನಿಯಮಗಳನ್ನು ಮೀರಿದ್ದು - ಪೊಡವಿಗೆ ಅಧಿಕ - ಎಂದು ಅರಿತವರಿಗೆ ಅದು ತನ್ನನ್ನು ತಾನು ಕೊಂಚ ತಿಳಿಸಿಕೊಡುತ್ತದೆ. ಆದರೆ  ಅದರ ಆಟ ತಿಳಿದಿದ್ದೇವೆ ಎನ್ನುವರಿಗೆ ಅದು ಎಂದೂ ಕಾಣಿಸಿಕೊಳ್ಳುವುದಲ್ಲ. ‘ಬೆಡಗನರಿವೆ ವೆಂಬವರಿ ಗಗೋಚರ’.  ಮತ್ತೆ ಆ ಪರವಸ್ತು, ಪ್ರಳಯಕಾಲದಲ್ಲಿ ಇಡೀ ಜಗತ್ತನ್ನೇ ನುಂಗುವುದು.  ಆದ್ದರಿಂದ  ‘ಕೊನೆ ಮೊದಲಿಲ್ಲದ ಒಡಲಿಹುದು’ ಅಂದರೆ ಇತಿ ಮಿತಿಯಿಲ್ಲದ ಹೊಟ್ಟೆ ಯನ್ನು ಹೊಂದಿರುವುದು. ಕೊನೆಗೆ  ‘ಪೊಡವಿಯೊಳಗಣ ಭಕ್ತರ ಬಲ್ಲುದು’.  ಈ ಭೂಮಿಯಲ್ಲಿ ತನ್ನ ಭಕ್ತರನ್ನು ಗುರುತಿಸಿ ಅವರ ಸಾಧನೆಗೆ ಅನುವುಮಾಡಿಕೊಡುವುದು.  


ಕೊನೆಯ ಚರಣ ‘ನಿಲ್ಲದು, ನಿಲುಕದು, ಎಲ್ಲಿಗು ಪೋಗದು, ಬಲ್ಲೆನೆಂಬವರಿಗಳವಡದು’. ಸರ್ವವ್ಯಾಪಿಯಾದ್ದರಿಂದ ಎಲ್ಲಿಗಾದರೂ  ಹೋಗಬೇಕಾದ  ಅವಶ್ಯಕತೆಯೇ ಅದಕ್ಕಿಲ್ಲ. ಅದು ಅಲುಗಾಡುವುದೇ ಇಲ್ಲವಾದ್ದರಿಂದ ಅದು  ನಿಲ್ಲಬೇಕಾದ್ದೂ ಇಲ್ಲ! ಇದು ಪರಸ್ಪರ ವಿರುದ್ಧಾರ್ಥದ ಪದಗಳಿಂದ ಪರಮಾತ್ಮನನ್ನು ವರ್ಣಿಸುವ ಒಂದು ರೀತಿ. ಅಲ್ಲಿಂದ ಮುಂದೆ  ‘ಬಲ್ಲೆನೆಂಬವರಿಗೆ ಅಳವಡದು’  ಅಂದರೆ, ಆ ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ  ‘ಸ್ವಲ್ಪ ತಿಳಿಯಿತು ’  ಎಂದುಕೊಂಡವರ  ಕೈಗೆ  ಅದು ಎಟುಕದು. ಅದರ ಬಗ್ಗೆ ತಿಳಿದುಕೊಂಡಷ್ಟೂ ಮುಂದೆ ಕಾಣುವುದು ಮತ್ತಷ್ಟು ಪ್ರಶ್ನೆಗಳೇ  ಹೊರತು, ಸ್ಪಷ್ಟ ಚಿತ್ರವಲ್ಲ.  ಆದ್ದರಿಂದ ಬಲ್ಲೆನೆಂಬವರಿಗಳವಡದು.  ಕೊನೆಗೆ ಬಲ್ಲಿದ ನಮ್ಮಯ ಪುರಂದರ ವಿಠಲ ಗಲ್ಲದೆ ತಿಳಿಯದು ಜಗದೊಳಗೆ’ ಎಂದು ತಮ್ಮ ರಚನೆಯನ್ನು ಮುಗಿಸುತ್ತಾರೆ ದಾಸರು. ಅಂದರೆ, ಈ ಜಗತ್ತಿನಲ್ಲಿ ಅದನ್ನು ಬಲ್ಲೆನೆಂಬುವರಿದ್ದರೆ ಅದು ಆ ಪುರಂದರ  ವಿಠಲ ಮಾತ್ರ.  ಸರ್ವ ಎನ್ನುವುದು ಭಗವಂತನ ಒಂದು ನಾಮ. ಸರ್ವಜ್ಞ, ಎಂದರೆ - ಸರ್ವವನ್ನು ತಿಳಿದವನು - ಇದೂ ಅವನ ನಾಮ. ಒಟ್ಟಿನಲ್ಲಿ ಅವನನ್ನು ಪೂರ್ಣ ತಿಳಿದವನು ಅವನೊಬ್ಬನೇ ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದರು ಎಂಬಲ್ಲಿಗೆ  ಕೃಷ್ಣಾರ್ಪಣ.


Saturday, July 18, 2026

ಏನುಮಾಡಿದರೇನು ಹಿಂದಿನ ಕರ್ಮಫಲ

ಶ್ರವಣ, ಕೀರ್ತನ, ಸ್ಮರಣ ಮೊದಲಾಗಿ ಪ್ರಾರಂಭವಾಗುವ  ನವವಿಧ

ಭಕ್ತಿಯಲ್ಲಿ ಕೊನೆಯ ಮೆಟ್ಟಲು ಆತ್ಮ ನಿವೇದನ. ತನ್ನನ್ನು ತಾನು

ಪರಮಾತ್ಮನಿಗೆ ಸಮರ್ಪಿಸುವುದು.  ಅದಕ್ಕೆ ಮುಂಚಿನ ಮೆಟ್ಟಲು 

‘ಸಖ್ಯ’. ಭಗವಂತನನ್ನು ಸಖನಾಗಿ ಕಾಣುವುದು. ಇದು ಅರ್ಜುನ -

ಶ್ರೀಕೃಷ್ಣರ ಸಂಬಂಧದಂತೆ. ಈ ಸ್ಥಿತಿಯಲ್ಲಿ ಭಗವಂತನ ಬಗ್ಗೆ

ತಿಳುವಳಿಕೆಯುಂಟು, ಗೌರವ, ಭಕ್ತಿಯುಂಟು ಆದರೆ ಅದರೊಂದಿಗೆ,

ಗೆಳೆಯನಂತೆ ಸಲಿಗೆಯೂ ಉಂಟು. ಇಂದು ನಾವು ಪ್ರಸ್ತುತಪಡಿಸುತ್ತಿರುವ

ಕೃತಿಯಲ್ಲಿ ಭಗವಂತನೊಡನೆ ಸಖ್ಯನಂತೆ ಸಂಭಾಷಣೆ ನಡೆಸಿದ್ದಾರೆ

ಶ್ರೀ ಪುರಂದರ ದಾಸರು.


‘ಏನುಮಾಡಿದರೇನು ಹಿಂದಿನ ಕರ್ಮಫಲ, ತಾನು ಮಾಡಿದ ಕರ್ಮ

ತನಗಲ್ಲದೆ’ ಎಂದು ದಾಸರು ಕೀರ್ತನೆಯನ್ನು ಪ್ರಾರಂಭಿಸಿದ್ದಾರೆ. 

ನೀವು ಯಾವ ಯಾವ ಪ್ರಾರ್ಥನೆ, ಪೂಜೆ, ವ್ರತ, ಜಪ, ತಪಗಳನ್ನೆಲ್ಲಾ

ಮಾಡಿ ಪುಣ್ಯ ಸಂಪಾದನೆ ಮಾಡಿಕೊಂಡರೂ ಹಿಂದಿನ

ಕರ್ಮಫಲವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕರ್ಮವನ್ನು

ನೀವು ಅನುಭವಿಸಿಯೇ ಸಿದ್ಧ ಎಂದು ನಮಗೆ ಅರ್ಥಮಾಡಿಸುವ

ಪ್ರಯತ್ನದಲ್ಲಿ ದಾಸರು ಕರ್ಮಫಲ ಸಂಚಯನೆಯೇ  ಇಲ್ಲದ

ಪರಮಾತ್ಮನನ್ನೂ ಎಳೆದು ತಂದಿದ್ದಾರೆ. ಒಬ್ಬ ಸ್ನೇಹಿತನೊಡನೆ

ಲಘುಹಾಸ್ಯದಿಂದ ಮಾತನಾಡುವ ರೀತಿಯಲ್ಲಿ ನಿನ್ನ ಅವತಾರಗಳೆಲ್ಲಾ

ನಿನ್ನ ಕರ್ಮಫಲವಯ್ಯಾ ಎಂದು ಭಗವಂತನಿಗೆ ಹೇಳುತ್ತಿದ್ದಾರೆ. 


ಮೊದಲ ಚರಣದ ಒಂದೊಂದು ಸಾಲಿನಲ್ಲಿ ಮತ್ಸ್ಯ , ಕೂರ್ಮ,

ವರಾಹ, ನರಸಿಂಹ ರೂಪಗಳನ್ನು ಸ್ಮರಿಸಿರುವ ದಾಸರು  ಸಾಮಾನ್ಯವಾಗಿ

ಚಾಲ್ತಿಯಲ್ಲಿರುವ ನರಸಿಂಹನ ಕೋರೆಹಲ್ಲಿನ ಉಗ್ರರೂಪದವನ್ನು 

‘ಪರರಿಗೆ ಬಾಯ್ದೆರೆದು  ಪಲ್ಕಿರಿದರಿಲ್ಲ’ ಎಂದು ಬಣ್ಣಿಸಿ ಇತರರಿಗೆ

ಹಲ್ಲು ಕಾಣಿಸುವಂತೆ  ಬಾಯಿಬಿಟ್ಟು ಹಲ್ಲುಕಿರಿದರೂ ಕರ್ಮ

ಕಳೆಯಲಿಲ್ಲ ಎಂದು ಹಾಸ್ಯಮಾಡಿದ್ದಾರೆ. 


ಮುಂದಿನ ಚರಣ ವಾಮನ, ಪರಶುರಾಮ, ರಾಮ, ಕೃಷ್ಣಾವತಾರಗಳನ್ನು

ಸೂಚಿಸುತ್ತದೆ. ದೇಹವನ್ನು ಹ್ರಸ್ವಮಾಡಿ ಎಂದರೆ ದೇಹವನ್ನು ಕುಗ್ಗಿಸಿ

ಎಂದು. ಇದು ವಾಮನಾವತಾರದ ಯಾಚಕ ರೂಪದ ವರ್ಣನೆ. ಮುಂದೆ

ಪರಶುರಾಮನನ್ನು ದಾಸರು ಕುಲಗೇಡಿ ಎಂದಿದ್ದಾರೆ. ಇಂಥ ರಚನೆ

ಅಥವಾ ವರ್ಣನೆಗೆ ನಿಂದನಾ ಸ್ತುತಿ ಎಂದು ಹೆಸರು. ಇದು

ಭಗವಂತನ ಅವತಾರಗಳ ಭಕ್ತಿಪೂರ್ವಕ ಸ್ಮರಣೆ.  ಆದರೆ ಅವನನ್ನು 

ನಿಂದಿಸುವಂಥ ಸಂಬೋಧನೆ. ಪರಶುರಾಮ ಬ್ರಾಹ್ಮಣನಾಗಿ ಜನಿಸಿ,

ತನ್ನ ವರ್ಣಕ್ಕೆ ವಿರುದ್ಧವಾಗಿ ಕ್ಷತ್ರಿಯರೊಡನೆ ಯುದ್ಧದಲ್ಲಿ ತೊಡಗಿದನಲ್ಲ, 

ಅದರಿಂದ ಅವನನ್ನು  ‘ಕುಲಗೇಡಿ’ ಎಂದರು ದಾಸರು. ಇದ್ದದ್ದನ್ನು

ಇದ್ದಂತೆ ನೇರವಾಗಿ ಹೇಳಿಬಿಡುವ ದಾಸರಿಗೆ ಯಾರ ಮುಲಾಜೂ ಇಲ್ಲ. 


ಕೊನೆಯ ಚರಣದಲ್ಲಿರುವ ‘ಧೀರತನವನು ಬಿಟ್ಟು ದಿಗಂಬರನಾದರೂ ಇಲ್ಲ’

ಎಂಬ ಸಾಲು ಬುದ್ಧಾವತಾರಕ್ಕೆ ಸಂಭಂದ ಪಟ್ಟದ್ದು.  ಬುದ್ಧಾವತಾರ,

ಕೊಂಚ ವಿವಾದಾತ್ಮಕವಾದದ್ದು. ಅದು ವಿಷ್ಣುವಿನ ಅವತಾರವೇ

ಅಲ್ಲವೆಂದು ವಾದಿಸುವ  ಕೆಲವರು  ಅವತಾರಗಳ ಪಟ್ಟಿಯಿಂದ

ಬುದ್ಧಾವತಾರವನ್ನು ಕೈಬಿಟ್ಟಿರುವುದೂ ಉಂಟು. ಆದರೆ ಶ್ರೀ

ವಾದಿರಾಜಸ್ವಾಮಿಗಳು ತಮ್ಮ ದಶಾವತಾರ ಸ್ತುತಿಯಲ್ಲಿ ಬುದ್ಧನನ್ನು

ಸೇರಿಸಿಯೇ ಸ್ತುತಿಸಿರುವುದರಿಂದ ಅದರ ಬಗ್ಗೆ ವಿವಾದಕ್ಕೆ ಎಡೆಯೇ 

ಇಲ್ಲ. ವಿವಾದಕ್ಕೆ ಎಡೆಯಿಲ್ಲವಾದರೂ, ವಿವರಣೆಗೆ ಎಡೆಯುಂಟು,

ಆದರೆ ಇಲ್ಲಿ ಅದು ಪ್ರಸ್ತುತವಲ್ಲವಾದ್ದರಿಂದ ಅದನ್ನು  ಮುಂದೆಲ್ಲಾದರೂ

ಅವಕಾಶಬಂದಾಗ ನೋಡೋಣ. 


ಯಾರುಬಲ್ಲರಯ್ಯಾ ವಿಧಿಯಾಟವನ್ನು ?  ಎನ್ನುತ್ತಾ  ‘ನಿನ್ನನ್ನೂ 

ಆ ವಿಧಿ ಸುಮ್ಮನೆ ಬಿಡಲಿಲ್ಲವಲ್ಲಾ’ ಎಂದು ವಿಧಿನಿಯಾಮಕನಾದ

ಪುರಂದರ ವಿಠಲನಿಗೇ ಹಾಸ್ಯಪೂರ್ವಕವಾದ ಪ್ರಶ್ನೆಹಾಕಿ, 

ಧಾರುಣಿಯಲ್ಲಿ ಅಪ್ರತಿಮನೆಂದು ಅವನನ್ನು ಸ್ತುತಿಸುತ್ತಾ ತಮ್ಮ

ರಚನೆಯನ್ನು ದಾಸರು ಕೊನೆಗಾಣಿಸಿದರೆಂದು ತಿಳಿಸಿ  ನನ್ನ

ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 

Saturday, July 11, 2026

ಕರ್ಮ ಬಂಧನ ಛೇದನ

 ನಮ್ಮ ದಾಸಸಾಹಿತ್ಯ ಸಿರಿ ಮಾಲಿಕೆಯ ಹತ್ತೊಂಭತ್ತನಯ  ಗೀತೆ, ಭಗವಂತನ ಉಪಾಸನೆಯನ್ನು ಅತ್ಯಂತ ಸುಲಭವಾಗಿಸುವ ಶ್ರೀ ಪುರಂದರದಾಸರ ರಚನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ‘ಭಕ್ತಿಯಿಂದ ನೀನೇನು ಕೊಟ್ಟರೂ ಸ್ವೀಕರಿಸಿ ಸಂತೃಪ್ತನಾಗುತ್ತೇನೆ’. ಇಲ್ಲಿ ದಾಸರು  ಹೇಳುತ್ತಾರೆ ‘ಭಕ್ತಿಯಿಂದ ಅವನನ್ನು ನೆನೆದರೆ ಸಾಕು ಅವನು ಸಂತೃಪ್ತನಾಗುತ್ತಾನೆ’.


ಕರ್ಮ ಬಂಧನ ಛೇದನ ರಘು 

ರಾಮನ ನಾಮ ನೀ ನೆನೆ ಮನವೇ 


ಮಂತ್ರವನರಿಯೆನು ತಂತ್ರವನರಿಯೆ ಜಗ 

ದಂತ್ರವನರಿಯೆನೆಂದೆನಬೇಡ 

ತಂತ್ರ ಸ್ವತಂತ್ರನ ಪರಮ ಪವಿತ್ರನ 

ಅಂತರಂಗದಿ ನೀ ನೆನೆಮನವೇ 


ಕಲಿಯುಗದೊಳು ಹರಿನಾಮವ ನೆನೆದರೆ 

ಕುಲಕೋಟಿಗಳು ಉದ್ಧರಿಸುವುವು 

ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ 

ಜಲಜನಾಭನ ನೀ ನೆನೆ ಮನವೇ 


ವದನದಿ ನಾರಾಯಣನೆಂಬ ನಾಮವು 

ಮುದದಿಂದಲಿ ನೆನೆ  ಬಿಡಬೇಡ 

ಪದುಮನಾಭ ಶ್ರೀ ಪುರಂದರ ವಿಠಲನ 

ಸದಾಕಾಲದಿ ನೀ ನೆನೆ ಮನವೇ


‘ಕರ್ಮ ಬಂಧನ ಛೇದನ’ ಎಂದು ತಮ್ಮ ರಚನೆಯನ್ನು ದಾಸರು ಪ್ರಾರಂಭಿಸಿದ್ದಾರೆ. ಈ ಕರ್ಮಬಂಧನವನ್ನು  ಛೇದ ಮಾಡುವುದು  ಭಗವಂತನ ಗುರುತರವಾದ ಕಾರ್ಯಗಳಲ್ಲಿ ಒಂದು. ಒಂದು ಜೀವ ಏನೆಲ್ಲಾ ಪುಣ್ಯಕಾರ್ಯಗಳನ್ನು ಮಾಡಿ, ಉತ್ತಮ ಜನ್ಮಗಳನ್ನು ಪಡೆದು, ಮುಕ್ತಿಯೋಗ್ಯವಾಗಿ ಮೋಕ್ಷದ  ಹೊಸ್ತಿಲಲ್ಲಿ ಬಂದು ನಿಂತರೂ ಅದಕ್ಕೆ ಮೋಕ್ಷ ಖಚಿತವಲ್ಲ. ನಮ್ಮ ತತ್ವದ ಪ್ರಕಾರ  ಮುಕ್ತಿಯೋಗ್ಯವಾದ ಕಾರ್ಯ ಮಾಡಿದೆನೆಂದು ಹಕ್ಕಿನಿಂದ ಮೋಕ್ಷವನ್ನು ಪಡೆಯಲಾಗದು. ಅದು ಭಗವಂತನ ವಿವೇಚನೆಗೆ ಬಿಟ್ಟದ್ದು, ಅವನ ಕೃಪೆ. ಅವನಿಗೆ ಒಪ್ಪಿಗೆಯಾದರೆ ಅವನು ಕರ್ಮಾ ಬಂಧನವನ್ನು ಛೇದಿಸಿ ಮೋಕ್ಷ  ಪ್ರಧಾನಮಾಡುತ್ತಾನೆ. ಆದ್ದರಿಂದಲೇ ದಾಸರು ಇಲ್ಲಿ ರಾಮನನ್ನು  ‘ಕರ್ಮ ಬಂಧನ ಛೇದನ’ ಎಂದರು. 

ಮುಂದಿನ ಚರಣಗಳೆಲ್ಲಾ ಬಹಳವೇ ಸರಳ. ಮೊದಲ ಚರಣದಲ್ಲಿ ಬರುವ ‘ಜಗದಂತ್ರ’ ಎಂದರೆ ಜಗತ್ತಿನ ಅಂತರಂಗ.  ಮುಂದೆ ಬರುವ ‘ತಂತ್ರ ಸ್ವತಂತ್ರ’ ಎಂದರೆ ಭಗವಂತ ಯಾವುದೇ ತಂತ್ರ ಅಥವಾ ಯುಕ್ತಿಗೆ ಬಲಿಯಾಗುವವನಲ್ಲ ಎಂದು. ಅವನು ಸಿಕ್ಕಬೇಕಾದರೆ ಅದು ಅಂತರಂಗದ ಆರಾಧನೆಯಿಂದ ಮಾತ್ರ.  ಎನ್ನುತ್ತಾರೆ ದಾಸರು. 


ಕಲಿಯುಗ, ಭಗವದಾರಾಧನೆಯನ್ನು ಅತ್ಯಂತ ಸುಲಭವಾಗಿಸಿದೆ. ಹಿಂದಿನ ಯುಗಗಳಲ್ಲಿ ಪರಮಾತ್ಮನನ್ನು ಒಲಿಸಿಕೊಳ್ಳಲು ತಪಸ್ಸು, ಯಜ್ಞ, ಯಾಗಗಳ ಮೂಲಕ ಅವನನ್ನು ಆರಾಧಿಸಬೇಕಿತ್ತು.  ಆದರೆ ನಿಷ್ಠೆ, ನಂಬಿಕೆಗಳು ಇಳಿಮುಖವಾಗಿರುವ ಕಲಿಯುಗದಲ್ಲಿ ಅವನು ಅದು ಯಾವುದನ್ನೂ ಆಶಿಸುವುದಿಲ್ಲ. ಈಗ ಅವನು ‘ಸುಲಲಿತ ಭಕ್ತಿಗೆ ಸುಲಭ’. ಅವನ ನಾಮಸ್ಮರಣೆಯಷ್ಟೇ ಸಾಕು. 


ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಎಂದರಲ್ಲವೇ ದಾಸರು. ಅದನ್ನೇ ಈಗ ಅವರು ಮತ್ತೆ ಹೇಳುತ್ತಿರುವುದು. ‘ವದನದಿ ನಾರಾಯಣನೆಂಬ ನಾಮವಿರಲಿ, ಪದುಮನಾಭನ ನೆನಪು ಸದಾ ಇರಲಿ’ ಅಷ್ಟುಸಾಕು  ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ ಎಂದು ತಿಳಿಸಿ ಇಂದಿನ ಕೊಡುಗೆಯನ್ನು ಕೃಷ್ಣಾರ್ಪಣಗೊಳಿಸುತ್ತೇನೆ. 


Saturday, July 4, 2026

ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ

 ತಾವು ಸಂಪೂರ್ಣವಾಗಿ ನಂಬಿರುವ, ನಿರಂತರವಾಗಿ ಆರಾಧಿಸುವ,  ಪರಮಾತ್ಮ ಎಂಬ ಪರವಸ್ತುವಿನ ಬಗ್ಗೆ ಸತತ ಚಿಂತನೆ ಮತ್ತು ಅದನ್ನು ಮತ್ತಷ್ಟು ಅರಿತುಕೊಳ್ಳುವ ಪ್ರಯತ್ನ,  - ಇದು - ನಾವು ಜ್ಞಾನಿಗಳೆಂದು ಕರೆಯುವ ಎಲ್ಲರ ಅನೂಚಾನವಾದ ಕಾರ್ಯ.  ಆ ಪರವಸ್ತುವಿನ ಬಗ್ಗೆ ಹೆಚ್ಚು ಚಿಂತಿಸಿದಷ್ಟೂ ಅದು ಮತ್ತಷ್ಟು ಚಿಂತನೆಗೆ ಎಡೆಮಾಡುತ್ತದೆ. ಕೊನೆಯಾಗದ ಚಿಂತನೆ. ಪ್ರಶ್ನೆಗಳ ಸರಪಳಿ. ಅಂಥ ಸಂಧರ್ಭಗಳಲ್ಲಿ ಮನಸ್ಸಿನಲ್ಲಿ ಮೂಡುವುದು  ‘ನಾ ನಿನ್ನ ಅರಿಯಲಾರೆ ಸ್ವಾಮಿ’ ಎಂಬ ಶರಣಾಗತಿಯ ಭಾವ. ಆ ಭಾವನೆಯನ್ನು ಬಿಂಬಿಸುವ ಕನಕದಾಸರ ಕೃತಿಯೊಂದನ್ನು ಇಂದು ಪ್ರಸ್ತುತ ಪಡಿಸುತ್ತಿದ್ದೇವೆ. ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’. 

ತತ್ವಶಾಸ್ತ್ರದಲ್ಲಿ ಮಾಯೆ ಎಂಬ ಪದಕ್ಕೆ  ಜಗತ್ತು, ಪ್ರಕೃತಿ, ಸಂಸಾರ, ಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿ, ಅಜ್ಞಾನ ಮುಂತಾದ  ಅನೇಕ ಅರ್ಥಗಳಿವೆ. ಮಾಯೆ ಈ ಜಗತ್ತಿನ ಸೃಷ್ಟಿಗೆ ಪರಮಾತ್ಮ ಉಪಯೋಗಿಸಿರುವ ಮೂಲ ವಸ್ತು.  ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ತಾನು ಅಣುವಾಗಿ ಜಗತ್ತಿನ ಕಣಕಣದಲ್ಲಿ ತೂರಿರುವವನೂ ಹೌದು, ಬೃಹತ್ತಾಗಿ ಇಡೀ ಜಗತ್ತನ್ನು ಆವರಿಸಿರುವವನೂ ಹೌದು. ಹಾಗಾಗಿ ಕನಕದಾಸರ ಗೀತೆಯ ಪಲ್ಲವಿ ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’ ಎನ್ನುವುದು ಒಂದು ಪ್ರಶ್ನೆಯಂತೆ ಕಂಡರೂ ಅದು ಪ್ರಶ್ನೆಯಲ್ಲ, ಅದೊಂದು ಹೇಳಿಕೆ. ನಂತರದ ಸಾಲುಗಳು  ಕೂಡ ಹಾಗೆಯೇ. ಪರಮಾತ್ಮ ದೇಹವನ್ನು ಒಳಗಿನಿಂದ ಧರಿಸಿ, ಹೊರಗಿನಿಂದ ಆವರಿಸಿದ್ದಾನೆ. ಆದ್ದರಿಂದಲೇ ದಾಸರು ಮುಂದೆ  ‘ನೀ ದೇಹದೊಳಗೋ ನಿನ್ನೊಳು ದೇಹವೋ’ ಎಂದಿದ್ದಾರೆ. 


ಇದೇ ಭಾವನೆಯನ್ನು ಮುಂದುವರಿಸುತ್ತ ಮುಂದಿನ ಚರಣಗಳಲ್ಲಿ, ನಾವು ನೋಡಿ, ಕೇಳಿ, ಅನುಭವಿಸಿರುವ ರೂಪಕಗಳ  ಮೂಲಕ ದಾಸರು ನಮಗೆ ತಮ್ಮ ಚಿಂತನೆಯನ್ನು ವಿಶದಪಡಿಸುತ್ತಾರೆ.  ‘ಬಯಲು ಆಲಯದೊಳಗೋ ಆಲಯವು ಬಯಲೊಳಗೋ’ ಸಾಲನ್ನು ನೋಡಿ. ಬಯಲು ಎನ್ನುವ ಶಬ್ದಕ್ಕೆ, ಭೂಮಿ ಮತ್ತು ಆಕಾಶ ಎಂಬ ಎರಡೂ ಅರ್ಥವಿದೆ. ಆಲಯ ಬಯಲೊಳಗೆ ಎಂದರೆ ಮನಸ್ಸಿನಲ್ಲಿ ಒಂದು  ಸ್ಪಷ್ಟ ಚಿತ್ರ ತಕ್ಷಣ ಮೂಡುತ್ತದೆ. ಬಯಲು ಆಲಯದೊಳಗೆ ಎಂದರೆ ?  ಈಗ ಬಯಲು ಎಂದರೆ ಆಕಾಶ ಅಥವಾ ಇಂಗ್ಲಿಷ್ ನಲ್ಲಿ ನಾವು ಕರೆಯುವ ಸ್ಪೇಸ್ ಎಂದು ಚಿಂತಿಸೋಣ. ಆ ಬಯಲು ಅಥವಾ ಸ್ಪೇಸ್  ಎನ್ನುವುದು ಆಲಯವನ್ನು ಆವರಿಸಿಕೊಂಡಿದೆ. ಅಷ್ಟೇ ಅಲ್ಲ,  ಆಲಯದ ಒಳಗೆ ನಾವು ಖಾಲಿಜಾಗವೆಂದು ಕರೆಯುತ್ತೇವಲ್ಲ ಅಲ್ಲಿಯೂ ತುಂಬಿಕೊಂಡಿದೆ ಅಲ್ಲವೇ ? ಆದ್ದರಿಂದ ಬಯಲು ಆಲಯದೊಳಗೂ ಹೌದು, ಆಲಯ ಬಯಲೊಳಗೂ ಹೌದು.  ಈ ಒಳಗೆ, ಹೊರಗೆ, ಆಲಯ, ಬಯಲು ಎಲ್ಲವೂ ಅವನ್ನು ಕಾಣುವ ಕಣ್ಣು ಎಂಬ ಇಂದ್ರಿಯ ಇದ್ದು ಆ ಇಂದ್ರಿಯಕ್ಕೆ ಅನುಭವಿಸುವ ಶಕ್ತಿ ಇದ್ದರೆ ತಾನೇ ? ಆದ್ದರಿಂದ ನಂತರದಲ್ಲಿ  ದಾಸರು  ‘ಬಯಲು ಆಲಯವೆರಡು ನಯನದೊಳಗೋ’ ? ಎಂದರು. ಮುಂದೆ  ಮತ್ತಷ್ಟು ಗೊಂದಲ. ‘ನಯನ ಬುದ್ಧಿಯೊಳಗೋ, ಬುದ್ಧಿ ನಯನದೊಳಗೋ?’  ಬುದ್ಧಿ ನೋಡೆಂದುದನ್ನು ಕಣ್ಣು ನೋಡಿತೋ ?  ಅಥವಾ ನಾವು ನೋಡುವ ರೀತಿಯಿಂದ, ನೋಡಿದ ವಸ್ತುವಿನಿಂದ, ಬುದ್ಧಿ ಪ್ರಚೋದಿತವಾಯಿತೋ ?  ಏನೇ ಇರಲಿ, ಒಟ್ಟಿನಲ್ಲಿ  ಬಯಲು, ಆಲಯ ಎರಡರಲ್ಲೂ ಇರುವವ ನೀನು,  ಕಣ್ಣು ಎಂಬ ಇಂದ್ರಿಯ ಕೊಟ್ಟವನು ನೀನು, ಆ ಇಂದ್ರಿಯಕ್ಕೆ ಏನನ್ನಾದರೂ ಕಂಡು ಅನುಭವಿಸುವ ಶಕ್ತಿ ಕೊಟ್ಟವ ನೀನು, ಆ ಅನುಭವವನ್ನು ಆಸ್ವಾದಿಸುವ ಬುದ್ಧಿ ಕೊಟ್ಟವ ನೀನು. ಸ್ವಾಮೀ, ಎಲ್ಲವೂ ನಿನ್ನೊಳಗೆ ಎಂದು  ‘ನಯನ ಬುದ್ಧಿಗಳೆರಡೂ ನಿನ್ನೊಳಗೋ’  ಎಂದುಬಿಟ್ಟರು ಕನಕದಾಸರು. 


ಹೀಗೆಯೇ ಉಳಿದ ಚರಣಗಳ ವಿವರಣೆ ಸಹ. ಸವಿ ಸಕ್ಕರೆಯೊಳಗೋ ಸಕ್ಕರೆ ಸವಿಯೊಳಗೋ? ಎರಡೂ ನಾಲಗೆಯೊಳಗೋ ? ಕುಸುಮ ಗಂಧದೊಳಗೋ, ಗಂಧ ಕುಸುಮದೊಳಗೋ ಎರಡೂ ನಮಗಿರುವ ಘ್ರಾಣದ ಅಂದರೆ ವಾಸನೆಯನ್ನು ಅನುಭವಿಸುವ ಶಕ್ತಿಯೊಳಗೋ? ಇತ್ಯಾದಿ ಇತ್ಯಾದಿ ತಮ್ಮ ಚಿಂತನೆಯನ್ನು ಪ್ರಶ್ನೆಯ ರೂಪದಲ್ಲಿ ಪದ್ಯವಾಗಿ  ರಚಿಸಿ ಕೇಳಿದವರನ್ನು ಸಹ  ಚಿಂತನೆಗೆ ಹಚ್ಚಿದರು. ಸವಿ ಸಕ್ಕರೆಯೊಳಗೆ ಸರಿ. ಆದರೆ ಸಕ್ಕರೆ ಸವಿಯೊಳಗೆ ಎಂದರೆ ? ನಾವು ಏನೆಲ್ಲವನ್ನು ಸವಿ ಎಂದು ಸೂಚಿಸುತ್ತೇವೋ ಅದರಲ್ಲಿ ಸಕ್ಕರೆಯೂ ಒಂದಲ್ಲವೇ ? ಹಾಗಾಗಿ ಸಕ್ಕರೆ ಸವಿಯೊಳಗೂ ಹೌದು. ಮತ್ತೆ, ಸವಿ, ಸಕ್ಕರೆ ಎರಡೂ ನಾಲಗೆಯೊಳಗೆ. ಹೀಗೆಯೇ ಮೊದಲ ಚರಣದ ಭಾವನೆಯನ್ನೇ ಬಿಂಬಿಸುವ ಮುಂದಿನಸಾಲುಗಳನ್ನು ತಮ್ಮ ಚಿಂತನೆಗೆ ಬಿಟ್ಟು ನಾನು ಮುಂದೆ ಸಾಗುತ್ತೇನೆ. 


‘ವಿಜಾನತಾ ಅವಿಜ್ಞಾತಂ ಅವಿಜ್ಞಾತಾ  ವಿಜಾನತಾಂ’ ಎನ್ನುವುದು ಸಂಸ್ಕೃತದ ಒಂದು ಉಕ್ತಿ.  ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ ತಿಳಿದಿದ್ದೇನೆ ಎನ್ನುವವನಿಗೆ ಏನೂ ತಿಳಿದಿಲ್ಲ, ತಾನು ತಿಳಿದಿಲ್ಲ ಎನ್ನುವವನು ತಿಳಿದಿದ್ದಾನೆ - ಎಂದು ಇದರ ಅರ್ಥ. ಇದನ್ನು ನಮಗೆ ವಿವರಿಸುವಂತೆ,  ಕೊನೆಯಲ್ಲಿ  ನಮ್ರವಾಗಿ ‘ಅಸಮಭವ ಕಾಗಿನೆಲೆಯಾದಿ  ಕೇಶವರಾಯ,  ಉಸುರಲೆನ್ನಳವಲ್ಲ ನಿನ್ನೊಳಗೋ ’ -  ಎಂದರೆ - ‘ನಿನಗೆ ಸಮವೆಂಬುದು  ಮತ್ತೊಂದಿಲ್ಲದ  ಕಾಗಿನೆಲೆಯ ಕೇಶವರಾಯನೇ, ನಿನ್ನನ್ನು ವಿವರಿಸುವುದು ಅಥವಾ ತಿಳಿಸಿಕೊಡುವುದು - ಎನ್ನಳವಲ್ಲ - ಎಂದರೆ  ನನ್ನ ಕೈಗೆಟಕುವ  ಕಾರ್ಯವಲ್ಲ ಸ್ವಾಮೀ ನಿನ್ನನ್ನು ತಿಳಿಸಿಕೊಡುವ ಸಾಮರ್ಥ್ಯವಿರುವವನು ನೀನೊಬ್ಬನೇ ’. ಎನ್ನುತ್ತಾ  ತಮ್ಮ ರಚನೆಯನ್ನು ಕೊನೆಯಾಗಿಸಿದರು ಕನಕದಾಸರು. ಜ್ಞಾನಿಗಳು ಅವರು. ತಮಗೆ ತಿಳಿದಿಲ್ಲವೆಂದು ಹೇಳಿ ಎಲ್ಲ ಅವನಿಗೆ ಬಿಟ್ಟು ಸುಮ್ಮನಾದರು. ಅಜ್ಞಾನಿ  ನಾನು ಅವರ ಪ್ರಶ್ನೆಗಳಿಗೆ  ವಿವರಣೆಕೊಡಲು ಪ್ರಯತ್ನಪಡುತ್ತಿದ್ದೇನೆ. ವಿಪರ್ಯಾಸವಲ್ಲವೇ ? ಇಷ್ಟುಸಾಕೆಂದು ಹೇಳುತ್ತಾ ನನ್ನ ದಡ್ಡತನವನ್ನು ಕೃಷ್ಣಾರ್ಪಣ ಎನ್ನುತ್ತೇನೆ.