Saturday, May 16, 2026

Mnava Shidhisabeku Nichcha

 ಪ್ರತಿರಾತ್ರಿ ನಿದ್ರೆಗೆ ಶರಣಾಗುವ ಮೊದಲು ಪರಮಾತ್ಮನ

ಧ್ಯಾನಮಾಡಿ, ಆದಿನದಲ್ಲಿ ನಾವು ಮಾಡಿದ ಕರ್ಮಗಳನ್ನೆಲ್ಲಾ

ಅವನಿಗೆ ಅರ್ಪಿಸಬೇಕೆನ್ನುತ್ತಾರೆ ಜ್ಞಾನಿಗಳು. ಹಾಗೆ ಅರ್ಪಿಸುವ

ಮೊದಲು ಆ ಕರ್ಮಗಳಲ್ಲಿ ಪುಣ್ಯಕಾರ್ಯಗಳೆಷ್ಟು  ಮತ್ತು

ಪಾಪಕರ್ಮಗಳೆಷ್ಟೆಂದು  ಕೊಂಚಲೆಕ್ಕಾಚಾರ ಮಾಡಿ ಎನ್ನುತ್ತಾರೆ 

ಶ್ರೀ ಪುರಂದರ ದಾಸರು. ಇಂದಿನ ನಮ್ಮ ದಾಸ ಸಾಹಿತ್ಯ ಸಿರಿಯ

ಕೊಡುಗೆ ಶ್ರೀ ಪುರಂದರ ದಾಸರ ರಚನೆ ‘ಮನವ ಶೋಧಿಸಬೇಕು

ನಿಚ್ಚ’. ನಿಚ್ಚ ಎನ್ನುವುದು ನಿತ್ಯ ಎನ್ನುವುದರ ಅಪಭ್ರಂಶ. ಕನ್ನಡ

ವ್ಯಾಕರಣದಲ್ಲಿ ತತ್ಸಮ - ತದ್ಭವ ಎಂಬ ಪದಗಳನ್ನು ಕೇಳಿದ್ದೀರಲ್ಲವೇ?

ನಿತ್ಯ ಎನ್ನುವುದು ತತ್ಸಮ, ನಿಚ್ಚ ತದ್ಭವ.  ಕೇಳಿ ಪುರಂದರ

ದಾಸರ ರಚನೆ  ‘ಮನವ ಶೋಧಿಸಬೇಕು ನಿಚ್ಚ’.  ರಾಗ ಶಿವರಂಜನಿ, 

ಮಿಶ್ರಚಾಪು ತಾಳ. ಗೀತೆಯ ಸಾಹಿತ್ಯ ಮತ್ತು ನನ್ನ ವಿವರಣೆಯ

ವಿಳಾಸ ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಲಭ್ಯವಿದೆ. 



ಮನವ ಶೋಧಿಸಬೇಕು ನಿಚ್ಚ, ಅನುದಿನವು ಮಾಡಿದ ಪಾಪ

ಪುಣ್ಯದ ವೆಚ್ಚ - ಎಷ್ಟು ಸರಳವಾದ, ಸುಂದರವಾದ,

ಅರ್ಥಪೂರ್ಣವಾದ ಸಲಹೆಯಲ್ಲವೇ ? ಗೀತೆಯ ಪಲ್ಲವಿ ಮತ್ತು

ಮೊದಲ ಚರಣ ಬಹಳ ಸರಳವಾಗಿ ಸದಾಚಾರವನ್ನು

ತಿಳಿಸಿಕೊಡುತ್ತದೆ ಜತೆಗೆ ಧರ್ಮಪರಿಪಾಲಕರಾಗಿ,

ಪರಬೊಮ್ಮನನ್ನು ಭಜಿಸುವರಾಗಿಬದುಕಿ ಎಂದಷ್ಟೇ ಹೇಳುತ್ತದೆ.

ಎರಡನೆಯ ಚರಣದ ಬಗ್ಗೆ ಕೊಂಚ ವಿವರಣೆಯ ಅಗತ್ಯವಿದೆ. 


ತನುವ ದಂಡಿಸಿ, ಮನವ ಖಂಡಿಸಿ, ಪರಮಾತ್ಮನನ್ನು ಕಾಣೋ,

ನಿನ್ನೊಳಗೆ ನೀ ಜಾಣೋ, ಮುಕ್ತಿ ಒಂದೇ ಗೇಣೋ ಎನ್ನುವ

ಎರಡನೆಯ ಚರಣದ ಸಾಲುಗಳು ಅಷ್ಟಾಂಗ ಯೋಗದ ಮೆಟ್ಟಲುಗಳು.

ಅಷ್ಟಾಂಗ ಯೋಗ ಎಂಬುದು ಯೋಗಾಭ್ಯಾಸದ  ಒಂದು ಪ್ರಕಾರ.

ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,

ಧಾರಣ, ಧ್ಯಾನ, ಸಮಾಧಿ ಇವು ಆ ಯೋಗ ಪ್ರಕಾರದ ಅಂದರೆ

ಅಷ್ಟಾಂಗ ಯೋಗದ ಎಂಟು ಅಂಗಗಳು ಅಥವಾ ಎಂಟು

ಮೆಟ್ಟಲುಗಳು. 


ಮೊದಲನೆಯ ಎರಡು, ಯಮ - ನಿಯಮ, ಜೀವನ ಶೈಲಿಗೆ

ಸಂಭಂದಿಸಿದವು. ಯಮ ಎಂದರೆ ನೀತಿಯುಕ್ತವಾದ ಮತ್ತು

ನಿಯಮ ಎನ್ನುವುದು ಶಿಸ್ತುಬದ್ಧವಾದ ಜೀವನ. ಜೀವನದಲ್ಲಿ ನೀತಿ,

ಶಿಸ್ತುಗಳಿಲ್ಲದೆ ಅದೆಷ್ಟು ಮೈಬಗ್ಗಿಸಿ, ಶ್ವಾಸ ಬಿಗಿಹಿಡಿದರೂ

ಉಪಯೋಗವಿಲ್ಲವೆಂದು ಅರ್ಥ. ಮತ್ತೆ ಮೂರು ನಾಲ್ಕನೆಯ 

ಆಸನ - ಪ್ರಾಣಾಯಾಮ, ಮೇಲೆಹೇಳಿದ ದೇಹದಂಡನೆ

ಹಾಗೂ  ಶ್ವಾಸ ನಿಯಂತ್ರಣಕ್ಕೆ ಸಂಭಂದಪಟ್ಟವು. ಐದು ಆರನೆಯ

ಪ್ರತ್ಯಾಹಾರ - ಧಾರಣ,  ಮನಸ್ಸಿನ ನಿಯಂತ್ರಣಕ್ಕೆ ಸಂಭಂದಿಸಿದವು

ಮತ್ತು ಏಳು ಎಂಟನೆಯ ಧ್ಯಾನ - ಸಮಾಧಿ  ಆತ್ಮ, ಪರಮಾತ್ಮನ

ಸಂಭಂದಕ್ಕೆ ಸೇರಿದವು. 


ಆಸನ ಪ್ರಾಣಾಯಾಮಗಳಿಂದ ‘ತನುವ ದಂಡಿಸಿ’, ಪ್ರತ್ಯಾಹಾರ

ಧಾರಣಗಳ ಮೂಲಕ ಮನಸ್ಸನ್ನು ನಿಯಂತ್ರಿಸಿ, ಧ್ಯಾನ ಸಮಾಧಿಗಳ

ಪಾಲನೆಯಿಂದ - ‘ನಿನ್ನೊಳಗೆ ನೀ ಜಾಣೋ’ ಅಂದರೆ ನಿನ್ನ

ಅಂತರಂಗದೊಳಗೆ ನೀ ಹುಡುಕಾಡಿ, ‘ಪರಮಾತ್ಮನನ್ನು ಕಾಣೋ’

ಎಂದರೆ ನಿನ್ನೊಳಗೇ ಇರುವ ಪರಮಾತ್ಮನನ್ನು ನೀ ಸಾಕ್ಷಾತ್ಕರಿಸಿಕೊಂಡರೆ,

ಅಲ್ಲಿಂದ ಮುಕ್ತಿ ಒಂದೇ ಗೇಣೋ ಅಂದರೆ ಮುಕ್ತಿಗೆ ಒಂದೇ ಹೆಜ್ಜೆ

ಎನ್ನುತ್ತಾರೆ ಪುರಂದರ ದಾಸರು.  ಮುಕ್ತಿ ಪಡೆಯುವ ದಾರಿಯಲ್ಲಿ

ಕೊನೆಯ ಹೆಜ್ಜೆ ‘ಬಿಂಬರೂಪಿಯಾದ’ ಅಂದರೆ ನಮ್ಮೊಳಗೇ ಇರುವ 

ಪರಮಾತ್ಮನ ಸಾಕ್ಷಾತ್ಕಾರ ಎನ್ನುತ್ತದೆ ಆಧ್ಯಾತ್ಮ ಶಾಸ್ತ್ರ, ಅದನ್ನು ಇಲ್ಲಿ ಸೂಚಿಸುತ್ತಿದ್ದಾರೆ ದಾಸರು. 


ನಮ್ಮಲ್ಲಿ ಸುಲಭ ಎನ್ನುವುದಕ್ಕೆ ಒಂದೇ ಗೇಣು ಎಂಬ ಶಬ್ದದ

ಉಪಯೋಗ ಸಾಮಾನ್ಯ. ಅದಲ್ಲದೆ ಇಲ್ಲಿ ಗೇಣು ಎಂಬ ಶಬ್ದಕ್ಕೆ

ಮತ್ತೊಂದು ಅರ್ಥವಿದೆ. ಹೊಕ್ಕಳಿನ ಹಿಂಭಾಗದಲ್ಲಿ ಬೆನ್ನೆಲುಬಿನ

ಕೆಳಗಿರುವ  ಮಣಿಪುರ ಚಕ್ರ ಎಂಬುದು ಮನದ ನಿಯಂತ್ರಣ

ಸ್ಥಾನ ಎನ್ನುತ್ತಾರೆ. ನಮ್ಮ ಹೃದಯದ ಕೆಳಭಾಗದ ತುದಿಯಲ್ಲಿ

ಬಿಂಬರೂಪಿ ಪರಮಾತ್ಮನ ಸ್ಥಾನ. ಹೀಗೆ ಮನದ ನಿಯಂತ್ರಣ

ಸ್ಥಾನಕ್ಕೂ, ನಾರಾಯಣನ ಸ್ಥಾನಕ್ಕೂ ಇರುವ ಅಂತರ ಸಾಧಾರಣ

ಒಂದು ಗೇಣು. ಹಾಗಾಗಿ ಮನವ ಖಂಡಿಸಿ, ನಿನ್ನೊಳಗೆ ನೀ

ಜಾಲಾಡಿದರೆ, ಒಂದು ಗೇಣಿನ ದೂರದಲ್ಲೇ ಪರಮಾತ್ಮನ ಇರುವು ಕಾಣುತ್ತದೆನ್ನುತ್ತಾರೆ ದಾಸರು. 


ಇಷ್ಟುಹೇಳಿ ಕೊನೆಯ ಚರಣದಲ್ಲಿ ಆತನ ಭಕುತರಿಗೆ ಕೇಡಿಲ್ಲ

ಎಂದರು ಮತ್ತೆ ಅವ ಪಾತಕ ಸಂಗ ಮಾಡುವನಲ್ಲ ಎಂದರು.

ಅದರ ಅರ್ಥ ಅವನು ಪಾತಕರ ಸಂಗ ಮಾಡುವವನಲ್ಲ ಆದರೆ

ಪಾತಕರಿಗೆ ಬೇಕಿದ್ದರೆ ಅವನಲ್ಲಿಗೆ ಬರಬಹುದು ಎಂದಲ್ಲ. ಅದರ

ಅರ್ಥ ಪಾತಕರಿಗೆ ಅವನ ಬಳಿ ಸ್ಥಾನವಿಲ್ಲ ಎಂದು.  

ಇದಾದನಂತರ ಪುರಂದರವಿಠಲನೇ ಗತಿ ನಮಗೆಲ್ಲ ಎಂದು

ಮತ್ತೊಮ್ಮೆ ಒತ್ತಿ ತಿಳಿಸಿ ಗೀತೆಯನ್ನು ದಾಸರು ಕೊನೆಗಾಣಿಸಿದ್ದಾರೆ

ಎನ್ನುತ್ತಾ ನನ್ನ ಈ ವಿವರಣೆ ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ. 


No comments: