Sunday, June 7, 2026

ಅನುಭವದಡುಗೆಯ ಮಾಡಿ

 ಅನುಭವದಡುಗೆಯ ಮಾಡಿ, ಅದ 

ಕ್ಕನುಭವಿಗಳು ಬಂದು ನೀವೆಲ್ಲ  ಕೂಡಿ 


ತನುವೆಂಬ ಭಾಂಡವ ತೊಳೆದು, ಕೆಟ್ಟ 

ಮನದ ಚಂಚಲವೆಂಬ ಮುಸುರೆಯ ಕಳೆದು 

ಘನವಾಗಿ ಮನೆಯನ್ನು ಬಳಿದು, ಅಲ್ಲಿ 

ಮಿನುಗುವ ತ್ರಿಗುಣದ ಒಲೆಗುಂಡನೆಡೆದು 


ವಿರಕ್ತಿಎಂಬುವ ಮಡಿಯುಟ್ಟು, ಪೂರ್ಣ 

ಹರಿಭಕ್ತಿ ಎಂಬ ನೀರನ್ನೆಸರಿಟ್ಟು 

ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ 

ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು 


ಶರಣೆಂಬೋ ಸಾಮಗ್ರಿ ಹೂಡಿ, ಮೋಕ್ಷ 

ಪರಿಕರವಾದಂಥ ಪಾಕವ ಮಾಡಿ 

ಗುರು ಶರಣರು ಸವಿದಾಡಿ ನಮ್ಮ ಪುರಂ 

ದರ ವಿಠಲನ ಬಿಡದೆ ಕೊಂಡಾಡಿ


ನಮ್ಮ ದಾಸ ಸಾಹಿತ್ಯಸಿರಿ ಸಂಚಿಕೆಗಳೊಂದರಲ್ಲಿ ಕೆಲವು ಸಮಯದ  ಹಿಂದೆ ನಾವು ಪುರಂದರ ದಾಸರ ‘ಉದರವೈರಾಗ್ಯವಿದು’ ಗೀತೆಯನ್ನು ನೋಡಿದೆವು. ಭಕ್ತಿವಿಹೀನವಾದ ಡಂಭಾಚಾರದ ಆಚರಣೆಯನ್ನು  ಅಲ್ಲಿ ಎತ್ತಿ ತೋರಿಸಿದ ದಾಸರು ತಮ್ಮ ಮತ್ತೊಂದು ಗೀತೆಯಲ್ಲಿ ನಿಜವಾದ ಆರಾಧನೆ ಎಂತಿರಬೇಕು ಎನ್ನುವುದನ್ನು ತಿಳಿಸಿದ್ದಾರೆ.

   

‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂಬ ಒಂದೇ ಸಾಲಿನಲ್ಲಿ ಪರಮಾತ್ಮನೆಂಬ ವಸ್ತುವಿನ ಅಸ್ತಿತ್ವದ ಪರಿಯನ್ನು ವಿವರಿಸಿದ್ದಾರೆ  ನಿಜಗುಣ ಶಿವಯೋಗಿಗಳು. ಯಾರ ಮನದಲ್ಲಿ ಪರಮಾತ್ಮನೆಂದರೆ ಯಾವರೀತಿಯ ಭಕ್ತಿ, ಭಾವನೆ, ಕಲ್ಪನೆಗಳು ಇರುತ್ತವೆಯೋ ಅದೇರೀತಿಯಲ್ಲಿ ಪರಮಾತ್ಮ ಅವರಿಗೆ ಕಾಣಿಸಿಕೊಳ್ಳುತ್ತಾನಂತೆ. ಹಾಗೆ ತಮ್ಮ ಕಲ್ಪನೆಗೆ ತಕ್ಕಂತೆ ಕಂಡ ಭಗವಂತನನ್ನು ನಂಬಿದವರು ತಮ ತಮಗೆ ಉಚಿತವೆನಿಸಿದ ರೀತಿಯಲ್ಲಿ ಆರಾಧಿಸಿದರು. ಆದರೆ ಪೂಜೆಯೋ, ವ್ರತವೋ, ಯಜ್ಞವೋ, ಯಾಗವೋ  ಏನೇಮಾಡಿದರೂ ಕೊನೆಗೆ ತಮ್ಮ ತಮ್ಮ ಅಂತರಂಗದ ಆರಾಧನೆಯಿಂದ ಮಾತ್ರ, ಅಂದರೆ, ಸ್ವಚಿಂತನೆ ಮತ್ತು ಸ್ವಾನುಭವದಿಂದ ಮಾತ್ರವೇ ಭಗವಂತನ ಸಾಕ್ಷಾತ್ಕಾರ ಸಾಧ್ಯವೆಂದು ಜ್ಞಾನಿಗಳು ಹೇಳಿರುತ್ತಾರೆ.  ಆ ಭಾವನೆಯನ್ನು ಶ್ರೀ ಪುರಂದರ ದಾಸರು ತಮ್ಮ ‘ಅನುಭವದಡುಗೆಯ ಮಾಡಿ’ ಗೀತೆಯಲ್ಲಿ ಸುಂದರವಾಗಿ ಮೂಡಿಸಿದ್ದಾರೆ. ಇಲ್ಲಿ ಅಡುಗೆ ಎಂದರೆ ಪರಮಾತ್ಮನ ಆರಾಧನೆ. ಆ ಪರಮಾತ್ಮ ಎಂಬ ವಸ್ತುವಿನಬಗ್ಗೆ  ನಿಮಗಿರುವ  ಅನುಭವವೇ ಆರಾಧನೆಯಾಗಲಿ ಎಂಬುದು ಒಂದು ಅರ್ಥವಾದರೆ, ಮಾಡಿದ ಅಡುಗೆ ಎಂದರೆ - ಪರಮಾತ್ಮನ ಪೂಜೆ ಎನ್ನುವುದು ಬರಿಯ   ಅಲಂಕಾರ, ಮಂಗಳಾರತಿ, ನೈವೇದ್ಯಗಳಾಗಿ ಉಳಿಯದೆ ಅದರ ಹಿಂದಿನ ತತ್ವ ನಿಮ್ಮ ಅನುಭವಕ್ಕೆ ಬರಲಿ ಎಂಬುದು ಮತ್ತೊಂದು ಅರ್ಥ. 


ತನುವೆಂಬ ಭಾಂಡವ ತೊಳೆದು, ಮನದ ಚಂಚಲವೆಂಬ ಮುಸುರೆಯ ಕಳೆದು ಎಂಬ ಸಾಲುಗಳು ಅಂತರಂಗ ಬಹಿರಂಗ ಶುದ್ಧಿಯಾಗಿ, ಮನಸ್ಸು ಸ್ಥಿರವಾಗಲಿ ಎನ್ನುವುದನ್ನು  ಸೂಚಿಸುತ್ತವೆ.  ತ್ರಿಗುಣದ  ಒಲೆಗುಂಡನೆಡೆದು ಎನ್ನುವ ಸಾಲು  ನಿಮ್ಮಲ್ಲಿರುವ ಗುಣಗಳು ಭಕ್ತಿಗೆ ಆಧಾರವಾಗಲಿ ಎನ್ನುತ್ತದೆ. ‘ವಿರಕ್ತಿಯೆಂಬ  ಮಡಿಯುಟ್ಟು’ ಎಂದರೆ  ವೈರಾಗ್ಯದ ಆವರಣ ನಮ್ಮನ್ನು ಸುತ್ತುವರೆದು, ‘ಹರಿಭಕ್ತಿ ಎಂಬನೀರನ್ನೆಸರಿಟ್ಟು’ ಎಂದರೆ ಭಕ್ತಿಯೇ ಪೂಜೆಯ ಪ್ರಮುಖ ಸಾಧನವಾಗಿ, ಜ್ಞಾನ ಪ್ರಜ್ವಲಿಸಿ, ಅಜ್ಞಾನ ಸುಟ್ಟು ಬೂದಿಯಾಗಿ, ಆತ್ಮ ಸಮರ್ಪಣೆ ಎಂಬ ಪರಿಪಕ್ವವಾದ ನೈವೇದ್ಯ ಸಿದ್ಧವಾಗಲಿ ಎಂಬುದು ಗೀತೆಯ ಒಟ್ಟು ಭಾವ. 


ಎರಡನೇ ಚರಣದಲ್ಲಿರುವ ಮಾಯಾಮರೆವೆಂದರೆ ಅಜ್ಞಾನ. ‘ಅವನಾಡಿಸಿದಂತೆ ನಾನಾಡುವವನು’ ಎಂಬ ತಿಳುವಳಿಕೆ ಇಲ್ಲದಿರುವುದು. ಮತ್ತು ಕೊನೆಯಲ್ಲಿ ಮೋಕ್ಷ ಪರಿಕರವಾದ ಪಾಕ ಎಂದರೆ ಜೀವನನ್ನು ಮೋಕ್ಷದ ದಾರಿಯಲ್ಲಿ ಕರೆದೊಯ್ಯುವಂಥ ಪಾಕ ಅಂದರೆ ಭಗವತ್ ಸಾಕ್ಷಾತ್ಕಾರ. ಅದಕ್ಕಾಗಿ  ಹಾತೊರೆಯುವ ಸಜ್ಜನರ ಸಂಗದಲ್ಲಿ ನಿಮ್ಮ ಅಡುಗೆಯನ್ನು ಸವಿಯುವುದಾಗಲಿ ಎಂದು ದಾಸರು ಬೋಧಿಸಿದ್ದಾರೆ ಎಂದು  ತಿಳಿಸುತ್ತಾ ಇಂದಿನ ಚಿಂತನೆ  ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ.