Friday, June 26, 2026

ಎರಡು ಒಂದಾಗದು ರಂಗ

 ಶ್ರೀ ಪುರಂದರದಾಸರ ಆಧ್ಯಾತ್ಮಿಕ ಚಿಂತನೆಯ ಮೇಲೆ ಅವರ  ಗುರುಗಳಾದ ವ್ಯಾಸತೀರ್ಥರ ಪ್ರಭಾವವನ್ನು, ಅಂದರೆ ಮಧ್ವ ಸಂಪ್ರದಾಯದ ಪ್ರಭಾವವನ್ನು, ಎತ್ತಿತೋರಿಸುವಂಥ ಗೀತೆಯೊಂದನ್ನು ಇಂದು ಪ್ರಚುರಪಡಿಸುತ್ತಿದ್ದೇವೆ. ಗೂಢಾರ್ಥದ ಕೃತಿಯಾದರೂ ಕೆಲವೇ ಸಾಲುಗಳಲ್ಲಿ ಆತ್ಮ, ಪರಮಾತ್ಮ, ಜನ್ಮ, ಪುನರ್ಜನ್ಮ, ಸಂಸಾರ, ಮುಕ್ತಿಗಳ ಬಗ್ಗೆ ಚೊಕ್ಕವಾಗಿ ತಿಳಿಸಿಕೊಡುವ ಸಾಹಿತ್ಯ. 


‘ಎರಡು ಒಂದಾಗದು ರಂಗ, ಎರಡೂ ಒಂದಾಗದು ಎಂದೆಂದಿಗೂ’. ಏನು ಇವೆರಡು ? ಒಂದಾಗದಿರುವುದು? ಎಂದೆಂದಿಗೂ ಎಂಬ ಒತ್ತು ಏಕೆ ?  ಒಂದಾಗದಿರುವ ಎರಡು ಯಾವುವೆಂದರೆ ಜೀವಾತ್ಮ ಮತ್ತು ಪರಮಾತ್ಮ.  ಜೀವಾತ್ಮವು ತನ್ನ ಮಾಯೆಯ ಆವರಣವನ್ನು  ಕಳಚಿಕೊಂಡು ಮುಕ್ತಿಪಡೆದಮೇಲೆ ಪರಮಾತ್ಮದೊಂದಿಗೆ ಒಂದಾಗುತ್ತದೆ  ಎನ್ನುವುದು ಅದ್ವೈತ ತತ್ವ.  ಆದರೆ, ಜೀವಾತ್ಮ ಎನ್ನುವುದು ಎಂದಿಗೂ, ಯಾವ ಪರಿಸ್ಥಿತಿಯಲ್ಲೂ  ಪರಮಾತ್ಮನೊಡನೆ ಒಂದಾಗದು  ಎನ್ನುವುದು ದ್ವೈತ ಅಥವಾ ಮಧ್ವ ಸಿದ್ಧಾಂತದ ಪ್ರತಿಪಾದನೆ. ಅದರಿಂದಲೇ ಇಲ್ಲಿ ‘ಒಂದಾಗದು ಎಂದೆಂದಿಗೂ’ ಎಂಬ ಪದಪ್ರಯೋಗ. ಸಾಮಾನ್ಯವಾಗಿ ದಾಸರು ಇಂಥ ತತ್ವಗಳ ಸಂಧಿಗ್ದದಲ್ಲಿ ಸಿಕ್ಕಿಕೊಳ್ಳುವರಲ್ಲ. ಅವರದು ಭಕ್ತಿಪಂಥ. ವೇದ, ಶಾಸ್ತ್ರ, ತತ್ವಗಳ ಗೊಂದಲ ಅವರಿಗೆ ಬೇಡ. ಆದರೆ ಅವರ ಕೆಲವು ಕೃತಿಗಳಲ್ಲಿ ತತ್ವಪ್ರತಿಪಾದನೆ ಕಾಣಬರುತ್ತದೆ. ಇದು ಅವುಗಳಲ್ಲಿ ಒಂದು. 


ಮುಂದಿನ ಚರಣದ ಮೊದಲ ಸಾಲು ‘ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೇ ಗೂಡಿನಲ್ಲಿ ಇರುತಿಹವು’.  ಈ ಜಗತ್ತು ಅಥವಾ ಸಂಸಾರವನ್ನು ದಾಸರು ‘ವೃಕ್ಷ’ ಎಂದು  ಕರೆದರು. ಈ ಜಗತ್ತೆಂಬ ವೃಕ್ಷದಲ್ಲಿ ಒಂದು ಗೂಡು, ಅದು, ನಮ್ಮ ಶರೀರವೆಂಬ ಗೂಡು. ಒಂದೇ ಗೂಡಿನಲ್ಲಿರುವ, ಎಂದರೆ, ಆ ಶರೀರದಲ್ಲಿರುವ ಎರಡು ಪಕ್ಷಿಗಳು, ಜೀವಾತ್ಮ ಮತ್ತು  ಪರಮಾತ್ಮ.  ಶ್ರೀ  ಕೃಷ್ಣಪರಮಾತ್ಮ ಸಹ ಜಗತ್ತನ್ನು ‘ವೃಕ್ಷ’ ಎಂದಿದ್ದಾನೆ. ಭಗವದ್ಗೀತೆಯ ಹದಿನೈದನೇ ಅಧ್ಯಾಯದ ಮೊದಲ ಶ್ಲೋಕ,  ‘ಊರ್ಧ್ವಮೂಲಮಧಃಶಾಖಮಶ್ವತ್ಥಮ್ ಪ್ರಾಹುರವ್ಯಯಮ್/ ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್’ ಎನ್ನುತ್ತದೆ. ಇಲ್ಲಿ ಈ ಜಗತ್ತು ಅಥವಾ ಸಂಸಾರವನ್ನು ಕೃಷ್ಣ ಅಶ್ವತ್ಥ ವೃಕ್ಷಕ್ಕೆ ಹೋಲಿಸಿದ್ದಾನೆ. ವೃಕ್ಷ  ಹೌದು, ಆದರೆ ಅದು ತಲೆಕೆಳಗಾಗಿರುವ ವೃಕ್ಷ. ಅದರ  ಬೇರು ಮೇಲೆ  - ಬೀಳಲು, ಎಲೆ, ರೆಂಬೆ, ಕೊಂಬೆಗಳು ಕೆಳಗೆ. ಇದು ಕೊಂಚ ನೆನಪಿನಲ್ಲಿರಲಿ.   ಗೀತೆಯ ಮುಂದಿನ ಸಾಲು ‘ಒಂದು ಪಕ್ಷಿ ಫಲಂಗಳನುಂಬುದು ಒಂದು ಫಲಂಗಳನುಣ್ಣದು ರಂಗ’ ಎನ್ನುತ್ತದೆ. ಶರೀರವೆಂಬ ಗೂಡಿನಲ್ಲಿರುವ ಜೀವಾತ್ಮವೆನ್ನುವ ಪಕ್ಷಿ ಕರ್ಮಮಾಡಿ ತನ್ನ  ಕರ್ಮಗಳ ಫಲವನ್ನು ತಾನು ಉಣ್ಣುವುದು. ಅದೇ ಗೂಡಿನಲ್ಲಿರುವ ಪರಮಾತ್ಮನೆನ್ನುವ ಪಕ್ಷಿಗೆ ಕರ್ಮಉಂಟು, ಫಲದ ಜಂಜಾಟವಿಲ್ಲ. ಆದ್ದರಿಂದ ಒಂದು ಫಲಂಗಳನುಣ್ಣದು


ಅಲ್ಲಿಂದ  ಮುಂದೆ,  ‘ಹಲವು ಕೊಂಬೆಗಳಿಗೆ ಒಂದು ಹಾರಿತು / ಒಂದು ಹಲವು ಕೊಂಬೆಗಳಿಗೆ  ಹಾರಲರಿಯದು’. ತಲೆಕೆಳಗಾದ ಸಂಸಾರ ವೃಕ್ಷವೆಂದೆವಲ್ಲಾ ಅದರ ಬೀಳಲು, ರೆಂಬೆ, ಕೊಂಬೆಗಳೇ ನಮ್ಮ ಸಂಸಾರ ಬಂಧನಗಳು. ಜನ್ಮ, ಪುನರ್ಜನ್ಮಗಳು. ಜೀವಾತ್ಮ ಹಲವು ಕೊಂಬೆಗಳಿಗೆ  ಅಂದರೆ ಒಂದು ಜನ್ಮದಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇರುತ್ತಾನೆ.  ಪರಮಾತ್ಮನಿಗೆ ಹೀಗೆ ಹಾರಾಡುವ  ಕಾಟವಿಲ್ಲ. ಅದು ಹಾರುವ ಅವಶ್ಯಕತೆಯಿಲ್ಲದ್ದು. ಅದರಿಂದಲೇ  ಅದು ಹಾರಲರಿಯದು.  ಮುಂದೆ ದಾಸರೆನ್ನುತ್ತಾರೆ ‘ಹಲವನೆಲ್ಲವನು ಒಂದು ಬಲ್ಲುದು / ಒಂದು ಹಲವನೆಲ್ಲವ ಅರಿಯದು ರಂಗ’. ಪರಮಾತ್ಮ ಜ್ಞಾನ ಸ್ವರೂಪ. ಅವನು ಎಲ್ಲವನ್ನೂ ಬಲ್ಲವನು. ಜೀವಾತ್ಮನೆಂಬ ಪಕ್ಷಿಗೆ ಅಲ್ಪಜ್ಞಾನ ಅಥವಾ ಜ್ಞಾನವಿಲ್ಲ. 


ಮುಂದಿನ ಚರಣ ‘ನೂರೆಂಟು ಕೊಂಬೆಗಳಿಗೆ ಹಾರಿತು / ಅದು ಹಾರಿ ಹಾರಿ ಮೇಲಕ್ಕೇರಿ ಮೀರಿತು.’  ಒಂದುವೇಳೆ ಆ ಜೀವಾತ್ಮನೆಂಬ ಪಕ್ಷಿ ತನ್ನ ಸಾಧನಾ ಶರೀರವನ್ನು ಸದುಪಯೋಗಪಡಿಸಿಕೊಂಡು ಸತ್ಕರ್ಮಗಳಲ್ಲಿ, ಸಾಧನೆಯಲ್ಲಿ ತೊಡಗಿದ್ದರೆ,  ಅದು ಕೆಳಗಿನ ಕೊಂಬೆಗಳಿಂದ ಪ್ರಾರಂಭಿಸಿ ಹಾರುತ್ತಾ ಹಾರುತ್ತಾ ಮೇಲಿನ ಕೊಂಬೆಗಳನ್ನು ಅಂದರೆ ಉತ್ತಮ ಜನ್ಮಗಳನ್ನು ಪಡೆಯುತ್ತಾ ಸಾಗುತ್ತದೆ. ಹಾಗೆಯೇ ಹಾರಿ ಹಾರಿ ಕೊಂಬೆಗಳನ್ನು ಮೀರಿ, ಅಂದರೆ ಜನ್ಮ ಪುನರ್ಜನ್ಮಗಳನ್ನು ನಿವಾರಿಸಿಕೊಂಡು, ಮೇಲಿರುವ ಬೇರನ್ನು ಅಂದರೆ ಜಗತ್ತಿಗೆ ಆಧಾರವೆನಿಸಿದ ಪರಮಾತ್ಮನನ್ನು  ತಲುಪುತ್ತದೆ. 


ಈ  ರೀತಿಯಲ್ಲಿ  ಜೀವಾತ್ಮನೆಂಬ ಪಕ್ಷಿ, ಕೊಂಬೆಗಳನ್ನೆಲ್ಲ ಮೀರಿ, ಮೇಲಕ್ಕೆ ಹಾರಿ ‘ನಿಮ್ಮನ್ನು ಸೇರಿ ಸುಖಿಯಾಗಿ  ನಿಂತಿತು ರಂಗ’ ಎನ್ನುತ್ತಾರೆ ದಾಸರು. ಹಾರಾಟವನ್ನು ಮೀರಿ ಬೇರನ್ನು ಸೇರಿ  ಬಿಡುಗಡೆ ಪಡೆಯಿತಲ್ಲಾ ಪಕ್ಷಿ, ಅದನ್ನೇ ಮುಕ್ತಿ ಅಥವಾ ಮೋಕ್ಷ ಎನ್ನುವುದು. ಅಲ್ಲಿಂದ ಮುಂದಕ್ಕೆ ಹಾರಾಟವೂ ಇಲ್ಲ, ಓಡಾಟವೂ  ಇಲ್ಲ. ಆದ್ದರಿಂದಲೇ ದಾಸರು  ‘ನಿಮ್ಮನ್ನು ಸೇರಿ ಸುಖಿಯಾಗಿ ನಿಂತಿತು ರಂಗ ಎಂದು ತಮ್ಮ ಗೀತೆಯನ್ನು ಮುಗಿಸಿದರು  ಎನ್ನುವುದನ್ನು  ತಿಳಿಸಿ ಇಂದಿನ ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 


Saturday, June 20, 2026

ಏನು ಸುಖವೊ ರಂಗ

 ಆಚಾರ್ಯ ಮಧ್ವರು ಸಂಸ್ಕೃತದಲ್ಲಿ ರಚಿಸಿದ  ‘ದ್ವಾದಶ ಸ್ತೋತ್ರಗಳು’ ಎನ್ನುವ ಹನ್ನೆರಡು ಸ್ತೋತ್ರಗಳು ಹರಿದಾಸ ಸಾಹಿತ್ಯ ಸೃಷ್ಟಿಗೆ ನಾಂದಿಹಾಡಿದವು ಎನ್ನುವುದು ಒಂದು ಅಭಿಪ್ರಾಯ. ಅನೇಕ ತಲೆಮಾರುಗಳ ನಂತರ ಅದೇ ಪೀಳಿಗೆಯಲ್ಲಿ  ಪೀಠಾಧಿಪತಿಗಳಾದ ಶ್ರೀ ವ್ಯಾಸತೀರ್ಥರು ಆ ಚಟುವಟಿಕೆಯನ್ನು ಮುಂದುವರೆಸಿ, ಕನ್ನಡದಲ್ಲಿ ಅನೇಕ ಗೀತೆಗಳನ್ನು ರಚಿಸಿ, ಹರಿದಾಸ ಸಾಹಿತ್ಯಕ್ಕೆ ಬುನಾದಿ ಹಾಕಿದರು. ಹರಿದಾಸ ಶ್ರೇಷ್ಠರಾದ  ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರಿಗೆ ಗುರುಗಳೂ ಆಗಿದ್ದ ಶ್ರೀ ವ್ಯಾಸತೀರ್ಥರ  ಒಂದು ಲಯಬದ್ಧವಾದ  ಸುಂದರ ರಚನೆಯನ್ನು ಇಂದು ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ‘ಏನು ಸುಖವೊ ರಂಗ ಎಂಥ ಸುಖವೊ’

ಈಗ ನೀವು ಕೇಳಿದ ‘ಏನು ಸುಖವೊ ರಂಗ’ ಗೀತೆಯ ರಾಗ ಭೀಮ್ ಪಲಾಸ್, ಆದಿತಾಳ.     ‘ನಿನ್ನ ಧ್ಯಾನವಮಾಳ್ಪ ಸಜ್ಜನರ ಸಂಗ ಏನುಸುಖವೋ ರಂಗ’ ಎನ್ನುತ್ತದೆ  ಗೀತೆಯ ಪಲ್ಲವಿ.  ಹರಿಸೇವೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎಂದು ಎರಡುವಿಧ. ಏಕಾಂತ ಆರಾಧನೆ ಎನ್ನುವುದು ವ್ಯಷ್ಟಿಸೇವೆ. ಇತರರ ಜತೆಗೂಡಿ ಮಾಡುವ ಸೇವೆ ಸಮಷ್ಟಿಸೇವೆ. ತಾನು ಇತರರನ್ನು ಉತ್ತೇಜಿಸಿ, ಮತ್ತು ಇತರರಿಂದ ತಾನು ಉತ್ತೇಜನಗೊಂಡು ಹರಿಸೇವೆಯಲ್ಲಿ ತೊಡಗುವುದು - ಉತ್ತಮ ದರ್ಜೆಯ ಸೇವೆ ಎನ್ನುವುದು ಒಂದು ಭಾವನೆ. ಆ ಭಾವನೆಗೆ ಒತ್ತುಕೊಡುವ  ಗೀತೆ ಇದು. 


ಕೇಳಿದ ಗೀತೆ,  ಶೃತಿ ಮತ್ತು ಲಯಬದ್ಧ ವಾಗಿದ್ದರೆ ಕಿವಿಗೆ ಇಂಪಾಗಿದ್ದು ಮನಸ್ಸಿನ ಮೇಲೆ ಅದರ  ಪರಿಣಾಮ ಇಮ್ಮಡಿಯಾಗುತ್ತದೆ. ಅದರಿಂದಲೇ  ತಾಳ ತಂಬೂರಿಗಳು ಹರಿದಾಸರ ಚಿಹ್ನೆಗಳಾದವು. ‘ತಂಬೂರಿ ಮೀಟಿ ಹಾಡುತ್ತಾ ಭಕ್ತಿಪರವಶರಾಗಿ ಕಣ್ಣಿನಿಂದ ಆನಂದಬಾಷ್ಪ ಸುರಿಸುತ್ತಾ ಕುಣಿದಾಡುವರ ಸಂಗ’ ಅದೆಂಥ ಸುಖ ಎಂದು ಉದ್ಗರಿಸುತ್ತದೆ ಮೊದಲ ಚರಣ. ಅಂಬಕ ದ್ವಯ ಎಂದರೆ ಎರಡು ಕಣ್ಣುಗಳು.  


ಹರಿದಾಸರ ಕೀರ್ತನೆಗಳು ಎಲ್ಲರ ನಾಲಗೆಯಿಂದಲೂ ಹೊರಹೊಮ್ಮಬೇಕು, ಭಕ್ತಿ ಭಾವನೆ ಹರಡಿ ಹೃದ್ಗತವಾಗಬೇಕು. ಆದ್ದರಿಂದಲೇ ಯಾರು ಏನೆಂದುಕೊಂಡಾರು ಎಂಬ ಚಿಂತೆ ಬಿಟ್ಟು, ಅರ್ಥಾತ್, ಲಜ್ಜೆ ಬಿಟ್ಟು, ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಬೀದಿ ಬೀದಿಯಲ್ಲಿ ಹಾಡುತ್ತಾ, ಕುಣಿಯುತ್ತಾ  ನಡೆದರು. ಅವರನ್ನು ಕಂಡು ‘ಗೆಜ್ಜೆ ಕಾಲಿಗೆ ಕಟ್ಟಿ ಲಜ್ಜೆ ಬಿಟ್ಟು ಹರಿನಾಮ ಭಜನೆ ಮಾಡುತ ಅಘವರ್ಜಿತ ರಾಗಿಹರ ಸಂಗ ಏನುಸುಖವೋ’ ಎಂದರು ವ್ಯಾಸತೀರ್ಥರು. ಅಘ ಎಂದರೆ ಪಾಪ. ‘ಅಘ ವರ್ಜಿತ’ ರೆಂದರೆ ತಮ್ಮ ಪಾಪಗಳನ್ನು ನಾಮ ಸಂಕೀರ್ತನೆಯ ಮೂಲಕ ದೂರಗೊಳಿಸಿದವರು.  


ನಂತರದ ಚರಣದಲ್ಲಿನ  ‘ತುಚ್ಛವಿಷಯವ ತೊರೆದು ನಿಶ್ಚಲ ಭಕುತಿಯಿಂದ’ - ಅಚ್ಯುತ ಅನಂತನ ಪಾದವ ಮೆಚ್ಚಿಸುವುದು - ಇದು  ಹರಿಭಕ್ತರೆಲ್ಲರ ಅಪೇಕ್ಷೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಸುಲಭಸಾಧ್ಯವಲ್ಲವೆಂಬುದು ಪ್ರಯತ್ನಿಸಿದವರೆಲ್ಲರೂ ತಿಳಿದಿರುವ ಸಂಗತಿ. ಹಾಗೆ ನಿಶ್ಚಲ ಭಕುತಿಯನ್ನು ಅನುಷ್ಠಾನಕ್ಕೆ ತಂದವರ ಸಂಗ ಸಿಕ್ಕಿದರೆ ? ಏನು ಸುಖವೋ ರಂಗ ಅಲ್ಲವೇ ! 

ಪೀಠಾಧಿಪತಿಗಳೆಂದರೆ ಒಂದು ಧರ್ಮದ ಅನುಯಾಯಿಗಳ ಶ್ರೇಣಿಬದ್ಧವಾದ ವ್ಯವಸ್ಥೆಯಲ್ಲಿ ಅತ್ಯುನ್ನತ  ಸ್ಥಾನ ಹೊಂದಿರುವವರು. ಅಂಥ ವ್ಯಕ್ತಿಯೊಬ್ಬರು ತಮಗಿಂತ ಕೆಳಗಿನ ಸ್ಥರದಲ್ಲಿರುವ ‘ಹರಿದಾಸರ ಸಂಗಕ್ಕೆ ಹಾತೊರೆಯುವೆ’ ಎಂದು ಸಾರುವ ಇಂಥ ಗೀತೆಯನ್ನು ರಚಿಸಿದ್ದಾರೆಂದರೆ ವ್ಯಾಸತೀರ್ಥರ ವಿಶಾಲ ಹೃದಯ ಮತ್ತು ಅವರಿಗೆ ದಾಸಪಂಥದಮೇಲಿರುವ ಅಭಿಮಾನ  ಎಷ್ಟೆಂದು ತಿಳಿದುಬರುತ್ತದೆ. 


ಜೀವನದಲ್ಲಿ ಶಿಷ್ಟರಾಗಿದ್ದುಕೊಂಡು, ಹರಿ ಸಂಕೀರ್ತನೆಯಮೂಲಕ  ಶ್ರೀ ಕೃಷ್ಣನಿಗೆ ಪ್ರಿಯರಾಗಿರುವವರ ಸಂಗವನ್ನಾಶಿಸುವ ವ್ಯಾಸರಾಯರ ಈ  ಗೀತೆಯ ಭಾವ ಎಲ್ಲರ ಮನದೊಳಗೆ ಹೊಗಲಿ, ನಾಲಗೆಗಳಲ್ಲಿ ಹರಿನಾಮ ಹರಿದಾಡುತ್ತಾ, ಆ ಮೂಲಕ  ಶ್ರೀ ಕೃಷ್ಣನಿಗೆ ಇಷ್ಟರಾಗುವ ಭಾಗ್ಯ ಎಲ್ಲರಿಗೂ ಲಭ್ಯವಾಗಲೆಂದು ಹಾರೈಸುತ್ತಾ, ಕೃಷ್ಣಾರ್ಪಣ ಎನ್ನುತ್ತೇನೆ. 


Saturday, June 13, 2026

ಮುತ್ತು ಕೊಳ್ಳಿರೋ

 ಒತ್ತಿಹೇರುವುದಲ್ಲ, ಹೊತ್ತು ಮಾರುವುದಲ್ಲ, ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ  ಎಂದು ಬಣ್ಣಿಸುತ್ತಾ ಕೃಷ್ಣನಾಮವೆಂಬ ಕಲ್ಲುಸಕ್ಕರೆ ಕೊಳ್ಳಿರೋ ಎಂದು ಹಾಡಿದರು ಪುರಂದರದಾಸರು.  ತಮ್ಮ ರಸ್ತೆಬದಿಯ ಶ್ರೋತೃಗಳನ್ನು ಆಕರ್ಷಿಸಲು ಬೇರೊಂದು ಸಾಮಗ್ರಿ ಬೇಕೆನಿಸಿದಾಗ ಅದೇ ಕೃಷ್ಣನಾಮವನ್ನು ಮುತ್ತೆಂದು ಕರೆದು ಅದರ ಗುಣಗಳನ್ನು ಬಣ್ಣಿಸಿದರು. ಮುತ್ತಾಗಲೀ, ಕಲ್ಲುಸಕ್ಕರೆಯಾಗಲೀ ಅದು ಸೂಚಿಸುವ ಪರಮಾತ್ಮನೂ ಅದರಲ್ಲಿರುವ ಪರಮಾತ್ಮನೂ ಅವನೇ ಅಲ್ಲವೇ?  ಇಂದು  ಅವನು ಮುತ್ತೇ ಆಗಿರಲಿ !  ಗೀತೆ, ‘ಮುತ್ತು ಕೊಳ್ಳಿರೋ  ಜನರು ಮುತ್ತು ಕೊಳ್ಳಿರೋ’.     

ಕಲ್ಲುಸಕ್ಕರೆಯೋ, ಪಾಯಸವೋ,  ಮುತ್ತೋ, ರತ್ನವೋ, ದಾಸರು ಸಾಮಾನ್ಯರಿಗೆ ತಿಳಿದಿರುವ  ವಸ್ತುಗಳನ್ನು ಬಣ್ಣಿಸುವ  ಮೂಲಕ ಅಸಾಮಾನ್ಯವಾದ ಒಂದು ವಸ್ತುವಿನೆಡೆಗೆ ಅವರನ್ನು ಸೆಳೆಯುವ  ಪ್ರಯತ್ನ ಮಾಡುತ್ತಾರೆ. ಮುತ್ತುಕೊಳ್ಳಿರೋ ಗೀತೆಯ ಪಲ್ಲವಿಯಲ್ಲಿ  ಸಚ್ಚಿದಾನಂದ ಸ್ವರೂಪವಾದ, ಎಂದರೆ ಸತ್ಯವಾದ, ಜ್ನಾನ - ಆನಂದ  ಸ್ವರೂಪವಾದ  ಭಗವಂತನನ್ನು, ಶ್ರೇಷ್ಠವಾದ ಮುತ್ತಿಗೆ ಹೋಲಿಸಿ, ಅದನ್ನು ಪಡೆದುಕೊಳ್ಳಿ ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 


ಮುಷ್ಟಿಯಲ್ಲಿ ಹಿಡಿಯಹೋದರೆ ಜಾರಿ ಚಲ್ಲಾಪಿಲ್ಲಿಯಾಗುವ ಮುತ್ತುಗಳನ್ನು ಪೋಣಿಸಿ ನಮ್ಮ ಹಿಡಿತಕ್ಕೆ  ತರಬೇಕಾದರೆ  ಒಂದು ದಾರದ ಅವಶ್ಯಕತೆ  ಇದೆ ಅಲ್ಲವೇ?  ಹಾಗೆಯೇ ನಮ್ಮ ಹಿಡಿತಕ್ಕೆ ಬಾರದ  ಭಗವಂತನನ್ನು ಕೊಂಚಮಟ್ಟಿಗಾದರೂ ಹಿಡಿಯುವ  ಪ್ರಯತ್ನಮಾಡಬೇಕಾದರೆ ನಮಗೆ ಜ್ಞಾನವೆಂಬ ದಾರದ ಅವಶ್ಯಕತೆಯಿದೆ. ಅದರಿಂದಲೇ ಆ ಭಗವಂತನೆಂಬ ಮುತ್ತನ್ನು ‘ಜ್ಞಾನವೆಂಬ ದಾರದಲ್ಲಿ ಪೋಣಿಸಿರುವ ದಿವ್ಯ ಮುತ್ತು’ ಎಂದರು ದಾಸರು. ಸರಿ. ಆದರೆ ಅದನ್ನು ಕೊಳ್ಳುವವರಿಗೆ ಮತ್ತೊಂದು ಅರ್ಹತೆ ಬೇಕು. ಅದನ್ನು ಮುಂದಿನ ಸಾಲಿನಲ್ಲಿ  ‘ದೀನರಾದ ಭಕ್ತಜನರು ಜ್ಞಾನದಿಂದ ಕೊಂಬುದಿದನು’ ಎಂದು ಸೂಚಿಸಿದ್ದಾರೆ ದಾಸರು. ಪರಮಾತ್ಮನನ್ನು ತಿಳಿದುಕೊಳ್ಳಲು ಬೇಕಾದ ಮುಖ್ಯ ಅರ್ಹತೆ ದೀನತೆ. ಸಂಪೂರ್ಣ ಶರಣಾಗತಿ.  ಗರ್ವಿಗಳಕೈಗೆ ಅವನು ಸಿಕ್ಕುವುದಿಲ್ಲವಂತೆ. ಒಬ್ಬನ ಗರ್ವ ಎಷ್ಟು ಹೆಚ್ಚೋ ಅಷ್ಟು ಅವನಿಂದ ದೂರ ಭಗವಂತ. 


ಮತ್ತೆ ಮುಂದಿನ ಚರಣದಲ್ಲಿ ದಾಸರೆನ್ನುತ್ತಾರೆ, ‘ಭ್ರಷ್ಟಜನಕೆ ಕಾಣಿಸದಂತ ಕೃಷ್ಣನೆಂಬೋ ಅಣಿಮುತ್ತು’. ಕಂಸ ಚಾಣೂರರ  ಎದುರಿಗೇ ಇದ್ದ ಕೃಷ್ಣ. ಅವರು ಕಂಡದ್ದು ತಮ್ಮ ಎದುರಾಳಿಯಾದ ಸೋದರಳಿಯನನ್ನು ಮಾತ್ರ. ಅಕ್ರೂರ, ವಿದುರ, ಸುಧಾಮ ಮೊದಲಾದ ಸಜ್ಜನರು ಕಂಡರು ಶ್ರೀ ಕೃಷ್ಣನೆಂಬ ಮಾನವರೂಪದಲ್ಲಿದ್ದ ಪರಮಾತ್ಮನನ್ನು. 


ಕೊನೆಯ ಚರಣದಲ್ಲಿ ದಾಸರೆನ್ನುತ್ತಾರೆ ‘ಹಿಡಿಯಲಿಕ್ಕೆ ನಿಲುಕದದು, ಕಡೆಕಾಣದೆಂದು ಬೆಲೆಯು’. ಹಿಡಿಯಹೋದರೆ ಕೈಗೆ ಸಿಗದೆ ಹಾವಿನಂತೆ ನುಣುಚಿಕೊಂಡು ಹೋಗುವ ವಸ್ತು ಪರಮಾತ್ಮ. ಅದಕ್ಕೆಂದೇ ಅವನ ಸಾವಿರ ನಾಮಗಳಲ್ಲಿ  ‘ವ್ಯಾಲ’ ಎನ್ನುವುದು ಒಂದು ನಾಮ.  ವ್ಯಾಲ ಎಂದರೆ ಸರ್ಪ.  ಮತ್ತೆ ಕೊನೆಯಲ್ಲಿ ಹೇಳಿದರು  ‘ಕಡೆಕಾಣದೆಂದು ಬೆಲೆಯು’. ಅವನಿಗೆ ಒಂದು ಬೆಲೆ ಕಟ್ಟುವುದು ಉಂಟೇ ? ‘ಅಮೇಯ’ ಎನ್ನುವುದು ಅವನ ಮತ್ತೊಂದು ನಾಮ. ಅಮೇಯ ಎಂದರೆ ಎಣಿಕೆಗೆ ಸಿಗದವನು ಎಂದು. 


ಆದರೆ ಹೀಗೆ ನುಣುಚಿಕೊಂಡು ಓಡುವ, ಬೆಲೆಕಟ್ಟಲಾಗದ ‘ಪೊಡವಿಗೊಡೆಯನೆಂಬ ದಿವ್ಯ ಮುತ್ತು’ ಭಕ್ತಿಯಿಂದ ಕೈನೀಡಿದರೆ ತಾನೆ ಬಂದು ಕೈಗೆ ಬೀಳುತ್ತದಂತೆ.  ಹಾಗಾಗಿ, ಕೈನೀಡಿ ನೋಡಿ, ಸಿಕ್ಕರೆ ಹಿಡಿದು ಕೊಳ್ಳಿರಪ್ಪಾ  ಎಂದು ಸಾರುತ್ತಾ ಮುಂದೆ ನಡೆದರು ಪುರಂದರ ದಾಸರು ಎನ್ನುವಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ. 


Sunday, June 7, 2026

ಅನುಭವದಡುಗೆಯ ಮಾಡಿ

 ಅನುಭವದಡುಗೆಯ ಮಾಡಿ, ಅದ 

ಕ್ಕನುಭವಿಗಳು ಬಂದು ನೀವೆಲ್ಲ  ಕೂಡಿ 


ತನುವೆಂಬ ಭಾಂಡವ ತೊಳೆದು, ಕೆಟ್ಟ 

ಮನದ ಚಂಚಲವೆಂಬ ಮುಸುರೆಯ ಕಳೆದು 

ಘನವಾಗಿ ಮನೆಯನ್ನು ಬಳಿದು, ಅಲ್ಲಿ 

ಮಿನುಗುವ ತ್ರಿಗುಣದ ಒಲೆಗುಂಡನೆಡೆದು 


ವಿರಕ್ತಿಎಂಬುವ ಮಡಿಯುಟ್ಟು, ಪೂರ್ಣ 

ಹರಿಭಕ್ತಿ ಎಂಬ ನೀರನ್ನೆಸರಿಟ್ಟು 

ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ 

ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು 


ಶರಣೆಂಬೋ ಸಾಮಗ್ರಿ ಹೂಡಿ, ಮೋಕ್ಷ 

ಪರಿಕರವಾದಂಥ ಪಾಕವ ಮಾಡಿ 

ಗುರು ಶರಣರು ಸವಿದಾಡಿ ನಮ್ಮ ಪುರಂ 

ದರ ವಿಠಲನ ಬಿಡದೆ ಕೊಂಡಾಡಿ


ನಮ್ಮ ದಾಸ ಸಾಹಿತ್ಯಸಿರಿ ಸಂಚಿಕೆಗಳೊಂದರಲ್ಲಿ ಕೆಲವು ಸಮಯದ  ಹಿಂದೆ ನಾವು ಪುರಂದರ ದಾಸರ ‘ಉದರವೈರಾಗ್ಯವಿದು’ ಗೀತೆಯನ್ನು ನೋಡಿದೆವು. ಭಕ್ತಿವಿಹೀನವಾದ ಡಂಭಾಚಾರದ ಆಚರಣೆಯನ್ನು  ಅಲ್ಲಿ ಎತ್ತಿ ತೋರಿಸಿದ ದಾಸರು ತಮ್ಮ ಮತ್ತೊಂದು ಗೀತೆಯಲ್ಲಿ ನಿಜವಾದ ಆರಾಧನೆ ಎಂತಿರಬೇಕು ಎನ್ನುವುದನ್ನು ತಿಳಿಸಿದ್ದಾರೆ.

   

‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂಬ ಒಂದೇ ಸಾಲಿನಲ್ಲಿ ಪರಮಾತ್ಮನೆಂಬ ವಸ್ತುವಿನ ಅಸ್ತಿತ್ವದ ಪರಿಯನ್ನು ವಿವರಿಸಿದ್ದಾರೆ  ನಿಜಗುಣ ಶಿವಯೋಗಿಗಳು. ಯಾರ ಮನದಲ್ಲಿ ಪರಮಾತ್ಮನೆಂದರೆ ಯಾವರೀತಿಯ ಭಕ್ತಿ, ಭಾವನೆ, ಕಲ್ಪನೆಗಳು ಇರುತ್ತವೆಯೋ ಅದೇರೀತಿಯಲ್ಲಿ ಪರಮಾತ್ಮ ಅವರಿಗೆ ಕಾಣಿಸಿಕೊಳ್ಳುತ್ತಾನಂತೆ. ಹಾಗೆ ತಮ್ಮ ಕಲ್ಪನೆಗೆ ತಕ್ಕಂತೆ ಕಂಡ ಭಗವಂತನನ್ನು ನಂಬಿದವರು ತಮ ತಮಗೆ ಉಚಿತವೆನಿಸಿದ ರೀತಿಯಲ್ಲಿ ಆರಾಧಿಸಿದರು. ಆದರೆ ಪೂಜೆಯೋ, ವ್ರತವೋ, ಯಜ್ಞವೋ, ಯಾಗವೋ  ಏನೇಮಾಡಿದರೂ ಕೊನೆಗೆ ತಮ್ಮ ತಮ್ಮ ಅಂತರಂಗದ ಆರಾಧನೆಯಿಂದ ಮಾತ್ರ, ಅಂದರೆ, ಸ್ವಚಿಂತನೆ ಮತ್ತು ಸ್ವಾನುಭವದಿಂದ ಮಾತ್ರವೇ ಭಗವಂತನ ಸಾಕ್ಷಾತ್ಕಾರ ಸಾಧ್ಯವೆಂದು ಜ್ಞಾನಿಗಳು ಹೇಳಿರುತ್ತಾರೆ.  ಆ ಭಾವನೆಯನ್ನು ಶ್ರೀ ಪುರಂದರ ದಾಸರು ತಮ್ಮ ‘ಅನುಭವದಡುಗೆಯ ಮಾಡಿ’ ಗೀತೆಯಲ್ಲಿ ಸುಂದರವಾಗಿ ಮೂಡಿಸಿದ್ದಾರೆ. ಇಲ್ಲಿ ಅಡುಗೆ ಎಂದರೆ ಪರಮಾತ್ಮನ ಆರಾಧನೆ. ಆ ಪರಮಾತ್ಮ ಎಂಬ ವಸ್ತುವಿನಬಗ್ಗೆ  ನಿಮಗಿರುವ  ಅನುಭವವೇ ಆರಾಧನೆಯಾಗಲಿ ಎಂಬುದು ಒಂದು ಅರ್ಥವಾದರೆ, ಮಾಡಿದ ಅಡುಗೆ ಎಂದರೆ - ಪರಮಾತ್ಮನ ಪೂಜೆ ಎನ್ನುವುದು ಬರಿಯ   ಅಲಂಕಾರ, ಮಂಗಳಾರತಿ, ನೈವೇದ್ಯಗಳಾಗಿ ಉಳಿಯದೆ ಅದರ ಹಿಂದಿನ ತತ್ವ ನಿಮ್ಮ ಅನುಭವಕ್ಕೆ ಬರಲಿ ಎಂಬುದು ಮತ್ತೊಂದು ಅರ್ಥ. 


ತನುವೆಂಬ ಭಾಂಡವ ತೊಳೆದು, ಮನದ ಚಂಚಲವೆಂಬ ಮುಸುರೆಯ ಕಳೆದು ಎಂಬ ಸಾಲುಗಳು ಅಂತರಂಗ ಬಹಿರಂಗ ಶುದ್ಧಿಯಾಗಿ, ಮನಸ್ಸು ಸ್ಥಿರವಾಗಲಿ ಎನ್ನುವುದನ್ನು  ಸೂಚಿಸುತ್ತವೆ.  ತ್ರಿಗುಣದ  ಒಲೆಗುಂಡನೆಡೆದು ಎನ್ನುವ ಸಾಲು  ನಿಮ್ಮಲ್ಲಿರುವ ಗುಣಗಳು ಭಕ್ತಿಗೆ ಆಧಾರವಾಗಲಿ ಎನ್ನುತ್ತದೆ. ‘ವಿರಕ್ತಿಯೆಂಬ  ಮಡಿಯುಟ್ಟು’ ಎಂದರೆ  ವೈರಾಗ್ಯದ ಆವರಣ ನಮ್ಮನ್ನು ಸುತ್ತುವರೆದು, ‘ಹರಿಭಕ್ತಿ ಎಂಬನೀರನ್ನೆಸರಿಟ್ಟು’ ಎಂದರೆ ಭಕ್ತಿಯೇ ಪೂಜೆಯ ಪ್ರಮುಖ ಸಾಧನವಾಗಿ, ಜ್ಞಾನ ಪ್ರಜ್ವಲಿಸಿ, ಅಜ್ಞಾನ ಸುಟ್ಟು ಬೂದಿಯಾಗಿ, ಆತ್ಮ ಸಮರ್ಪಣೆ ಎಂಬ ಪರಿಪಕ್ವವಾದ ನೈವೇದ್ಯ ಸಿದ್ಧವಾಗಲಿ ಎಂಬುದು ಗೀತೆಯ ಒಟ್ಟು ಭಾವ. 


ಎರಡನೇ ಚರಣದಲ್ಲಿರುವ ಮಾಯಾಮರೆವೆಂದರೆ ಅಜ್ಞಾನ. ‘ಅವನಾಡಿಸಿದಂತೆ ನಾನಾಡುವವನು’ ಎಂಬ ತಿಳುವಳಿಕೆ ಇಲ್ಲದಿರುವುದು. ಮತ್ತು ಕೊನೆಯಲ್ಲಿ ಮೋಕ್ಷ ಪರಿಕರವಾದ ಪಾಕ ಎಂದರೆ ಜೀವನನ್ನು ಮೋಕ್ಷದ ದಾರಿಯಲ್ಲಿ ಕರೆದೊಯ್ಯುವಂಥ ಪಾಕ ಅಂದರೆ ಭಗವತ್ ಸಾಕ್ಷಾತ್ಕಾರ. ಅದಕ್ಕಾಗಿ  ಹಾತೊರೆಯುವ ಸಜ್ಜನರ ಸಂಗದಲ್ಲಿ ನಿಮ್ಮ ಅಡುಗೆಯನ್ನು ಸವಿಯುವುದಾಗಲಿ ಎಂದು ದಾಸರು ಬೋಧಿಸಿದ್ದಾರೆ ಎಂದು  ತಿಳಿಸುತ್ತಾ ಇಂದಿನ ಚಿಂತನೆ  ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ.