Saturday, July 18, 2026

ಏನುಮಾಡಿದರೇನು ಹಿಂದಿನ ಕರ್ಮಫಲ

ಶ್ರವಣ, ಕೀರ್ತನ, ಸ್ಮರಣ ಮೊದಲಾಗಿ ಪ್ರಾರಂಭವಾಗುವ  ನವವಿಧ

ಭಕ್ತಿಯಲ್ಲಿ ಕೊನೆಯ ಮೆಟ್ಟಲು ಆತ್ಮ ನಿವೇದನ. ತನ್ನನ್ನು ತಾನು

ಪರಮಾತ್ಮನಿಗೆ ಸಮರ್ಪಿಸುವುದು.  ಅದಕ್ಕೆ ಮುಂಚಿನ ಮೆಟ್ಟಲು 

‘ಸಖ್ಯ’. ಭಗವಂತನನ್ನು ಸಖನಾಗಿ ಕಾಣುವುದು. ಇದು ಅರ್ಜುನ -

ಶ್ರೀಕೃಷ್ಣರ ಸಂಬಂಧದಂತೆ. ಈ ಸ್ಥಿತಿಯಲ್ಲಿ ಭಗವಂತನ ಬಗ್ಗೆ

ತಿಳುವಳಿಕೆಯುಂಟು, ಗೌರವ, ಭಕ್ತಿಯುಂಟು ಆದರೆ ಅದರೊಂದಿಗೆ,

ಗೆಳೆಯನಂತೆ ಸಲಿಗೆಯೂ ಉಂಟು. ಇಂದು ನಾವು ಪ್ರಸ್ತುತಪಡಿಸುತ್ತಿರುವ

ಕೃತಿಯಲ್ಲಿ ಭಗವಂತನೊಡನೆ ಸಖ್ಯನಂತೆ ಸಂಭಾಷಣೆ ನಡೆಸಿದ್ದಾರೆ

ಶ್ರೀ ಪುರಂದರ ದಾಸರು.


‘ಏನುಮಾಡಿದರೇನು ಹಿಂದಿನ ಕರ್ಮಫಲ, ತಾನು ಮಾಡಿದ ಕರ್ಮ

ತನಗಲ್ಲದೆ’ ಎಂದು ದಾಸರು ಕೀರ್ತನೆಯನ್ನು ಪ್ರಾರಂಭಿಸಿದ್ದಾರೆ. 

ನೀವು ಯಾವ ಯಾವ ಪ್ರಾರ್ಥನೆ, ಪೂಜೆ, ವ್ರತ, ಜಪ, ತಪಗಳನ್ನೆಲ್ಲಾ

ಮಾಡಿ ಪುಣ್ಯ ಸಂಪಾದನೆ ಮಾಡಿಕೊಂಡರೂ ಹಿಂದಿನ

ಕರ್ಮಫಲವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕರ್ಮವನ್ನು

ನೀವು ಅನುಭವಿಸಿಯೇ ಸಿದ್ಧ ಎಂದು ನಮಗೆ ಅರ್ಥಮಾಡಿಸುವ

ಪ್ರಯತ್ನದಲ್ಲಿ ದಾಸರು ಕರ್ಮಫಲ ಸಂಚಯನೆಯೇ  ಇಲ್ಲದ

ಪರಮಾತ್ಮನನ್ನೂ ಎಳೆದು ತಂದಿದ್ದಾರೆ. ಒಬ್ಬ ಸ್ನೇಹಿತನೊಡನೆ

ಲಘುಹಾಸ್ಯದಿಂದ ಮಾತನಾಡುವ ರೀತಿಯಲ್ಲಿ ನಿನ್ನ ಅವತಾರಗಳೆಲ್ಲಾ

ನಿನ್ನ ಕರ್ಮಫಲವಯ್ಯಾ ಎಂದು ಭಗವಂತನಿಗೆ ಹೇಳುತ್ತಿದ್ದಾರೆ. 


ಮೊದಲ ಚರಣದ ಒಂದೊಂದು ಸಾಲಿನಲ್ಲಿ ಮತ್ಸ್ಯ , ಕೂರ್ಮ,

ವರಾಹ, ನರಸಿಂಹ ರೂಪಗಳನ್ನು ಸ್ಮರಿಸಿರುವ ದಾಸರು  ಸಾಮಾನ್ಯವಾಗಿ

ಚಾಲ್ತಿಯಲ್ಲಿರುವ ನರಸಿಂಹನ ಕೋರೆಹಲ್ಲಿನ ಉಗ್ರರೂಪದವನ್ನು 

‘ಪರರಿಗೆ ಬಾಯ್ದೆರೆದು  ಪಲ್ಕಿರಿದರಿಲ್ಲ’ ಎಂದು ಬಣ್ಣಿಸಿ ಇತರರಿಗೆ

ಹಲ್ಲು ಕಾಣಿಸುವಂತೆ  ಬಾಯಿಬಿಟ್ಟು ಹಲ್ಲುಕಿರಿದರೂ ಕರ್ಮ

ಕಳೆಯಲಿಲ್ಲ ಎಂದು ಹಾಸ್ಯಮಾಡಿದ್ದಾರೆ. 


ಮುಂದಿನ ಚರಣ ವಾಮನ, ಪರಶುರಾಮ, ರಾಮ, ಕೃಷ್ಣಾವತಾರಗಳನ್ನು

ಸೂಚಿಸುತ್ತದೆ. ದೇಹವನ್ನು ಹ್ರಸ್ವಮಾಡಿ ಎಂದರೆ ದೇಹವನ್ನು ಕುಗ್ಗಿಸಿ

ಎಂದು. ಇದು ವಾಮನಾವತಾರದ ಯಾಚಕ ರೂಪದ ವರ್ಣನೆ. ಮುಂದೆ

ಪರಶುರಾಮನನ್ನು ದಾಸರು ಕುಲಗೇಡಿ ಎಂದಿದ್ದಾರೆ. ಇಂಥ ರಚನೆ

ಅಥವಾ ವರ್ಣನೆಗೆ ನಿಂದನಾ ಸ್ತುತಿ ಎಂದು ಹೆಸರು. ಇದು

ಭಗವಂತನ ಅವತಾರಗಳ ಭಕ್ತಿಪೂರ್ವಕ ಸ್ಮರಣೆ.  ಆದರೆ ಅವನನ್ನು 

ನಿಂದಿಸುವಂಥ ಸಂಬೋಧನೆ. ಪರಶುರಾಮ ಬ್ರಾಹ್ಮಣನಾಗಿ ಜನಿಸಿ,

ತನ್ನ ವರ್ಣಕ್ಕೆ ವಿರುದ್ಧವಾಗಿ ಕ್ಷತ್ರಿಯರೊಡನೆ ಯುದ್ಧದಲ್ಲಿ ತೊಡಗಿದನಲ್ಲ, 

ಅದರಿಂದ ಅವನನ್ನು  ‘ಕುಲಗೇಡಿ’ ಎಂದರು ದಾಸರು. ಇದ್ದದ್ದನ್ನು

ಇದ್ದಂತೆ ನೇರವಾಗಿ ಹೇಳಿಬಿಡುವ ದಾಸರಿಗೆ ಯಾರ ಮುಲಾಜೂ ಇಲ್ಲ. 


ಕೊನೆಯ ಚರಣದಲ್ಲಿರುವ ‘ಧೀರತನವನು ಬಿಟ್ಟು ದಿಗಂಬರನಾದರೂ ಇಲ್ಲ’

ಎಂಬ ಸಾಲು ಬುದ್ಧಾವತಾರಕ್ಕೆ ಸಂಭಂದ ಪಟ್ಟದ್ದು.  ಬುದ್ಧಾವತಾರ,

ಕೊಂಚ ವಿವಾದಾತ್ಮಕವಾದದ್ದು. ಅದು ವಿಷ್ಣುವಿನ ಅವತಾರವೇ

ಅಲ್ಲವೆಂದು ವಾದಿಸುವ  ಕೆಲವರು  ಅವತಾರಗಳ ಪಟ್ಟಿಯಿಂದ

ಬುದ್ಧಾವತಾರವನ್ನು ಕೈಬಿಟ್ಟಿರುವುದೂ ಉಂಟು. ಆದರೆ ಶ್ರೀ

ವಾದಿರಾಜಸ್ವಾಮಿಗಳು ತಮ್ಮ ದಶಾವತಾರ ಸ್ತುತಿಯಲ್ಲಿ ಬುದ್ಧನನ್ನು

ಸೇರಿಸಿಯೇ ಸ್ತುತಿಸಿರುವುದರಿಂದ ಅದರ ಬಗ್ಗೆ ವಿವಾದಕ್ಕೆ ಎಡೆಯೇ 

ಇಲ್ಲ. ವಿವಾದಕ್ಕೆ ಎಡೆಯಿಲ್ಲವಾದರೂ, ವಿವರಣೆಗೆ ಎಡೆಯುಂಟು,

ಆದರೆ ಇಲ್ಲಿ ಅದು ಪ್ರಸ್ತುತವಲ್ಲವಾದ್ದರಿಂದ ಅದನ್ನು  ಮುಂದೆಲ್ಲಾದರೂ

ಅವಕಾಶಬಂದಾಗ ನೋಡೋಣ. 


ಯಾರುಬಲ್ಲರಯ್ಯಾ ವಿಧಿಯಾಟವನ್ನು ?  ಎನ್ನುತ್ತಾ  ‘ನಿನ್ನನ್ನೂ 

ಆ ವಿಧಿ ಸುಮ್ಮನೆ ಬಿಡಲಿಲ್ಲವಲ್ಲಾ’ ಎಂದು ವಿಧಿನಿಯಾಮಕನಾದ

ಪುರಂದರ ವಿಠಲನಿಗೇ ಹಾಸ್ಯಪೂರ್ವಕವಾದ ಪ್ರಶ್ನೆಹಾಕಿ, 

ಧಾರುಣಿಯಲ್ಲಿ ಅಪ್ರತಿಮನೆಂದು ಅವನನ್ನು ಸ್ತುತಿಸುತ್ತಾ ತಮ್ಮ

ರಚನೆಯನ್ನು ದಾಸರು ಕೊನೆಗಾಣಿಸಿದರೆಂದು ತಿಳಿಸಿ  ನನ್ನ

ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 

Saturday, July 11, 2026

ಕರ್ಮ ಬಂಧನ ಛೇದನ

 ನಮ್ಮ ದಾಸಸಾಹಿತ್ಯ ಸಿರಿ ಮಾಲಿಕೆಯ ಹತ್ತೊಂಭತ್ತನಯ  ಗೀತೆ, ಭಗವಂತನ ಉಪಾಸನೆಯನ್ನು ಅತ್ಯಂತ ಸುಲಭವಾಗಿಸುವ ಶ್ರೀ ಪುರಂದರದಾಸರ ರಚನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ‘ಭಕ್ತಿಯಿಂದ ನೀನೇನು ಕೊಟ್ಟರೂ ಸ್ವೀಕರಿಸಿ ಸಂತೃಪ್ತನಾಗುತ್ತೇನೆ’. ಇಲ್ಲಿ ದಾಸರು  ಹೇಳುತ್ತಾರೆ ‘ಭಕ್ತಿಯಿಂದ ಅವನನ್ನು ನೆನೆದರೆ ಸಾಕು ಅವನು ಸಂತೃಪ್ತನಾಗುತ್ತಾನೆ’.


ಕರ್ಮ ಬಂಧನ ಛೇದನ ರಘು 

ರಾಮನ ನಾಮ ನೀ ನೆನೆ ಮನವೇ 


ಮಂತ್ರವನರಿಯೆನು ತಂತ್ರವನರಿಯೆ ಜಗ 

ದಂತ್ರವನರಿಯೆನೆಂದೆನಬೇಡ 

ತಂತ್ರ ಸ್ವತಂತ್ರನ ಪರಮ ಪವಿತ್ರನ 

ಅಂತರಂಗದಿ ನೀ ನೆನೆಮನವೇ 


ಕಲಿಯುಗದೊಳು ಹರಿನಾಮವ ನೆನೆದರೆ 

ಕುಲಕೋಟಿಗಳು ಉದ್ಧರಿಸುವುವು 

ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ 

ಜಲಜನಾಭನ ನೀ ನೆನೆ ಮನವೇ 


ವದನದಿ ನಾರಾಯಣನೆಂಬ ನಾಮವು 

ಮುದದಿಂದಲಿ ನೆನೆ  ಬಿಡಬೇಡ 

ಪದುಮನಾಭ ಶ್ರೀ ಪುರಂದರ ವಿಠಲನ 

ಸದಾಕಾಲದಿ ನೀ ನೆನೆ ಮನವೇ


‘ಕರ್ಮ ಬಂಧನ ಛೇದನ’ ಎಂದು ತಮ್ಮ ರಚನೆಯನ್ನು ದಾಸರು ಪ್ರಾರಂಭಿಸಿದ್ದಾರೆ. ಈ ಕರ್ಮಬಂಧನವನ್ನು  ಛೇದ ಮಾಡುವುದು  ಭಗವಂತನ ಗುರುತರವಾದ ಕಾರ್ಯಗಳಲ್ಲಿ ಒಂದು. ಒಂದು ಜೀವ ಏನೆಲ್ಲಾ ಪುಣ್ಯಕಾರ್ಯಗಳನ್ನು ಮಾಡಿ, ಉತ್ತಮ ಜನ್ಮಗಳನ್ನು ಪಡೆದು, ಮುಕ್ತಿಯೋಗ್ಯವಾಗಿ ಮೋಕ್ಷದ  ಹೊಸ್ತಿಲಲ್ಲಿ ಬಂದು ನಿಂತರೂ ಅದಕ್ಕೆ ಮೋಕ್ಷ ಖಚಿತವಲ್ಲ. ನಮ್ಮ ತತ್ವದ ಪ್ರಕಾರ  ಮುಕ್ತಿಯೋಗ್ಯವಾದ ಕಾರ್ಯ ಮಾಡಿದೆನೆಂದು ಹಕ್ಕಿನಿಂದ ಮೋಕ್ಷವನ್ನು ಪಡೆಯಲಾಗದು. ಅದು ಭಗವಂತನ ವಿವೇಚನೆಗೆ ಬಿಟ್ಟದ್ದು, ಅವನ ಕೃಪೆ. ಅವನಿಗೆ ಒಪ್ಪಿಗೆಯಾದರೆ ಅವನು ಕರ್ಮಾ ಬಂಧನವನ್ನು ಛೇದಿಸಿ ಮೋಕ್ಷ  ಪ್ರಧಾನಮಾಡುತ್ತಾನೆ. ಆದ್ದರಿಂದಲೇ ದಾಸರು ಇಲ್ಲಿ ರಾಮನನ್ನು  ‘ಕರ್ಮ ಬಂಧನ ಛೇದನ’ ಎಂದರು. 

ಮುಂದಿನ ಚರಣಗಳೆಲ್ಲಾ ಬಹಳವೇ ಸರಳ. ಮೊದಲ ಚರಣದಲ್ಲಿ ಬರುವ ‘ಜಗದಂತ್ರ’ ಎಂದರೆ ಜಗತ್ತಿನ ಅಂತರಂಗ.  ಮುಂದೆ ಬರುವ ‘ತಂತ್ರ ಸ್ವತಂತ್ರ’ ಎಂದರೆ ಭಗವಂತ ಯಾವುದೇ ತಂತ್ರ ಅಥವಾ ಯುಕ್ತಿಗೆ ಬಲಿಯಾಗುವವನಲ್ಲ ಎಂದು. ಅವನು ಸಿಕ್ಕಬೇಕಾದರೆ ಅದು ಅಂತರಂಗದ ಆರಾಧನೆಯಿಂದ ಮಾತ್ರ.  ಎನ್ನುತ್ತಾರೆ ದಾಸರು. 


ಕಲಿಯುಗ, ಭಗವದಾರಾಧನೆಯನ್ನು ಅತ್ಯಂತ ಸುಲಭವಾಗಿಸಿದೆ. ಹಿಂದಿನ ಯುಗಗಳಲ್ಲಿ ಪರಮಾತ್ಮನನ್ನು ಒಲಿಸಿಕೊಳ್ಳಲು ತಪಸ್ಸು, ಯಜ್ಞ, ಯಾಗಗಳ ಮೂಲಕ ಅವನನ್ನು ಆರಾಧಿಸಬೇಕಿತ್ತು.  ಆದರೆ ನಿಷ್ಠೆ, ನಂಬಿಕೆಗಳು ಇಳಿಮುಖವಾಗಿರುವ ಕಲಿಯುಗದಲ್ಲಿ ಅವನು ಅದು ಯಾವುದನ್ನೂ ಆಶಿಸುವುದಿಲ್ಲ. ಈಗ ಅವನು ‘ಸುಲಲಿತ ಭಕ್ತಿಗೆ ಸುಲಭ’. ಅವನ ನಾಮಸ್ಮರಣೆಯಷ್ಟೇ ಸಾಕು. 


ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಎಂದರಲ್ಲವೇ ದಾಸರು. ಅದನ್ನೇ ಈಗ ಅವರು ಮತ್ತೆ ಹೇಳುತ್ತಿರುವುದು. ‘ವದನದಿ ನಾರಾಯಣನೆಂಬ ನಾಮವಿರಲಿ, ಪದುಮನಾಭನ ನೆನಪು ಸದಾ ಇರಲಿ’ ಅಷ್ಟುಸಾಕು  ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ ಎಂದು ತಿಳಿಸಿ ಇಂದಿನ ಕೊಡುಗೆಯನ್ನು ಕೃಷ್ಣಾರ್ಪಣಗೊಳಿಸುತ್ತೇನೆ. 


Saturday, July 4, 2026

ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ

 ತಾವು ಸಂಪೂರ್ಣವಾಗಿ ನಂಬಿರುವ, ನಿರಂತರವಾಗಿ ಆರಾಧಿಸುವ,  ಪರಮಾತ್ಮ ಎಂಬ ಪರವಸ್ತುವಿನ ಬಗ್ಗೆ ಸತತ ಚಿಂತನೆ ಮತ್ತು ಅದನ್ನು ಮತ್ತಷ್ಟು ಅರಿತುಕೊಳ್ಳುವ ಪ್ರಯತ್ನ,  - ಇದು - ನಾವು ಜ್ಞಾನಿಗಳೆಂದು ಕರೆಯುವ ಎಲ್ಲರ ಅನೂಚಾನವಾದ ಕಾರ್ಯ.  ಆ ಪರವಸ್ತುವಿನ ಬಗ್ಗೆ ಹೆಚ್ಚು ಚಿಂತಿಸಿದಷ್ಟೂ ಅದು ಮತ್ತಷ್ಟು ಚಿಂತನೆಗೆ ಎಡೆಮಾಡುತ್ತದೆ. ಕೊನೆಯಾಗದ ಚಿಂತನೆ. ಪ್ರಶ್ನೆಗಳ ಸರಪಳಿ. ಅಂಥ ಸಂಧರ್ಭಗಳಲ್ಲಿ ಮನಸ್ಸಿನಲ್ಲಿ ಮೂಡುವುದು  ‘ನಾ ನಿನ್ನ ಅರಿಯಲಾರೆ ಸ್ವಾಮಿ’ ಎಂಬ ಶರಣಾಗತಿಯ ಭಾವ. ಆ ಭಾವನೆಯನ್ನು ಬಿಂಬಿಸುವ ಕನಕದಾಸರ ಕೃತಿಯೊಂದನ್ನು ಇಂದು ಪ್ರಸ್ತುತ ಪಡಿಸುತ್ತಿದ್ದೇವೆ. ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’. 

ತತ್ವಶಾಸ್ತ್ರದಲ್ಲಿ ಮಾಯೆ ಎಂಬ ಪದಕ್ಕೆ  ಜಗತ್ತು, ಪ್ರಕೃತಿ, ಸಂಸಾರ, ಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿ, ಅಜ್ಞಾನ ಮುಂತಾದ  ಅನೇಕ ಅರ್ಥಗಳಿವೆ. ಮಾಯೆ ಈ ಜಗತ್ತಿನ ಸೃಷ್ಟಿಗೆ ಪರಮಾತ್ಮ ಉಪಯೋಗಿಸಿರುವ ಮೂಲ ವಸ್ತು.  ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ತಾನು ಅಣುವಾಗಿ ಜಗತ್ತಿನ ಕಣಕಣದಲ್ಲಿ ತೂರಿರುವವನೂ ಹೌದು, ಬೃಹತ್ತಾಗಿ ಇಡೀ ಜಗತ್ತನ್ನು ಆವರಿಸಿರುವವನೂ ಹೌದು. ಹಾಗಾಗಿ ಕನಕದಾಸರ ಗೀತೆಯ ಪಲ್ಲವಿ ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’ ಎನ್ನುವುದು ಒಂದು ಪ್ರಶ್ನೆಯಂತೆ ಕಂಡರೂ ಅದು ಪ್ರಶ್ನೆಯಲ್ಲ, ಅದೊಂದು ಹೇಳಿಕೆ. ನಂತರದ ಸಾಲುಗಳು  ಕೂಡ ಹಾಗೆಯೇ. ಪರಮಾತ್ಮ ದೇಹವನ್ನು ಒಳಗಿನಿಂದ ಧರಿಸಿ, ಹೊರಗಿನಿಂದ ಆವರಿಸಿದ್ದಾನೆ. ಆದ್ದರಿಂದಲೇ ದಾಸರು ಮುಂದೆ  ‘ನೀ ದೇಹದೊಳಗೋ ನಿನ್ನೊಳು ದೇಹವೋ’ ಎಂದಿದ್ದಾರೆ. 


ಇದೇ ಭಾವನೆಯನ್ನು ಮುಂದುವರಿಸುತ್ತ ಮುಂದಿನ ಚರಣಗಳಲ್ಲಿ, ನಾವು ನೋಡಿ, ಕೇಳಿ, ಅನುಭವಿಸಿರುವ ರೂಪಕಗಳ  ಮೂಲಕ ದಾಸರು ನಮಗೆ ತಮ್ಮ ಚಿಂತನೆಯನ್ನು ವಿಶದಪಡಿಸುತ್ತಾರೆ.  ‘ಬಯಲು ಆಲಯದೊಳಗೋ ಆಲಯವು ಬಯಲೊಳಗೋ’ ಸಾಲನ್ನು ನೋಡಿ. ಬಯಲು ಎನ್ನುವ ಶಬ್ದಕ್ಕೆ, ಭೂಮಿ ಮತ್ತು ಆಕಾಶ ಎಂಬ ಎರಡೂ ಅರ್ಥವಿದೆ. ಆಲಯ ಬಯಲೊಳಗೆ ಎಂದರೆ ಮನಸ್ಸಿನಲ್ಲಿ ಒಂದು  ಸ್ಪಷ್ಟ ಚಿತ್ರ ತಕ್ಷಣ ಮೂಡುತ್ತದೆ. ಬಯಲು ಆಲಯದೊಳಗೆ ಎಂದರೆ ?  ಈಗ ಬಯಲು ಎಂದರೆ ಆಕಾಶ ಅಥವಾ ಇಂಗ್ಲಿಷ್ ನಲ್ಲಿ ನಾವು ಕರೆಯುವ ಸ್ಪೇಸ್ ಎಂದು ಚಿಂತಿಸೋಣ. ಆ ಬಯಲು ಅಥವಾ ಸ್ಪೇಸ್  ಎನ್ನುವುದು ಆಲಯವನ್ನು ಆವರಿಸಿಕೊಂಡಿದೆ. ಅಷ್ಟೇ ಅಲ್ಲ,  ಆಲಯದ ಒಳಗೆ ನಾವು ಖಾಲಿಜಾಗವೆಂದು ಕರೆಯುತ್ತೇವಲ್ಲ ಅಲ್ಲಿಯೂ ತುಂಬಿಕೊಂಡಿದೆ ಅಲ್ಲವೇ ? ಆದ್ದರಿಂದ ಬಯಲು ಆಲಯದೊಳಗೂ ಹೌದು, ಆಲಯ ಬಯಲೊಳಗೂ ಹೌದು.  ಈ ಒಳಗೆ, ಹೊರಗೆ, ಆಲಯ, ಬಯಲು ಎಲ್ಲವೂ ಅವನ್ನು ಕಾಣುವ ಕಣ್ಣು ಎಂಬ ಇಂದ್ರಿಯ ಇದ್ದು ಆ ಇಂದ್ರಿಯಕ್ಕೆ ಅನುಭವಿಸುವ ಶಕ್ತಿ ಇದ್ದರೆ ತಾನೇ ? ಆದ್ದರಿಂದ ನಂತರದಲ್ಲಿ  ದಾಸರು  ‘ಬಯಲು ಆಲಯವೆರಡು ನಯನದೊಳಗೋ’ ? ಎಂದರು. ಮುಂದೆ  ಮತ್ತಷ್ಟು ಗೊಂದಲ. ‘ನಯನ ಬುದ್ಧಿಯೊಳಗೋ, ಬುದ್ಧಿ ನಯನದೊಳಗೋ?’  ಬುದ್ಧಿ ನೋಡೆಂದುದನ್ನು ಕಣ್ಣು ನೋಡಿತೋ ?  ಅಥವಾ ನಾವು ನೋಡುವ ರೀತಿಯಿಂದ, ನೋಡಿದ ವಸ್ತುವಿನಿಂದ, ಬುದ್ಧಿ ಪ್ರಚೋದಿತವಾಯಿತೋ ?  ಏನೇ ಇರಲಿ, ಒಟ್ಟಿನಲ್ಲಿ  ಬಯಲು, ಆಲಯ ಎರಡರಲ್ಲೂ ಇರುವವ ನೀನು,  ಕಣ್ಣು ಎಂಬ ಇಂದ್ರಿಯ ಕೊಟ್ಟವನು ನೀನು, ಆ ಇಂದ್ರಿಯಕ್ಕೆ ಏನನ್ನಾದರೂ ಕಂಡು ಅನುಭವಿಸುವ ಶಕ್ತಿ ಕೊಟ್ಟವ ನೀನು, ಆ ಅನುಭವವನ್ನು ಆಸ್ವಾದಿಸುವ ಬುದ್ಧಿ ಕೊಟ್ಟವ ನೀನು. ಸ್ವಾಮೀ, ಎಲ್ಲವೂ ನಿನ್ನೊಳಗೆ ಎಂದು  ‘ನಯನ ಬುದ್ಧಿಗಳೆರಡೂ ನಿನ್ನೊಳಗೋ’  ಎಂದುಬಿಟ್ಟರು ಕನಕದಾಸರು. 


ಹೀಗೆಯೇ ಉಳಿದ ಚರಣಗಳ ವಿವರಣೆ ಸಹ. ಸವಿ ಸಕ್ಕರೆಯೊಳಗೋ ಸಕ್ಕರೆ ಸವಿಯೊಳಗೋ? ಎರಡೂ ನಾಲಗೆಯೊಳಗೋ ? ಕುಸುಮ ಗಂಧದೊಳಗೋ, ಗಂಧ ಕುಸುಮದೊಳಗೋ ಎರಡೂ ನಮಗಿರುವ ಘ್ರಾಣದ ಅಂದರೆ ವಾಸನೆಯನ್ನು ಅನುಭವಿಸುವ ಶಕ್ತಿಯೊಳಗೋ? ಇತ್ಯಾದಿ ಇತ್ಯಾದಿ ತಮ್ಮ ಚಿಂತನೆಯನ್ನು ಪ್ರಶ್ನೆಯ ರೂಪದಲ್ಲಿ ಪದ್ಯವಾಗಿ  ರಚಿಸಿ ಕೇಳಿದವರನ್ನು ಸಹ  ಚಿಂತನೆಗೆ ಹಚ್ಚಿದರು. ಸವಿ ಸಕ್ಕರೆಯೊಳಗೆ ಸರಿ. ಆದರೆ ಸಕ್ಕರೆ ಸವಿಯೊಳಗೆ ಎಂದರೆ ? ನಾವು ಏನೆಲ್ಲವನ್ನು ಸವಿ ಎಂದು ಸೂಚಿಸುತ್ತೇವೋ ಅದರಲ್ಲಿ ಸಕ್ಕರೆಯೂ ಒಂದಲ್ಲವೇ ? ಹಾಗಾಗಿ ಸಕ್ಕರೆ ಸವಿಯೊಳಗೂ ಹೌದು. ಮತ್ತೆ, ಸವಿ, ಸಕ್ಕರೆ ಎರಡೂ ನಾಲಗೆಯೊಳಗೆ. ಹೀಗೆಯೇ ಮೊದಲ ಚರಣದ ಭಾವನೆಯನ್ನೇ ಬಿಂಬಿಸುವ ಮುಂದಿನಸಾಲುಗಳನ್ನು ತಮ್ಮ ಚಿಂತನೆಗೆ ಬಿಟ್ಟು ನಾನು ಮುಂದೆ ಸಾಗುತ್ತೇನೆ. 


‘ವಿಜಾನತಾ ಅವಿಜ್ಞಾತಂ ಅವಿಜ್ಞಾತಾ  ವಿಜಾನತಾಂ’ ಎನ್ನುವುದು ಸಂಸ್ಕೃತದ ಒಂದು ಉಕ್ತಿ.  ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ ತಿಳಿದಿದ್ದೇನೆ ಎನ್ನುವವನಿಗೆ ಏನೂ ತಿಳಿದಿಲ್ಲ, ತಾನು ತಿಳಿದಿಲ್ಲ ಎನ್ನುವವನು ತಿಳಿದಿದ್ದಾನೆ - ಎಂದು ಇದರ ಅರ್ಥ. ಇದನ್ನು ನಮಗೆ ವಿವರಿಸುವಂತೆ,  ಕೊನೆಯಲ್ಲಿ  ನಮ್ರವಾಗಿ ‘ಅಸಮಭವ ಕಾಗಿನೆಲೆಯಾದಿ  ಕೇಶವರಾಯ,  ಉಸುರಲೆನ್ನಳವಲ್ಲ ನಿನ್ನೊಳಗೋ ’ -  ಎಂದರೆ - ‘ನಿನಗೆ ಸಮವೆಂಬುದು  ಮತ್ತೊಂದಿಲ್ಲದ  ಕಾಗಿನೆಲೆಯ ಕೇಶವರಾಯನೇ, ನಿನ್ನನ್ನು ವಿವರಿಸುವುದು ಅಥವಾ ತಿಳಿಸಿಕೊಡುವುದು - ಎನ್ನಳವಲ್ಲ - ಎಂದರೆ  ನನ್ನ ಕೈಗೆಟಕುವ  ಕಾರ್ಯವಲ್ಲ ಸ್ವಾಮೀ ನಿನ್ನನ್ನು ತಿಳಿಸಿಕೊಡುವ ಸಾಮರ್ಥ್ಯವಿರುವವನು ನೀನೊಬ್ಬನೇ ’. ಎನ್ನುತ್ತಾ  ತಮ್ಮ ರಚನೆಯನ್ನು ಕೊನೆಯಾಗಿಸಿದರು ಕನಕದಾಸರು. ಜ್ಞಾನಿಗಳು ಅವರು. ತಮಗೆ ತಿಳಿದಿಲ್ಲವೆಂದು ಹೇಳಿ ಎಲ್ಲ ಅವನಿಗೆ ಬಿಟ್ಟು ಸುಮ್ಮನಾದರು. ಅಜ್ಞಾನಿ  ನಾನು ಅವರ ಪ್ರಶ್ನೆಗಳಿಗೆ  ವಿವರಣೆಕೊಡಲು ಪ್ರಯತ್ನಪಡುತ್ತಿದ್ದೇನೆ. ವಿಪರ್ಯಾಸವಲ್ಲವೇ ? ಇಷ್ಟುಸಾಕೆಂದು ಹೇಳುತ್ತಾ ನನ್ನ ದಡ್ಡತನವನ್ನು ಕೃಷ್ಣಾರ್ಪಣ ಎನ್ನುತ್ತೇನೆ.