Saturday, August 8, 2026

ಬೂಚಿ ಬಂದಿದೆ

 ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ

ಚಾಚಿ ಕುಡಿದು ಸುಮ್ಮ ನೆ ನೀ ಪಾಚಿಕೊಳ್ಳೊ ಕೃಷ್ಣ ಯ್ಯ  


ನಾಕುಮುಖದ ಬೂಚಿಯೊಂದು ಗೋಕುಲಕ್ಕೆ ಓಡಿ ಬಂದು

ತೋಕರನ್ನು ಎಳೆದುಕೊಂಡು  ಕಾಕು ಮಾಡಿ ಒಯ್ಯುವುದಕೆ 

ಮೂರು ಕಣ್ಣ  ಬೂಚಿಯೊಂದು ಊರು ಊರು ಸುತ್ತಿ ಬಂದು 

ದ್ವಾರದಲ್ಲಿ ನಿಂತಿದೆ ನೋಡೊ ಪೋರರನ್ನು  ಒಯ್ಯು ವುದಕೆ  


ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ 

ಬಂಗಾರದಂಥ ಮಕ್ಕಳನ್ನ ಕಂಗೆಡಿಸಿ ಒಯ್ಯುವುದಕೆ  

ಮರದ ಮೇಲೆ ಇರುವುದೊಂದು ಕರಿ ಕರಾಳ ಮುಖದ ಬೂಚಿ 

ತರಳರನ್ನು ಎಳೆದುಕೊೊಂಡು ಪುರಂದರ ವಿಠಲಗೊಪ್ಪಿಸಲಿಕೆ



ಸಕಲಲೋಕಗಳ  ಸ್ವಾಮಿಯ ಸಾವಿರನಾಮಗಳಲ್ಲಿ ಎರಡು,  ಭಯಕೃತ್ ಮತ್ತು ಭಯನಾಶನ. ಭಯವನ್ನುಂಟು ಮಾಡುವವನು, ಭಯವನ್ನು ನಾಶಮಾಡುವವನು ಎಂಬ ವಿರುದ್ಧಾರ್ಥದ ನಾಮಗಳು. ತನ್ನ ವೈರಿಗಳಲ್ಲಿ, ದುರುಳರಲ್ಲಿ ಭಯವನ್ನುಂಟುಮಾಡುವವನು ಹಾಗೂ ತನ್ನ ಭಕ್ತರು ಮತ್ತು ಸಜ್ಜನರ ಸಂಸಾರಭಯವನ್ನು ನಾಶಮಾಡುವವನು ಎಂದು ಈ ನಾಮಗಳ ಅರ್ಥ. ಆ ರೀತಿ ಭಯಹುಟ್ಟಿಸುವ, ಭಯನಿವಾರಕನಾದ ಭಗವಂತನನ್ನೇ, ‘ಬೂಚಿ’ ಬಂದು ನಿನ್ನನ್ನು ಕೊಂಡೊಯ್ಯುತ್ತದೆಂದು ಹೆದರಿಸಿ ಮಲಗಿಸಲು ಪ್ರಯತ್ನಪಡುತ್ತಾಳೆ ತಾಯಿ ಯೆಶೋದೆ.


ಶಿಶುಗೀತೆ ಅಥವಾ ಜೋಗುಳ ಎನ್ನಬಹುದಾದ   ಈ ‘ಬೂಚಿಬಂದಿದೆ’ ಗೀತೆ, ಸುಂದರವಾದ  ಕಲ್ಪನೆ ಮತ್ತು ತತ್ವಗಳನ್ನು ಒಳಗೊಂಡಿರುವ ಪದ. ಬೂಚಿ ಬಂದಿದೆ ರಂಗ, ಚಾಚಿ ಕುಡಿದು, ಪಾಚಿಕೊಳ್ಳೊ ಎನ್ನುತ್ತದೆ ಪಲ್ಲವಿ. ಬೂಚಿ, ಚಾಚಿ, ಪಾಚಿ ಎಲ್ಲವೂ ಬಾಲಭಾಷೆಯ ಪದಗಳು. ಬೂಚಿ ಎಂದರೆ  ಕಚ್ಚಿ, ಚುಚ್ಚಿ ತೊಂದರೆ ಮಾಡುವ ಒಂದು ಕೀಟ ಅಥವಾ ಸಣ್ಣ ಕಾಲ್ಪನಿಕ ಪ್ರಾಣಿ. ಚಾಚಿ ಎಂದರೆ ಮೊಲೆಹಾಲು, ಪಾಚಿ ಎನ್ನುವುದು ನಿದ್ದೆ. ರಗಳೆ ಮಾಡುತ್ತಿದ್ದ ಕೃಷ್ಣನನ್ನು ‘ಬೂಚಿಬಂದು ನಿನ್ನನ್ನು ಕೊಂಡೊಯ್ಯುತ್ತದೆ’ ಎಂದು ಹೆದರಿಸಿ ಹಾಲು ಕುಡಿಸಿ ಮಲಗಿಸುವ ಪ್ರಯತ್ನ ಮಾಡುತ್ತಿದ್ದಾಳೆ ತಾಯಿ. 


ಆದರೆ ಕೃಷ್ಣನನ್ನು ಹೊತ್ತೊಯ್ಯಲು ಬಂದಿರುವ ಬೂಚಿಗಳು ಯಾರು? ಮೊದಲ ಎರಡು ಚರಣಗಳಲ್ಲಿ, ‘ತೋಕರನ್ನು’ ಎಂದರೆ ಸಣ್ಣ ಮಾಕ್ಕಳನ್ನು ‘ಕಾಕುಮಾಡಿ’ ಎಂದರೆ ಮೋಸಮಾಡಿ   ಒಯ್ಯಲು ಗೋಕುಲಕ್ಕೆ ಬಂದಿರುವ ನಾಕುಮುಖದಬೂಚಿ, ಚತುರ್ಮುಖ ಬ್ರಹ್ಮ. ಮತ್ತು ಪೋರರನ್ನು ಒಯ್ಯಲೆಂದು ದ್ವಾರದಲ್ಲಿ ಬಂದು ನಿಂತಿರುವ ಮೂರುಕಣ್ಣಿನ ಬೂಚಿ, ಮುಕ್ಕಣ್ಣ ಶಿವ. 


ಮುಂದಿನ ಎರಡು ಚರಣಗಳಲ್ಲಿರುವ  ‘ಅಂಗವೆಲ್ಲ ಕಂಗಳುಳ್ಳ’ ಬೂಚಿ ದೇವೇಂದ್ರ. ಅಹಲ್ಯೆಯ ಶೀಲಾಪಹರಣ ಮಾಡಿದ ಇಂದ್ರನಿಗೆ ದೇಹದಲ್ಲಿ ಸಾವಿರ ಯೋನಿಗಳಾಗಲಿ ಎಂದು ಗೌತಮ ಮುನಿ ಶಾಪವಿತ್ತನಂತೆ.  ಇಂದ್ರ ಕ್ಷಮೆಯಾಚಿಸಿ, ಪಶ್ಚಾತ್ತಾಪ ಪಟ್ಟನಂತರ ಸಾವಿರ ಯೋನಿಗಳು ಸಾವಿರ ಕಣ್ಣುಗಳಾದವಂತೆ. ಅದ್ದರಿಂದ ಇಂದ್ರನನ್ನು  ‘ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ’ ಎಂದರು ದಾಸರು. ಇನ್ನು ಮರದ ಮೇಲೆ ಕುಳಿತಿರುವ ಕರಿ ಕರಾಳಮುಖದ ಬೂಚಿ ಹನುಮಂತನೆಂದು ಬೇರೆ ಹೇಳಬೇಕೇ ?  


ಈ ಪದದ ಹಿಂದಿರುವ ದಾಸರ ಕಲ್ಪನೆ  ಏನೆಂದರೆ, ತಮ್ಮ ಸ್ವಾಮಿ, ಶ್ರೀ ಹರಿ ನಾರಾಯಣ, ಕೃಷ್ಣನ ಅವತಾರತಳೆದು ಭೂಲೋಕಕ್ಕೆ ಹೋದನೆಂದು ಅವನ ಪರಿವಾರ ದೇವತೆಗಳಾದ ಬ್ರಹ್ಮ, ಶಿವ, ರುದ್ರ, ಇಂದ್ರರಿಗೆ ಬಹಳ ಕಳವಳವಾಯಿತಂತೆ. ಆದ್ದರಿಂದ ಅವರೆಲ್ಲಾ ಅವನನ್ನು ಮತ್ತೆ ಕರೆದೊಯ್ಯಲು ಗೋಕುಲಕ್ಕೆ ಬಂದರಂತೆ. ಅವರು ಬಂದದ್ದನ್ನು ಯೆಶೋದೆ ಕೃಷ್ಣನಿಗೆ ಜೋಗುಳದ ರೂಪದಲ್ಲಿ ತಿಳಿಸುತ್ತಿದ್ದಾಳೆ ! 


ಆದರೆ ಕೊನೆಯಲ್ಲಿ ಕಾಣುವ ಮರದ ಮೇಲಿನ  ‘ಕರಿ ಕರಾಳಮುಖದ ಬೂಚಿ’, ಬಂದದ್ದು ತರಳರನ್ನು ಎಳೆದುಕೊಂಡು ಹೋಗಿ ಪುರಂದರ ವಿಠಲನಿಗೆ ಒಪ್ಪಿಸಲಿಕ್ಕೆ. ನಮ್ಮ ತತ್ವದ ಪ್ರಕಾರ, ಯಾರಿಗೇ ಆಗಲಿ ನೇರವಾಗಿ ಪುರಂದರ ವಿಠಲನನ್ನು ಕಾಣುವ ಅವಕಾಶವಿಲ್ಲ. ಪ್ರಾಣದೇವರು ಅಥವಾ ಹನುಮಂತ ಅವರನ್ನು ತನ್ನ ಜತೆಯಲ್ಲಿ ಕರೆದೊಯ್ದರೆ ಮಾತ್ರ ಪರಮಾತ್ಮನ ಭೇಟಿ ಸಾಧ್ಯ!  ಗೀತೆಯ ಕೊನೆಯಲ್ಲಿ ಅದನ್ನು ಸೂಚ್ಯವಾಗಿ ಹೇಳಿ, ತರಳರೆಲ್ಲರು, ಅಂದರೆ ಮಕ್ಕಳೆಲ್ಲರೂ, ಮಕ್ಕಳು ಎನ್ನುವಾಗ ಇಲ್ಲಿ ಸಮಸ್ತ ಜೀವರು ಭಗವಂತನ ಮಕ್ಕಳೆಂಬ ಭಾವ.  ಆದ್ದರಿಂದ ಆ ತರಳರೆಲ್ಲರೂ ಅಂದರೆ ಸಮಸ್ತ ಜೀವರು  ಕರಾಳಮುಖದ ಬೂಚಿ ಮುಖ್ಯಪ್ರಾಣ ಬಂದು ತಮ್ಮನ್ನು ಭಗವಂತನ ಬಳಿಗೆ ಕರೆದೊಯ್ಯುವಂಥ ಯೋಗ್ಯಜೀವನ ನಡೆಸಬೇಕೆಂಬ ಬುದ್ಧಿಮಾತಿನೊಂದಿಗೆ ಪದ್ಯವನ್ನು ದಾಸರು ಕೊನೆಗಾಣಿಸಿದ್ದಾರೆಂದು ತಿಳಿಸುತ್ತಾ ಇಂದಿನ ನಾಲ್ಕು ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.