Friday, August 28, 2026

ಆದದ್ದೆಲ್ಲ ಒಳಿತೇ ಆಯಿತು

ಆದದ್ದೆಲ್ಲ ಒಳಿತೇ ಆಯಿತು ನಮ್ಮ

ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು 


ದಂಡಿಗೆ ಬೆತ್ತ ಹಿಡಿಯುವುದಕ್ಕೆ

ಮಂಡೆ ಮಾಚಿ ನಾಚುತಲಿದ್ದೆ

ಹೆಂಡತಿ ಸಂತತಿ ಸಾವಿರ ವಾಗಲಿ

ದಂಡಿಗೆ ಬೆತ್ತ ಹಿಡಿಸಿದಳಯ್ಯ                 


ಗೋಪಾಳ ಬುಟ್ಟಿ ಹಿಡಿಯುವುದಕ್ಕೆ

ಭೂಪತಿ ಎಂದು ಗರ್ವಿಸುತ್ತಿದ್ದೆ

ಆ ಪತ್ನೀಕುಲ ಸಾವಿರವಾಗಲಿ 

ಗೋಪಾಳ ಬುಟ್ಟಿ ಹಿಡಿಸಿದಳಯ್ಯ            


ತುಳಸೀ ಮಾಲೆ ಹಾಕುವುದಕ್ಕೆ

ಅರಸನೆಂದು ತಿರುಗುತಲಿದ್ದೆ

ಸರಸಿಜಾಕ್ಷ ಶ್ರೀ ಪುರಂದರ ವಿಠಲನು

ತುಳಸಿಮಾಲೆ ಹಾಕಿದನಯ್ಯ           


ನವಕೋಟಿ ನಾರಾಯಣ ಶ್ರೀನಿವಾಸ ನಾಯಕರು ಸರ್ವಸ್ವವನ್ನೂ ತ್ಯಜಿಸಿ, ಹರಿದಾಸಪಂಥವನ್ನು ಹಿಡಿದು ಪುರಂದರದಾಸರಾದ ಸಂಗತಿ ಮತ್ತು ಅದರ ಹಿನ್ನೆಲೆ, ನಮ್ಮ ಸಮಕಾಲೀನರೆಲ್ಲರಿಗೂ  ತಿಳಿದಿರುವುದೇ.  ನಾಯಕರು ದಾಸರಾಗುವಲ್ಲಿ ಅವರ ಪತ್ನಿಯ ಹಿರಿದಾದ ಪಾತ್ರ ಇದ್ದಿರಬೇಕೆಂಬುದು ತಿಳಿದವರ ಅಭಿಪ್ರಾಯ. ಆ ಅಭಿಪ್ರಾಯಕ್ಕೆ ಪುಷ್ಟಿ ಕೊಡುವ ಪುರಂದರದಾಸರ ರಚನೆ ‘ಆದದ್ದೆಲ್ಲಾ ಒಳಿತೇ ಆಯಿತು.’


‘ನವಕೋಟಿ ನಾರಾಯಣ’ ಎನಿಸಿಕೊಂಡಿದ್ದ, ಆದರೆ ಪರಮ ಲೋಭಿಯಾಗಿದ್ದ ಶ್ರೀನಿವಾಸನಾಯಕರ ಮನೆಗೆ ಬ್ರಾಹ್ಮಣನೊಬ್ಬ ಭಿಕ್ಷೆಗೆ ಬಂದಾಗ ಅವನಿಗೆ ಕೊಡಲು ನಾಯಕರ ಪತ್ನಿಯಬಳಿ ಏನೂ ಇಲ್ಲದೆ ಆಕೆ ತನ್ನ ಮೂಗುಬಟ್ಟನ್ನು ಬಿಚ್ಚಿ ಕೊಟ್ಟದ್ದು, ಅದನ್ನು ಬ್ರಾಹ್ಮಣ, ನಾಯಕರ ಬಳಿಯೇ  ಅಡವು ಇಡಲು ಒಯ್ದದ್ದು, ನಾಯಕರಿಗೆ ಅನುಮಾನಬಂದು   ಅವರು ಮನೆಗೆ ಬಂದು ಪತ್ನಿಯನ್ನು ದಬಾಯಿಸಿಕೇಳಿದ್ದು, ಉತ್ತರ ಕೊಡಲಾಗದ ಪತ್ನಿ ವಿಷಪ್ರಾಶನ ಮಾಡಲೆಂದು ವಿಷದ ಬಟ್ಟಲ್ಲನ್ನೆತ್ತಿಕೊಂಡಾಗ ಆ ಬಟ್ಟಲೊಳಗೆ ಮೂಗುಬಟ್ಟು ಬಿದ್ದದ್ದು, ಆ ಮೂಲಕ ದಾಸರಿಗೆ ಪರಮಾತ್ಮನ ಹಿರಿಮೆಯ ಅರಿವಾಗಿ ಅವರು ಎಲ್ಲವನ್ನೂ  ತ್ಯಜಿಸಿ ದಾಸರಾದದ್ದು,  ಇದೆಲ್ಲ ನಾವು ಚಿಕ್ಕಂದಿನಲ್ಲಿ ಕೇಳಿ ಕೇಳಿ ಬಾಯಿಪಾಠವಾಗಿದ್ದ  ಕಥೆ. ಉಡುಪಿ ಕೃಷ್ಣ ಕನಕದಾಸರಿಗೆ ದರ್ಶನಕೊಡಲು ತಿರುಗಿ, ಗೋಡೆ ಬಿರಿಯಿತೆಂದು ಹೇಳುತ್ತೇವಲ್ಲವೇ, ಹಾಗೆ. 


ಆದರೆ ಕರ್ನಾಟಕ ಸಂಗೀತ ಪಿತಾಮಹರೆಂದು ಹೆಸರಾಗಿರುವ ಪುರಂದರ ದಾಸರ ಬಗ್ಗೆ ನಮಗೆ ಖಚಿತವಾಗಿ ತಿಳಿದಿರುವ ಸಂಗತಿಗಳು ಬಹು ಸ್ವಲ್ಪ. ಅಥವಾ ಇಲ್ಲವೇ ಇಲ್ಲ ಎಂದರೂ ಆದೀತು. ದಾಸರು ಇದ್ದರು ಎಂಬುದಕ್ಕೆ ಇರುವ ಪುರಾವೆಯೇ ಅತ್ಯಲ್ಪ.  ವಿಜಯನಗರದ ಅರಸರು ಶ್ರೀ ವ್ಯಾಸತೀರ್ಥರಿಗೆ ಬಳುವಳಿಯಾಗಿ ಕೊಟ್ಟ ಕೆಲವು ಗ್ರಾಮಗಳನ್ನು ಅವರು ತಮ್ಮ ಅನೇಕ ಶಿಷ್ಯರಿಗೆ ಹಂಚಿಕೊಟ್ಟರಂತೆ. ಅದರಲ್ಲಿ ಒಂದೆರಡು ಪಾಲು ಪುರಂದರದಾಸ ‘’ ಎಂದು ಕರೆಸಿಕೊಂಡಿದ್ದ, ಎಂದರೆ ಪುರಂದರದಾಸರೆನ್ನುವವರ ಮಕ್ಕಳು ಎನಿಸಿಕೊಂಡಿದ್ದ  ಲಕ್ಷ್ಮಣದಾಸ, ಹೇಬಣದಾಸ ಮುಂತಾದವರಿಗೆ ಸೇರಿತೆನ್ನುವುದು ಒಂದು ಶಾಸನದಲ್ಲಿ ಸೂಚಿತವಾಗಿದೆಯಂತೆ. ಪುರಂದರದಾಸರ ಮಕ್ಕಳು ಎನಿಸಿಕೊಂಡವರು ಇದ್ದುದ್ದರಿಂದ, ದಾಸರು ಕೂಡ ಇದ್ದರೆಂದು ನಾವು ಹೇಳಬಹುದು ಎಂದು   ಪ್ರೊ ಎಸ್  ಕೆ ರಾಮಚಂದ್ರರಾಯರು ತಮ್ಮ ‘ಪುರಂದರ ಸಾಹಿತ್ಯ ದರ್ಶನ’ ಪುಸ್ತಕದಲ್ಲಿ ಬರೆದಿದ್ದಾರೆ. 


ನಾನು ಮೊದಲು ಹೇಳಿದ ಕಥೆ ನಡೆಯಿತೋ ಬಿಟ್ಟಿತೋ, ಏನೇ ಇರಲಿ, ತಾವು ಹರಿದಾಸರಾಗಿ ಪರಿವರ್ತಿತರಾಗಲು ತಮ್ಮ ಪತ್ನಿ ಕಾರಣಭೂತರೆಂದು  ದಾಸರೇ ಹೇಳಿಕೊಂಡು, ಆದದ್ದೆಲ್ಲಾ ಒಳಿತೇ ಆಯಿತು, ಶ್ರೀಧರನ ಸೇವೆಗೆ ಬಳಸಲು ದೊಡ್ಡ ಸಂಪತ್ತಾಯಿತು ಎಂದು ಹಾಡಿದ್ದಾರೆ. ದಾಸರಾಗುವ ಮುಂಚಿನ ತಮ್ಮ ಮನಸ್ಥಿತಿಯನ್ನು ತೋಡಿಕೊಂಡು ತಮ್ಮ ಪತ್ನಿಯ ಪ್ರೇರಣೆಯಿಂದ ದಾಸನಾಗಿ ಉದ್ಧಾರನಾದೆನೆಂಬ ಅರ್ಥಬರುವ ಸಾಲುಗಳನ್ನು ರಚಿಸಿದ್ದಾರೆ. ದಂಡಿಗೆ ಬೆತ್ತವೆಂದರೆ, ಹಾಡಿಕೆಗೆ ಪೂರಕವಾಗಿ ಬಳಸುವ, ಒಂದೇ ತಂತಿಯ, ಬಿದಿರು, ಸೋರೆ ಬುರುಡೆಯ ವಾದ್ಯ. ಗೋಪಾಳಬುಟ್ಟಿ ಎಂದರೆ, ಭಿಕ್ಷೆ ಹಾಕಿಸಿಕೊಳ್ಳಲು ಉಪಯೋಗವಾಗುವ, ಹೆಗಲಿಗೆ ನೇತುಹಾಕಿಕೊಳ್ಳುವ ಜೋಳಿಗೆ. 


ಕೋಟ್ಯಾಧೀಶನಾಗಿ ಅಹಂಕಾರಿಯಾಗಿದ್ದ ನಾನು ನನ್ನ ಆಡಂಬರವನ್ನು ಬಿಟ್ಟು ಹರಿದಾಸನಾಗಿ,  ಭಿಕಾರಿ ವೇಷ ಧರಿಸುವುದು ಸಾಧ್ಯವಿತ್ತೇ ? ನಾನು ಅದನ್ನು ಧರಿಸುವಂತೆ ಮಾಡಿದ, ಅಂದರೆ ವೈರಾಗ್ಯದೆಡೆಗೆ ನನ್ನ ಮನ ತಿರುಗಲು ಎಡೆಮಾಡಿಕೊಟ್ಟ ಅಥವಾ ಕಾರಣವಾದ ನನ್ನ ಪತ್ನಿಯಂಥವರು ಸಾವಿರ ಸಾವಿರವಾಗಲಿ ಎಂದು ಆಕೆಯನ್ನು ಹೊಗಳಿ ಹಾಡಿರುವ ಗೀತೆ ಇದು. 


ಒಳಿತು ಎನ್ನುವ ಕಾರ್ಯಗಳೆಲ್ಲಾ ತಮ್ಮ ಪತ್ನಿಯ ಮೂಲಕ ನಡೆದದ್ದಾದರೂ ಅದು ಪುರಂದರ ವಿಠಲನಚಿತ್ತದಂತೆ ಆದದ್ದು ಎಂಬ ತತ್ವ ವನ್ನು “ಸರಸಿಜಾಕ್ಷ ಶ್ರೀ ಪುರಂದರ ವಿಠಲನು ತುಳಸೀಮಾಲೆ ಹಾಕಿದನಯ್ಯ” ಎಂಬ ಕೊನೆಯ ಸಾಲಿನಲ್ಲಿ ದಾಸರು ಸೂಚಿಸಿದ್ದಾರೆಂದು ತಿಳಿಸುತ್ತಾ ಇಂದಿನ ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.


Friday, August 21, 2026

ಹರಿನಾಮ ಜಿಹ್ವೆಯೊಳಿರಬೇಕು

 ಹರಿನಾಮ ಜಿಹ್ವೆಯೊಳಿರಬೇಕು ನರನಾದಮೇಲೆ 


ಭೂತದಯಾಪರನಾಗಿರಬೇಕು 

ಪಾತಕವೆಲ್ಲವ ಕಳೆಯಲಿಬೇಕು 

ಮಾತು ಮಾತಿಗೆ ಹರಿ ಎನಬೇಕು -ನರನಾದಮೇಲೆ 


ಶಾಂತಿ ಶಮ ದಮ ಹಿಡಿಯಲಿ ಬೇಕು 

ಧ್ವಾಂತಿ ಅವಗುಣವ ಕಳೆಯಲಿ ಬೇಕು 

ಸಂತತ ಸನ್ಮಾರ್ಗದಲ್ಲಿರಬೇಕು -ನರನಾದಮೇಲೆ 


ಕಾಮಕ್ರೋಧವ ಸಾರಿಡಬೇಕು 

ಮನಕೆ ಅಹಂಕಾರವ ನೀಗಲಿ ಬೇಕು 

ಸೌಮ್ಯರ ಸಂಗಡದೊಳು ಇರಬೇಕು-ನರನಾದಮೇಲೆ 


ವೇದಶಾಸ್ತ್ರವನು ಓದಲಿ ಬೇಕು 

ಭೋದ ತತ್ವವನು ತಿಳಿಯಲಿಬೇಕು 

ಮಾಧವನ ಸ್ಮರಣೆ ಮಾಡಲಿ ಬೇಕು -ನರನಾದಮೇಲೆ 


ತಂದೆ ಕೃಷ್ಣನ ದಯೆಪಡೆಯಬೇಕು 

ಬಂದದ್ದುಂಡು  ಸುಖಪಡಬೇಕು 

ಚಂದಾಗಿ ಜಗದೊಳಗಿರಬೇಕು-ನರನಾದಮೇಲೆ





ಹರಿನಾಮ ಜಿಹ್ವೆಯೊಳಿರಬೇಕು ನರನಾದ ಮೇಲೆ.  ಒಮ್ಮೆ ‘ನರ’ ಎಂದೆನಿಸಿಕೊಳ್ಳುವ ಮೊದಲು   ಅದೆಷ್ಟು ಜನ್ಮಗಳನ್ನು ಯಾವಯಾವ ಕ್ರಿಮಿ, ಕೀಟ, ಪ್ರಾಣಿಯಾಗಿ  ಕಳೆಯಬೇಕಾಯಿತೋ ಗೊತ್ತಿಲ್ಲ. ಆ ಎಲ್ಲ ಜನ್ಮಗಳಲ್ಲೂ ದೇಹವೆಂಬುದು ಇತ್ತು.  ಆ ದೇಹಗಳಲ್ಲಿ  ನೋಡುವ, ಕೇಳುವ, ಉಣ್ಣುವ, ಮುಂತಾದ  ಏನೇನೋ ವ್ಯವಸ್ಥೆಗಳಿದ್ದರೂ ಗೋವಿಂದ, ನಾರಾಯಣ, ಶ್ರೀಹರಿ ಎಂದು ಹೇಳುವ ವ್ಯವಸ್ಥೆ ಇರಲಿಲ್ಲ. ಅದು ಬಂದದ್ದು ನರಜನ್ಮದಲ್ಲಿ ಮಾತ್ರ. ಅದರಿಂದಲೇ ವ್ಯಾಸತೀರ್ಥರೆಂದರು ಅವಕಾಶಸಿಕ್ಕಾಗ ಹರಿನಾಮ ನಾಲಿಗೆಯಲ್ಲಿರಲಿ. ಈ ಜನ್ಮ ಕಳೆದರೆ ಮತ್ತೆ ಏನು ಜನ್ಮವೋ ಯಾರಿಗೆ ಗೊತ್ತು ! 


ಮತ್ತೊಂದು ವಿಷಯವೆಂದರೆ ನಾಲಿಗೆಗೆ ಬಂದದ್ದು, ನಂತರ ಸ್ಮರಣೆಯಲ್ಲಿ ಉಳಿದೀತು ಎನ್ನುವುದು. ಬಾಲ್ಯದಲ್ಲಿ ನಮಗೆ ಶಾಲೆಯಲ್ಲಿ ಮಗ್ಗಿ ಹೇಳಿಸುತ್ತಿದ್ದರು. ಪ್ರತಿನಿತ್ಯ ಅದನ್ನೇ ಹೇಳುತ್ತಾ ಹೇಳುತ್ತಾ ಬೇಡವೆಂದರೂ ಅದು ಸ್ಮರಣೆಯಲ್ಲಿ ಉಳಿಯುತ್ತಿತ್ತು. ನವ ವಿಧ ಭಕ್ತಿಯಲ್ಲಿ ಎರಡನೇ ಮಜಲು ಕೀರ್ತನೆ, ಮೂರನೆಯದು ಸ್ಮರಣೆ. ನಾಲಿಗೆಯಿಂದ ಮಿದುಳಿಗೆ ಬಂದದ್ದು ಅಲ್ಲಿಂದ ಮುಂದೆ ಹೃದಯವನ್ನು ತಲುಪಬಹುದೇನೋ. ಆದ್ದರಿಂದ ಮೊದಲಾಗಿ  ಹರಿನಾಮ ಜಿಹ್ವೆಯಲ್ಲಿರಲಿ. 


ಅದು ಸರಿ. ಆದರೆ ಹರಿನಾಮ ನಿರಂತರವಾಗಿ ನಾಲಿಗೆಯಲ್ಲಿರಬೇಕಾದರೆ ಉಳಿದ ನಡವಳಿಕೆಗಳೆಲ್ಲಾ ಅದಕ್ಕೆ ಅನುಗುಣವಾಗಿ ಇರಬೇಕಲ್ಲವೇ ? ಅದರಿಂದಲೇ ಉಳಿದ ಚಟುವಟಿಕೆಗಳು ಹೇಗಿರಬೇಕೆಂಬುದನ್ನೂ ಮುಂದಿನ ಚರಣಗಳಲ್ಲಿ ವಿಶದ ಪಡಿಸಿದರು ವ್ಯಾಸರಾಜರು. ಪಾತಕವ ಕಳೆಯಬೇಕು, ಅಹಂಕಾರವ ನೀಗಬೇಕು, ಸನ್ಮಾರ್ಗದಲ್ಲಿರಬೇಕು,  ಕೃಷ್ಣನ ದಯೆ ಪಡೆಯಬೇಕು, ಇತ್ಯಾದಿ, ಇತ್ಯಾದಿ. ಬಹಳ ಸರಳವಾದ ಸಾಲುಗಳು. ಕೆಲವೇ ಪದಗಳಿಗೆ ಕೊಂಚ ವಿವರಣೆ ಅಗತ್ಯವೆನಿಸುತ್ತದೆ. 


ಭೂತ ದಯಾಪರನಾಗಿರಬೇಕು - ಇಲ್ಲಿ  ಭೂತ ಎಂದರೆ ಸಕಲ ಜೀವಗಳು. ಅವೆಲ್ಲದರ ಮೇಲೂ ದಯೆಯಿರಲಿ.  ಶಮ, ದಮ ಹಿಡಿಯಲಿಬೇಕು - ಶಮ ಎಂದರೆ ಮನೋ ನಿಗ್ರಹ, ದಮವೆಂದರೆ ಇಂದ್ರಿಯ ನಿಗ್ರಹ. ಮನುಷ್ಯನಿಗೆ ಎರಡೂ ಬೇಕು.  ಧ್ವಾಂತಿ, ಅವಗುಣ ಕಳೆ ಯಲಿಬೇಕು - ಧ್ವಾಂತ ವೆಂದರೆ ಕತ್ತಲು, ಅಜ್ಞಾನ. ಅದನ್ನು ಕಳೆದುಕೊಳ್ಳಬೇಕು.  ಕಾಮ ಕ್ರೋಧವ ಸಾರಿಡಬೇಕು -  ಎಂದರೆ ದೂರವಿಡಬೇಕು.  ಮತ್ತೆ, ಭೋದತತ್ವವ ತಿಳಿಯಲಿಬೇಕು - ಭೋದತತ್ವ ವೆಂದರೆ ಮಧ್ವ ತತ್ವ ಅಥವಾ ಸಿದ್ಧಾಂತ. ಭೋಧ ಎಂದರೆ ಸಂಶಯವಿಲ್ಲದ ಸಂಪೂರ್ಣ ಜ್ಞಾನ. ಅಂಥ ಜ್ಞಾನ ಹೊಂದಿದ್ದ ಆಚಾರ್ಯ ಮಧ್ವರಿಗೆ ಪೂರ್ಣಬೋಧರೆಂದು ಹೆಸರು. ಅವರ ತತ್ವಕ್ಕೆ ಬೋಧತತ್ವವೆಂದು ಹೆಸರು. ತಮ್ಮ ಗುರುಗಳ ತತ್ವಬೋಧನೆಯನ್ನು ಅರ್ಥ ಮಾಡಿಕೊಂಡು ಅನುಸರಿಸಿ ಎಂದರು ವ್ಯಾಸ ತೀರ್ಥರು. 


ಗೀತೆಯ ಕೊನೆಯ ಚರಣದಲ್ಲಿರುವ  ಎರಡು ಪದಗಳು ಬಹಳ ಮಹತ್ವಉಳ್ಳದ್ದು. ಅವು, ಬಂದದ್ದುಂಡು  ಸುಖಪಡಬೇಕು - ನಮಗೆ ಅದುಬೇಕು, ಇದುಬೇಕು, ಎಲ್ಲವೂ ಬೇಕು. ಸರಿ. ಬೇಕೆನಿಸುವ  ಎಲ್ಲಕ್ಕೂ ಪ್ರಯತ್ನಪಡಬೇಕು. ಹೌದು. ಆದರೆ ಬೇಕೆಂದದ್ದು ಸಿಕ್ಕದಿದ್ದರೆ  ಸಿಕ್ಕಿದ್ದನ್ನು ಉಣ್ಣಬೇಕು. ಹೇಗೆ ? ಹಣೆಬರಹವನ್ನು ಬೈಯುತ್ತಾ, ಕೊಟ್ಟವನನ್ನು  ಶಪಿಸುತ್ತಾ ಉಣವುದಲ್ಲ. ಪಾಲಿಗೆ ಬಂದದ್ದು ಪಂಚಾಮೃತ. ಹರಿಪ್ರಸಾದ ವೆಂದು ಸ್ವೀಕರಿಸಿ, ಸುಖಪಡಬೇಕು ಅಂದರೆ ತೃಪ್ತಿಯಿಂದ ಇರಬೇಕು. ಇದನ್ನೇ ಕೃಷ್ಣ ಗೀತೆಯಲ್ಲಿ ಹೇಳಿದ್ದು. ಸುಖೇ ದುಃಖೇ ಸಮೇ ಕೃತ್ವಾ, ಲಾಭಾ ಲಾಭೌ, ಜಯಾ ಜಯೌ ಎಂದ ಕೃಷ್ಣ. ಅವನಿಗೆ ಹೇಳಲು ಸುಲಭ. ಸುಖ ದುಃಖ ಲಾಭ ನಷ್ಟ ಏನೂ ತಗುಲದವನು  ಅವನು.  ಅನುಭವಿಸುವ ನಮಗೆ ಗೊತ್ತು ಆವನ ಬೋಧನೆಯನ್ನು ಅನುಷ್ಠಾನಕ್ಕೆ ತರುವ ತಾಪತ್ರಯ. ಅಲ್ಲವೇ ?  ಇರಲಿಬಿಡಿ. ನಮ್ಮ ಒಳಿತಿಗೆಂದು ಆವನು ಹೇಳಿದ್ದು. ತಮ್ಮ ಅರಾಧ್ಯದೈವ ಹೇಳಿದ್ದನ್ನೇ ವ್ಯಾಸತೀರ್ಥರು ನಮಗೆ ಮತ್ತೆ ಹೇಳುತ್ತಿದ್ದಾರೆ. ತನ್ನ ಬೋಧನೆಯಂತೆ ನಡೆದುಕೊಳ್ಳಲು ಬೇಕಾದ  ಮನಸ್ಥಿರತೆಯನ್ನೂ, ಮನಸ್ಥಿತಿಯನ್ನೂ ಕೃಷ್ಣ ಪರಮಾತ್ಮ ನಮಗೆ ದಯಪಾಲಿಸಲೆಂದು ಕೋರುತ್ತಾ  ಇಂದಿನ ಮಾತು ಕೃಷ್ಣಾರ್ಪಣ ಎನ್ನುತ್ತೇನೆ. 

Friday, August 14, 2026

ಬುತ್ತಿಯ ಕಟ್ಟೋ, ಮನುಜ

 ಬುತ್ತಿಯ ಕಟ್ಟೋ, ಮನುಜ ,

ಬುತ್ತಿಯ ಕಟ್ಟೋ

ಬುತ್ತಿಯನು ಕಟ್ಟಿದರೆ

ಎತ್ತಲಾದರುಣ್ಣಬಹುದು  


ಧರ್ಮವೆಂಬ ಮಡಿಕೆಯಲ್ಲಿ

ನಿರ್ಮಲಮನಗಂಗೆ ತುಂಬಿ

ಸುಮ್ಮಾನದುರಿಯ ಹಚ್ಚಿ

ಒಮ್ಮನಕ್ಕಿ ಅನ್ನ ಬಾಗಿ


ಅರಿವು ಎಂಬ ಅರಿವೆ ಹಾಸಿ

ಹರಿವಿಹಾರ ಮೊಸರ ತಳಿದು

ಪರಮವೈರಾಗ್ಯದಿಂದ

ಸಿರಿಹರಿಗೆ ಅರ್ಪಿತವೆಂದು ||


ಕರ್ತೃ ಪುರಂದರವಿಠಲನ

ತತ್ವವೆಂಬ ಬುತ್ತಿಯನ್ನು

ಹತ್ತಿರ ತಂದಿಟ್ಟುಕೊಂಡು

ನಿತ್ಯ ಉಂಡು ತೃಪ್ತಿಪಡಿರೋ ||





ಬುತ್ತಿ ಎಂದರೆ ಪ್ರಯಾಣಕಾಲದ ಉಪಯೋಗಕ್ಕಾಗಿ ಕಟ್ಟಿದ ಆಹಾರದ ಗಂಟು ಮತ್ತು ಬಹಳಕಾಲದ ಸಂಗ್ರಹ ಎಂಬ ಎರಡೂ ಅರ್ಥಗಳುಂಟು. ಇದರಲ್ಲೊಂದನ್ನು ಮತ್ತೊಂದಕ್ಕೆ ರೂಪಕವಾಗಿಸಿ ಆಕರ್ಷಕವಾದ ಒಂದು ತತ್ವಬೋಧಕ ರಚನೆಯಾಗಿಸಿದ್ದಾರೆ ಶ್ರೀ ಪುರಂದರದಾಸರು. ನಮ್ಮ ಇಂದಿನ ಕೊಡುಗೆ, ಬುತ್ತಿಯ ಕಟ್ಟೋ, ಮನುಜ , ಬುತ್ತಿಯ ಕಟ್ಟೋ. 


ಗೀತೆಯ ಪಲ್ಲವಿ ಹೇಳುತ್ತದೆ, ‘ಬುತ್ತಿಯ ಕಟ್ಟೋ ಮನುಜಾ, ಬುತ್ತಿಯನ್ನು ಕಟ್ಟಿದರೆ ಎತ್ತಲಾದಾರುಣ್ಣಬಹುದು’  - ಪ್ರಯಾಣಕಾಲದಲ್ಲಿ ಆಹಾರದ ಗಂಟೊಂದು ಜತೆಯಲ್ಲಿದ್ದರೆ ಎಲ್ಲಿ ಯಾವಾಗ ಹಸಿವಾದರೂ ಅಲ್ಲಿ ಅದು ಉಪಯೋಗಕ್ಕೆ ಬಂದೀತು. ಅತ್ತಿತ್ತ ಅಂಗಡಿ, ಹೋಟಲು ಹುಡುಕಬೇಕಿಲ್ಲ. ಹಾಗೆಯೇ ತಾವು  ಸೂಚಿಸುತ್ತಿರುವ ಬುತ್ತಿ ಕಟ್ಟಿಟ್ಟಿದ್ದರೆ  - ಒಂದು ಜನ್ಮದಲ್ಲಿನ  ಜನನ ಮರಣಗಳ ನಡುವಿನ ಪ್ರಯಾಣದಲ್ಲಿ  ಅಷ್ಟೇ ಅಲ್ಲದೆ, ನಾವೆಲ್ಲರೂ ನಿರಂತರವಾಗಿ ನಡೆಸುತ್ತಿರುವ ಜೀವಚಕ್ರದ ಅಸಂಖ್ಯಾತ  ಜನ್ಮಗಳ ಪ್ರಯಾಣದಲ್ಲಿ ಕೂಡ ಎಲ್ಲಿಯಾದರೂ ಉಪಯೋಗಕ್ಕೆ ಬಂದೇ ಬರುತ್ತದೆಂದು ತಿಳಿಸುತ್ತಿದ್ದಾರೆ ದಾಸರು. ಆ ಬುತ್ತಿ ಏನು, ಹೇಗೆ ಎಂಬುದನ್ನು ಮುಂದಿನ ಚರಣಗಳಲ್ಲಿ ವಿಶದಪಡಿಸುತ್ತಾರೆ. 


ಧರ್ಮವೆಂಬ ಮಡಿಕೆಯಲ್ಲಿ, ನಿರ್ಮಲಮನಗಂಗೆ ತುಂಬಿ, ಸುಮ್ಮಾನದುರಿಯ ಹಚ್ಚಿ, ಒಮ್ಮನಕ್ಕಿ ಅನ್ನ ಬಾಗಿ, ಅರಿವು ಎಂಬ ಅರಿವೆ ಹಾಸಿ, ಹರಿವಿಹಾರ ಮೊಸರ ತಳಿದು

ಪರಮವೈರಾಗ್ಯದಿಂದ, ಸಿರಿಹರಿಗೆ ಅರ್ಪಿತವೆಂದು - ಬುತ್ತಿಯಕಟ್ಟೋ ಮನುಜ.  ಮಡಿಕೆ ಎನ್ನುವುದು ಈ ದೇಹ, ದಾಸರು ಹೇಳಿದ್ದು ಧರ್ಮವೆಂಬ ಮಡಿಕೆ. ಅಂದರೆ ಧರ್ಮಕ್ಕೆ ಅನುಸಾರವಾಗಿ ನಡೆದುಕೊಳ್ಳುವ ದೇಹದಲ್ಲಿ, ನಿರ್ಮಲವಾದ, ಕಶ್ಮಲವಿಲ್ಲದ ಮನಸ್ಸು ಎಂಬ ಗಂಗೆ, ಅಂದರೆ ನೀರನ್ನು ತುಂಬಿ, ಸುಮ್ಮಾನದ ಉರಿಯ ಹಚ್ಚಿ, -  ಮಾನ ಎಂದರೆ ಅಹಂಕಾರ. ಆ  ಸುಮ್ಮಾನವೆಂಬ ಅಹಂಕಾರವನ್ನು ಉರುವಲಾಗಿ ಉರಿಸಿ ಭಸ್ಮಮಾಡಿ,  ಒಮ್ಮನವೆಂಬ ಅಕ್ಕಿ, ಎಂದರೆ ಸ್ಥಿರಗೊಂಡಿರುವ, ಅತ್ತಿತ್ತ ಅಲುಗದ,  ಒಂದೇ ಮನವೆಂಬ ಅಕ್ಕಿಯನ್ನು ಬೇಯಿಸಿ. ಆಯಿತೇ ? ಈಗ ಅಡಿಗೆ ಹೇಳಿಕೊಡುವ ವಿಡಿಯೋಗಳಲ್ಲಿ ಹೇಳುತ್ತಾರಲ್ಲಾ ಹಾಗೆ ಈ ಪಕ್ವವಾದ  ಮನವೆಂಬ ಅನ್ನವನ್ನು ಒಂದು ಪಕ್ಕಕ್ಕಿಡಿ. 


ಇದೀಗ ತಿಳಿಸಿದ, ಅನ್ನ ಬೇಯಿಸುವ ಸಮಯದಲ್ಲಿ ಗಳಿಸಿದ ಅರಿವು ಅಥವಾ ಜ್ಞಾನವೇನಿದೆ ಆ ಜ್ಞಾನವೆಂಬ  ಅರಿವೆಯನ್ನು ಹಾಸಿ,  ಪಕ್ಕಕ್ಕಿಟ್ಟಿದ್ದ ಪಕ್ವವಾದ  ಮನವೆಂಬ ಆನ್ನವನ್ನು ಈಗ  ‘ಹರಿವಿಹಾರ’ ಎಂದರೆ ಹರಿಚಿಂತನೆ ಎಂಬ ಮೊಸರಿನೊಡನೆ ಸೇರಿಸಿ ಕಲಸಿ ಕಟ್ಟಿ.  ಈಗ ಈ ಬುತ್ತಿಯನ್ನು ಇದು ಯಾವುದೂ  ನಾನು ಮಾಡಿದ್ದಲ್ಲ, ನನ್ನಿಂದ ಮಾಡಿಸಿದವ ನೀನು ಎಂಬ ವೈರಾಗ್ಯಭಾವದಿಂದ ಶ್ರೀ  ಹರಿಗೆ ಅರ್ಪಣೆ ಮಾಡಿ, ಆ ಹರಿತತ್ವ ವೆಂಬ ಪ್ರಸಾದದ ಬುತ್ತಿಯನ್ನು   ಹತ್ತಿರವಿಟ್ಟುಕೊಂಡು, ನಿತ್ಯ ಉಂಡು, ತೃಪ್ತಿಪಡೆಯಿರೋ ಎಂದರು ದಾಸರು. 


ಈ ಹರಿತತ್ವ ವೆಂಬ ಬುತ್ತಿ ಇದೆಯಲ್ಲಾ ಅದು , ಈ ಜನ್ಮಕ್ಕಷ್ಟೇ ಅಲ್ಲ, ಮುಂದೆಬರುವ ಜನ್ಮ ಜನ್ಮಗಳಲ್ಲೂ ಉಪಯೋಗವಾಗಬಹುದು.    ಗೀತೋಪದೇಶದ ಸಮಯದಲ್ಲಿ ಅರ್ಜುನನಿಗೆ ಒಂದು ಅನುಮಾನಬಂತು ಅವನು ಕೃಷ್ಣನನ್ನು ಕೇಳಿದ, ನಿನ್ನನ್ನು ತಿಳಿಯಲು ಪ್ರಯತ್ನಪಡುತ್ತಿರುವನೊಬ್ಬ ಯಾವುದೇ ಕಾರಣದಿಂದ ಅರ್ಧದಲ್ಲಿ ಅದನ್ನು ಕೈಬಿಟ್ಟರೆ ಅವನು ಅದುವರೆಗೆ  ಮಾಡಿದ್ದೆಲ್ಲಾ ವ್ಯರ್ಥವಲ್ಲವೇ ? ಅದಕ್ಕೆ ಕೃಷ್ಣನ ಉತ್ತರ ಆರನೇ ಅಧ್ಯಾಯದ ೪೦ ರಿಂದ ೪೫ ರ ವರೆಗಿನ ಶ್ಲೋಕಗಳು. ಅಂಥ ಯೋಗಿಗೆ, ಅವನು ಗಳಿಸಿದ ಜ್ಞಾನಕ್ಕೆ, ನಾಶವಿಲ್ಲ. ಒಂದು ಜನ್ಮದಲ್ಲಿ  ಜ್ಞಾನದ ಗಳಿಕೆ ಎಲ್ಲಿಗೆ ಕೊನೆಯಾಗಿತ್ತೋ ಅಲ್ಲಿಂದ ಮುಂದಕ್ಕೆ ಮುಂದಿನ ಜನ್ಮಗಳಲ್ಲಿ  ಜ್ಞಾನ ಸಂಪಾದನೆ ಪ್ರಾರಂಭ.  ಆದ್ದರಿದಲೇ ದಾಸರೆಂದರು ‘ಕರ್ತೃ ಪುರಂದರ ವಿಠಲನ ತತ್ವ’ ವೆಂಬ ಬುತ್ತಿಯ ಕಟ್ಟೋ ಮನುಜ, ಒಂದುವೇಳೆ ಯಾವುದೇ ಕಾರಣದಿಂದ ಸಧ್ಯದ ಜನ್ಮದಲ್ಲಿ ಅದರ ಉಪಯೋಗ ಆಗದಿದ್ದರೂ ಮುಂದೆ  ‘ಎತ್ತಲಾದರೂ ಉಣ್ಣಬಹುದು’. ಯಾವ ಜನ್ಮದಲ್ಲಾದರೂ ಉಪಯೋಗಕ್ಕೆ ಬಂದೀತು. 


ಪದಸಂಯೋಜನೆಯಲ್ಲಿ ಸರಳವಾದ, ಆದರೆ ಬಹಳ ಗಹನವಾದ ರಚನೆ.  ಒಮ್ಮೆಗೇ ಗ್ರಹಿಸಲು ಕೊಂಚ ಕಷ್ಟವಾಗಬಹುದು.  ಆದರೆ ದಾಸರ ಸಲಹೆಯಂತೆ ಈ ಬುತ್ತಿಯನ್ನು ಪಕ್ಕದಲ್ಲಿಟ್ಟುಕೊಂಡು ಆಗಾಗ ಮೆಲುಕುಹಾಕುತ್ತಿದ್ದರೆ ಸಾರ ಮನಸ್ಸಿಗೆ ತಟ್ಟುತ್ತದೆಂದು  ತಿಳಿಸುತ್ತಾ ಇಂದಿನ ಮಾತು ಕೃಷ್ಣಾರ್ಪಣ ಮಾಡುತ್ತೇನೆ.


Saturday, August 8, 2026

ಬೂಚಿ ಬಂದಿದೆ

 ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ

ಚಾಚಿ ಕುಡಿದು ಸುಮ್ಮ ನೆ ನೀ ಪಾಚಿಕೊಳ್ಳೊ ಕೃಷ್ಣ ಯ್ಯ  


ನಾಕುಮುಖದ ಬೂಚಿಯೊಂದು ಗೋಕುಲಕ್ಕೆ ಓಡಿ ಬಂದು

ತೋಕರನ್ನು ಎಳೆದುಕೊಂಡು  ಕಾಕು ಮಾಡಿ ಒಯ್ಯುವುದಕೆ 

ಮೂರು ಕಣ್ಣ  ಬೂಚಿಯೊಂದು ಊರು ಊರು ಸುತ್ತಿ ಬಂದು 

ದ್ವಾರದಲ್ಲಿ ನಿಂತಿದೆ ನೋಡೊ ಪೋರರನ್ನು  ಒಯ್ಯು ವುದಕೆ  


ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ 

ಬಂಗಾರದಂಥ ಮಕ್ಕಳನ್ನ ಕಂಗೆಡಿಸಿ ಒಯ್ಯುವುದಕೆ  

ಮರದ ಮೇಲೆ ಇರುವುದೊಂದು ಕರಿ ಕರಾಳ ಮುಖದ ಬೂಚಿ 

ತರಳರನ್ನು ಎಳೆದುಕೊೊಂಡು ಪುರಂದರ ವಿಠಲಗೊಪ್ಪಿಸಲಿಕೆ



ಸಕಲಲೋಕಗಳ  ಸ್ವಾಮಿಯ ಸಾವಿರನಾಮಗಳಲ್ಲಿ ಎರಡು,  ಭಯಕೃತ್ ಮತ್ತು ಭಯನಾಶನ. ಭಯವನ್ನುಂಟು ಮಾಡುವವನು, ಭಯವನ್ನು ನಾಶಮಾಡುವವನು ಎಂಬ ವಿರುದ್ಧಾರ್ಥದ ನಾಮಗಳು. ತನ್ನ ವೈರಿಗಳಲ್ಲಿ, ದುರುಳರಲ್ಲಿ ಭಯವನ್ನುಂಟುಮಾಡುವವನು ಹಾಗೂ ತನ್ನ ಭಕ್ತರು ಮತ್ತು ಸಜ್ಜನರ ಸಂಸಾರಭಯವನ್ನು ನಾಶಮಾಡುವವನು ಎಂದು ಈ ನಾಮಗಳ ಅರ್ಥ. ಆ ರೀತಿ ಭಯಹುಟ್ಟಿಸುವ, ಭಯನಿವಾರಕನಾದ ಭಗವಂತನನ್ನೇ, ‘ಬೂಚಿ’ ಬಂದು ನಿನ್ನನ್ನು ಕೊಂಡೊಯ್ಯುತ್ತದೆಂದು ಹೆದರಿಸಿ ಮಲಗಿಸಲು ಪ್ರಯತ್ನಪಡುತ್ತಾಳೆ ತಾಯಿ ಯೆಶೋದೆ.


ಶಿಶುಗೀತೆ ಅಥವಾ ಜೋಗುಳ ಎನ್ನಬಹುದಾದ   ಈ ‘ಬೂಚಿಬಂದಿದೆ’ ಗೀತೆ, ಸುಂದರವಾದ  ಕಲ್ಪನೆ ಮತ್ತು ತತ್ವಗಳನ್ನು ಒಳಗೊಂಡಿರುವ ಪದ. ಬೂಚಿ ಬಂದಿದೆ ರಂಗ, ಚಾಚಿ ಕುಡಿದು, ಪಾಚಿಕೊಳ್ಳೊ ಎನ್ನುತ್ತದೆ ಪಲ್ಲವಿ. ಬೂಚಿ, ಚಾಚಿ, ಪಾಚಿ ಎಲ್ಲವೂ ಬಾಲಭಾಷೆಯ ಪದಗಳು. ಬೂಚಿ ಎಂದರೆ  ಕಚ್ಚಿ, ಚುಚ್ಚಿ ತೊಂದರೆ ಮಾಡುವ ಒಂದು ಕೀಟ ಅಥವಾ ಸಣ್ಣ ಕಾಲ್ಪನಿಕ ಪ್ರಾಣಿ. ಚಾಚಿ ಎಂದರೆ ಮೊಲೆಹಾಲು, ಪಾಚಿ ಎನ್ನುವುದು ನಿದ್ದೆ. ರಗಳೆ ಮಾಡುತ್ತಿದ್ದ ಕೃಷ್ಣನನ್ನು ‘ಬೂಚಿಬಂದು ನಿನ್ನನ್ನು ಕೊಂಡೊಯ್ಯುತ್ತದೆ’ ಎಂದು ಹೆದರಿಸಿ ಹಾಲು ಕುಡಿಸಿ ಮಲಗಿಸುವ ಪ್ರಯತ್ನ ಮಾಡುತ್ತಿದ್ದಾಳೆ ತಾಯಿ. 


ಆದರೆ ಕೃಷ್ಣನನ್ನು ಹೊತ್ತೊಯ್ಯಲು ಬಂದಿರುವ ಬೂಚಿಗಳು ಯಾರು? ಮೊದಲ ಎರಡು ಚರಣಗಳಲ್ಲಿ, ‘ತೋಕರನ್ನು’ ಎಂದರೆ ಸಣ್ಣ ಮಾಕ್ಕಳನ್ನು ‘ಕಾಕುಮಾಡಿ’ ಎಂದರೆ ಮೋಸಮಾಡಿ   ಒಯ್ಯಲು ಗೋಕುಲಕ್ಕೆ ಬಂದಿರುವ ನಾಕುಮುಖದಬೂಚಿ, ಚತುರ್ಮುಖ ಬ್ರಹ್ಮ. ಮತ್ತು ಪೋರರನ್ನು ಒಯ್ಯಲೆಂದು ದ್ವಾರದಲ್ಲಿ ಬಂದು ನಿಂತಿರುವ ಮೂರುಕಣ್ಣಿನ ಬೂಚಿ, ಮುಕ್ಕಣ್ಣ ಶಿವ. 


ಮುಂದಿನ ಎರಡು ಚರಣಗಳಲ್ಲಿರುವ  ‘ಅಂಗವೆಲ್ಲ ಕಂಗಳುಳ್ಳ’ ಬೂಚಿ ದೇವೇಂದ್ರ. ಅಹಲ್ಯೆಯ ಶೀಲಾಪಹರಣ ಮಾಡಿದ ಇಂದ್ರನಿಗೆ ದೇಹದಲ್ಲಿ ಸಾವಿರ ಯೋನಿಗಳಾಗಲಿ ಎಂದು ಗೌತಮ ಮುನಿ ಶಾಪವಿತ್ತನಂತೆ.  ಇಂದ್ರ ಕ್ಷಮೆಯಾಚಿಸಿ, ಪಶ್ಚಾತ್ತಾಪ ಪಟ್ಟನಂತರ ಸಾವಿರ ಯೋನಿಗಳು ಸಾವಿರ ಕಣ್ಣುಗಳಾದವಂತೆ. ಅದ್ದರಿಂದ ಇಂದ್ರನನ್ನು  ‘ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ’ ಎಂದರು ದಾಸರು. ಇನ್ನು ಮರದ ಮೇಲೆ ಕುಳಿತಿರುವ ಕರಿ ಕರಾಳಮುಖದ ಬೂಚಿ ಹನುಮಂತನೆಂದು ಬೇರೆ ಹೇಳಬೇಕೇ ?  


ಈ ಪದದ ಹಿಂದಿರುವ ದಾಸರ ಕಲ್ಪನೆ  ಏನೆಂದರೆ, ತಮ್ಮ ಸ್ವಾಮಿ, ಶ್ರೀ ಹರಿ ನಾರಾಯಣ, ಕೃಷ್ಣನ ಅವತಾರತಳೆದು ಭೂಲೋಕಕ್ಕೆ ಹೋದನೆಂದು ಅವನ ಪರಿವಾರ ದೇವತೆಗಳಾದ ಬ್ರಹ್ಮ, ಶಿವ, ರುದ್ರ, ಇಂದ್ರರಿಗೆ ಬಹಳ ಕಳವಳವಾಯಿತಂತೆ. ಆದ್ದರಿಂದ ಅವರೆಲ್ಲಾ ಅವನನ್ನು ಮತ್ತೆ ಕರೆದೊಯ್ಯಲು ಗೋಕುಲಕ್ಕೆ ಬಂದರಂತೆ. ಅವರು ಬಂದದ್ದನ್ನು ಯೆಶೋದೆ ಕೃಷ್ಣನಿಗೆ ಜೋಗುಳದ ರೂಪದಲ್ಲಿ ತಿಳಿಸುತ್ತಿದ್ದಾಳೆ ! 


ಆದರೆ ಕೊನೆಯಲ್ಲಿ ಕಾಣುವ ಮರದ ಮೇಲಿನ  ‘ಕರಿ ಕರಾಳಮುಖದ ಬೂಚಿ’, ಬಂದದ್ದು ತರಳರನ್ನು ಎಳೆದುಕೊಂಡು ಹೋಗಿ ಪುರಂದರ ವಿಠಲನಿಗೆ ಒಪ್ಪಿಸಲಿಕ್ಕೆ. ನಮ್ಮ ತತ್ವದ ಪ್ರಕಾರ, ಯಾರಿಗೇ ಆಗಲಿ ನೇರವಾಗಿ ಪುರಂದರ ವಿಠಲನನ್ನು ಕಾಣುವ ಅವಕಾಶವಿಲ್ಲ. ಪ್ರಾಣದೇವರು ಅಥವಾ ಹನುಮಂತ ಅವರನ್ನು ತನ್ನ ಜತೆಯಲ್ಲಿ ಕರೆದೊಯ್ದರೆ ಮಾತ್ರ ಪರಮಾತ್ಮನ ಭೇಟಿ ಸಾಧ್ಯ!  ಗೀತೆಯ ಕೊನೆಯಲ್ಲಿ ಅದನ್ನು ಸೂಚ್ಯವಾಗಿ ಹೇಳಿ, ತರಳರೆಲ್ಲರು, ಅಂದರೆ ಮಕ್ಕಳೆಲ್ಲರೂ, ಮಕ್ಕಳು ಎನ್ನುವಾಗ ಇಲ್ಲಿ ಸಮಸ್ತ ಜೀವರು ಭಗವಂತನ ಮಕ್ಕಳೆಂಬ ಭಾವ.  ಆದ್ದರಿಂದ ಆ ತರಳರೆಲ್ಲರೂ ಅಂದರೆ ಸಮಸ್ತ ಜೀವರು  ಕರಾಳಮುಖದ ಬೂಚಿ ಮುಖ್ಯಪ್ರಾಣ ಬಂದು ತಮ್ಮನ್ನು ಭಗವಂತನ ಬಳಿಗೆ ಕರೆದೊಯ್ಯುವಂಥ ಯೋಗ್ಯಜೀವನ ನಡೆಸಬೇಕೆಂಬ ಬುದ್ಧಿಮಾತಿನೊಂದಿಗೆ ಪದ್ಯವನ್ನು ದಾಸರು ಕೊನೆಗಾಣಿಸಿದ್ದಾರೆಂದು ತಿಳಿಸುತ್ತಾ ಇಂದಿನ ನಾಲ್ಕು ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.