ನಮ್ಮ ದಾಸಸಾಹಿತ್ಯ ಸಿರಿ ಮಾಲಿಕೆಯ ಹತ್ತೊಂಭತ್ತನಯ ಗೀತೆ, ಭಗವಂತನ ಉಪಾಸನೆಯನ್ನು ಅತ್ಯಂತ ಸುಲಭವಾಗಿಸುವ ಶ್ರೀ ಪುರಂದರದಾಸರ ರಚನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ‘ಭಕ್ತಿಯಿಂದ ನೀನೇನು ಕೊಟ್ಟರೂ ಸ್ವೀಕರಿಸಿ ಸಂತೃಪ್ತನಾಗುತ್ತೇನೆ’. ಇಲ್ಲಿ ದಾಸರು ಹೇಳುತ್ತಾರೆ ‘ಭಕ್ತಿಯಿಂದ ಅವನನ್ನು ನೆನೆದರೆ ಸಾಕು ಅವನು ಸಂತೃಪ್ತನಾಗುತ್ತಾನೆ’.
ನೀವು ಕೇಳಿದ ಗೀತೆಯ ರಾಗ ಹಿಂದೋಳ, ಆದಿ ತಾಳ. ‘ಕರ್ಮ ಬಂಧನ ಛೇದನ’ ಎಂದು ತಮ್ಮ ರಚನೆಯನ್ನು ದಾಸರು ಪ್ರಾರಂಭಿಸಿದ್ದಾರೆ. ಈ ಕರ್ಮಬಂಧನವನ್ನು ಛೇದ ಮಾಡುವುದು ಭಗವಂತನ ಗುರುತರವಾದ ಕಾರ್ಯಗಳಲ್ಲಿ ಒಂದು. ಒಂದು ಜೀವ ಏನೆಲ್ಲಾ ಪುಣ್ಯಕಾರ್ಯಗಳನ್ನು ಮಾಡಿ, ಉತ್ತಮ ಜನ್ಮಗಳನ್ನು ಪಡೆದು, ಮುಕ್ತಿಯೋಗ್ಯವಾಗಿ ಮೋಕ್ಷದ ಹೊಸ್ತಿಲಲ್ಲಿ ಬಂದು ನಿಂತರೂ ಅದಕ್ಕೆ ಮೋಕ್ಷ ಖಚಿತವಲ್ಲ. ನಮ್ಮ ತತ್ವದ ಪ್ರಕಾರ ಮುಕ್ತಿಯೋಗ್ಯವಾದ ಕಾರ್ಯ ಮಾಡಿದೆನೆಂದು ಹಕ್ಕಿನಿಂದ ಮೋಕ್ಷವನ್ನು ಪಡೆಯಲಾಗದು. ಅದು ಭಗವಂತನ ವಿವೇಚನೆಗೆ ಬಿಟ್ಟದ್ದು, ಅವನ ಕೃಪೆ. ಅವನಿಗೆ ಒಪ್ಪಿಗೆಯಾದರೆ ಅವನು ಕರ್ಮಾ ಬಂಧನವನ್ನು ಛೇದಿಸಿ ಮೋಕ್ಷ ಪ್ರಧಾನಮಾಡುತ್ತಾನೆ. ಆದ್ದರಿಂದಲೇ ದಾಸರು ಇಲ್ಲಿ ರಾಮನನ್ನು ‘ಕರ್ಮ ಬಂಧನ ಛೇದನ’ ಎಂದರು.
ಮುಂದಿನ ಚರಣಗಳೆಲ್ಲಾ ಬಹಳವೇ ಸರಳ. ಮೊದಲ ಚರಣದಲ್ಲಿ ಬರುವ ‘ಜಗದಂತ್ರ’ ಎಂದರೆ ಜಗತ್ತಿನ ಅಂತರಂಗ. ಮುಂದೆ ಬರುವ ‘ತಂತ್ರ ಸ್ವತಂತ್ರ’ ಎಂದರೆ ಭಗವಂತ ಯಾವುದೇ ತಂತ್ರ ಅಥವಾ ಯುಕ್ತಿಗೆ ಬಲಿಯಾಗುವವನಲ್ಲ ಎಂದು. ಅವನು ಸಿಕ್ಕಬೇಕಾದರೆ ಅದು ಅಂತರಂಗದ ಆರಾಧನೆಯಿಂದ ಮಾತ್ರ. ಎನ್ನುತ್ತಾರೆ ದಾಸರು.
ಕಲಿಯುಗ, ಭಗವದಾರಾಧನೆಯನ್ನು ಅತ್ಯಂತ ಸುಲಭವಾಗಿಸಿದೆ. ಹಿಂದಿನ ಯುಗಗಳಲ್ಲಿ ಪರಮಾತ್ಮನನ್ನು ಒಲಿಸಿಕೊಳ್ಳಲು ತಪಸ್ಸು, ಯಜ್ಞ, ಯಾಗಗಳ ಮೂಲಕ ಅವನನ್ನು ಆರಾಧಿಸಬೇಕಿತ್ತು. ಆದರೆ ನಿಷ್ಠೆ, ನಂಬಿಕೆಗಳು ಇಳಿಮುಖವಾಗಿರುವ ಕಲಿಯುಗದಲ್ಲಿ ಅವನು ಅದು ಯಾವುದನ್ನೂ ಆಶಿಸುವುದಿಲ್ಲ. ಈಗ ಅವನು ‘ಸುಲಲಿತ ಭಕ್ತಿಗೆ ಸುಲಭ’. ಅವನ ನಾಮಸ್ಮರಣೆಯಷ್ಟೇ ಸಾಕು.
ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಎಂದರಲ್ಲವೇ ದಾಸರು. ಅದನ್ನೇ ಈಗ ಅವರು ಮತ್ತೆ ಹೇಳುತ್ತಿರುವುದು. ‘ವದನದಿ ನಾರಾಯಣನೆಂಬ ನಾಮವಿರಲಿ, ಪದುಮನಾಭನ ನೆನಪು ಸದಾ ಇರಲಿ’ ಅಷ್ಟುಸಾಕು ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ ಎಂದು ತಿಳಿಸಿ ಇಂದಿನ ಕೊಡುಗೆಯನ್ನು ಕೃಷ್ಣಾರ್ಪಣಗೊಳಿಸುತ್ತೇನೆ.
No comments:
Post a Comment