Friday, September 11, 2026

ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ

ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ

ಮೋರೆಗಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯವನಾರಮ್ಮಾ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ 

ಉಟ್ಟದಟ್ಟಿಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಪಟ್ಟದ ರಾಣಿ ಪಾರ್ವತಿಯ ಕುಮಾರನೆ ಹೊಟ್ಟೆಯ ಗಣನಾಥನೆ 

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮಾ
ಲೇಸಾಗಿ ಸುಜನರ ಸಲಹುವ ನೆಲೆಯಾದಿಕೇಶವ ದಾಸ ಕಣೆ 


ಗಣಪತಿಯ ಹೆಗ್ಗಳಿಕೆಯನ್ನು ಹೇಳುತ್ತಾ  ಸ್ತುತಿಸುವ ಜತೆಗೆ,

ವಿದ್ಯಾಭಿಮಾನಿಯಾಗಿ ಅವನಿಗಿಂತ ಉತ್ತಮ ಸ್ಥಾನದಲ್ಲಿರುವ

ಶಾರದೆ ಅಥವಾ ಸರಸ್ವತಿಯನ್ನೂ, ಗಣಪನ ತಾಯಿ

ಪಾರ್ವತಿಯನ್ನೂ, ನೆನಸಿಕೊಂಡು ಕೊನೆಗೆ ಸರ್ವೋತ್ತಮನಾದ

ಶ್ರೀಹರಿಯ ಹಿರಿಮೆಯನ್ನು ತಿಳಿಸುವ ಗೀತೆ, ಇಂದಿನ ನಮ್ಮ

‘ದಾಸ ಸಾಹಿತ್ಯ ಸಿರಿ’ಯ ಕೊಡುಗೆ.  ಶ್ರೀ ಕನಕದಾಸರ ಸುಂದರ,

ಜನಪ್ರಿಯ ರಚನೆ  ‘ನಮ್ಮಮ್ಮ  ಶಾರದೆ’. 


ಗೀತೆಯ ಪಲ್ಲವಿ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ ಎಂದು ಪ್ರಾರಂಭವಾಗುತ್ತದೆ.

ಗಣಪತಿ, ಸರಸ್ವತಿ ಇಬ್ಬರೂ ವಿದ್ಯೆಯ ಅಭಿಮಾನಿ

ದೇವತೆಗಳು. ತಾರತಮ್ಯ ಪದ್ಧತಿಯಲ್ಲಿ ಸರಸ್ವತಿ ಅಥವಾ

ಶಾರದೆಯ ಸ್ಥಾನ ಗಣಪತಿಗಿಂತ ಬಹಳ ಮೇಲಿನದು.

ವಿದ್ಯಾಭಿಮಾನಿ ದೇವತೆಯಾದ ಅವಳ ಕೃಪೆಯಿಂದ ವಿದ್ಯೆ

ಬುದ್ಧಿಗೆ ಹೆಸರಾಗಿ ‘ವಿದ್ಯಾಗಣಪತಿ’ ಎನಿಸಿಕೊಂಡವನು ಗಣಪ. 

ಇಲ್ಲಿ ‘ನಿಮ್ಮೊಳಗಿಹನು’ ಎಂಬ ಪದವನ್ನು ನಿಮ್ಮ ‘ಪ್ರಭಾವ’

ಅಥವಾ ‘ಕೃಪೆಯೊಳಗಿಹನು’  ಎಂಬ ಅರ್ಥದಲ್ಲಿ

ಉಪಯೋಗಿಸಲಾಗಿದೆ. ಅಲ್ಲದೆ, ಕನ್ನಡದಲ್ಲಿ ‘ಒಲಗು’ ಎಂಬ

ಪದಕ್ಕೆ ಕೃಪಾಪಾತ್ರ ಅಥವಾ ಪ್ರೀತಿಪಾತ್ರ ಎಂಬ ಅರ್ಥವಿದೆ. 

ಇನ್ನು ಉಮಾ ಮಹೇಶ್ವರಿಯಂತೂ ಗಣಪತಿಯ ತಾಯಿ.

ಹಾಗಾಗಿ ನಮ್ಮಮ್ಮ ಶಾರದೆ, ಉಮಾ ಮಹೇಶ್ವರಿ,

ನಿಮ್ಮೊಳಗಿಹನಾರಮ್ಮಾ ಎಂಬ ಪಲ್ಲವಿಯನ್ನು ಕನಕದಾಸರು

ರಚಿಸಿದ್ದಾರೆ. 


ಮುಂದಿನ ಚರಣದಿಂದ ಗಣಪತಿಯ ವರ್ಣನೆ. ಮೊದಲಿಗೆ,

‘ಕಮ್ಮಗೋಲನ ವೈರಿ ಸುತ’. ಕಮ್ಮಗೋಲ ಎಂದರೆ ಪುಷ್ಪಬಾಣ.

ಅದು ಮನ್ಮಥನ ಚಿಹ್ನೆ. ಕಮ್ಮಗೋಲನವೈರಿ, ಮನ್ಮಥನನ್ನು 

ಸುಟ್ಟ ಶಿವ. ‘ಕಮ್ಮಗೋಲನ ವೈರಿಸುತ’ ಎಂದರೆ  ಶಿವನ

ಸುತನಾದ ಮತ್ತು   ಸೊಂಡಿಲು ಹಾಗೂ ಹಿರಿದಾದ ದೇಹ

ಹೊಂದಿದವ, ಗಣಪತಿ. 


ಮುಂದಿನ ಚರಣದ ಮೊದಲಪದ  ‘ಮೋರೆಗಪ್ಪಿನ ಭಾವ’,

ಕಪ್ಪುಬಣ್ಣವನ್ನು ಸೂಚಿಸುತ್ತದೆ. ನಂತರ ‘ಮೊರದಗಲದ ಕಿವಿ’.

ಈ ಕಿವಿಗೆ ಸ್ವಲ್ಪ ವಿವರಣೆ ಉಂಟು. ಗಣಪತಿಗೆ ಆನೆಯ ತಲೆ.

ಆನೆಗೆ ದೃಷ್ಟಿಮಂದ. ಹೊರನೋಟಕ್ಕೂ ಕಣ್ಣುಗಳು ಬಲು ಸಣ್ಣ.

ಆದರೆ ಕಿವಿ ಬಹಳ ಚುರುಕು ಮತ್ತು ಮೊರದಗಲ.

ಈ ಮೊರದಗಲದ ಕಿವಿ, ಅಂದರೆ ಬಹಳ ದೊಡ್ಡದಾದ ಕಿವಿ,

ಕೇಳುವ, ಕೇಳಿದ್ದನ್ನು ಗ್ರಹಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.

ಸರಿಯಾಗಿ ಕೇಳು ಎನ್ನುವುದಕ್ಕೆ ಕಿವಿ ತೆರೆದು ಕೇಳು, ಕಿವಿ

ಅಗಲಮಾಡಿಕೊಂಡು  ಕೇಳು ಎನ್ನುವ ಪದಗಳ ಬಳಕೆ

ಉಂಟಲ್ಲವೇ ? ಹಾಗೆ, ಅಗಲವಾದ  ಕಿವಿಗಳು ಗಣಪತಿಯ

ಗ್ರಹಣಾ ಸಾಮರ್ಥ್ಯದ, ಸಂಕೇತ. ಆ ರೀತಿಯ

ಗ್ರಹಣಾಸಾಮರ್ಥ್ಯ ಇರುವುದರಿಂದಲೇ ಅವನಿಗೆ ಅಷ್ಟು

ಹಿರಿದಾದ ತಿಳುವಳಿಕೆ ಮತ್ತು ಜ್ಞಾನ. 


ಮುಂದೆ, ಮೂರು ಕಣ್ಣನ ಸುತ, ‘ಮುರಿದಿಟ್ಟ ಚಂದ್ರನ’ ಎಂಬ

ವಿಶೇಷಣಗಳು ಬಂದಿವೆ. ಚಂದ್ರ, ಮನಸ್ಸಿನ ಅಭಿಮಾನಿ ದೇವತೆ.

ವಿರಾಟ್ ಪುರುಷನ ಅಂದರೆ ಸೃಷ್ಟಿಪುರುಷನ ಮನಸ್ಸಿನಿಂದ

ಜನಿಸಿದವನು. ‘ಚಂದ್ರಮೋ ಮನಸೋ ಜಾತಃ, ಚಕ್ಷೋ

ಸೂರ್ಯೋ ಅಜಾಯತಃ’ ಎನ್ನುತ್ತದೆ ಪುರುಷ ಸೂಕ್ತ.

ಮನವನ್ನು ಚಂಚಲಗೊಳಿಸುವವನೂ ಚಂದ್ರನೇ ಎಂಬುದು

ನಮ್ಮ ನಂಬಿಕೆ. ಈ ರೀತಿ ಚಿತ್ತಚಾಂಚಲ್ಯವನ್ನು ಉಂಟುಮಾಡುವ

ಚಂದ್ರನನ್ನು ತನ್ನ ಕೋರೆದಾಡೆಯಿಂದ ಬಡಿದು ಬದಿಗಿರಿಸಿದವ

ಗಣಪತಿ. ಅಂದರೆ ಚಿತ್ತ ಚಾಂಚಲ್ಯವನ್ನು ಸಮರ್ಥವಾಗಿ

ನಿಗ್ರಹಿಸಿದವನು ಎಂಬ ಅರ್ಥ.  ಮುಂದೆ ಬರುವ ಉಟ್ಟ ದಟ್ಟಿಯ,

ಬಿಗಿದುಟ್ಟ ಚಲ್ಲಣದ, ಪಟ್ಟದ ರಾಣಿಯ ಪುತ್ರನಾದ 

ಎಲ್ಲ ವಿಶೇಷಣಗಳೂ ಸುಲಭ. 


ಕೊನೆಯ ಚರಣದಲ್ಲಿ ದಾಸರು ಹೇಳಿರುವುದು, ರಾಶಿ ವಿದ್ಯೆಯ

ಬಲ್ಲ, ರಮಣಿ ಹಂಬಲನೊಲ್ಲ - ಅಂದರೆ ಹೆಣ್ಣಿಗೆ ಮರುಳಾಗದ, ‘ಭಾಷಿಗ’ನಿವನ್ಯಾರಮ್ಮ. ಗಣಪತಿಯನ್ನು ಭಾಷಿಗ ಎಂದರು

ಕನಕದಾಸರು. ಭಾಷಿಗ ಎಂದರೆ ಭಾಷೆಯನ್ನು ಬಹಳ ಚೆನ್ನಾಗಿ

ಬಲ್ಲವನು. ಅದರ ಹರಿವು, ಒಳ ಹೊರಗು, ತಿಳಿದವನು.

ಬರಿ ಭಾಷೆ ತಿಳಿದವರೆಲ್ಲಾ ಭಾಷಿಗರಾದರೆ ನಾವು, ನೀವು

ಎಲ್ಲರೂ ಭಾಷಿಗರೇ. ಆದರೆ ಅದು ಹಾಗಲ್ಲ. ಭಾರತ

ಬರೆಯಬೇಕೆಂದು ವ್ಯಾಸರು ಗಣಪತಿಯನ್ನು ಕೇಳಿದಾಗ

ಗಣಪತಿ ಅವರಿಗೊಂದು ಷರತ್ತು ಹಾಕಿದನಂತೆ. ಅವರು

ಹೇಳುವುದನ್ನು ಮಧ್ಯೆ ನಿಲ್ಲಿಸಲಾಗದು. ತಾನು ಬರೆಯುವ

ವೇಗದಲ್ಲಿ ಅವರು ಕಥೆಯನ್ನು ಹೇಳತಕ್ಕದ್ದು. ಅವರು

ಮುಂದೇನೆಂದು ಯೋಚಿಸಲೆಂದು ಹೇಳುವುದನ್ನು

ನಿಲ್ಲಿಸಿದರೆ ತಾನು ಬರೆಯುವುದನ್ನು ಅಲ್ಲಿಗೇ ನಿಲ್ಲಿಸುತ್ತೇನೆಂದ.

ವ್ಯಾಸರು ಒಪ್ಪಿದರು. ಆದರೆ ಅವರೂ ಒಂದು ಷರತ್ತು

ಹಾಕಿದರು. ಎಷ್ಟಾದರೂ ವ್ಯಾಸರು ಗಣಪತಿಯ ಮುತ್ತಾತ

ಅಲ್ಲವೇ ! ತಾವು ಹೇಳಿದ ಶ್ಲೋಕಗಳನ್ನು ಸಂಪೂರ್ಣವಾಗಿ 

ಅರ್ಥ ಮಾಡಿಕೊಂಡು ಗಣಪತಿ ಬರೆಯತಕ್ಕದ್ದು. ಯಾವುದೊ

ಪದ, ವಾಕ್ಯ ತಟ್ಟನೆ ತಿಳಿಯದಿದ್ದರೆ ಅವನು ‘ಮಕ್ಕಿ ಕಾ ಮಕ್ಕಿ’

ಬರೆಯುವುದಲ್ಲ!  ಗಣಪತಿ ಒಪ್ಪಿದ. ವ್ಯಾಸರ ವಾಚನವನ್ನು

ಪೂರ್ತಿ ಅರ್ಥ ಮಾಡಿಕೊಂಡು ಬರೆದ. ಅದರಿಂದಲೇ

ಕನಕದಾಸರೆಂದರು ‘ಭಾಷಿಗನಿವನ್ಯಾರಮ್ಮ’.  


ಕೊನೆಯ ಚರಣದಲ್ಲಿ  ಲೇಸಾಗಿ ಸುಜನರ ಸಲಹುವ

ನೆಲೆಯಾದಿ  ‘ಕೇಶವದಾಸ’ ನೆಂದು ಗಣಪತಿಯನ್ನು ಹೆಸರಿಸಿ,

ಗಣಪತಿಯ ವಿಷ್ಣು ಭಕ್ತಿಯನ್ನು ಸೂಚಿಸಿದರು ದಾಸರು.

ಇದಕ್ಕೂ ಕೊಂಚ ವಿವರಣೆ ಇದೆ. ಪಾರ್ವತಿ ತನ್ನ ಬೆವರು,

ಮಣ್ಣಿನಿಂದ ತಯಾರಿಸಿದ್ದ ಗಣಪತಿಯ ತಲೆಕಡಿದ ಶಿವ,

ಆನೆಯ ತಲೆ ತರಿಸಿ ಜೋಡಿಸಿದ್ದು ಸಾಮಾನ್ಯವಾಗಿ ಎಲ್ಲರೂ

ತಿಳಿದಿರುವ ಕಥೆ. ಆದರೆ ಮಧ್ವ ಸಿದ್ಧಾಂತ ಗಣಪತಿಯ ಆನೆಯ

ತಲೆಗೆ  ಬೇರೆಯೇ ವಿವರಣೆ  ನೀಡುತ್ತದೆ. ವಿಷ್ಣುವಿನ

ಅಸಂಖ್ಯಾತ  ರೂಪಗಳಲ್ಲಿ ಒಂದು ‘ವಿಶ್ವಂಭರ’ ಎಂದು

ಹೆಸರಾದ ರೂಪ. ಈ ರೂಪದಲ್ಲಿ ವಿಷ್ಣುವಿಗೆ ಹತ್ತೊಂಭತ್ತು

ತಲೆಗಳು. ಅದರಲ್ಲಿ ಮಧ್ಯದ ತಲೆ ಆನೆಯ ರೂಪದ್ದು.

ಮಹಾ ವಿಷ್ಣುಭಕ್ತನಾದ, ಸಾಮಾನ್ಯ ರೂಪದ  ಗಣಪತಿ,

ತನ್ನ ಮನಸ್ಸಿನಲ್ಲಿ ಆ ವಿಶ್ವಂಭರ ರೂಪವನ್ನು ಧ್ಯಾನಿಸುತ್ತಾ,

ಧ್ಯಾನಿಸುತ್ತಾ, ತನ್ನ ತನು ಮನ ದೊಳಗೆಲ್ಲಾ  ವಿಶ್ವಂಭರನನ್ನು

ತುಂಬಿಕೊಂಡಿದ್ದಷ್ಟೇ ಅಲ್ಲದೆ ಹೊರಗಿನ ಆಕಾರದಲ್ಲೂ ಗಜಮುಖನಾಗಿಬಿಟ್ಟನಂತೆ.

ಅಂಥ ವಿಷ್ಣುಭಕ್ತನಾದ

ಗಣಪತಿಯನ್ನು  ‘ಕೇಶವದಾಸ’ನೆಂದು ಹೆಸರಿಸಿ ಅವನ

ಸ್ತುತಿಯನ್ನು ಕನಕದಾಸರು ಮುಗಿಸಿದರೆಂದು ತಿಳಿಸುತ್ತಾ

ಕೃಷ್ಣಾರ್ಪಣ ಮಾಡುತ್ತೇನೆ. 


No comments: